Sunday, August 2, 2015

ಜೋಕರ್ ......

ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆಲ ದಿನಗಳ ಹಿಂದೆ ನಡೆದ ಯಕ್ಷಗಾನದ ಬಗೆಗಿನ ಒಂದು ಕಾರ್ಯಕ್ರಮದಲ್ಲಿ ಸ್ನೇಹಿತನೊಬ್ಬ ಹೇಳಿದ ಘಟನೆಯಿಂದ ಪ್ರೇರಿತ ಈ ಲೇಖನ, ಜೊತೆಗೆ ಸ್ವಲ್ಪ ಕಲ್ಪನೆ ... ಕಥೆಯ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ.

                                           

                                             ಜೋಕರ್ 

ಹೊರಗೆ ಮಳೆ ದೋ ಎಂದು ಸುರಿಯುತ್ತಿದೆ. ಮಳೆಗಾಲ ಅಂದ್ರೆ ನನ್ನಂತ ಯಕ್ಷಗಾನ ಪಾತ್ರದಾರಿಗಳಿಗೆ ರಜಾ ದಿನಗಳು. ರಜೆ ಅಲ್ಲ ಒಂತರ ಸಜೆ ಅಂದ್ರು ತಪ್ಪೇನು ಇಲ್ಲ. ಈ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಅಂತ ಒಂದೆರಡು ಹರಕೆಯ ಯಕ್ಷಗಾನ ಬಿಟ್ಟರೆ ನಮಗೆ ಅಸಹನೀಯ ರಜೆ. ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರದರ್ಶನ ಕೊಟ್ಟು ಹಗಲಲ್ಲಿ ನಿದ್ರಿಸಿದ ನಮಗೆ ಈಗ ಸ್ವಲ್ಪ ಕಷ್ಟದ ಹೊತ್ತು. ಹಗಲು ದುಡಿಬೇಕು ರಾತ್ರೆ ನೆಮ್ಮದಿಯ ನಿದ್ರೆ ಮಾಡಬೇಕು, ಇದು ಜಗದ ನಿಯಮ. ಆದರೆ ಯಕ್ಷಗಾನಕ್ಕೆ ಇದು ಅನ್ವಯಿಸುವುದಿಲ್ಲ. ಜ್ವರದಿಂದ ಬಳಲಿ ಬೆಂಡಾಗಿರೋ ಹೆಂಡತಿ ಮೂಲೆಯಲ್ಲಿ ಮಲಗಿದ್ದಾಳೆ. ಕೈಯಿಟ್ಟರೆ ಸುಟ್ಟು ಹೋಗುವುದೇನೋ ಅನ್ನೋವಷ್ಟು ಜ್ವರ. ಯಜಮಾನರು ಇವತ್ತು ಒಂದು ಬಯಲಾಟ ಇದೆ ಬಾ ಮಾರಾಯ ಅಂತ ಹೇಳಿ ಹೋಗಿದ್ದಾರೆ. ಇವಳನ್ನು ಬಿಟ್ಟು ಹೇಗೆ ಹೋಗ್ಲಿ ನಾನು. ನಾನಿಲ್ಲದೆ ನಡೆಯದೇನೋ ಅನ್ನೋ ಪರಿಸ್ತಿತಿ ಏನೂ ಇಲ್ಲ ಆದ್ರೆ ನಾನಿಲ್ಲದೆ ಜನ ನಗಲಾರರು ಅನ್ನೋದು ಮಾತ್ರ ಸತ್ಯ ಯಾಕಂದ್ರೆ ನಾನು ಜನರ ಬಾಯಲ್ಲಿ ವಿಧೂಷಕ ಅಥವಾ ಜೋಕರ್. ಆದರೆ ಇವಳ ಬಾಡಿದ ಮುಖವನ್ನು ನೆನೆಸಿಕೊಂಡು ನಾನು ನಗಿಸುವುದು ಹೇಗೆ. ಆದರೆ ಕಾಣದ ನನ್ನ ನೋವಿನಲ್ಲಿ ಜನ ನಗು ಕಾಣುತ್ತಾರೆ ಅನ್ನೋದು ಮಾತ್ರ ಸತ್ಯ. ನನಗೆ ಸಹ ಪಾತ್ರದಾರಿ ಒದ್ದರೆ ಅಥವ ವಿಚಿತ್ರವಾಗಿ ನಡೆಯುತ್ತಾ ನಾನು ಬಿದ್ದರೆ ಜನರ ಕರತಾಡನ ಮುಗಿಲು ಮುಟ್ಟುತ್ತೆ. ನನ್ನ ತೊದಲು ನುಡಿಗೆ ಮಾತ್ರ ಜನರ ಕರತಾಡನ. ನಾನು ರಂಗಸ್ಥಳದಲ್ಲಿ ಅಪ್ಪಿ ತಪ್ಪಿ ಏನಾದರು ಒಳ್ಳೆ ಯ ನಾಲ್ಕು ಸಾಲು ಹೇಳಿದರೆ ಜನರಿಂದ ನೀರಸ ಪ್ರತಿಕ್ರಿಯೆ. ಯಾಕಂದ್ರೆ ನಾನು ನಾನಾಗಿದ್ದರೆ ಅಲ್ಲಿ ಅದು ನಾನಲ್ಲ.  ಜನರು ಚಹಕ್ಕೋ ಇಲ್ಲ ಬಿಸಿ ವಡೆ ತಿನ್ನಲೋ ಎದ್ದು ಹೋದರೆ ಆ ಬ್ಲಾಂಕ್ ಸ್ಪಾಟ್ ತುಂಬೋಕೆ ನಾನು ಬೇಕು. ಆದರೆ ಸ್ಪಾಟ್ ಅಲ್ಲಿ ಕಥಾನಾಯಕ ಬಂದ ಮೇಲೆ ನಾನು ತೆರೆಯ ಮೂಲೆಯಲ್ಲಿ ಏನೇನೋ ಹಾವ ಭಾವ ತೋರಿಸುತ್ತ ನಿಲ್ಲಬೇಕು. ವಿಪರ್ಯಾಸ..,..


