Thursday, July 14, 2011

ಕುಬೇರನ ಜೊತೆ ಮಾತುಕತೆ..

 ತಿರುವನಂತಪುರಮ್ ದೇವಾಲಯದಲ್ಲಿ ಒಂದು ಲಕ್ಷ ಕೋಟಿ ಬೆಲೆ ಬಾಳೋ ಆಭರಣಗಳು ಸಿಕ್ಕಿವಿಯಂತೆ, ಪದೇ ಪದೇ ಎಲ್ಲಿ ನೋಡಿದರಲ್ಲಿ ಈ ಸುದ್ದಿ ಕೇಳಿದಾಗ ಹೊಳೆದ ಆಲೋಚನೆಗಳನ್ನು ಒಂದು ಸಂದರ್ಶನದ ರೂಪದಲ್ಲಿ ಬರೆದಿದ್ದೇನೆ. ಅಂದ ಹಾಗೆ ಇಲ್ಲಿ ಬಾರೋ ಸೆಲೆಬ್ರಿಟಿ ಗೆಸ್ಟ್ ದೇವಲೋಕದ ಬ್ಯಾಂಕ್ ಮ್ಯಾನೇಜರ್ ಕುಬೇರ, ಹಾಗೆ ಸಂದರ್ಶಕರು 24X7 ಸುದ್ದಿ ಬಿತ್ತರಿಸೋ ಖಾಸಗಿ ಚಾನಲ್ ನ ಒಬ್ಬ ಪ್ರತಿನಿಧಿ.......ಎಲ್ಲ ಪಾತ್ರಗಳು ಪಕ್ಕ ಕಾಲ್ಪನಿಕ :-)
ಸಂದರ್ಶಕ: ನಮಸ್ಕಾರ, ಕುಬೇರ ಪ್ರಭುಗಳಿಗೆ. ಕುಬೇರ ಅಂದ್ರೆ ನಮಗೆ ಮೊದಲು ನೆನಪಾಗೋದು ನೀವು ತಿಮ್ಮಪ್ಪನಿಗೆ ಸಾಲ ಕೊಟ್ಟ ವಿಚಾರ. ಅದಕ್ಕೆ ಅಲ್ಲಿ೦ದಲೆ ಮಾತು ಕತೆ ಆರಂಬಿಸೋಣ. ನೀವು ಅದು ಯಾವ ದೈರ್ಯದ ಮೇಲೆ ತಿಮ್ಮಪ್ಪನಿಗೆ ಸಾಲ ಕೊಟ್ಟಿರಿ? ಈ ಸಾಲಕ್ಕೆ surity ಯಾರು .?

ಕುಬೇರ: ಅಯ್ಯೋ ಬಿಡಿ ಸರ್ ಅವರಿಗೆ ಸಾಲ ಕೊಡಬೇಕೋ ಬೇಡವೋ ಅಂತ ತುಂಬಾ ಯೋಚನೆ ಮಾಡ್ತಾ ಇದ್ದೆ. ಮದ್ಯದಲ್ಲಿ ಈ ನಾರದ ಬಂದು ತಿಮ್ಮಪ್ಪನ ಗುಣ ಎಲ್ಲ ಸರಿ ಆದ್ರೆ ಸಾಲ ತೀರಿಸ್ತಾನೋ ಇಲ್ವೋ ಅಂತ ಭಯ ಅಂತ ಬೇರೆ fitting ಇಟ್ಟ. ಆಮೇಲೆ ಬ್ರಹ್ಮ ಬ೦ದು ನಾನು ಅದಕ್ಕೆ ಜವಾಬ್ದಾರಿ ಅಂದ. ಅದಕ್ಕೆ ಕೊಟ್ಟೆ.

ಸಂದರ್ಶಕ: ಅಲ್ಲ ಕಣ್ರೀ ನಮ್ಮ ಬ್ಯಾಂಕ್ ಜನ ಆಸ್ತಿ ಪತ್ರ ಅದು ಇದು ಅಂತ ಕೇಳ್ತಾರೆ ನೀವು ಏನೇನು ತಗೊಂಡ್ರಿ ತಿಮ್ಮಪ್ಪನ ಹತ್ರ...?

ಕುಬೇರ: ನಿಮ್ಮ ಜನ ಅದನ್ನೆಲ್ಲ ತಗೋತಾರೆ ಯಾಕೆ ಅಂದ್ರೆ ನೀವು ಅವರ ಸಾಲ ವಾಪಸ್ ಕೊಡ್ಬೇಕು ಅ೦ದ್ರೆ ಆ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಇರಬೇಕು. ಆದ್ರೆ ಲಕ್ಷ್ಮಿ ತಿಮ್ಮಪ್ಪನ ದರ್ಮ ಪತ್ನಿ ಆಗಿರೋದ್ರಿಂದ ಅದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಏನು ಬೇಕು ಸಾಲ ಕೊಡಕ್ಕೆ?

ಸಂದರ್ಶಕ: ಅಲ್ಲ ಸ್ವಾಮೀ ಈ ದೇವರುಗಳು ತಮ್ಮ ಶಕ್ತಿಯಿ೦ದ ಮಣ್ಣನ್ನು ಚಿನ್ನವಾಗಿಸ್ತಾರಲ್ಲ ಈ ತಿರುಪತಿ ತಿಮ್ಮಪ್ಪ೦ಗೆ ಯಾಕೆ ಆ ತರ ಮಾಡಕ್ಕೆ ಆಗಿಲ್ಲ?.

ಕುಬೇರ: ಹ ಹ ನೀವು ಕ್ರೆಡಿಟ್ ಕಾರ್ಡ್ ಅಂತ ಉಪಯೋಗಿಸ್ತೀರ ತಾನೇ? ಅದರಲ್ಲಿ ಒಂದು ಲಿಮಿಟ್ ಅಂತ ಇರತ್ತೆ ಅದು ಮುಗಿದ ಮೇಲೆ ಅದು use less ತಾನೇ ? ಅದೇ ರೀತಿ ಈ ತಿಮ್ಮಪ್ಪನ ಕ್ರೆಡಿಟ್ ಲಿಮಿಟ್ ಮುಗಿದಿತ್ತು ಅದಕ್ಕೆ ನನ್ನ ಹತ್ರ ಸಾಲ ತಗೊಂಡ...

ಸಂದರ್ಶಕ : (credit card ವಿಷಯ ಕೇಳಿ ಸಂದರ್ಶಕನಿಗೆ ಆ ತಿಂಗಳ credit card ಬಿಲ್ ಪಾವತಿಸಿಲ್ಲ ಅಂತ ನೆನಪಾಗಿ ಹೆಂಡತಿ ಗೆ ಫೋನಾಯಿಸಿ ತುಂಬಲು ಹೇಳುತ್ತಾನೆ) ಅ೦ದ ಹಾಗೆ ನೀವು ಲೋನ್ recoveryಗೆ ಯಾರನ್ನು ಕಳಿಸ್ತೀರ ..?


ಕುಬೇರ:ತಿಮ್ಮಪ್ಪನ ಲೋನ್ ಒಂಥರಾ ECS ಇದ್ದ ಹಾಗೆ ತಿಂಗಳ EMI ಹುಂಡಿಯಿ೦ದ ಡೈರೆಕ್ಟ್ ಆಗಿ ನನ್ನ ಅಕೌಂಟ್ ಗೆ ಬಂದು ಸೇರತ್ತೆ. ಇನ್ನು ಉಳಿದವರ ಲೋನ್ recovery ಗೆ ಸಣ್ಣ ಅಸುರ ಸೈನ್ಯ ಇದೆ. ಈ ಅಸುರರರು ಈಗ ನಿಮ್ಮ ಭೂಮಿಯ icici recovery ಶಾಖೆಯಲ್ಲಿ ಕೆಲಸ ಮಾಡೋ ಪುಂಡರ ಪೂರ್ವಜರು ....

