Thursday, December 5, 2024

ಅವಸ್ಥೆ ಮಾರ್ರೆ

 ##ತರಲೆ## Interview ಅಲ್ಲಿ candidate ನ english ಚೆನ್ನಾಗಿಲ್ಲ ಅಂದ್ರೆ interview ತಗೋಳೋ ಪುಣ್ಯಾತ್ಮ "you need to improve your english" ಅಂತ ಇಂಗ್ಲಿಷಿನಲ್ಲೇ ಹೇಳೋದು ತಪ್ಪಲ್ವಾ 🤣🤣**ಶ್ರೀ **

ಮಕ್ಕಳ ದಿನಾಚರಣೆ...

 ##ತರಲೆ## Feb14-Valentines Day, ಸರಿಯಾಗಿ 9 ತಿಂಗಳಿಗೆ Nov 14-Childrens Day. ಮಕ್ಕಳ ದಿನಾಚರಣೆ ಅಂತ ಡೇಟ್ ಫಿಕ್ಸ್ ಮಾಡಿದವರಿಗೆ ಅದೇನು ಮುಂದಾಲೋಚನೆ ಮತ್ತು confidence ಮಾರ್ರೆ **ಶ್ರೀ **

ತರ್ಲೆ ಮಕ್ಳು

##ತರಲೆ## ಇರೋ ಎರಡು ಮಕ್ಕಳ ತುಂಟಾಟವನ್ನೇ ಸಹಿಸಿಕೊಳ್ಳಕ್ಕೆ ಆಗ್ತಾ ಇಲ್ಲ.... ಪಾಪ ದ್ವಾಪರ ಯುಗದಲ್ಲಿ ಧೃತರಾಷ್ಟ್ರ ಮತ್ತೆ ಗಾಂಧಾರಿ ನೂರ ಒಂದು ಮಕ್ಕಳನ್ನು ಅದು ಹ್ಯಾಗೆ ಸುಧಾರಿಸಿಕೊಂಡಿದ್ದರೋ.... 😇😇😇😇**ಶ್ರೀ **

ಮದುವೆ... Expectation :-)

ಹುಡುಗರ expectation...

ಹುಡುಗಿ ನೋಡಕ್ಕೆ ಐಶ್ವರ್ಯ ರೈ ತರ ಇರಬೇಕು, ಅಡುಗೆ ಮತ್ತೆ ಕ್ಲೀನಿಂಗ್ ಅಲ್ಲಿ ಮುನಿಯಮ್ಮ ತರ ಇರಬೇಕು ........

ಹುಡುಗೀರಿಗೆ ?....ಹುಡುಗ ಹಣಕಾಸಿನಲ್ಲಿ ಅಂಬಾನಿ ತರ ಇರಬೇಕು , ಮಾತಲ್ಲಿ ಮನಮೋಹನ್ ಸಿಂಗ್ ಅವರಂತೆ...**ಶ್ರೀ **

ಹಳಿ ತಪ್ಪಿದ ಆರೋಗ್ಯ :-)

 ##ತರಲೆ##ಹೊಟ್ಟೆ ಹೇಳ್ತಾ ಇದೆ Acidity ಆಗಿದೆ ಏನಾದ್ರೂ ತಂಪು ಕುಡೀ ಅಂತಾ, ಮೂಗು ಹೇಳ್ತಾ ಇದೇ cold ಆಗಿದೆ ಶುಂಠಿ ಹಾಕಿ ಮಸಾಲಾ ಟೇ ಕುಡೀ ಅಂತ.... Body parts ಗಳಲ್ಲೇ ಕೋಲ್ಡು ಹೀಟು ಅಂತ ಇಷ್ಟೊಂದು confusion ಇದ್ರೆ ಆರೋಗ್ಯ ಸರಿ ಇರೋದಾದ್ರೂ ಹೇಗೆ...?😇😇**ಶ್ರೀ **

ಬದುಕೋ ದಾರಿ :-)

 ##ತರಲೆ## ಮಡದಿ ದೋಸೆ ಹಾಕ್ತಾ ಇದ್ಲು, ನಂಗೆ ಕೊಟ್ಟಿರೋ ದೋಸೆ ಸರಿ ಬೆಂದಿಲ್ಲ ಅಂದೆ. ಹೌದಾ ತೋರ್ಸಿ ಅಂತ ಹೊರಗೆ ಬಂದ್ಲು . ನೋಡಿ ವಾಪಾಸ್ ಒಳಗೆ ಹೋಗೋವಷ್ಟರಲ್ಲಿ next ದೋಸೆ ಅರ್ಧ extra ಸುಟ್ಟಿತ್ತು. ಮತ್ತೆ complain ಮಾಡಿದ್ರೆ ಭೂಕಂಪ, ಬೇಡ ಇರ್ಲಿ ಅಂತ ತಿಂದ್ರೆ ಭೇದಿ. ಒಂದನ್ನು ಅರ್ಧ ಬೇಯಿಸಿದ್ದು ಅವಳಾದ್ರೂ ಮುಂದಿನದ್ದು ಅರ್ಧ ಸುಡೋಕೆ ಕಾರಣ ನಾನು. ಹೊಂದಾಣಿಕೆಯೇ ಜೀವನ ಅಂತಾರೆ ಅಲ್ವಾ, ಕಾಣದಂತೆ ಎರಡೂ ದೋಸೆನೂ ಬೀದಿನಾಯಿಗೆ ಹಾಕಿದೆ... ಅಲ್ಲಿಗೆ ಎಲ್ಲರೂ ಖುಷ್ 🤣🤣**ಶ್ರೀ **

100% ಗ್ಯಾರಂಟಿ

 ##ತರಲೆ## ಚರಿತ್ರೆಯಲ್ಲಿ ನೂರಕ್ಕೆ ನೂರು ಬಾರಿ prove ಆಗಿರೋ ಒಂದು ಗ್ಯಾರಂಟಿ ಯಾವುದು ಅಂದ್ರೆ ಅದು ಸಾವು ...ಶತಮಾನಗಳಿಂದಲೂ ಹುಟ್ಟಿದವರೆಲ್ಲ ಒಂದಲ್ಲ ಒಂದು ದಿನ ಸತ್ತು ಹೋಗಿದ್ದಾರೆ🤣🤣 **ಶ್ರೀ **