ಕೈಲಿ ಒಂದು ಹರಿದ ಬ್ಯಾಗ್ ಹಿಡಿದು ಯಕ್ಷಗಾನ ಮೇಳದವರೊಡನೆ ಊರೂರು ಸುತ್ತುತ್ತ ಇದ್ದವ ನಾನು. ಅದೇನು ಕಂಡು ನನ್ನ ಮದುವೆ ಆದಳೋ ಗೊತ್ತಿಲ್ಲ. ಆದರೆ ತೆರೆಯ ಮೇಲಿನ ನನ್ನ ಮಾತಿಗೆ ಹಾವಭಾವಕ್ಕೆ ಇಡೀ ಊರು ನಕ್ಕರು ಇವಳನ್ನು ನಗಿಸೋದು ಇದುವರೆಗೂ ಸಾದ್ಯವಾಗಿಲ್ಲ. ನೀನು ನನ್ನ ಅಭಿನಯ, ಮಾತು ಕೇಳಿ ಯಾಕೆ ನಗೋದಿಲ್ಲ ಅಂತ ಕೇಳಿದ್ರೆ ನಿಮ್ಮ ಮಾತಿನ ಹಿಂದಿನ ನೋವು ನನಗೆ ಮಾತ್ರ ಗೊತ್ತು.  ನಿಮಗೆ ಯಾರೋ ಒದ್ದು ನೀವು ಅಲ್ಲಿ ಬಿದ್ದರೆ ಸಭೆ ನಗುತ್ತದೆ. ನಿಮ್ಮ ಮುಖದಲ್ಲಿ ನೀವು ತೋರಿಕೆಯ ನೋವನ್ನು ವಿಚಿತ್ರವಾಗಿ ಬಿಂಬಿಸಿ ನಗಿಸ್ತೀರ. ಆದರೆ ನಿಮಗೆ ನಿಜವಾಗಿಯೂ ನೋವಾಗಿರಬುಹುದೇನೋ ಅನ್ನೋ ಭಯವನ್ನು ಮನಸ್ಸಿನೊಳಗಿಟ್ಟು ನಾನು ಹೇಗೆ ನಗಲಿ  ಅಂದಳು ನಗುತ್ತ. ನೀನು ನನ್ನ ಯಕ್ಷಗಾನ ನೋಡೋಕೆ ಬರಬೇಡ ಕಣೆ ಅಂದುಬಿಟ್ಟೆ ಅವತ್ತು. ಯಾಕೆ ಅಂದಳು?. ಹೆಂಡತಿಯನ್ನೇ ನಗಿಸಲಾಗದ ಈ ಪ್ರಾಣಿ ನಮ್ಮನ್ನೇನು ನಗಿಸಿಯಾನು ಅಂತ ಲೋಕ ಕೇಳಿದರೆ ನನ್ನಲ್ಲಿ ಉತ್ತರವಿಲ್ಲ ಅದಕ್ಕೆ ಅಂದಿದ್ದೆ. ಇದಾದ ಮೇಲೆ ಒಮ್ಮೆನೂ ಆಕೆ ಬಂದಿಲ್ಲ...  


ಮಳೆಗಾಲದಲ್ಲಿ ಯಕ್ಷಗಾನ ನಡೆಯೋದೇ ಕಮ್ಮಿ .ಈಗ ಯಕ್ಷಗಾನ ನೋಡೋರ ಸಂಖ್ಯೆನೂ  ಅಷ್ಟಕಷ್ಟೇ. ಏನೋ ಅಲ್ಲಿ ಇಲ್ಲಿ ಅಂತ ಕೆಲ ಯಜಮಾನರುಗಳ ಕೃಪೆಯಿಂದ ಯಕ್ಷಗಾನ ಮಂಡಳಿಗಳು ಇನ್ನೂ ಉಳಿದುಕೊಂಡಿವೆ. ಕಸುಬಾಗಿರೋದ್ರಿ೦ದ 5 ಜನ ಇದ್ದರೂ ಅಥವಾ 5೦೦ ಇದ್ದರೂ ನಾವು ನಮ್ಮ ಕೆಲಸ ಮಾಡಬೇಕು. ಇದರ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗೇನೆ ಆ ವಿಘ್ನೇಶ್ವರನನ್ನು ವಂದಿಸಿ ಬಣ್ಣ ಹಾಕಿ ಅಭಿನಯಿದಾಗ ಸಿಗೋ ತೃಪ್ತಿನೂ ಅವರ್ಣನೀಯ. ವ್ಯವಸಾಯದ ಕೆಲಸಗಳೆಲ್ಲ ಮುಗಿದಿದ್ದವು.  ಅಪರೂಪಕ್ಕೆ ಎಂಬಂತೆ ಮಳೆಯೂ ಬಿಟ್ಟಿತ್ತು. ಅದಕ್ಕೇ  ಏನೋ ಜನರು ಜಾಸ್ತೀನೇ ಇದ್ದರು.