ಸಂದರ್ಶಕ: (ಹಳೆ ಸಾಲ ಕಟ್ಟದ್ದಕ್ಕೆ icici ಬ್ಯಾಂಕ್ recovery ಜನಗಳಿಂದ ಒದೆ ತಿಂದ ನೆನಪಾಗಿ ಮುಖ ಕಪ್ಪಿಟ್ಟಿತ್ತು,ಆದರು ಮಾತು ಮುಂದುವರಿಸುತ್ತಾ..) ಅದೆಲ್ಲ ಸರಿ ಸ್ವಾಮೀ, ನೀವು ಪುಷ್ಪಕ ವಿಮಾನ ದಲ್ಲಿ ಯಾಕೆ ಬರಲಿಲ್ಲ..?

ಕುಬೇರ: ಅಯ್ಯೋ ಅದನ್ನು ಸಾಕೋದು ಕಷ್ಟ ಸ್ವಾಮೀ, ಈಗಿರೋ ಪೆಟ್ರೋಲ್ ದರದಲ್ಲಿ. ಸಾಲದು ಅಂತ ಪಾರ್ಕಿಂಗ್ ಸಮಸ್ಯೆ ಬೇರೆ.

ಸಂದರ್ಶಕ: ಓಹೋ ಪೆಟ್ರೋಲ್ ದರದ ಬಿಸಿ ದೇವಲೋಕಕ್ಕು ತಟ್ಟಿದೆ ಅ೦ದ ಹಾಗಾಯ್ತು.


ಕುಬೇರ: ನೀವು ಹೇಳೋದು ಸರೀನೆ. ಆದ್ರೆ ಅರಬ್ ಶೇಖ್ ಜನರು ನನ್ನಲ್ಲಿ ಸಾಲ ಪಡೆದಿರೊದರಿ೦ದ ಅವರಲ್ಲಿಗೆ ತಿ೦ಗಳ ವಸೂಲಿಗೆ ಹೋದಾಗ ಟ್ಯಾಂಕ್ ಬರ್ತಿ ಮಾಡಿಸಿಕೊ೦ಡು ಬರ್ತೀನಿ ಹಣ ಕೊಡದೆ!!!!!! ಆದರು ಅದರ ನಿರ್ವಹಣೆ ತು೦ಬಾ ಕಿರಿಕಿರಿ ಆಗಿರೋದರಿ೦ದ ಅದನ್ನು ಏರ್ ಇಂಡಿಯಾ ಗೆ ವಹಿಸಿಕೊಟ್ಟಿದ್ದೇನೆ. ತಿ೦ಗಳಿಗೆ ಇ೦ತಿಷ್ಟು ಅ೦ತ ಕೊಡ್ತಾರೆ.

ಸಂದರ್ಶಕ: ಏರ್ ಇಂಡಿಯಾ ಗೆ ಯಾಕೆ ಕೊಟ್ರಿ ಸ್ವಾಮೀ. ಅದು ನಷ್ಟದಲ್ಲಿದೆ ಅನ್ನೋ ವಿಷಯ ನಿಮಗೆ ತಿಳಿದಿಲ್ಲವೇ?

ಕುಬೇರ: ನಷ್ಟದಲ್ಲಿರಲಿ ಅಥವಾ ಲಾಭದಲ್ಲಿರಲಿ ಸರಕಾರೀ ಸಂಸ್ಥೆ ಅ೦ದ್ರೆ ತಿ೦ಗಳಿಗೆ ಬರೋದು ಬರ್ತಾ ಇರತ್ತೆ. ನಿಮ್ಮ ವಿಮಾನಕ್ಕೆ ಟೇಕ್ ಆಫ್ ಆಗೋ ಯೋಗ್ಯತೆ ಇಲ್ಲದಿದ್ರು no problem!!!!!!!!!!!

ಸಂದರ್ಶಕ: ಲೆಕ್ಕ ಪತ್ರ ಗಳನ್ನೆಲ್ಲ ನೀವೇ maintain ಮಾಡ್ತೀರೋ ಅಥವಾ ಯಾರಾದರು ಸಹಾಯಕರುಗಳನ್ನು ಕೆಲಸಕ್ಕೆ ಇಟ್ಕೊಂಡಿದೀರ?



ಕುಬೇರ: ಒಬ್ಬನೇ ಎಲ್ಲ ನಿಭಾಯಿಸೋದು ಕಷ್ಟ ಅದಕ್ಕೆ ಸ್ವಲ್ಪ ಸಹಾಯಕರುಗಳಿದ್ದಾರೆ..ಎಲ್ಲ contract labours. ಯಾಕೆ ಅ೦ದ್ರೆ ನಮ್ಮ ಈ ಬಡ್ಡಿ ವ್ಯವಹಾರದಲ್ಲಿ ಏರು ಪೇರುಗಳು ಜಾಸ್ತಿ. ಅದಲ್ಲದೆ permanent ಕೆಲಸಕ್ಕೆ ಇಟ್ಟುಕೊ೦ಡರೆ ಅವರಿ೦ದ ಕೆಲಸ ತಗೋಳೋದು ಕಷ್ಟ, ಅವರನ್ನು ಕೆಲಸದಿ೦ದ ತೆಗೆಯೋದು ಕಷ್ಟಾನೆ....


ಸಂದರ್ಶಕ: ಮತ್ತೆ ಹೇಗಿದೆ ಸ್ವಾಮೀ ತಮ್ಮ ವ್ಯವಹಾರ..?

ಕುಬೇರ : ನಮ್ಮ ವ್ಯವಹಾರಕ್ಕೂ recesion ಬಂದಿದೆ. ನಮ್ಮ ದೇವಲೋಕದಲ್ಲಿ ಆಗಾಗ ಧಾನವರು attack ಮಾಡ್ತಾರೆ ಅಂತ ಇರೋ ಬರೋ ಸಂಪತ್ತೆಲ್ಲವನ್ನೂ ಭೂಲೋಕದಲ್ಲಿರೋ ದೇವಸ್ಥಾನಗಳಲ್ಲಿ ಇಟ್ಟರೆ ನೀವು ಅಲ್ಲಿನೂ ಬಿಟ್ಟಿಲ್ಲ. ಆ ಬ್ರಿಟಿಷರ ಕೈಗೂ ಸಿಕ್ಕದ್ದನ್ನು ಈಗ ಕೇರಳದಲ್ಲಿ ಅಗೆದು ತೆಗೆದು ಬಿಟ್ಟಿರಿ...

ಸಂದರ್ಶಕ: ಅಂದ್ರೆ ಆ ದೇವಾಲಯದಲ್ಲಿ ಸಿಕ್ಕಿದ ಸ೦ಪತ್ತು ತಮಗೆ ಸೇರಿದ್ದೋ..? ಆದರೆ ಅದನ್ನು ನಿಮ್ಮ ದೇವಲೋಕದಲ್ಲೇ ಇಡಬಹುದಾಗಿತ್ತಲ್ಲವೇ?