ಬಾಲ್ ಮತ್ತು ಬಾಟಲಿ

##ತರಲೆ## ಮುಂಚಿನ ದಿನಗಳಲ್ಲಿ11 ಜನ ಸೇರಿ ಹಣ ಹೊಂದಿಸಿ ಒಂದು ಬಾಲ್ ಖರೀದಿ ಮಾಡ್ತಾ ಇದ್ವಿ. ಈಗ ಬಾಲ್ ಏನೋ ಒಬ್ಬನೇ ತಗೋಬೋದು ಆದ್ರೆ 11 ಜನ ಸೇರಿಸೋದು ಕಷ್ಟ ಅಂತ ಹೇಳಿದ್ರೆ, ಇವತ್ತಿನ ಹುಡುಗರ reply "ಬಾಲ್ ಬದಲು ಒಂದು ಎಣ್ಣೆ ಬಾಟ್ಲಿ ತಗೋ, 20 ಜನ ಸೇರ್ತಾರೆ ಅಂತ ""🤣🤣**ಶ್ರೀ **

ಆಧಾರ್ ಫೋಟೋ

 ##ತರಲೆ## Iphone, samsung ಫೋನಲ್ಲಿ ಫೋಟೋ ತೆಗಿದ್ರೆ ನಮ್ಮನ್ನು ಫುಲ್ ಫೋಕಸ್ ಮಾಡಿ ಅಕ್ಕ ಪಕ್ಕದವರನ್ನು ಮಾಯ ಮಾಡಿ ಫೋಟೋ ಕೊಡ್ತಾರೆ. Oppo, Vivo ಫೋನ್ ಗಳಲ್ಲಿ fair N lovely ಹಚ್ಚಿದಾರೋ ಅನ್ನೋ ತರ ಬಿಳಿ ಮಾಡಿ ಫೋಟೋ ತೋರಿಸ್ತಾರೆ. ಏನೇ ಆದ್ರೂ ಆಧಾರ್ ಸೈಟ್ ಅವ್ರು ಮಾತ್ರ ನಮ್ಮ ನಿಜವಾದ ಫೋಟೋ ತೋರಿಸೋದು....🤣🤣*ಶ್ರೀ **

ಕಾರ್ ಡೋರ್

 ತರಲೆ## ಕೆಲವೊಮ್ಮೆ ನಮ್ಮ ಕಾರಿನಲ್ಲಿ ಕೂತವರು ಡೋರ್ ಹಾಕೋ ಶಬ್ದ, ಬಾಂಬ್ ಸ್ಫೋಟದ ಶಬ್ದಕ್ಕಿಂತ ಜಾಸ್ತಿ ಭಯ ಮತ್ತು ಆತಂಕ ಹುಟ್ಟಿಸುತ್ತೆ 🤣🤣🤣**ಶ್ರೀ **

Tuesday, December 3, 2024

ಕೀ ಗೆ Miss ಕಾಲ್....

 #ತರಲೆ##ಮನೇಲಿ ಇರೋ ಕೀ ಗಳನ್ನು ಹುಡುಕಿ ಹುಡುಕಿ ಸಾಕಾಗಿದೆ ಮಾರ್ರೆ, ಈ ಕೀಗಳಿಗೆ ಒಂದು ಮಿಸ್ ಕಾಲ್ ಕೊಡೋ ಒಂದು ಸಿಸ್ಟಮ್ ಬಂದಿದ್ರೆ ಚೆನ್ನಾಗಿತ್ತು🤣🤣 **ಶ್ರೀ **

Monday, December 2, 2024

ಮಳೆ, ಚಳಿ....

 ##ತರಲೆ##ಎಲ್ಲೆಲ್ಲೂ ಚಳಿ, ಮಳೆ ....ಬಿಸಿಲು ಬರ್ಬೇಕಾದ್ರೆ ಏನು ಮಾಡಬೇಕು....? ಶಾಲಾಕಾಲೇಜುಗಳಿಗೆ ರಜೆ ಕೊಡ್ಬೇಕು*** ಶ್ರೀ**

Sunday, April 12, 2020

ಸಖಿ-2050

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ.   ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA  ಅಂತೆಲ್ಲ ದಿಗ್ಗಜರುಗಳು  ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ   ಹೆಸರು) ಅಂತ ನಾಮಕರಣ ಮಾಡಿದ್ದೇನೆ . ಇವಳ ಸ್ಮಾರ್ಟ್ ವರ್ತನೆಗಳನ್ನು ಅತಿರೇಕಕ್ಕೆ ಕೊಂಡೊಯ್ಯೋ ಪ್ರಯತ್ನ ಮಾಡಿದ್ದೇನೆ. ಇದು ತುಂಬಾ ಅತಿಯಾಯ್ತು ಅಂದ್ರೆ ಕ್ಷಮೆ ಇರಲಿ.....

-------------------------------------------------------------------------------------------------------------

ಸಖಿ-2050

ಬೆಳಗ್ಗೆ3 ಕ್ಕೆ ಎದ್ದೆ. ನಿದ್ದೆ ಬಂದಿಲ್ಲ ಅಂತೇನು ಅಲ್ಲ . ಆದ್ರೆ ನಿದ್ದೆ ಮಾಡೋಕೆ ಆಗ್ತಾ ಇಲ್ಲ. ಕೈಯ್ಯಲ್ಲಿ ಕಟ್ಟಿರೋ Fitness Band ಮಾತ್ರ ಒಂದೇ ಸಮನೆ Vibrate ಆಗ್ತಾ ಇದೆ. ಎದ್ದು ನೋಡಿದ್ರೆ ಮೈ ತುಂಬಾನೆ  ಬಿಸಿ  ಇದೆ. ಮೊಬೈಲ್ ಚೆಕ್ ಮಾಡಿದ್ರೆ ಆಗಲೇ Alert  ಬಂದಿದೆ Caution.....High body temperature ಅಂತ. ಅದು ಆಗಲೇ ಫ್ಯಾಮಿಲಿ ಡಾಕ್ಟರ್ ರೋಬೋಗೆ High Fever ಅಂತ ಮೆಸೇಜ್ ಕಳಿಸಿದೆ. ಆ ಕಡೆಯಿಂದ "Take Dolo 650 immediately ಅಂತ reply ನೂ  ಬಂದಿದೆ.  ನನ್ನ ಮೊಬೈಲ್ AI (Artificial Intelligence)  ಆಗಿರೋದ್ರಿಂದ ಅದು ಆನಲೈನ್  ಅಲ್ಲಿ ಮೆಡಿಸಿನ್ ಆರ್ಡರ್ ಮಾಡಿದೆ. ಒಹ್ ಆರ್ಡರ್ ಮಾಡಿದ್ದು ಒಳ್ಳೆದಾಯ್ತು ಅಂತ AI ಫೋನ್ ತಗೊಂಡಿದ್ದಕ್ಕೆ ಖುಷಿ ಪಟ್ಟೆ. ಅಷ್ಟೊತ್ತಿಗಾಗ್ಲೇ ನನ್ನ ಸ್ಮಾರ್ಟ್ ಅಸಿಸ್ಟೆಂಟ್ "ಸಖಿ" ಮೆಡಿಸಿನ್ ಡೋರ್  ಡೆಲಿವರಿ ತಗೊಂಡು pack ಓಪನ್ ಮಾಡಿ ಮಾತ್ರೆ ತೆಗೆದು  ಕೈಲಿ ನೀರಿನ ಸ್ಮಾಲ್ ಡೋಸ್ ಜೊತೆ ನಿಂತಿದ್ದಾಳೆ. ಸರಿ ಮಾತ್ರೆ ತಗೊಂಡು ಹಾಗೆ ಸ್ವಲ್ಪ ಮಲಗೋಣ ಅಂತ ಯೋಚ್ನೆ ಮಾಡಿ ಮತ್ತೆ ಹಾಸಿಗೆಗೆ ಒರಗಿದೆ. ಕೈಲಿರೋ Fitness Band ಮತ್ತೆ ವೈಬ್ರೇಟ್ ಆಗಕ್ಕೆ ಶುರುವಾಯ್ತು. ನೋಡಿದ್ರೆ ಮತ್ತೆ ನೋಟಿಫಿಕೇಶನ್ " Dont Sleep  immediately after taking medicine "....