ಯಕ್ಷಗಾನ ಆರಂಭವಾಯ್ತು. ಭಾಗವತರು ತಮ್ಮ ಕಂಠ ಸಿರಿಯಿಂದ ಜನರನ್ನು ಹಿಡಿದಿಟ್ಟಿದ್ದಾರೆ. ಅವರ ಗಾನದ ಪ್ರತಿ ಏರಿಳಿತಕ್ಕೂ ಕರತಾಡನ. ಇಂದಿನ ಪ್ರಸಂಗ ಕೀಚಕ ವಧೆ. ಮೇಲಿರೋ ಆ ಸೂತ್ರದಾರ ಕೀಚಕನನ್ನು ದುರುಳ ಖಳನಾಯಕನನ್ನಾಗಿ ತೋರಿಸಿದರೆ ನಮ್ಮ ಸೂತ್ರದಾರರು ಇಂದು ಅವನನ್ನು ಕಥಾ ನಾಯಕನಿಗೆ ಸರಿ ಸಮಾನವೆನ್ನಿಸೋ ರೀತಿ ವೈಭವೀಕರಿಸಿದ್ದಾರೆ. ಇದೆ ಕಲೆಯ ಗಮ್ಮತ್ತು. ಕಥೆಯ ಪಾತ್ರಗಳೆಲ್ಲ ಕಥೆಗಾರನ ಕೈಲಿ ಬಂಧಿ. ಆದರು ಕೊನೆ ಮಾತ್ರ ಅದೇ ...ಕೀಚಕನ ಪರ್ಯಾವಸಾನ. ಕೀಚಕನ ರಂಗಪ್ರವೇಶ ಆಯಿತು, ಜೊತೆಗೆ ನಾನು. ಕೀಚಕನೋ ಅಜಾನುಭಾಹು. ಹಾವಭಾವಗಳಿಂದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಭಾಗವತರು ತನ್ಮಯರಾಗಿ ಭಾಗವತಿಕೆಯಲ್ಲಿ ತಮ್ಮ ಏರಿಳಿತ ತೋರಿಸುತ್ತಿದ್ದರೆ ತಾನೇನು ಕಮ್ಮಿ ಎಂದು ಇವನು ಸುತ್ತು ಹಾಕುತ್ತಿದ್ದಾನೆ. ಜನರ ಕಣ್ಣಿಗೆ ರಾಗ, ತಾಳ, ನೃತ್ಯ, ಹಾವಭಾವ ಗಳ ರಸದೌತಣ. ಅಲ್ಲೇ ಬದಿಯಲ್ಲಿ ನಿಂತ ನಾನು ಸುತ್ತು ಹಾಕಲು ಪ್ರಯತ್ನಿಸಿ ಬಿದ್ದೆ. ಸುತ್ತು ಹಾಕಲು ಬರೋದಿಲ್ಲ ಅಂತೇನು ಇಲ್ಲ. ಇವನಿಗೆ ಸರಿಸಮಾನವಾಗಿ ಅಥವಾ ಇನ್ನೊಂದು ಸುತ್ತು ಜಾಸ್ತಿ ನಾನು ಸುತ್ತಬಲ್ಲೆ ಆದರೆ ನಾನಿಲ್ಲಿರೋದು ವಿಧೂಷಕನಾಗಿ ಮಾತ್ರ. ನಾನು ಸುತ್ತು ಹಾಕಿದರೆ ಜನ ಚಪ್ಪಾಳೆ ಹೊಡೆಯೋದಿಲ್ಲ, ಬಿದ್ದರೆ ಮಾತ್ರ ಚಪ್ಪಾಳೆ!!! ಯಕ್ಷಗಾನ ಮುಂದುವರಿಯುತ್ತಿದೆ. ಪಾಂಡವರು ವಿರಾಟ ರಾಜನಲ್ಲಿ ಆಶ್ರಯಪಡೆದಿದ್ದಾಯ್ತು, ಭೀಮ ಬಾಣಸಿಗನಾಗಿದ್ದು ಅಯ್ತು. ಅರ್ಜುನ ಬೃಹನ್ನಳೆ ಯಾಗಿದ್ದು ಆಯ್ತು. ದ್ರೌಪದಿಯು ಮಹಾರಾಣಿಯ ಸಹಾಯಕಿ ಆಗಿ ಸೇರಿಕೊಂಡಿದ್ದಾಯ್ತು. ಕೀಚಕನ ಮಾತಿಗೆ ನಾನು ವಿಚಿತ್ರ ಹಾವ ಭಾವಗಳಿಂದ ತಮಾಷೆಯಾಗಿ ಉತ್ತರಿಸುತ್ತಿದ್ದರೆ  ಸಭಿಕರು ನಗೆಯ ಕಡಲಲ್ಲಿ ಮುಳುಗಿದ್ದರು. ನೆರೆದಿದ್ದ ಸಭೆಯ ಮೇಲೆ ಹಾಗೆ ಕಣ್ಣು ಹಾಯಿಸುತ್ತಿದ್ದಾಗ ಪರಿಚಿತ ಮುಖವೊಂದನ್ನು ನೋಡಿ ಕಣ್ಣು ಅಲ್ಲಿಂದ ಕದಲದಾಯ್ತು. ಅರೇ ಇವಳು ಇಲ್ಲಿ ಯಾಕೆ ಬಂದಳು? ಅದೂ ನಗುತ್ತಿದ್ದಾಳೆ, ಇಷ್ಟು ವರ್ಷಗಳಲ್ಲಿ ಮೊದಲ ಭಾರಿ ನನ್ನ ಅಭಿನಯ ನೋಡಿ ನಗುತ್ತಿದ್ದಾಳೆ. ಕಡೆಗೂ ನಾನು ಇವಳನ್ನು ನನ್ನ ಅಭಿನಯದಿಂದ ನಗಿಸುವಲ್ಲಿ ಸಫಲನಾಗಿದ್ದೇನೆ. ಆದರೆ ಎದ್ದೇಳಲಾಗದಷ್ಟು ಅನಾರೋಗ್ಯವಿದ್ದರೂ ಯಾಕೆ ಬಂದಳು? ಯೋಚನೆಯಲ್ಲಿ ಮುಳುಗಿದ್ದವನ ಬೆನ್ನಿಗೊಂದು ಅನಿರೀಕ್ಷಿತ ಒದೆ. ರಂಗಸ್ಥಳದಲ್ಲಿದ್ದೂ ಕಳೆದು ಹೋಗಿದ್ದ ನನ್ನನ್ನು ಒಂದು ಒದೆಯಿಂದ ಕೀಚಕ ಪಾತ್ರದಾರಿ ವಾಪಸು ಕರೆ ತಂದಿದ್ದ. ಒದೆಗೆ ಜೋಲಿ ತಪ್ಪಿ ಬಿದ್ದೆ,  ಎದ್ದು ನಕ್ಕೆ. ಇದು ಕಥೆಯಲ್ಲಿನ ಸನ್ನಿವೇಷವೆಂದು ಜನ ನಕ್ಕರು. ಕಥೆ ಮುಂದುವರಿಯಿತು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಬೇಕೆಂದು ಹೋರಟ. ನಾನು ಪರಸ್ತ್ರೀಯ ಮೇಲೆ ಕಣ್ಣು ಹಾಕಿದ ನಿನ್ನ ಅಂತ್ಯ ಹತ್ತಿರ ಬಂದ ಹಾಗಿದೆ ನಿನ್ನ ಸಹವಾಸವೇ ಬೇಡ ಮಾರಾಯ ಅಂತ ಎದ್ದು ಬಿದ್ದು ಓಡಿದೆ. ಜನ ಮತ್ತೆ ನಕ್ಕರು. ಇಲ್ಲಿಗೆ ನನ್ನ ಪಾತ್ರ ಮುಗಿದಿತ್ತು. 