ಕುಬೇರ: ದೇವಲೋಕದಲ್ಲಿ ಆ ಇಂದ್ರ ಸುಮ್ಮನಿರದೆ ಪದೇ ಪದೇ ಅಸುರರ ಜೊತೆ ಯುದ್ದಕ್ಕಿಳಿಯುತ್ತಾನೆ. ಅವರೋ ಪಕ್ಕ ನಾನ್ ವೆಜ್ ತಿನ್ನೋ ಜನ, ಸುಮ್ನೆ ಬಿಡ್ತಾರ? ಯುದ್ದ ಮಾಡಿ ಇರೋ ಬರೋ ಸ೦ಪತ್ತೆಲ್ಲ ಕೊಳ್ಳೆ ಹೊಡ್ಕೊಂಡು ಹೋಗ್ತಾರೆ. ಅದಕ್ಕೆ ನಿಮ್ಮ ಭೂಲೋಕವೇ ಸೇಫ್ ಅಂತ ದೇವಸ್ತಾನದಲ್ಲಿ ಇಟ್ಟಿದ್ವಿ. ಆದರೆ ಈಗ ನೀವು ಅದನ್ನೂ ಅಗೆದು ತೆಗೆದಿರಿ. ಅಂದ ಹಾಗೆ ನನಗೆ ಅರ್ಜೆಂಟ್ ತಿರುಪತಿ ಗೆ ಹೋಗಬೇಕು, ಆ ತಿಮ್ಮಪ್ಪನ ECS ಬೌನ್ಸ್ ಆಗಿದೆ. ಅದೇನೋ ಎಲ್ಲ ಜನ ತಿರುಪತಿ ಬದಲಿಗೆ ತಿರುವನಂತಪುರಮ್ ಗೆ ಹೋಗ್ತಾ ಇರೋದರಿಂದ ಅಲ್ಲಿ ಬಿಸಿನೆಸ್ ಫುಲ್ ಡಲ್ ಆಗಿದೆಯಂತೆ. ವಿಚಾರಿಸಿಕೊಂಡು ಬರ್ತೀನಿ. ಸಂದರ್ಶನ ಆಮೇಲೆ ಮುಂದುವರಿಸೋಣ...

ಸಂದರ್ಶಕ: ಸರ್ ಕಟ್ಟ ಕಡೆಯದಾಗಿ ಒಂದು ಪ್ರಶ್ನೆ. ಇನ್ನು ಮುಂದೆ ನಿಮ್ಮ ಸಂಪತ್ತೆಲ್ಲವನ್ನೂ ಎಲ್ಲಿಡಬೇಕು ಅಂತ ಯೋಚನೆ ಮಾಡಿದ್ದೀರಾ?


ಕುಬೇರ: ಇನ್ನು ನಮ್ಮ ಸಂಪತ್ತನ್ನೆಲ್ಲ ಪಾಕಿಸ್ತಾನದ ಉಗ್ರರನ್ನು ಸೆರೆ ಹಿಡಿದು ಯಾವ ಜೈಲಿನಲ್ಲಿಡುತ್ತೀರೋ ಆ ಜೈಲಿನ ನೆಲಮಹಡಿಯಲ್ಲಿ ಇಡೋಣ ಅಂತ ಯೋಚನೆ ಮಾಡ್ತಾ ಇದ್ದೀನಿ. ಯಾಕಂದ್ರೆ ಅವರಿಗೆ ನೀವು ಕೊಡೋವಷ್ಟು ಸೆಕ್ಯೂರಿಟಿ ನಿಮ್ಮ ಪ್ರದಾನಿಗೂ ಕೊಡಲ್ಲ ಅನ್ನಿಸತ್ತೆ. ಅಂದ್ರೆ ನಮ್ಮ ಸಂಪತ್ತಿಗೆ ಭದ್ರತೆ ಜೊತೆಗೆ ನೆಮ್ಮದಿ.

ಸಂದರ್ಶಕ: ನೀವು ಇಲ್ಲಿ ಬಂದು ನಮ್ಮ ಜೊತೆ ಮಾತನಾಡಿದ್ದಕ್ಕೆ ಧನ್ಯವಾದಗಳು...

ಕುಬೇರ: ನಿಮಗೂ ದನ್ಯವಾದಗಳು....

--------------------ಶ್ರೀ:-)

Tuesday, April 5, 2011

ಚ೦ದ್ರನ ಮೇಲೆ ಒ೦ದು 30X40 ಸೈಟು ಮಾರಾಟಕ್ಕಿದೆ..............


ಕಳೆದ ಹಲ ದಿನಗಳಿ೦ದ ಯಾಕೋ ಬ್ಲಾಗ್ ನಲ್ಲಿ ಏನೂ ಬರೆಯಲು ಆಗಿರಲಿಲ್ಲ. ಆಗಲೇ   "ಸೂಪರ್ ಮೂನ್" ನ ಅವಾ೦ತರ ನ್ಯೂಸ್ ಚಾನಲುಗಳಲ್ಲಿ  ಪದೇ ಪದೇ ಬರ್ತಾ ಇತ್ತು. ಆಗಲೇ ಹೊಳೆದಿದ್ದು ಈ ಲೇಖನ...ಓದಿ ಚೆನ್ನಾಗಿದ್ರೆ ನಕ್ಕು ಬಿಡಿ. ಇಲ್ಲ ಅ೦ದರೆ ಮರೆತು ಬಿಡಿ . ಆದ್ರೆ ಕಾಮೆಂಟ್ ಹಾಕೋದನ್ನು ಮಾತ್ರ ಮರೆಯಬೇಡಿ ;-) 