ನಿದ್ದೆ ಅಂತೂ ಮಾಡೋ ಹಾಗಿಲ್ಲ, ಸ್ವಲ್ಪ ಓಡಾಡೋಣ, ಸ್ವಲ್ಪ ಸ್ಟೆಪ್ ಕೌಂಟ್ ಆದರೂ ಜಾಸ್ತಿ ಆಗಲಿ ಅಂತ ಹಾಗೆ ಲಿವಿಂಗ್ ರೂಮ್ ಗೆ  ಬಂದೆ. ಇದ್ದಕ್ಕಿದ್ದಂತೆ ಶರೀರದ ತಾಪಮಾನ ಜಾಸ್ತಿ ಆಗೋಕೆ ಕಾರಣ ಏನು ಅಂತ ಆಲೋಚನೆ ಮಾಡ್ತಾ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ನೋಡಿದ್ರೆ ನನ್ನ ಮೈಕ್ರೋ ವೇವ್ ಓವನ್ ಪಕ್ಕ ಇರೋ ವೈರ್ ಯಾಕೋ ಸುಟ್ಟು ಕರಕಲಾಗಿತ್ತು. ಮಡದಿ ಮಕ್ಕಳು ಊರಿಗೆ ಹೋಗಿದ್ರು, ಏನಾದ್ರು ಹೊಸತು ಮಾಡೋಣ ಅಂತ YOU TUBE   ನೋಡಿ ಅದೇನೋ ಕೇಕು ಅಂತ ಮಾಡಕ್ಕೆ ಇಟ್ಟಿದ್ದೆ. ಏನೋ ಹೆಚ್ಚು ಕಡಿಮೆ ಆಗಿ ಹೊಗೆ ಹಾಕಿಸ್ಕೊಂಡಿದೆ. ಹೊಗೆ ಬಂದ ಕೂಡ್ಲೇ Smoke Detector ನೀರು ಚಿಮ್ಮಿಸಿ ಅಡುಗೆ ಮನೆ ಮೇನ್ ಅನ್ನು ಟ್ರಿಪ್ ಮಾಡಿದೆ.  ಸರಿ ಇಷ್ಟೆಲ್ಲಾ ಆಗೋವಾಗ ಸಖಿ ಏನ್ಮಾಡ್ತಾ ಇದ್ಲು ? ಆಗ್ಲೇ ನೆನಪಾಗಿದ್ದು ನನ್ನ ಹೆಂಡತಿಯು ಇವಳು ಅಡಿಗೆ ಮನೆಗೆ ಬಂದು ಕಿರಿ ಕಿರಿ ಮಾಡೋದು ತಪ್ಪಿಸೋಕೆ ಅವಳಿಗೆ ಅಡುಗೆ ಮನೆಗೆ ಎಂಟ್ರಿ ಬಂದ್ ಮಾಡಿದ್ದೂ. ಹಾಗಾಗಿ ಅವಳು ಅಡುಗೆ ಮನೆ  ಅಕ್ಕ ಪಕ್ಕನೂ  ಸುಳಿಯೋದಿಲ್ಲ. ಎಷ್ಟೆಂದರೂ ಅವಳು AI ಆದ್ದರಿಂದ ಬಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ತಾಳೆ. ಅದಕ್ಕೇ  ಏನೋ ನನ್ನ ಪ್ರಿಯ ಸಖಿಗೂ(ಮಡದಿ)  AI ಸಖಿಗೂ   ಶೀತಲ ಸಮರ. ಅದಕ್ಕೆ ಅಡಿಗೆ ರೂಮ್ ಮತ್ತೆ ಬೆಡ್ ರೂಮ್ ಗೆ ಅವಳ ಎಂಟ್ರಿ ಬಂದ್...  ಅದಕ್ಕೆ ಸಖಿ ಏನೋ ಕಿತಾಪತಿ ಮಾಡಿದ್ದಾಳೆ ಅನ್ನಿಸ್ತು. ಸಿಬಿಐ  ಏಜಂಟ್ ತರ ಏನಾಗಿರಬಹುದು ಅಂತ ಯೋಚ್ನೆ ಶುರು ಮಾಡಿದೆ. ಹೊಗೆ ತುಂಬಿದ ಕೂಡ್ಲೇ ಕಿಚನ್ ಬಾಗಿಲು ಆಟೋಮ್ಯಾಟಿಕ್  ಆಗಿ ಮುಚ್ಚಿಕೊಂಡಿದೆ. Smoke Detector ನೀರು ಚಿಮ್ಮಿಸಿ ಕಿಚನ್ ಕನೆಕ್ಷನ್ ಅನ್ನು ಟ್ರಿಪ್ ಮಾಡಿದೆ. ಹೊಗೆಯಿಂದ ಮನೆ ತಾಪಮಾನ ಏರಿದೆ. ತಾಪಮಾನ ಏರಿದಾಗ AC  ಕಂಟ್ರೋಲ್ ಸಖಿ ಕೈಲಿ ಇದ್ದಿದ್ರಿಂದ ಅವಳು ತಾಪಮಾನ ಅಡ್ಜಸ್ಟ್ ಮಾಡಬೇಕಿತ್ತು. ಆದ್ರೆ ಬಡ್ಡಿ ಮಗ ಹೆಂಡ್ತಿ ಮಾತು ಕೇಳ್ತಾನೆ ಸ್ವಲ್ಪ ಸೆಕೇಲಿ ಸಾಯ್ಲಿ  ಅಂತ ಅದು ತಾಪಮಾನ ಅಡ್ಜಸ್ಟ್ ಮಾಡಿಲ್ಲ . ಆದ್ರೆ  Fitness Band ನನ್ನ ಜೊತೇನೆ ಹಗಲು ರಾತ್ರಿ ಇರೋದ್ರಿಂದ ನನ್ನ ಮೇಲೆ ಕನಿಕರಿಸಿ ಶರೀರದ ತಾಪಮಾನ ಜಾಸ್ತಿ ಅನ್ನಿಸಿದಾಗ ಡಾಕ್ಟರ್ ರೋಬೋಗೆ  ಮೆಸೇಜ್ ಕೊಟ್ಟಿದೆ.  ಯಾಕೋ Fitness Band ಮೇಲೆ ಹೆಮ್ಮೆ ಅನಿಸಿತು. ನಾನು ಎಷ್ಟು ನಡೆದಾಡುತ್ತೇನೆ, ಎಷ್ಟು ಹೊತ್ತು ನಿದ್ದೆ ಮಾಡುತ್ತೇನೆ, ನನ್ನ ಹೃದಯ ಬಡಿತ ಎಷ್ಟು ಹೀಗೆ ನನ್ನ ಹೆಂಡತಿಗೂ ಗೊತ್ತಿಲ್ಲದ ಅನೇಕ ವಿಷಯಗಳು ಈ ಬ್ಯಾಂಡ್ ಗೆ ಗೊತ್ತಿದೆ. ಅದೇನೇ ಇರ್ಲಿ ಈ ಸಖಿ ಯಾಕೆ ಹೀಗೆ ಮಾಡಿದ್ಲು?