ರಂಗಸ್ಥಳದಿಂದ ಸರಿದವನೇ ವೇಷ ಕಳಚೋವಷ್ಟು ಕೂಡ ವ್ಯವದಾನವಿಲ್ಲದೆ ಮೊದಲು ನನ್ನಾಕೆಯನ್ನು ಮಾತನಾಡಿಸಿ ಬರುತ್ತೇನೆಂದು ಸಭೆಯತ್ತ ನಡೆದೆ. ಎಲ್ಲರೂ ಯಕ್ಷಗಾನದಲ್ಲಿ ಲೀನರಾಗಿದ್ದರು. ಕಡೆ ಸಾಲಿನಲ್ಲಿ ಕೂತಿದ್ದ ನನ್ನಾಕೆ ಮಾತ್ರ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ.  ಹತ್ತಿರ ಹೋದಂತೆ ಆಕೆಯ ಮುಖದಲ್ಲಿ ಒಂದು ಪ್ರಶ್ನೆಯ ಛಾಯೆ. ಜ್ವರ ಏನಾದರೂ ಕಡಿಮೆ ಆಗಿದೆಯೇ ನೋಡೋಣ ಅಂತ ಆಕೆಯ ಕೆನ್ನೆ ಸವರಲು ಹೋದೆ . ಮರುಕ್ಷಣ ಪಟ್ ಅಂತ ಕೆನ್ನೆಗೆ ಯಾರೋ ಭಾರಿಸಿದ ಹಾಗಾಯ್ತು .. ನನ್ನಾಕೆಯ ಬಗ್ಗೆ ಯೋಚನೆ ಮಾಡ್ತಾ ಇದ್ದ ನನ್ನ ಕಣ್ಣಿಗೆ ಆ ಸುಸಂಸ್ಕೃತ ಹೆಣ್ಣುಮಗಳು ನನ್ನ ಹೆಂಡತಿಯಂತೆ ತೋರಿದ್ದಳು. ಛೇ...  ಎಂಥಾ ತಪ್ಪಾಗಿ ಹೋಯ್ತು, ನನ್ನ ವೃತ್ತಿಗೆ ಅಪಮಾನವಾಗಿ ಹೋಯ್ತು ಅಂತ ಕಣ್ಣಂಚಿನಲಿ ನೀರ ಧಾರೆ. ಅಷ್ಟರಲ್ಲಿ ಹೇಯ್ ಇವ್ರು ಜೋಕರ್ ಮಾರಾಯ್ತಿ, ಸುಮ್ನೆ ನಿನ್ನೆಡೆಗೆ ಬಂದಂತೆ ನಟಿಸ್ತಾ ಇದ್ರು ಅನ್ಸುತ್ತೆ. ಇದು ಅವರ ಕಥೆಯ ಭಾಗ ಇರಬೇಕು, ಯಾಕೆ ಅವರಿಗೆ ಹೊಡೆದೆ? ನೋಡು ಈಗ ಕಣ್ಣಲ್ಲಿ ನೀರು ಬಂದ ಹಾಗೆ ನಟಿಸ್ತಾ ಇದ್ದಾರೆ ..... ಕ್ಷಮಿಸಿ ಸರ್  ಅಂದ್ರು ಯಾರೋ ಪುಣ್ಯಾತ್ಮರು. ನಾನು ಮತ್ತೆ ನಕ್ಕೆ. ಕಣ್ಣಲ್ಲಿ ನೀರು ಬರ್ತಾನೆ ಇತ್ತು. ಇದು ನಟನೆಯ ಕಣ್ಣೇರು ಅಲ್ಲ ಅಂತ ಇವರಿಗೆ ಹೇಳೋರ್ಯಾರು?  ನಾನು ಯಾಕೆ ನಗಿಸ್ತೀನಿ ಅಂತ ಇವರಿಗೆ ಹೇಳೋರ್ಯಾರು? ಆ ನಗೆ ಹಿಂದೆ ಇರೋ ನೋವು ತಿಳಿದವರ್ಯಾರು? ಕಥೆಯ ನಿರೂಪಣೆಯಲ್ಲಿಲ್ಲದ  ಈ ಸನ್ನಿವೇಷವನ್ನು ವಿವರಿಸೋರ್ಯಾರು?