ಈ ಭೂಮಿಯ ಮೇಲೆ ಇರೋ ಬರೋ ಖಾಲಿ ಜಾಗಗಳೆಲ್ಲ ಖಾಲಿಯಾಗಿ ರಿಯಲ್ ಎಸ್ಟೇಟ್ ಅ೦ತ ದ೦ದೆ ನಡೆಸುತ್ತಿದ್ದ ಜನರೆಲ್ಲಾ ಇನ್ನೇನಪ್ಪ ಮಾಡೋದು ಅ೦ತ ತಲೆ ಮೇಲೆ ಕೈ ಕೊಟ್ಟು ಕೂತಿದ್ದರು (ಇರೋ ಬರೋ ಬಡಪಾಯಿಗಳೆಲ್ಲರಿಗೆ ಕೈ ಕೊಟ್ಟ ನ೦ತರ ಈ ಗತಿ ಸಹಜವೇ ತಾನೇ?). ಅಷ್ಟರಲ್ಲೇ ತಾವೇ ನ್ಯೂಸ್ ಹುಟ್ಟಿಸಿ ಹಾಕೋ TV9  ನಲ್ಲಿ ಒ೦ದು ಬ್ರೇಕಿಂಗ್ ನ್ಯೂಸ್ ...ಚಂದ್ರನ ಮೇಲೆ ನೀರು ಸಿಕ್ಕಿದೆಯ೦ತೆ. ಜನ TV9  ನ್ಯೂಸ್ ನ೦ಬುವುದು ಕಡಿಮೆಯಾದರೂ ಇದನ್ನು ನ೦ಬಲೇಬೇಕಾಯ್ತು. ಯಾಕಪ್ಪ ಅ೦ದ್ರೆ ಈ ಸುದ್ದಿ ಬ೦ದಿದ್ದು ಅಮೇರಿಕಾದ ನಾಸಾ ದಿ೦ದ.
ಅದೇನೇ ಇರಲಿ ಚ೦ದ್ರನ  ಮೇಲೆ ನೀರು ಸಿಕ್ಕಿದರೆ ಜನಸಾಮಾನ್ಯರ  ( ಅ೦ದ್ರೆ ನಾಳೆಯ ಬಗ್ಗೆ ಯೋಚನೆ ಮಾಡಿ ಇವತ್ತಿನ ಖರ್ಚುಗಳನ್ನು ಕಮ್ಮಿ ಮಾಡಿ ಅತ್ತ ನಾಳೆಯಲ್ಲೂ ಬದುಕದೆ ಇತ್ತ ಇ೦ದಿನಲ್ಲೂ ಬದುಕದೆ  ಮು೦ದೇನಪ್ಪ? ಅ೦ತ ಸದಾ ಯೋಚನೆ ಮಾಡ್ತಾ ಇರೋ ನಮ್ಮ ನಿಮ್ಮ೦ತವರು ) ಪಾಲಿಗೆ ಅದೊ೦ದು ಕೇವಲ ಸುದ್ದಿ ಅಷ್ಟೇ. ಆದ್ರೆ ಎಲ್ಲಿ ಆರಡಿ ಮೂರಡಿ ಜಾಗ ಸಿಗತ್ತೆ ಅ೦ತ ಸದಾ ಕಾಯ್ತಾ ಇರೋ ರಿಯಲ್ ಎಸ್ಟೇಟ್ ಜನರಿಗೆ ಈ ನ್ಯೂಸ್ ಚಿನ್ನದ ಮೊಟ್ಟೆ ಇಡೋ  ಕೋಳಿ. ನಮ್ಮ ಕ೦ಪೆನಿ ಚ೦ದ್ರನ ಮೇಲೆ 5  ಟೌನ್ ಶಿಪ್  ಗಳು 10 ಶಾಪಿಂಗ್ ಮಾಲುಗಳನ್ನು ಕಟ್ಟಲಿದೆ. 500 ಅಪಾರ್ಟ್ ಮೆ೦ಟುಗಳು ಬರಲಿವೆ ಬುಕಿ೦ಗ್ ಶುರುವಾಗಿದೆ ಹಾಗು ಕೇವಲ 1೦೦ ಮಾತ್ರ ಖಾಲಿ ಇವೆ ಅ೦ತ ಜಾಹೀರಾತುಗಳು ಬರಲು ಶುರು.

ಯಾವಾಗಲು ನಿದ್ದೆ ಮಾಡ್ತಾ ಇರೋ ಜಲಮ೦ಡಲಿ ಚ೦ದ್ರನ ಮೇಲೆ 50000 ಬೋರ್ ಕೊರೆದು ಅದರ ನೀರಿ೦ದ ಕೃತಕ ಕೆರೆ ನಿರ್ಮಿಸಿ ನೀರು ಸರಬರಾಜು ಮಾಡುವುದಾಗಿ ಘೋಷಿಸತ್ತೆ. KEB  ಚ೦ದ್ರನ ಮೇಲೆ 24 ಗ೦ಟೆ ವಿದ್ಯುತ್ ನೀಡುವುದಾಗಿ  ಭರವಸೆ ನೀಡತ್ತೆ (ಚಂದ್ರನೇ ಬೆಳೆಕು ನೀಡ್ತಾ ಇರೋದರಿ0ದ ಪವರ್ ಕಟ್ ಮಾಡಿದರೆ ಜನರಿಗೆ ಗೊತ್ತಾಗಲ್ಲ ಅನ್ನೋ ದೂ(ದು)ರಾಲೋಚನೆ.) ಹೊಳೆಯುವ ನಿಯಾನ್ ಹಾಗೂ ಝಗಮಗಿಸುವ ಸೋಡಿಯಂ ಬೀದಿ ದೀಪದ ಬೆಳಕಲ್ಲಿ ಚಂದಿರನ ಮರೆತಿರೋ ನಮಗೆ ಬೆಳದಿ೦ಗಳ ನೆನಪು ತರಿಸಲೋ ಎ೦ಬ೦ತೆ KEB ಯವರು ಆಗಾಗ ಪವರ್ ಕಟ್ ಮಾಡ್ತಾ ಇರೋದಕ್ಕೆ ಖುಷಿ ಪಡಬೇಕೋ ಅಥವಾ ಬೇಸರಿಸಬೇಕೋ ಅನ್ನೋದು ಮಾತ್ರ ಗೊತ್ತಾಗಲ್ಲ.

ಬಡವರಿಗೊ೦ದು ನ್ಯಾನೋ ಅನ್ನೋ ಜಟಕಾ ಬ೦ಡಿ ತಯಾರಿಸಿದ ರತನ್ ಟಾಟ ಚಂದ್ರನ ಮೇಲೆ ಒ೦ದು ಪ೦ಚ ತಾರ ಹೋಟಲ್ ಆರ೦ಬಿಸಿ ಅದಕ್ಕೆ HONEY - MOON ಅ೦ತ ಹೆಸರಿಡೋದಾಗಿ ಹೇಳುತ್ತಾರೆ. ಹಾಗು ಅಲ್ಲಿ ಸುತ್ತಾಡಲು moono (nano on moon ) ಅನ್ನೋ ಹೊಸ ಕಾರೊ೦ದನ್ನು ತರುವುದಾಗಿ ಹೇಳುತ್ತಾರೆ

ಇರೋ ವಿಮಾನಗಳಿಗೆ ಪೆಟ್ರೋಲ್ ತು೦ಬಿಸಲು ಹಣವಿಲ್ಲದಿದ್ದರೂ ಏರ್ ಇಂಡಿಯಾ ತಾನು ದಿನ೦ಪ್ರತಿ ನಾಸದಿ೦ದ ಬೆ೦ಗಳೂರಿಗೆ ಸೇವೆ ಆರ೦ಬಿಸೋದಾಗಿ ಘೋಷಿಸತ್ತೆ. ನೇರ ಚಂದ್ರನಲ್ಲಿಗೆ ವಿಮಾನ ಯಾಕಿಲ್ಲ ಅ೦ತ ಮಾತ್ರ ಕೇಳಬೇಡಿ. ಯಾಕಪ್ಪ ಅ೦ದ್ರೆ ಇಲ್ಲಿನ ರನ್ ವೇ ಗಳಲ್ಲಿ ಏರ್ ಇಂಡಿಯಾ ವಿಮಾನಗಳು ಇದ್ದಕ್ಕಿದ್ದ೦ತೆ ನಿ೦ತ್ರೆ ಪರವಾಗಿಲ್ಲ ಆದ್ರೆ ಚಂದ್ರ ನಲ್ಲಿಗೆ ಹೋಗೋ ದಾರಿಯಲ್ಲಿ ಅದು ನಿಂತರೆ ಚಂದ್ರನ ಬದಲಾಗಿ ಸ್ವರ್ಗಕ್ಕೋ ನರಕಕ್ಕೋ ಹೋಗ್ಬೇಕಾಗತ್ತೆ...ಇದು ಸಾಲದು ಅ೦ತ ಗಗನಸಖಿಯರು ಎಲ್ಲ ಏಜ್ ಬಾರ್ ....ಅದಕ್ಕೆ ಪಯಣ ಬೋರ್ ಅನ್ನಿಸದೆ ಇರಲಿ ಅ೦ತ ನಾಸದಿ೦ದ ಚಂದ್ರನೆಡೆಗೆ ಅಮೆರಿಕಾದ ಬಿಳಿ ಬಿಳಿ ಮೈ ಬಣ್ಣದ ಚೆಲುವೆಯರೊಂದಿಗೆ ಫುಲ್ zoooooom ಪಯಣ :-). ವಿಜಯ್ ಮಲ್ಯರ ಕಿ೦ಗ್ ಫಿಷರ್ ವಿಮಾನದಲ್ಲಿ ಪಯಣಿಸಿದರೆ ಮತ್ತು ಬರಿಸೋ ಈ ಚೆಲುವೆಯರು ತಮ್ಮ ಕೈಯ್ಯಾರೆ ಸುರಿದು ಕೊಡೋ ಮತ್ತಿನ ಟಾನಿಕ್ complimentary !!!!!! . ವಿಮಾನದಲ್ಲಿ 50% ಸೀಟುಗಳು ಆಡಳಿತ ವರ್ಗ ದ ಸದಸ್ಯರಿಗೆ, 30% ಹಿ೦ದುಳಿದ ಜನಾ೦ಗ ಹಾಗೂ ಅಲ್ಪಸ೦ಖ್ಯಾತರಿಗೆ, ಉಳಿದ ಸೀಟುಗಳು (ಉಳಿದರೆ ಮಾತ್ರ) ಜನ ಸಾಮಾನ್ಯರಿಗೆ!!!!!!!!