ಯಾಕೋ ಇತ್ತೀಚಿಗೆ ಈ ಸಖಿ ಸ್ವಲ್ಪ ಜಾಸ್ತಿನೇ ಸೆನ್ಸಿಟಿವ್ ಆಗಿದ್ದಾಳೆ. ನನ್ನ ಮೇಲೆ ಯಾಕೋ ಸ್ವಲ್ಪ ಜಾಸ್ತೀನೆ Possessiveness ತೋರಿಸ್ತಾ ಇದ್ದಾಳೆ. ನನ್ನ ಮಡದಿ ಪ್ರೀತಿಯಿಂದ ಅಡುಗೆ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟರೆ ಈ ಸಖಿ ಬಂದು ಪಾತ್ರ ಮುಚ್ಚಳ ತೆಗೆದು ನೋಡಿ "ಅಡುಗೆಯಲ್ಲಿ ಎಣ್ಣೆ ಜಾಸ್ತಿ ಇದೆ, ಕೊಬ್ಬು ಬರುತ್ತೆ" ಅಂತ ಹೇಳ್ತಾಳೆ. ಅಷ್ಟರಲ್ಲಿ ಮಡದಿ ಬಂದು ಸುಮ್ನೆ ಅಲ್ಲಿ ಇಲ್ಲಿ ತಿರುಗಿಕೊಂಡು ಕಮೆಂಟ್ ಮಾಡೋ ಬದ್ಲು ನೀನೇ ಅಡಿಗೆ ಮಾಡ್ಬೇಕಿತ್ತು ಅಂದ್ಲು. ಈ ಸಖೀನೋ ಸುಮ್ಮನಿರದೆ "ನನ್ನ ಹಾರ್ಡ್ ಡಿಸ್ಕ್ ಅಲ್ಲಿ 1000ಕ್ಕೂ ಮೀರಿ recipes ಇದೆ, ನಾನು ಬೇಕಾದ್ರೆ ಅಡುಗೆ ಮಾಡಬಲ್ಲೆ" ಅಂದ್ಲು. ನನ್ ಹೆಂಡತೀನೂ ಅದೇನು ಅಡಿಗೆ ಮಾಡ್ತೀಯೋ ಕರೆಂಟ್ ಹೋದರೆ ನಿನ್ ಕತೆ ಅಲ್ಲಿಗೆ ಮುಗೀತು ಅಂತ ಹೇಳಿದ್ಲು. ಅಲ್ಲಿಗೆ ಸುಮ್ಮನಿರದೆ ಸಖಿ ಕರೆಂಟ್ ಹೋದರೂ ನನ್ನಲ್ಲಿರೋ ಪವರ್ ಬ್ಯಾಕ್ ಅಪ್ ಇಂದ ಅರ್ಧ ಘಂಟೆ ಕೆಲಸ ಮಾಡಬಲ್ಲೆ ಅಂದ್ಲು. ಹೀಗೆ  ಇಲ್ಲಿಂದ ಶುರುವಾದ ಶೀತಲ ಸಮರ ಅತಿಯಾಗಿದ್ದಕ್ಕೆ ನನ್ನ ಹತ್ರ ಜಗಳ ಮಾಡಿ  ಸಖಿಗೆ ಕಿಚನ್ ಗೆ ಎಂಟ್ರಿ ನಿಲ್ಲಿಸಿದ್ದು.  ಇನ್ನೊಂದಿನ ನಾನೂ ನನ್ ಹೆಂಡ್ತೀನೂ ಅದೇನೋ ಮಾತಲ್ಲಿ ತೊಡಗಿದ್ವಿ, ಮಾತಿನ ದನಿಯೂ ಸ್ವಲ್ಪ ಏರಿತ್ತು. ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಸಖಿ ನೀವು ಏರು ದನಿಯಲ್ಲಿ ಮಾತಾಡಬೇಡಿ ನಿಮ್ಮ ಬ್ಲಡ್ ಪ್ರೆಷರ್ ಜಾಸ್ತಿ ಆಗುತ್ತೆ, ಅಷ್ಟಕ್ಕೂ ನೀವು ಎಷ್ಟು ಮಾತಾಡಿದ್ರೂ ಮೂರ್ಖರಿಗೆ ಬುದ್ದಿ ಹೇಳಿದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಂದಳು. ಈ ಗಾದೆ ಅದೆಲ್ಲಿ ಕಲಿತಿದ್ದಳೋ, ಕೇಳಿಸಿಕೊಂಡಿದ್ದಳೋ ಗೊತ್ತಿಲ್ಲ, ಗಾದೆ ಮಾತಿನ ಡೆಲಿವರಿ ಏನೋ ಸಖತ್ತಾಗೆ ಇತ್ತು ಆದ್ರೆ ಟೈಮಿಂಗ್ ಮಾತ್ರ ಫುಲ್ ರಾಂಗು. ಸಖಿ ಮಾತಾಡಿದ್ದು ನನ್ ಹತ್ರ, ಹಾಗಿದ್ರೆ ಮೂರ್ಖ ಅಂತ ಕರೆದಿದ್ದು ಯಾರಿಗೆ ಅಂತ ಬೇರೆ ಏನು ಹೇಳೋದು ಬೇಕಾಗಿಲ್ಲ ಅಲ್ವಾ. ಅಲ್ಲಿ  ಶುರುವಾದ ವಾದ ವಿವಾದ ಹಲವಾರು ದಿನಗಳು ಮುಂದುವರೆದು ಸಖಿಯನ್ನು OLX  ಅಲ್ಲಿ ಹಾಕಬೇಕೆಂದು ತೀರ್ಮಾನ ಆಗಿತ್ತು. ಆದರೆ ಮಕ್ಕಳಿಗೆ ಅವಳು ಪ್ರೀತಿಯ ಟೈಮ್ ಪಾಸ್ ಗಿರಾಕಿ. ಆದ್ದರಿಂದ ಹಾಗು ಹೀಗೂ ಮಕ್ಕಳ ಮಧ್ಯಸ್ಥಿಕೆಯಿಂದ ಅವಳಿಗೆ ಕಿಚನ್ ಜೊತೆ ಬೆಡ್ ರೂಮ್ ಗೂ ಎಂಟ್ರಿ ಬಂದ್ ಮಾಡಬೇಕು ಅನ್ನೋ ಜಡ್ಜ್ ಮೆಂಟ್ ಜೊತೆ ವರ್ಲ್ಡ್ ವಾರ್ ಕೊನೆಗೊಂಡಿತು....  ಇಷ್ಟೆಲ್ಲಾ ಆದ ಮೇಲೆ ಸಖಿಗೂ ನನ್ನ ಹೆಂಡತಿಗೂ ಅಷ್ಟಕ್ಕಷ್ಟೇ. ನಾನು ಎದುರಿಗೆ ಇದ್ದಾಗ ಚೆನ್ನಾಗೇ ಇದ್ರೂ ನಾನಿಲ್ಲದಾಗ ಇಬ್ಬರ ನಡುವೆ ಸಿಟ್ಟು ಹೊಗೆಯಾಡುತ್ತ ಇತ್ತು. ನನ್ನ ಮಡಡಿ ಹೇಳಿದ instructions   ಅನ್ನು ಸಖಿ ಗಾಳಿಗೆ ತೂರೋದು, ನನ್ನ ಮಡದಿ ಸುಮ್  ಸುಮ್ನೆ ಸಖಿಯ Reset ಬಟನ್ ಒತ್ತೋದು ಇದು ನಡೆದೇ ಇತ್ತು. ನಾನು ಇದರಿಂದ ಒಂತರ ಮಜಾ ತಗೋತಿದ್ದೆ. ಆಗಾಗ ಯಾವುದೊ ಚಲನಚಿತ್ರದ "ಇಬ್ಬರು ಹೆಂಡಿರ ಮುದ್ದಿನ ಗಂಡ" ಅನ್ನೋ ಡೈಲಾಗು ನೆನಪಿಗೆ ಬಂದು ನಗುತ್ತಿದ್ದೆ. ಇವತ್ತು ಮಾತ್ರ ಈ ಸೇಡಿನಾಟ ಕುತ್ತಿಗೆಗೆ ಬಂದಂಗಾಯ್ತು....