ವಿಚಿತ್ರ ವೇಷಭೂಷಣ, ತಪ್ಪಿತಸ್ಥನ ನಿಲುವು, ಕಣ್ಣಲ್ಲಿ ನೀರು, ಮುಖದಲ್ಲಿ ನಗು, ನನ್ನನ್ನೇ ದಿಟ್ಟಿಸುತ್ತಿರೋ ನೂರಾರು ಕಣ್ಣುಗಳು .... ವಿಧಿಯ ನೈಜ ಜೀವನದ  ಕಥಾ ಪ್ರಸಂಗವೊಂದರಲ್ಲಿ ನಿಜವಾದ ಜೋಕರ್ ನಾನಾಗಿದ್ದೆ.

---ಶ್ರೀ:-)
"ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ "


Sunday, July 19, 2015

Simply Complicated

ತಾರೀಕು ಹದಿನೈದು, ತಿಂಗಳ ಮದ್ಯಂತರ... ಕಂಪನಿ ಕೊಟ್ಟ ಸಂಬಳ ಖಾಲಿ... ಬ್ಯಾಂಕ್ ಪ್ರತಿ ತಿಂಗಳೂ ಕೊಡೋ ಸಾಲ (ಕ್ರೆಡಿಟ್ ಕಾರ್ಡ್) ನ ಮಿತಿಯು (ಕ್ರೆಡಿಟ್ ಲಿಮಿಟ್)  ಸರಿ ಸುಮಾರು ಮಿತಿ ಮೀರಿತ್ತು.... ತಲೆ ಕೆಟ್ಟು ಹೋದ ಹಾಗೆ ಅನ್ನಿಸಿ ಮಾಲ್ ಗೆ ಒಂದು ರೌಂಡ್ ಹಾಕಿಕೊಂಡು ಬರೋಣ ಅಂತ ಹೊರಟೆ. ವಾಪಸ್ಸು ಬಂದಾಗ ಸುಮಾರು ಒಂದು ಮೀಟರ್ ಉದ್ದದ ಬಿಲ್ಲು,  ಕೈ ತುಂಬಾ ಸಾಮಾನು, ತಲೇಲಿ ಮೂಡಿದ್ದು ಈ ಲೇಖನ...... 

Simply Complicated..... 