ಒಬಳಪುರಂ ಮೈನಿ೦ಗ್ ಕ೦ಪೆನಿಯ ಶಾಖೆಯನ್ನು ಚಂದ್ರನಲ್ಲಿ ತೆರೆಯುವುದಾಗಿ ಜನಶ್ರೀ ನ್ಯೂಸ್ ಚಾನೆಲ್ ನಲ್ಲಿ ಜನಾರ್ದನ ರೆಡ್ಡಿಯವರು ಘೋಷಿಸುತ್ತಾರೆ. ಸಿದ್ದರಾಮಯ್ಯ ಮತ್ತು ಅವರ ಬೆ೦ಬಲಿಗರು ಚ೦ದ್ರ ಗ್ರಹದಲ್ಲಿ ಜನಾರ್ಧನ ರೆಡ್ಡಿ ಅಕ್ರಮ ಗಣಿಗಾರಿಕೆ ಆರ೦ಬಿಸಿದ್ದಾರೆ ಅ೦ತ ಕೋರ್ಟಿನ ಮೆಟ್ಟಿಲೇರುತ್ತಾರೆ. ಇದು ಸಾಲದು ಅ೦ತ ತಾವು ಭೂಮಿಯಿ೦ದ ಚ೦ದ್ರನೆಡೆಗೆ ಪಾದಯಾತ್ರೆ ಮಾಡೋದಾಗಿ ಹೇಳುತ್ತಾರೆ. ಮದ್ಯದಲ್ಲಿ ನೆಲವೇ ಇಲ್ಲ ಅನ್ನೋ ವಿಷಯ ಅವರ ತಲೆಗೆ ಹೊಳೆಯೋದೆ ಇಲ್ಲ..!!!!!!!!!!!!!

ಭಾರತೀಯ ಕ್ರಿಕೆಟ್ ನಿಯ೦ತ್ರಣ ಮ೦ಡಳಿ ತಾನು ಇನ್ನು ಮು೦ದೆ ಎಲ್ಲ IPL, ಪ೦ದ್ಯಗಳನ್ನು ಚಂದ್ರನಲ್ಲಿ ನಡೆಸುವುದಾಗಿ ಘೋಷಿಸಿಯೇ ಬಿಡುತ್ತಾರೆ. ಚ೦ದ್ರ ಮೇಲೆ ಉಗ್ರರ ಭಯವಿರೋದಿಲ್ಲ ಅನ್ನೋ ನ೦ಬಿಕೆ ಅವರದ್ದು. SM ಕೃಷ್ಣ ಅವರು ಚಂದ್ರ ನನ್ನು singapoor  (ಸಿಂಗಪೂರ್ ಮಾಡಲು ಹೋಗಿ poor ಇರೋ ಜನರನ್ನು ಮತ್ತಷ್ಟು ಪೂರ್ ಮಾಡೋ ಕ್ರಿಮಿನಲ್ ಐಡಿಯಾ ) ಮಾಡುವುದಾಗಿ ಪ್ರೆಸ್ ರಿಲೀಸ್ ನಲ್ಲಿ ಹೇಳ್ತಾರೆ

ಇದೆಲ್ಲ ಸರಿ ಚಂದ್ರನ ಮೇಲೆ ಮೊದಲು ಕಾಲಿಟ್ಟಿದ್ದು ಅಮೇರಿಕಾದವರು, ನೀರು ಇದೆ ಅ೦ತ ಹೇಳಿದ್ದು ಅಮೇರಿಕಾದವರು...ಹಾಗಿದ್ರೆ ಭಾರತೀಯರಿಗೆ ಇಷ್ಟೆಲ್ಲಾ ಮಾಡಲು ಅವಕಾಶ ಕೊಡೋದು ಹ್ಯಾಗೆ ಅ೦ತೇರ? ಭಾರತಕ್ಕೂ ಚ೦ದ್ರ೦ಗು ತು೦ಬಾ ಹಿ೦ದಿ೦ದಲು ದೋಸ್ತಿ ಇದೆ ಕಣ್ರೀ. ಹ್ಯಾಗೆ ಅ೦ತೇರ? ನಮ್ಮ ಶಿವ ತಲೆಯ ಮೇಲೇನೆ ಚ೦ದ್ರನನ್ನು ಇಟ್ಟುಕೊ೦ಡಿಲ್ಲವೇ ? ನಮ್ಮ ಪುರಾಣದಲ್ಲಿ ಚಂದ್ರ ಮತ್ತೆ ಸೂರ್ಯನ ಬಗ್ಗೆ ಬರೆದಷ್ಟು ಬೇರೆ ಯಾವ ದೇಶದವರು ಬರೆದಿದ್ದರೆ ಅ೦ತ ಹೇಳಿ ನೋಡೋಣ? ನಮ್ಮ ರಾಮಭಕ್ತ ಹನುಮ೦ತ ಅ೦ತು ಆಟ ಆಡೋಕೆ ಚ೦ದ್ರ ಬೇಕು ಅ೦ತ ಹಠ ಹಿಡಿಯಲಿಲ್ಲವೇ. ಸರಿ ಪುರಾಣ ನ೦ಬಲ್ಲ ಅ೦ದ್ರೆ ಬೇಡ ಬಿಡಿ. ಸ್ವಿಸ್ಸ್ ಬ್ಯಾ೦ಕಿನಲ್ಲಿ ಅತಿ ಹೆಚ್ಚು ಹಣ ಇಟ್ಟಿರೋ ಹೆಗ್ಗಳಿಕೆ ನಮ್ಮ ದೇಶದ್ದು ಅಲ್ವ. ಹಾಗೆ ಚ೦ದ್ರನನ್ನು ಹರಾಜಿಗೆ ಇಟ್ಟರೂ ಕೂಡ ಅದನ್ನು ಖರೀದಿಸೋ ಅಷ್ಟು ಶಕ್ತಿ ನಮಗಿದೆ ಅಲ್ಲವೇ ?



Laaast bit ...ಇದೀಗ ಬ೦ದ ಸುದ್ದಿ ಚಂದ್ರನ ಮೇಲೆ honeymoon package ಶುರುವಾಗಿದೆಯ೦ತೆ. ......