ಅಂದ ಹಾಗೆ ಈ ಸ್ಮಾರ್ಟ್ ಅಸಿಸ್ಟೆಂಟ್ ಗೆ ಯಾಕೆ ಯಾವಾಗ್ಲೂ ಹುಡುಗೀರ ಹೆಸರು (ಸಿರಿ, ಅಲೆಕ್ಸಾ.... ಇತ್ಯಾದಿ) ಇಡುತ್ತಾರೆ ...? ಅದೂ ಸಾಲದು ಎಂಬಂತೆ ಅದರ ತಲೆಯೊಳಗೆ  ಹುಡುಗೀರ ಬಾವನೆಗಳನ್ನು ಯಾಕೆ ಹಾಕ್ತಾರೋ? ನಿಜವಾಗಿ ನೋಡಿದ್ರೆ ಅದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಅಸಿಸ್ಟೆಂಟ್ ಆಗಿರಬೇಕು ಅಲ್ವಾ..?. ಹಾಗಂದ್ರೆ ಒಂತರಾ Neutral Character ಇರಬೇಕು ಅಲ್ವಾ. Neutral ಅಂದರೆ ಗಂಡು ಅಲ್ಲ ಹೆಣ್ಣು ಅಲ್ಲ... ಅಂದರೆ ಮಂಗಳಮುಖಿಯರ ಭಾವನೆ...  ....ಒಹ್  ಈಗ ಗೊತ್ತಾಯ್ತು ಕಂಪನಿಯವರ ಕಷ್ಟ......