ಮನೆಗೆ ರೇಶನ್ ಎಲ್ಲರಿಗೂ ಬೇಕು. ಆದ್ರೆ ಮನೆ ಪಕ್ಕದಲ್ಲಿ ಇರೋ ಪ್ರಾವಿಶನ್ ಅಂಗಡೀಲಿ ತಗೊಳ್ಳೋದಕ್ಕಿಂತ AC ಮಾಲ್ ಅಲ್ಲಿ ತಗೊಂಡ್ರೆ  ನಮ್ಮ ಘನತೆ ಹೆಚ್ಚುತ್ತೆ, ಡಿಸ್ಕೌಂಟ್ ಸಿಗುತ್ತೆ  ಅಂದ್ಕೋತೀವಿ. ಅಲ್ಲಿ ಹೋದ್ರೆ ನಮಗೆ ಬೇಕಿದ್ದುದಕಿಂತ ಬೇಡದೆ ಇರೋದೇ ಜಾಸ್ತಿ. ಸರಿ ಒಳಗೆ ಹೋಗಿ ಒಂದು ರೌಂಡು ಹಾಕಿ ಬರೋವಷ್ಟರಲ್ಲಿ ಒಂದೋ ನಮ್ಮ ಕೈಲಿರೋ ಕಾಸು ಖಾಲಿ ಆಗಬೇಕು,ಇಲ್ಲ ಅವರು ಕೊಡೋ ತಳ್ಳೋ ಗಾಡಿ ತುಂಬಿರಬೇಕು. ಒಂದು ಕೆಜಿ ತಗೊಳ್ಳೋ ಬದಲು 2 kg  ತಗೊಂಡ್ರೆ ಏನೋ ಫ್ರೀ ಸಿಗುತ್ತೆ  ಅಂತ ತಗೋತೀವಿ. ಆ ಫ್ರೀ ಸಿಗೋ ವಸ್ತು ಏನಾದ್ರೂ ಪರವಾಗಿಲ್ಲ ಆದರೂ ತಗೋತೀವಿ. 500 ಕ್ಕಿಂತ ಜಾಸ್ತಿ ಬಿಲ್ ಆದ್ರೆ ಪಾರ್ಕಿಂಗ್ ಫ್ರೀ, ಅದ್ಕೆ ಏನೇನೋ ತಗೊಂಡು 500 ಕ್ಕೆ ಸರಿದೂಗಿಸ್ತೀವಿ. ಹೀಗೆ ಹೆಚ್ಚಿಗೆ ತಗೊಂಡ ವಸ್ತುಗಳು ಹಾಳಾಗೋದೆ ಜಾಸ್ತಿ. ಆದ್ರೆ who cares ..... ಸರಿ ಶಾಪ್ಪಿಂಗ್ ಮಾಡಿ ಸುಸ್ತಾಗಿದೆ ಅಂತ ಮಾಲ್ ಪಕ್ಕ ಇರೋ ಜ್ಯೂಸು ಸೆಂಟರಿನಲ್ಲಿ  ಜ್ಯೂಸು ತಗೊಂಡು ಕುಡಿದು ಖುಷಿ ಪಡ್ತೀವಿ. ಮಾಲ್ ಪಕ್ಕ ಜ್ಯೂಸ್ ಗೆ ರೇಟು ಡಬಲ್ ಅನ್ನೋದನ್ನು ಮರೀತೀವಿ. ಕಾರ್ ಪೆಟ್ರೋಲ್ ಚಾರ್ಜ್ ವೇಸ್ಟು , ಪಾರ್ಕಿಂಗ್ ಕಾಸು ವೇಸ್ಟು, ತಿಂಡಿ ತೀರ್ಥಗಳಿಗೆ ಹೆಚ್ಚಿಗೆ ಹಣ ಕೊಟ್ಟಿದ್ದು ವೇಸ್ಟು, ಫ್ರೀ ಸಿಕ್ಕಿರೋ ವಸ್ತುಗಳು ಒಂತರಾ ವೇಸ್ಟೇನೆ. ಒಟ್ಟಿನಲ್ಲಿ ಮಾಲ್ ಅಲ್ಲಿ ಸಿಗೋ 2-10% ಡಿಸ್ಕೌಂಟ್ ಗೆ ಅಥವಾ ಉಪಯೋಗಕ್ಕೆ ಬರದೇ  ಇರೋ ಫ್ರೀ ವಸ್ತುಗಳಿಗೆ ಮಾರು ಹೋಗಿ ಬಕ್ರ ಆಗ್ತೀವಿ...  ಆಗ್ತಾನೆ ಇರ್ತೀವಿ.