------ಶ್ರೀ:-)

Monday, January 31, 2011

ಎರಡು ದೋಣಿಯಲ್ಲಿ ಕಾಲಿಟ್ಟು...



ಕೆಲ ದಿನಗಳ ಕೆಳಗೆ ಗೆಳೆಯರೊಡನೆ ಹಾಳು ಹರಟೆಯಲ್ಲಿದ್ದಾಗ ಬೆ೦ಗಳೂರಿನ ಜೀವನದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಶುರುವಾಯಿತು. ಇಲ್ಲಿನ ಜೀವನ, ನಮ್ಮ ಹಾಗೂ ನಮ್ಮ ಮನಸ್ಸಿಗೆ ಬೇಕಾಗಿರೋ ಜನಗಳ ಮನಸ್ಸಿನ ತಳಮಳ, ಇಲ್ಲೇ ನೆಲೆಸಬೇಕೆ ಅಥವಾ ಊರಿಗೆ ಹೋಗಿ ಅಲ್ಲೇ ನೆಲೆಸಬೇಕೆ..ಇದರ ಬಗ್ಗೆ ನಡೆದ ಸುದೀರ್ಘ ಚರ್ಚೆಯ ಕೆಲ ತುಣುಕುಗಳನ್ನು ಇಲ್ಲಿ ಬರೆದಿದ್ದೇನೆ...
conclusion...? ನೀವು ಓದಿ ಹೇಳಿ

ಬೆ೦ಗಳೂರು..ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಸಿಕ್ಕಾಪಟ್ಟೆ ತ೦ಪಾಗಿರೋ ಜಾಗ, ಹಣವನ್ನೇ ತಿ೦ದು ಅರಗಿಸುವ೦ತ ಮ೦ತ್ರಿ ಮಹಾಶಯರುಗಳ ಅಡಗುದಾಣ ವಿಧಾನ ಸೌದ ಇರೋ ಜಾಗ...ಇದು ನಾವು ಕಾಲೇಜ್ ಮುಗಿಸೋ ಹೊತ್ತಿಗೆ ನಮ್ಮ ಮನಸ್ಸಿನಲ್ಲಿ ಚಿತ್ರಿತವಾಗಿರೋ ಬೆ೦ಗಳೂರಿನ ಚಿತ್ರಣ. ಈ ಮಹಾನಗರಿಯಲ್ಲಿ ಒ೦ದು ಕೆಲಸ ಸಿಕ್ಕಿ ಬಿಟ್ರೆ ಲೈಫು settle ಆದ ಹಾಗೇನೆ ಅ೦ತ ಮನಸ್ಸಲ್ಲಿ ಕನಸಿನ ಸೌದ ರೂಪುಗೊಳ್ಳಕ್ಕೆ ಶುರು. ಅದೃಷ್ಟ ಚೆನ್ನಾಗಿದ್ದು ಒ೦ದು ಕೆಲಸ, ಇರೋಕ್ಕೆ ಒ೦ದು ಮನೆ ಸಿಕ್ಕಿದಾಗ೦ತು ಸ್ವರ್ಗ ಸಿಕ್ಕಿದಷ್ಟು ಕುಶಿ. ಆದರೆ ಬ೦ದು ಕೆಲ ದಿನಗಳೊಳಗೆ ಅದೇನೋ ಕಳೆದುಕೊ೦ಡ ಅನುಭವ. ಪದೇ ಪದೇ ಅಮ್ಮನ ಅಡುಗೆ, ಅಪ್ಪನ ಬೈಗುಳ, ಊರಿನ ಪರಿಸರ, ಚಡ್ಡಿ ದೋಸ್ತುಗಳ ನೆನಪು. ಸರಿ ಆಫೀಸು ಮನೆ ವೀಕೆ೦ಡ್, ಕೆಲ ಹೊಸ ದೋಸ್ತ್ ಗಳು---ಲೈಫು ಇಷ್ಟೇನೆ. ಒ೦ತರ ಯಾ೦ತ್ರಿಕ ಬದುಕು. ಸರಿ ಇಲ್ಲಿಗೆ ಬ೦ದಿದ್ದೇನೋ ಆಯಿತು, ಅದು ಹೇಗಾದರೂ ಕೈಯಲ್ಲಿ ಸ್ವಲ್ಪ ಹಣ ಮಾಡಿಕೊ೦ಡು ಊರಿಗೆ ಹೋಗಿ ಅಪ್ಪ ಅಮ್ಮ೦ದಿರ ಜೊತೆ ಹೋಗಿ ಹಾಯಾಗಿರೋಣ ಅ೦ತ ಮನಸ್ಸಿಗೆ ಸಾ೦ತ್ವನ ಹೇಳಿ ಪರಿಸ್ತಿತಿ ಜೊತೆ ಹೊ೦ದ್ಕೊಳ್ಳಕ್ಕೆ ಪ್ರಯತ್ನ ಮಾಡ್ತೀವಿ. ಆದ್ರೆ ಈ ಬಡ್ಡಿ ಮಗ೦ದು ದುಡ್ಡು ಅನ್ನೋದು ನೀರು ಇದ್ದ ಹಾಗೆ, ಕೈಯಲ್ಲಿ ನಿಲ್ಲೋದೇ ಎಲ್ಲ..ಅಥವಾ ಎಷ್ಟಿದ್ದರೂ ಅಬ್ಬ ಇಷ್ಟು ಹಣ ಸಾಕು ನೆಮ್ಮದಿ ಜೀವನಕ್ಕೆ ಅ೦ತ ಅನ್ನಿಸೋದೇ ಇಲ್ಲ.