ಅದೇನೇ ಇರ್ಲಿ ಮೊದ್ಲು ಈ ಸಖೀನ ಸರಿ ಮಾಡ್ಬೇಕು ಇಲ್ಲಾಂದ್ರೆ ಮುಂದೆ ಇನ್ನೇನು ಅವಾಂತರಗಳನ್ನು ಮಾಡ್ತಾಳೋ. ಒಂದು ಪಕ್ಷ ಹೀಗೇನೇ  ಮುಂದುವರಿದರೆ ಇದನ್ನು OLX ಅಲ್ಲಿ ಹಾಕೋದೇ ಸರಿ.  ಏನಕ್ಕೂ ಇರ್ಲಿ ಅಂತ ಸಖಿಯ Website ಗೆ ಹೋಗಿ ಏನಾದ್ರೂ Update  ಇದೆಯಾ ಅಂತ Website  ಓಪನ್ ಮಾಡಿದೆ. ನೋಡಿದ್ರೆ ಒಂದು ವಾರ ಮುಂಚೆನೇ ಒಂದು Update  ಪುಶ್ ಆಗಿದೆ. Update ಏನಪ್ಪಾ ಅಂತ ನೋಡಿದ್ರೇ "The new version will reduce the sentiments and feelings of Sakhi for a better performance" ಅಂತ ಇದೆ. ಈ JIO ದವರು ಜನರಿಗೆ ಫ್ರೀ ಇಂಟರ್ನೆಟ್ ಹುಚ್ಚು ಹಿಡಿಸಿ ಈಗ ರೇಟು ಜಾಸ್ತಿ ಮಾಡಿರೋದ್ರಿಂದ Data ಉಳಿಸಲು ನಾನು ಸಖಿಯ ಸಾಫ್ಟ್ ವೇರ್ Auto Update ಆಫ್ ಇಟ್ಟಿದ್ದೆ. ಇರಲಿ ಹೊಸ ಸಾಫ್ಟ್ ವೇರ್ ಏನು ಮಾಡತ್ತೆ ನೋಡೋಣ ಅಂತ Update ಅಂತ ಕೊಟ್ಟೆ. Update ಆದ ಕೂಡ್ಲೇ ಸಖಿ ಒಮ್ಮೆ ಕೂತುಕೊಂಡು ಎದ್ದಳು (ಅದು ಅವಳು Restart ಆಗೋ ರೀತಿ... ) ಆಮೇಲೆ ಹಾಗೆ ನಡೆದುಕೊಂಡು ಹೋಗಿ Charging dock ಗೆ ಹೋಗಿ ಕೂತಳು. ಅಷ್ಟರಲ್ಲೇ ತವರಿಂದ ನನ್ನ ಮಡದಿಯ ಫೋನ್ ಬಂತು.  ಮೊದಲೆಲ್ಲ ನನ್ನ ಗಮನಕ್ಕೆ ಬರದಿದ್ದರೆ ಅವಳ ಕರೆಯನ್ನು ಹಾಗೇನೇ ಕಟ್ ಮಾಡ್ತಾ ಇದ್ಲು ಸಖಿ. ಆದರೆ ಇವತ್ತು ಸಖಿ ನನ್ನ ಫೋನ್ ತಗೊಂಡು ಬಂದು ನನ್ನ ಕೈಯ್ಯಲಿಟ್ಟಳು, ಹಾಗೇನೇ ಒಂದು ನಗೆ ಚೆಲ್ಲಿದಳು. ಆದರೆ ಅವಳ ನಡೆ ಯಾಕೋ ಮುಂಚಿನಷ್ಟು ಮಾಂತ್ರಿಕವಾಗಿರದೆ ಯಾಂತ್ರಿಕವಾಗಿತ್ತು!!!!!! ನಗೆಯು ಕೂಡ...... ಅಂದ್ರೆ ಇನ್ನು ಮುಂದೆ ಸಖಿ ಸುಧಾರಿಸಬಹುದೇನೋ ..... ಕಾದು ನೋಡೋಣ... 

Saturday, April 28, 2018

ವಾಸ್ತವ್ಯ(ವ)

ಕೆಲ ವರ್ಷಗಳ ಹಿಂದೆ ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ. ಗ್ರಾಮದ ಮನೆಯೊಂದರಲ್ಲಿ ಶಾಸಕರ ವಾಸ್ತವ್ಯದ ಬಳಿಕ ಆಕೆಯ ಮನೆಯಿಂದ ಲೈಟು ಪ್ಯಾನುಗಳನ್ನು ಒಯ್ದಿದ್ದರಂತೆ. ಅದನ್ನೇ ಆದರಿಸಿ ಬರೆದ ಒಂದು ಕಥೆ.... As usual....ಪಾತ್ರಗಳು ಸನ್ನಿವೇಶಗಳು ಕೇವಲ ನನ್ನ ಹುಚ್ಚು ಮನಸ್ಸಿನ ಕಲ್ಪನೆಗಳಷ್ಟೇ 

ವಾಸ್ತವ್ಯ (ವ)