ದೊಡ್ಡ ಮನೆ ಬೇಕು ಅನ್ನೋದು ಎಲ್ಲರ ಆಸೆ... ದೊಡ್ಡ ಮನೆಗೆ ಶಿಫ್ಟ್ ಆದ ಮೇಲೆ ಮನೆ ತುಂಬಾ ಖಾಲಿ ಖಾಲಿ ಅಂತ ಅನ್ನಿಸೋಕೆ ಶುರು ಆಗತ್ತೆ. ಅಲ್ಲಿ ಇಲ್ಲಿ ನೋಡಿ, Olx, Quikr ಗಳಲ್ಲೆಲ್ಲ ಅದು ಇದು ಅಂತ ಹುಡುಕಾಟ ಮಾಡಿ ಸೊಸೆಯನ್ನು  ಮನೆಗೆ  ತುಂಬಿಸಿಕೊಂಡ ಹಾಗೆ ಡೈನಿಂಗ್ ಟೇಬಲ್ಲು, ಸೋಫಾ, ಟೀಫಾಯಿ, ಬುಕ್ ಸ್ಟಾಂಡು ಎಲ್ಲವನ್ನು ಮನೆಗೆ ಬರ ಮಾಡಿಕೊಳ್ತೀವಿ. ಸೋಫಾದ ಲೆದರ್ ಹಾಳಾಗತ್ತೆ ಅಂದುಕೊಂಡು ಅದಕ್ಕೊಂದು ಸೋಫಾ ಕವರ್ ಹಾಕಬೇಕು... ಡೈನಿಂಗ್ ಟೇಬಲ್ ಶೈನ್ ಹೋಗತ್ತೆ ಅಂತ ಅದರ ಮೇಲೆ ಕೂರೋದೇ ಇಲ್ಲ. ಅಥವಾ ಅದಕ್ಕೆ ಇನ್ನೊಂದು ಕವರ್.. ಸರಿ ಕವರ್ ಹಾಕಿದ ಮೇಲೆ ಅದು ದೂಳಾಗತ್ತೆ, ಕಲೆ ಆಗತ್ತೆ. ಅದನ್ನು ಒಗೆಯೋಕೆ ಅಂತ ಸ್ಟ್ರಾಂಗ್ ಡಿಟರ್ಜೆಂಟ್.  ಸ್ಟ್ರಾಂಗ್ ಡಿಟರ್ಜೆಂಟ್ ಅಂದ ಮೇಲೆ ಅದು ಒಗೆಯೋ ಕೈ ಮೇಲೆ ಪರಿಣಾಮ ಬೀರದೇ ಇರೋಕೆ ಹೇಗೆ ಸಾದ್ಯ ..?  ಕೈ ಎಲ್ಲ ಒಡೆದು ನೋವು ಉರಿ ಶುರು ಆಗುತ್ತೆ. ಇದು ಯಾಕೋ ಸರೀ ಹೋಗ್ತಾ ಇಲ್ಲ ಅಂತ ದೀಪಾವಳಿಗೋ  ಇಲ್ಲ ನ್ಯೂ ಇಯರ್ ಗೋ  ಆಫರ್ ಗಳು ಬಂದ ಕೂಡ್ಲೇ ಒಂದು ವಾಶಿಂಗ್ ಮಷೀನ್ ತಗೋತೀವಿ.... ಅದ್ಕೆ ಒಂದು ಹೊಸ ಕವರ್ ಅಂತ ಮತ್ತೆ ಹೇಳೋದು ಬೇಕಾಗಿಲ್ಲ ಅನ್ಸುತ್ತೆ ..? ಸರಿ ಮನೆ ಎಲ್ಲ ಸೆಟ್ ಒಂದು ಲೆವೆಲ್ ಗೆ ಸೆಟ್  ಆಯಿತು ಅಂತ ಉಸಿರು ಬಿಡೋವಷ್ಟರಲ್ಲಿ ಹನ್ನೊಂದು ತಿಂಗಳು ಮುಗಿದಿರತ್ತೆ . ಒಂದು ದಿನ ರಾಹುಕಾಲದಲ್ಲಿ ಮನೆ ಓನರ್ ಬಾಡಿಗೆ ಜಾಸ್ತಿ ಮಾಡಿ ಹೊಸ ಅಗ್ರಿಮೆಂಟ್ ತಗೊಂಡು ಕುಹಕ ನಗೆ ಬೀರುತ್ತಾ ನಿಂತಿರ್ತಾರೆ .  ಹೆಚ್ಚೇನು ಇಲ್ಲ ಅಬ್ಬಬ್ಬ ಅಂದ್ರೆ 500-1000 ರೂಪಾಯಿ ಜಾಸ್ತಿ ಅಷ್ಟೇನೇ. ಹಳೇ ಮನೆ ಬಿಟ್ಟು ಹೋಗಬೇಕಾದ್ರೆ ಕೊಡಬೇಕಾದ ಪೇಂಟಿಂಗ್ ಖರ್ಚು, ಬ್ರೋಕರ್ ಗೆ ಕೊಡಬೇಕಾದ ಹಣ, ಮನೆಯಲ್ಲಿರೋ ಸಾಮನುಗಳನ್ನು ಸಾಗಿಸೋ ಖರ್ಚು ಇವನ್ನೆಲ್ಲ ಲೆಕ್ಕ ಹಾಕಿದರೆ ಜಾಸ್ತಿ ಮಾಡಿರೋ ಬಾಡಿಗೆಯ ಮೊತ್ತವೇ ವಾಸಿ. ಆದರೂ  ಯಾಕೋ ಬಾಡಿಗೆ ಜಾಸ್ತಿ ಅನ್ನಿಸಿ ಬೇರೆ ಮನೆ ನೋಡೋ ಪ್ಲಾನ್ ಮಾಡ್ತೀವಿ. ಆದರೆ ಈಗ ಮನೆಯಲ್ಲಿರೋ ಫರ್ನಿಚರ್ ಗೆ ಅನುಗುಣವಾಗಿನೇ ಮನೆ ಹುಡುಕಬೇಕು. ಮನೆಯಲ್ಲಿ ವಾಸ ಮಾಡಬೇಕಾಗಿರೋ ಮನುಷ್ಯರನ್ನು ಬಿಟ್ಟು ನಿರ್ಜೀವವಾಗಿರೋ ಟೇಬಲ್ ಕುರ್ಚಿಗಳಿಗೋಸ್ಕರ ಬದುಕೋ ಅನಿವಾರ್ಯತೆ ...ವಿಚಿತ್ರವೆನಿಸಿದರೂ ನಿಜ.