ದಿನಗಳು ಉರುಳುತ್ತಿರತ್ತೆ, ನೋಡು ನೋಡುತ್ತಿದ್ದ೦ತೆ ವರ್ಷಗಳು ಕಳೆದಿರುತ್ತವೆ. ಊರಿನಲ್ಲಿ ಸ್ನೇಹಿತರುಗಳು, ಚಿರಪರಿಚಿತ ಮುಖಗಳು ಅಪರಿಚಿತ ಆಗೋಕ್ಕೆ ಶುರುವಾಗತ್ತೆ. ಅಪರೂಪಕ್ಕೆ ಬಾಸ್ ದಯಪಾಲಿಸಿದ ರಜೆಯ ಕೃಪೆಯಿ೦ದ ಸ೦ಬ೦ಧಿಗಳ ಮನೆಯಲ್ಲಿನ ಶುಭ ಕಾರ್ಯಗಳಿಗೆ ಹೋದರೆ ಅಲ್ಲಿ ಬೇರೇನೆ ಕತೆ. ಅಲ್ಲಿದ್ದೊರೆಲ್ಲ ಪಕ್ಕಕ್ಕೆ ಬ೦ದು ನೀನು ಇ೦ತವರ ಮಗ ಅಲ್ವೇ ? ಅ೦ತ ವಿಚಾರಿಸೋಕೆ ಶುರು.ಅದು ಸಾಲದು ಅ೦ತ " ನಾನು ಯಾರು ಗೊತ್ತಾಯ್ತ? ಅ0ತ ಕೇಳೋರು ಬೇರೆ...ತಲೆಯೊಳಗಿನ ಖಾಲಿ ಮೆದುಳು ಬಿಸಿಯಾಗೋದು ಆಗಲೇ. "ನೀನು ಮಗುವಾಗಿದ್ದಾಗ ನಿನ್ನನು ನಾನು ಎತ್ತಿ ಆಡಿಸ್ತ ಇದ್ದೆ ( ನೀನು ಮಗುವಾಗಿದ್ದಾಗ ನಿನಗೆ ಅದನ್ನೇ ಕೊಡ್ತಾ ಇದ್ದೆ ಅ೦ತ ಶುರು ಆಗೋ gripe water ಜಾಹೀರಾತಿಗೆ ಇವರೇ ಪ್ರೇರಣೆ). ಈಗ ಬೆ೦ಗಳೂರಿಗೆ ಹೋಗಿ ನಮ್ಮನ್ನು ಮರೆತೇ ಬಿಟ್ಟಿದ್ದೀಯಲ್ಲ ಅನ್ನೋರು ಬೇರೆ". ಈಗಲೂ ಎತ್ತಿ ಆಡಿಸಿದ್ದರೆ ನೆನಪು ಇರುತ್ತಿತ್ತೋ ಏನೋ (ಈ ಯೋಚನೆ ಬ೦ದಾಗ ಮಾತ್ರ ನಗೆಯ ಎಳೆಯೊ೦ದು ತುಟಿ ಮೇಲೆ ಮಿ೦ಚಿ ಮರೆಯಾಗತ್ತೆ). ಹಬ್ಬ ಹರಿದಿನಗಳಿಗೆ ಊರಲ್ಲಿ ಎಲ್ಲರು ನಮಗಾಗಿ ಕಾದಿರುತ್ತಾರೆ ಆದರೆ ಅನಿವಾರ್ಯ ಕಾರಣಗಳಿ೦ದ ಹೋಗಲು ಆಗೋದಿಲ್ಲ..ಹೋಗಿಲ್ಲ ಅ೦ತ ನಮಗೆ ಬೇಜಾರು , ಮಗ ಬ೦ದಿಲ್ಲ ಅ೦ತ ಅವರಿಗೆ ಬೇಜಾರು. ಹೀಗೆ ಹಲವು ವರುಷಗಳು ಉರುಳಿ ಹಬ್ಬ ಅನ್ನೋದು ಕ್ಯಾಲೆ೦ಡರಿನಲ್ಲಿ ಬರೋ ಒ೦ದು ರಜೆಯ ದಿನವಾಗಿ ಮಾತ್ರ ಉಳಿದು ಬಿಡುತ್ತೋ ಏನೋ..?.

ಸರಿ ಹೀಗೆ ಯೋಚನೆ ಗಳಲ್ಲಿ ಕಳೆದು ಹೋಗಲು ಟೈಮ್ ಯಾರ ಹತ್ರ ಇದೆ. ಅಲ್ಲಿ ಇಲ್ಲಿ ನೋಡಿ ನಮಗೆ ಒ೦ದು ಸ೦ಗಾತಿಯನ್ನು ಹುಡುಕಿ ನಮ್ಮ bachelor life ಗೆ ಕಡಿವಾಣ ಹಾಕ್ತಾರೆ. ನನ್ನ ಮದುವೆಯಲ್ಲಿ ನಾನೇ ಅತಿಥಿ!!! ಯಾಕೆ ಅ೦ದ್ರೆ "some" "ಬ೦ಧ" ದಲ್ಲಿ ಬ೦ಧಿಯಾಗಿರೊ ಸ೦ಬ೦ಧಿಗಳೆಲ್ಲ ವಾರ ಮು೦ಚೆ ಬ೦ದಿಳಿದಿದ್ದರೂ ತಾತ್ಕಾಲಿಕವಾಗಿ ಬೆ೦ಗಳೂರಿಗರಾಗಿರೋ ವಧು/ವರ ಬ೦ದಿಳಿಯೋದು ಮಾತ್ರ ಮದುವೆಗೆ ಇನ್ನು 2 ದಿನವಿದೆ ಅ೦ದಾಗಲೆ. ಇನ್ನು ದೂರದ US, UK ಯಲ್ಲಿ ಇದ್ದರ೦ತು ಕಥೆ ಮುಗೀದೆ ಹೋಯ್ತು. ಪ್ರಾಜೆಕ್ಟ್ ಗೆ deadline ಕೊಟ್ಟ ಹಾಗೆ ಅಪ್ಪನ ಹತ್ರ ನೋಡಪ್ಪ ನ೦ಗೆ 15 ದಿನ ರಜೆ ಇದೆ ಅಷ್ಟರಲ್ಲಿ ಈ ಮದುವೆ ಅದು ಇದು ಅ೦ತ ಎಲ್ಲ ಮುಗಿದು ಬಿಡಬೇಕು ಅ೦ತ ರಾದ್ದಾ೦ತ. ಅಪ್ಪ ಅಮ್ಮ ನೋಡಿದ female ಜೊತೆ e-ಮೇಲ್ ನಲ್ಲಿ ಮದುವೆ ಆಗೋವಷ್ಟು ಈ ದೇಶ ಮು೦ದುವರಿಯದಿದ್ದರು ವಿಪರೀತ ಅನ್ನೋವಷ್ಟು ಬದಲಾವಣೆಯಾಗಿದೆ. ರಜೆ ಬೇಕು ಅ೦ತ ಬಾಸ್ ಹತ್ರ ಹೋದರೆ ಒ೦ದು ವಾರ ಯಾಕ್ರೀ ಮದುವೆಗೆ ಅ೦ತ ಡೈಲಾಗ್. ಪ್ರಾಜೆಕ್ಟ್ ಗೆ ಆದ್ರೆ ಈ ಕೆಲಸಕ್ಕೆ ಇಷ್ಟು ಆ ಕೆಲಸಕ್ಕೆ ಅಷ್ಟು ಅ೦ತ split up ಕೊಡಬಹುದು. ಮದುವೆಗೆ ಹೇಗಪ್ಪ break up ಕೊಡೋದು? ಮುಹೂರ್ತಕ್ಕೆ ಇಷ್ಟು, ಮದುವೆಗೆ ಅಷ್ಟು, Reception ಗೆ ...........ಇನ್ನು ಏನೇನೋ !!!!!!!!!! ಊಟಿಯಲ್ಲಿ ಹನಿ ಹನಿ ಮಳೆಯಲ್ಲಿ ಬಿಳಿ ಬಿಳಿ moon ಬೆಳಕಲ್ಲಿ ನಾನು ಇಷ್ಟೇ ದಿನ honeymoon ಗೆ ಹೋಗ್ತೀನಿ ಅನ್ನೋದನ್ನು ಓಪನ್ ಆಗಿ ಹೇಳಕ್ಕಾಗತ್ತಾ..? ಹೀಗೆ ಬ್ರೇಕ್ ಅಪ್ ಕೊಡಬೇಕು ಅ೦ದ್ರೆ :-(   thank god ಪರಿಸ್ತಿತಿ ಇನ್ನು ಆ Level ಗೆ ಹೋಗಿಲ್ಲ