ಬೆಳ್ಳಂಬೆಳಗ್ಗೆ ಕೋಳಿಯ ಕೂಗು ದ್ಯಾವಮ್ಮನನ್ನು ಎಬ್ಬಿಸಿತ್ತು. ಜೀವಕ್ಕೆ ಇನ್ನೂ ನಿದ್ದೆ ಬೇಕೆನಿಸಿದ್ರು ಆಕೆ ಮಾಡುವಂತಿರಲಿಲ್ಲ. ಯಾಕಂದ್ರೆ ದಿನವಿಡೀ ಯಂತ್ರದಂತೆ ಕೆಲಸ ಮಾಡಿದ್ರೆ ಮಾತ್ರ ಆಕೆ ಮೂರು ಹೊತ್ತು ಉಣ್ಣಬಹುದಿತ್ತು. . ಒಂದು ಮುರುಕಲು ಗುಡಿಸಲು, 2 ಬಡಕಲು ದನ, ಹತ್ತಾರು ಮಲ್ಲಿಗೆ ಗಿಡ, ನಾಲ್ಕೈದು ಕೋಳಿಗಳು ಇವಿಷ್ಟೇ ಆಕೆಯ ಆಸ್ತಿ. ಆಕೆಯೇನಾದರೂ ಗೊಣಗಾಡುತ್ತಿದ್ದರೆ ಹಟ್ಟಿಯಲ್ಲಿ ಅಂಬಾ ಅನ್ನೋ ದನದ ಕೂಗು ಬಿಟ್ಟರೆ ಆ ಮನೆ ಹಾದಿಯಲ್ಲಿ ಅಪ್ಪಿ ತಪ್ಪಿನೂ ಯಾರು ಸುಳಿಯುತ್ತಿರಲಿಲ್ಲ. ಮುಳ್ಳಿನ ಪೊದೆಗಳು, ಚೂಪಾದ ಕಲ್ಲುಗಳಿಂದ ತುಂಬಿದ ಕಾಲುದಾರಿ ಹಿಡಿದು ಆ ಮನೆಗೆ ಬರೋ ಅಗತ್ಯ ಕೂಡ ಯಾರಿಗೂ ಇರಲಿಲ್ಲ. ಬೆಳಗ್ಗೆ ನಸುಕಿನಲ್ಲೆದ್ದು ಹೂ ಕಿತ್ತು, ಹಾರ ಪೋಣಿಸಿ, ಹಟ್ಟಿಗೆ ಹೋಗಿ ಹಾಲು ಕರೆದು, ಅವಕ್ಕೆ ನೀರಿಟ್ಟು, ಆಮೇಲೆ ದನಗಳನ್ನು ಕಾಡಿನ ಪಕ್ಕದ್ಲಲಿರೋ ಬಯಲಿಗೆ ಬಿಟ್ಟು ಬರೋವಷ್ಟರಲ್ಲಿ ಗಂಟೆ ಎಂಟಾಗಿರುತ್ತಿತ್ತು. ನುಜ್ಜು ಗಜ್ಜಾಗಿರೋ ಅಲುಮೀನಿಯಂ ಕ್ಯಾನಿನಲ್ಲಿ ಹಾಲು ತುಂಬಿ, ಕಟ್ಟಿರೋ ಹಾರಗಳನ್ನು  ಚೀಲದಲ್ಲಿ ತುರುಕಿ ಪೇಟೆಯತ್ತ ಬಾರವಾದ ಹೆಜ್ಜೆಗಳನ್ನಿಟ್ಟು ಪೇಟೆ ಸೇರೋವಷ್ಟರಲ್ಲಿ ಸೂರ್ಯ ನೆತ್ತಿ ಮೇಲಿರುತ್ತಿದ್ದ. ಹಾಲು ಡೈರಿಗೆ ಕೊಟ್ಟು ಪೇಟೆಯ ಸಂತೆಯ ಬದಿಯಲ್ಲಿ ಮರದ ಕೆಳಗೆ ಹೂ ಮಾರಲು ಕೂತು ಬಿಡುತ್ತಿದ್ದಳು. ಕೇರಿಯ ಕೆಲ ಮನೆಗಳನ್ನು ಬಿಟ್ಟರೆ ಹೂ ಕೊಳ್ಳಲು ಅವಳ ಹತ್ರ ಯಾರು ಬರುತ್ತಿರಲಿಲ್ಲ, ಕಾರಣ ಇಷ್ಟೇ ಆಕೆ ಹಿಂದುಳಿದ ಜಾತಿಗೆ ಸೇರಿದವಳಾಗಿದ್ದಳು. ಮೇಲ್ಜಾತಿಯ ಜನ ಆಕೆಯ ಮುಖವನ್ನೇ ನೋಡುತ್ತಿರಲಿಲ್ಲ ಇನ್ನು ಆಕೆಯ ಹಾರಗಳನ್ನು ಅದ್ಹೇಗೆ ಕೊಂಡಾರು? ಪುಣ್ಯಕ್ಕೆ ಡೈರಿಯಲ್ಲಿ ಪರಿಸ್ಥಿತಿ ಹಾಗೇನು ಇರಲಿಲ್ಲ. ಸರಕಾರೀ ಸಂಸ್ಥೆ ಆಗಿದ್ದರಿಂದ ಅಲ್ಲಿ ಜಾತಿ  ಮೇಲಾಟವೇನೋ ಅಷ್ಟಿರಲಿಲ್ಲ. ಆದರೂ ದ್ಯಾವಮ್ಮನಿಗೆ ಅದರ ಒಳ ಹೋಗಲು ಭಯ. ಅಪ್ಪಿ ತಪ್ಪಿ ಮೇಲ್ಜಾತಿಯವರೇನಾದರು ನಾಳೆಯಿಂದ ಇಲ್ಲಿಗೆ ನೀನು ಬರಬೇಡ ಅಂದರೆ? ಅದಕ್ಕೆ ಆಕೆ ತಡವಾಗಿ ಬರುತ್ತಿದ್ದಿದ್ದು. ಯಾಕಂದ್ರೆ ಆ ಸಮಯಕ್ಕೆ ಅಲ್ಲಿ ಡೈರಿಯ ಮ್ಯಾನೇಜರ್ ಮೂರ್ತಿ ಬಿಟ್ಟರೆ ಯಾರು ಇರುತ್ತಿರಲಿಲ್ಲ. ಆದರೆ ಡೈರಿಯ ಹಾಲಿನ ಕಲೆಕ್ಷನ್ ವಾಹನ ಸಮಯಕ್ಕ್ಕೆ ಸರಿಯಾಗಿ ಬರುತ್ತಿದ್ದರಿಂದ ಎಷ್ಟೋ ಸಲ ತಡವಾಗಿ ದ್ಯಾವಮ್ಮ ಹಾಲು ತಗೊಂಡು ವಾಪಸ್  ಹೋಗಿದ್ದೂ ಉಂಟು. ಆಕೆಗೋ ಯಾವಾಗಲೂ ಒಂದು ಪ್ರಶ್ನೆ ಕಾಡುತಿತ್ತು. ನಾನು ತರೋ ಹಾಲನ್ನು ಬೇರೇನೇ ಇಡ್ತಾರೋ ಅಥವಾ ಎಲ್ಲ ಒಟ್ಟು ಸೇರಿಸ್ತಾರೋ ಅಂತ. ನನ್ನ ಹತ್ತಿರಾನೆ ಸುಳಿಯದವರು ನಾನು ತಂದಿರೋ ಹಾಲನ್ನು ಹೇಗೆ ಉಪಯೋಗಿಸ್ತಾರೆ? ಅದಕ್ಕೆ ಗರಿಕೆ ಅಥವಾ ಗಂಜಲ ಏನಾದ್ರು ಪ್ರೋಕ್ಷಣೆ ಮಾಡಿನೋ ಅಥವಾ ಅದನ್ನು ಕುದಿಸಿನೋ ಬಳಸಬಹುದೇನೋ. ಪ್ರಾಯಶ ಆಗ ಹಾಲಿಗಂಟಿಕೊಂಡ ಜಾತಿಯ ಶಾಪ ಬಿಟ್ಟು ಹೋಗಬಹುದು ಅಂದ್ಕೋತಾ ಇದ್ಲು ಮನಸ್ಸಲ್ಲಿ....