ಕಾಲ ಬದಲಾಗಿದೆ. ಊಟಕ್ಕೆ ಕಾಸಿಲ್ದೇ ಇದ್ರೂ ಪರವಾಗಿಲ್ಲ ಆದ್ರೆ ಕೈಯಲ್ಲಿ ಮಾತ್ರ  ದೊಡ್ಡದಾದ ಮೊಬೈಲ್ ಬೇಕೇ ಬೇಕು. ಆ ಮೊಬೈಲಲ್ಲಿ ಇರೋ app ಗಳನ್ನ ಉಪಯೋಗಿಸಬೇಕು ಅಂದರೆ ಇಂಟರ್ನೆಟ್ ಪ್ಯಾಕ್ ಬೇಕು...... ಸರಿ ಇಂಟರ್ನೆಟ್ ಪ್ಯಾಕ್ ಇದ್ದ ಮೇಲೆ ಕೈ ಸುಮ್ನೆ ಕೂರುತ್ತಾ? ಅದು ಇದು ಅಂತ Download ಮಾಡ್ತೀವಿ, ಬೇಡದೆ ಇರೋ ನ್ಯೂಸ್ ಗಳನ್ನು ಓದಿ ಕಾಮೆಂಟ್ ಮಾಡ್ತೀವಿ..... WhatsApp, Facebook ನಲ್ಲಿ  ಅದು ಇದು  ನೋಡಿ ಕಣ್ಣು ತಂಪು ಮಾಡ್ಕೋತೀವಿ. ನಾವು ಜೀವನದಲ್ಲಿ ಎಷ್ಟು ಬ್ಯುಸಿ ಅಂದರೆ  ದೇವಸ್ಥಾನದಲ್ಲಿ ದೇವರಿಗೆ  ಸುತ್ತು ಹಾಕೋಕೆ ಕೂಡ  ಟೈಮ್ ಇಲ್ಲ ಆದ್ರೆ ಮೊಬೈಲ್ ಅಲ್ಲಿ ಮಾತ್ರ Temple Run ಬೇಕು. ದೇವರಿಗೆ ಸುತ್ತು ಹಾಕೋದು ಬಿಡಿ ಚೆಲುವೆಯರ ಸುತ್ತ ಸುತ್ತೋ ಹುಡುಗರು ಬೆ ರಳೆಣಿಕೆಯಷ್ಟೇ . ಯಾಕಂದ್ರೆ ಹುಡುಗಿಯರ ಮೇಲೆ ಹುಡುಗರಿಗೆ, ಹುಡುಗರ ಮೇಲೆ ಚೆಲುವೆಯರಿಗೆ CRUSH ಆಗೋದರ ಬದಲು CANDY ಮೇಲೆ CRUSH ಆಗಿದೆ. ಅವರೆಲ್ಲ ಆಡೋದರಲ್ಲೇ ಬ್ಯುಸಿ. ಸರಿ ಮೊಬೈಲ್ ಮೇಲೆ ಇಷ್ಟೆಲ್ಲಾ ಅತ್ಯಾಚಾರ ಮಾಡಿದರೆ ಬ್ಯಾಟರಿ ಖಾಲಿ ಆಗದೆ ಇರುತ್ತಾ? ಅದು ಖಾಲಿ ಆಗತ್ತೆ .... ಆಗ್ತಾನೆ ಇರತ್ತೆ. ಆದರೆ ಪದೇ ಪದೇ ಚಾರ್ಜ್  ಮಾಡೋಕೆ ಎಲ್ಲಿ ನೆನಪಾಗುತ್ತೆ ,  ಪವರ್ ಪ್ಯಾಕ್ ತಗೊಳ್ಳೋದು ಉತ್ತಮ ಅನ್ನಿಸಿ ತಗೋತೀವಿ.... ಈಗ ಫುಲ್ ನೆಮ್ಮದಿ ಅಂತ ಅಂದ್ಕೋತೀವಿ.  ಆದರೆ ಅಲ್ಲಿ ಆಗೋದೇ ಬೇರೆ. ಪವರ್ ಪ್ಯಾಕ್ ಇದೆ ಅಂತ ಮೊಬೈಲ್ ಚಾರ್ಜ್ ಗೆ ಹಾಕೋದೇ ಅಪರೂಪ. ಪವರ್ ಬ್ಯಾಂಕ್ ಇದೆ ಅಂತ ಗೊತ್ತಾದ ಕೂಡಲೇ ಸ್ನೇಹಿತರಿಗೂ ಅದರಲ್ಲಿ ಪಾಲು ಬೇಕೇ ಬೇಕು. CANDY CRUSH ಅಲ್ಲಿ ಯಾವುದೋ ಲೆವೆಲ್ ಅಲ್ಲಿ ಆಟ ಮುಂದೆ ಹೋಗದೆ ಇದ್ದಾಗ ಅಥವಾ WhatsApp ಅಲ್ಲಿ ಯಾರೂ ಮೆಸೇಜ್ ಕಳುಹಿಸದೇ ಇದ್ದಾಗ, ಅಪರೂಪಕ್ಕೆ ಮನೆಯ ನೆನಪು ಬಂದು ಒಂದು ಕಾಲ್ ಮಾಡೋಣ ಅಂದುಕೊಂಡ ವೇಳೆಯಲ್ಲಿ ಮಾತ್ರ  " ಲೋ ಬ್ಯಾಟರಿ.... ಪ್ಲೀಸ್ ಕನೆಕ್ಟ್ ಚಾರ್ಜರ್"


ಮೇಲೆ ಹೇಳಿದ ಸನ್ನಿವೇಷ ಗಳು ಕೆಲವು ಮಾತ್ರ, ಇಂತವು ದೈನಂದಿನ ಜೀವನದಲ್ಲಿ ಸಾಕಷ್ಟು ಇವೆ. ಆದ್ರೆ ಇದೆಲ್ಲ ಮಾಡೋವಾಗ ಮನಸ್ಸಿಗೆ ಏನೋ ಒಂದು ಮುದ ಸಿಗುತ್ತೆ ಅನ್ನೋದು ಕೂಡ ನಿಜ.... ಜೀವನವನ್ನು Simple ಇಂದ Complicate ಮಾಡಿಕೊಳ್ಳೋದರಲ್ಲಿ ಸಂತೋಷ ಕಂಡುಕೊಳ್ಳುತ್ತಾ ಇದೀವಿ ಅನ್ನೋದು ಮಾತ್ರ ಕಟು ವಾಸ್ತವ... Side Effects of  So Called Happy (Luxurious..?)  City Life :-) :-)


--- ಶ್ರೀ :-)

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"