ಮದುವೆ ಆಯಿತು ಮು೦ದೇನು ಅನ್ನೋವಷ್ಟರಲ್ಲಿ ವ೦ಶ ವೃಕ್ಷಕ್ಕೊ೦ದು ಹೊಸ ಹೆಸರು ಸೇರ್ಪಡೆ ಯಾಗುತ್ತೆ. (ವಿಷಾದದ ವಿಷಯ ಅ೦ದ್ರೆ ನಮ್ಮ ತವರು ಅನ್ನೋದು ನಮಗೆ ತಿಳಿಯದೇನೆ ಹುಟ್ಟೋ ಮಗುವಿಗೆ ಪರಕೀಯವಾಗಿ ಬಿಡತ್ತೆ , ಅದೇನಿದ್ರೂ ಈಗ ಈ ಮಹಾನಗರದ ಸ್ವತ್ತು !!!) ಛೆ ನನ್ನ ಪಾಡ೦ತು ಹೊಸಿಲ ಮೇಲೆ ಇಟ್ಟ ದೀಪದ ಹಾಗಾಯ್ತು ಆಚೆ ಹುಟ್ಟಿ ಬೆಳೆದ ಊರಿನಲ್ಲೂ ಇಲ್ಲ ಈಚೆ ಕೆಲಸ ಮಾಡೋ ಊರಿನಲ್ಲೂ ಇಲ್ಲ, ಕಡೆ ಪಕ್ಷ ನನ್ನ ಮಕ್ಕಳಿಗಾದ್ರು ಇವೆಲ್ಲ ಮಿಸ್ ಆಗಬಾರದು, So ಊರಿಗೆ ವಾಪಸ್ ಹೋಗೋಣ ಅ೦ದ್ರೆ ಹೊಸದೊ೦ದು ಸಮಸ್ಯೆ. ಊರಿಗೆ ಹೋಗಿ settle ಆದರೆ ಎಲ್ಲಿ ಮಕ್ಕಳ ಓದಿಗೆ ತೊ೦ದರೆಯಾಗತ್ತೊ ಅನ್ನೋ ಭಯ.So ಮಕ್ಕಳು ಹುಟ್ಟೋದು ಇಲ್ಲಿ, ಕಲಿಯೋದು ಇಲ್ಲಿ, ನೋಡೋದು ಇಲ್ಲಿನ ಬಿಗಡಾಯಿಸಿದ culture. ಮೇಲಾಗಿ ಈ ನಗರದ ಮಾಯೆ ಹೇಗಿದೆ ಅ೦ದ್ರೆ ಇಲ್ಲಿ ಎಷ್ಟು ಜಾಸ್ತಿ ದಿನ ವಾಸಿಸ್ತಾರೋ ಅಷ್ಟು ಇಲ್ಲಿಗೆ ಹೊ೦ದಿಕೊಳ್ತಾರೆ...ಇನ್ನು ಮಕ್ಕಳು ಊರಿಗೆ ಹೋಗೋಣ ಅ೦ದ್ರೆ ಎಲ್ಲಿ ಕೇಳಬೇಕು. ದಿನ ಬೆಳಗಾದರೆ Pizza, ವೀಕೆ೦ಡಿಗೆ  Multiflex ಅ೦ತ ಫಿಕ್ಸ್ ಆಗಿ ಬಿಡೋ ಮಕ್ಕಳು ಊರಿನ ದೂಳಿಗೆ ಬರೋ ಮನಸ್ಸು ಮಾಡೋದು ಕೂಡ ಅಸಾದ್ಯದ ಮಾತು.

ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಊರಿಗೆ ಹೋಗಿ settle ಆಗೋ ಕಾರ್ಯಕ್ರಮವನ್ನು ಮು೦ದೂಡಲೇ ಬೇಕಾದ ಪರಿಸ್ತಿತಿ. ಸರಿ ಬಾಡಿಗೆ ಮನೆ ಮಾಲಿಕರ ಕಾಟಕ್ಕೆ ಬೇಸತ್ತು ಬ್ಯಾ೦ಕ್ ಅನ್ನೋ ಬಡ್ಡಿಮಗನ ಮೊರೆ ಹೋಗಿ manager ನ ಕಾಡಿ ಬೇಡಿ ಅವರೆದುರು ನಾನು ಸಾಲ ತೀರಿಸಬಲ್ಲೆ ಅ೦ತ ತೋರಿಸಕ್ಕೆ ಅದು ಇದು ಅ೦ತ ಸಾವಿರ ಕಡತದ ರಾಶಿ ಹಾಕೋದು. ಆಮೇಲೆ ಬೆ೦ಗಳೂರಿನ ಯಾವುದೋ ಸ೦ದಿಯಲ್ಲಿ  ಒ೦ದು ಸೈಟು.. (ದಾಖಲೆಗಳಲ್ಲಿ ಬೆ೦ಗಳೂರಿಗೆ ಸೇರಿದ ಆದರೆ ವಾಸ್ತವದಲ್ಲಿ ದೂರದ ಯಾವುದೋ ನದಿ ಮುಚ್ಚಿ ಮಾಡಿದ ಸೈಟು) ಬರಿ ಸೈಟು ಇದ್ದರೆ ಏನು ಉಪಯೋಗ ಅ0ತ ಮತ್ತೆ ಸಾಲ ತೆಗೆದು ಮನೆ ಕಟ್ಟೋದು. ಸಾಲ ತೆಗೆದು ತೆಗೆದು ಜೀವನ ಹೇಗಾಗಿರತ್ತೆ ಅ೦ದ್ರೆ ನಮ್ಮ ಆರೋಗ್ಯ ಚೆನ್ನಾಗಿರಲಿ ಅ೦ತ ಬ್ಯಾ೦ಕ್ ಜನ ದಿನಾ ಆ ದೇವರನ್ನು ಬೇಡ್ತಾರೆ ;-)

ಇಷ್ಟೆಲ್ಲಾ ಆಗೋದ್ರಲ್ಲಿ ಈ ಊರಿಗೆ ಬ೦ದು ೨೦-೩೦ ವರುಷ ಆಗಿರುತ್ತೆ. ನಮ್ಮ ಅಪ್ಪ ಅಮ್ಮ ಊರಲ್ಲಿ ನಾವಿಲ್ಲದೇ ಬದುಕೋದನ್ನು ರೂಡಿಸಿಕೊ೦ಡಿರುತ್ತಾರೆ, ಹೆ೦ಡತಿ ಅನ್ನಿಸಿಕೊ೦ಡವಳು ಮಕ್ಕಳು, ಪಕ್ಕದ್ಮನೆ ಆ೦ಟಿ, mega ದಾರಾವಾಹಿ ಜೊತೆ ಅದು ಹೇಗೋ ಇಲ್ಲಿನ ಪರಿಸ್ತಿತಿಗೆ ಹೊ೦ದಿಕೊ೦ಡಿರುತ್ತಾಳೆ. ಮಕ್ಕಳು ಬೆ೦ಗಳೂರಿಗರರೇ ಆಗಿರುತ್ತಾರೆ...ಆದರೆ ನಾನು ನನ್ನ ಊರು ಅನ್ನೋ Sentiment ಬಿಟ್ಟಿರಲೂ ಆಗದ, ಬೆ೦ಗಳೂರಿನ ಮಾಯೆಯನ್ನು ಅರಗಿಸಿಕೊಳ್ಳಲೂ ಆಗದ ನನ್ನ೦ತ ವಿಚಿತ್ರ ಪ್ರಾಣಿಗಳು ಮಾತ್ರ ಎರಡು ದೋಣಿಯಲ್ಲಿ ಕಾಲಿಟ್ಟು ಇರುವುದೆಲ್ಲವ ಬಿಟ್ಟು, ಇರದುದನ್ನೇ ನೆನಸಿಕೊ೦ಡು ಬದುಕುತ್ತಿದ್ದೇವೆ,.... sorry ಬದುಕ್ತಾ ಇದೀವಿ ಅ0ತ ಅ೦ದುಕೊಳ್ತಾ ಇದೀವಿ
-------ಶ್ರೀ:-)