ಅವತ್ತು ಡೈರಿಯಿಂದ ಹೊರ ಬಂದ ಮೂರ್ತಿಗೆ ಅಲ್ಲೇ ಕುಳಿತಿದ್ದ ದ್ಯಾವಮ್ಮ ಕಾಣಿಸಿದಳು. ಜಾತಿಯಲ್ಲಿ ಬ್ರಾಹ್ಮಣನಾದರೋ ಅವನಿಗೆ ಆ ಮುದುಕಿಯ ಮೇಲೆ ಅದೇನೋ ಕನಿಕರ. ಪೇಟೆಯಲ್ಲಿ ದ್ಯಾವಮ್ಮನನ್ನು ಪ್ರೀತಿಯಿಂದ ಮಾತಾಡಿಸೋ ಬೆರಳೆಣಿಕೆ ಜನರಲ್ಲಿ ಅವನು ಒಬ್ಬ. ಡೈರಿಯಲ್ಲಿ ಹಲವಾರು ಜನರೊಂದಿಗೆ ಅವನು ವ್ಯವಹರಿಸುತ್ತಿದ್ದರಿಂದ ಚುನಾವಣೆ ಸಮಯದಲ್ಲಿ ಒಂದಿನ್ನೂರು ಓಟುಗಳ ಮೇಲೆ ಅವನ ಹಿಡಿತವಿತ್ತು. ಅದಕ್ಕೆ ರಾಜಕೀಯ ಪಕ್ಷಗಳ ಜೊತೆ ಅವನ ಒಡನಾಟವು ಚೆನ್ನಾಗಿತ್ತು.  ಅವಳನ್ನು ಅಲ್ಲಿ ನೋಡಿದ ಕೂಡಲೇ ಅವನಿಗೆ ಅವಳು ಅಲ್ಲಿ ಕೂತಿರೋ ಕಾರಣ ನೆನಪಾಯಿತು. ದ್ಯಾವಮ್ಮನ ಹಾಲಿನ ಸರಕಾರೀ ಪ್ರೋತ್ಸಾಹ ಧನ ಬರಬೇಕಿದ್ದುದು ಬಾಕಿ ಇತ್ತು. ಅದೇನಾದ್ರು ಬಂದ್ರೆ  ಕೊಟ್ಟಿಗೆ ಮಾಡಿಗೆ ಒಂದೆರಡು ಶೀಟ್ ಹಾಕಿಸಬೇಕೆಂದು ಅಂದ್ಕೊಂಡಿದ್ಲು. ಮಳೆಗಾಲದಲ್ಲಿ ಮಾಡು ಸೋರಿ ಹಸುಗಳು ನೀರಿಂದ ತೋಯ್ದು ಹೋಗ್ತಾ ಇದ್ವು. ದ್ಯಾವಮ್ಮನ್ನ  ನೋಡಿದವನೇ ಮೂರ್ತಿಯ ಮನಸ್ಸಿನಲ್ಲೇನೋ ಹೊಳೆಯಿತು. ಆಡಳಿತ ಪಕ್ಷದ ಶಾಸಕರೊಬ್ಬರು ಗ್ರಾಮ ವಾಸ್ತವ್ಯ ಹೂಡೋ ಕಾರ್ಯಕ್ರಮ ಶುರು ಮಾಡಿದ್ದಾರೆ, ಅದಕ್ಕೆ ಯಾರಾದರೂ ಬಡವರ ಮನೆ ತೋರಿಸೆಂದು ಚಿಗುರು ಮೀಸೆಯ ಕಾರ್ಯಕರ್ತನೊಬ್ಬ ಹೇಳಿದ್ದ. ಹಿಂದುಳಿದ ಜಾತಿಗೆ ಸೇರಿದ ಮನೆನೋ, ಗುಡಿಸಲೋ ಇದ್ರೆ ಇನ್ನೂ ಒಳ್ಳೆಯದೆಂದು ಬೇರೆ ಹೇಳಿದ್ದ. ದ್ಯಾವಮ್ಮನನ್ನು ನೋಡಿದ್ದೇ ಮೂರ್ತಿಗೆ ಇವಳ ಮನೆಯೇ ಸೂಕ್ತ ಎಂದೆನಿಸಿತ್ತು. ದ್ಯಾವಮ್ಮನಿಗೆ ವಿಷಯ ತಿಳಿಸುತ್ತಲೇ ನೀನು ಒಪ್ಪಿಕೊಂಡ್ರೆ ಒಳ್ಳೆಯದು, ಸ್ವಲ್ಪ ಕಾಸು ಕೊಟ್ಟರೂ ಕೊಡಬಹುದು, ಅದೂ ಅಲ್ದೆ ನೀನು ಇದರಲ್ಲಿ ಕಳೆದುಕೊಳ್ಳೋದು ಏನೂ ಇಲ್ಲ ಅಂದ. ದ್ಯಾವಮ್ಮನಿಗೋ ಇದು ಸುತಾರಾಂ ಇಷ್ಟ ಇರಲಿಲ್ಲ. ದೊಡ್ಡ ಮನುಷ್ಯರು ತನ್ನ ಗುಡಿಸಲಲ್ಲಿ ಬಂದು ಒಂದು ದಿನ ವಾಸ್ತವ್ಯ ಹೂಡ್ತಾರೆ ಅಂದ್ರೆ ಯಾಕೋ ಆಕೆಗೆ ಭಯ. ಅದೂ ಹೋಗಿ ಹೋಗಿ ಗುಡಿಸಲಲ್ಲಿ ಯಾಕೆ ಇರ್ಬೇಕು? ಗ್ರಾಮದ ಗೌಡರ ಮನೆ ರಾಜ ಬಂಗಲೆಯಂತಿದೆ, ಅಲ್ಲಿ ಯಾಕಿರಬಾರದು? ಈ ವೋಟುಗಳು, ರಾಜಕೀಯ ಲೆಕ್ಕಾಚಾರಗಳು ಆಕೆಗೆ ತಿಳಿದೇ ಇರಲಿಲ್ಲ. ಆಕೆಯ ಲೆಕ್ಕಾಚಾರ ಏನಿದ್ರೂ ಎರಡು ದನ, ನಾಲ್ಕು ಕೋಳಿಗಳಿಗಿಂತ ಮೇಲೆ ಯಾವತ್ತೂ ಹೋಗೇ ಇರಲಿಲ್ಲ.  ತಾನೇನಾದ್ರು ಒಪ್ಪಿಲ್ಲ ಅಂದ್ರೆ ನಾಳೆಯಿಂದ ಹಾಲು ತಗೋಳೋದನ್ನು ನಿಲ್ಲಿಸುತ್ತಾರೇನೋ ಅಂದ್ಕೊಂಡು ಮೂರ್ತಿಗೆ ಒಪ್ಪಿಗೆ ಸೂಚಿಸಿ ಭಾರವಾದ ಮನಸ್ಸಿಂದ ಮನೆ ಕಡೆ ಹೆಜ್ಜೆ ಹಾಕಿದಳು. ಸಂಜೆಯಾಗುತ್ತಿದ್ದಂತೆ ದ್ಯಾವಮ್ಮನ ಮನೆಗೆ ನಾಲ್ಕೈದು ಆಳುಗಳು ಬಂದರು. ಹೂವಿನ ಗಿಡ ಕಿತ್ತು ಹಾಕಲಾರಂಭಿಸಿದರು. ದ್ಯಾವಮ್ಮ ಕೇಳಿದರೆ ಅಂಗಳ ಸಣ್ಣದಾಯಿತು ಸ್ವಲ್ಪ ದೊಡ್ಡದು ಮಾಡೋಕೆ ಹೇಳಿದರೆ ಸಾಹೇಬ್ರು, ಕಾಸು ಕೊಡುತ್ತಾರಂತೆ ಆಮೇಲೆ ಅಂದ್ರು. ಮಟ್ಟವಾದ ಆ ಜಾಗದಲ್ಲಿ ಬಣ್ಣ ಬಣ್ಣದ ಹೂವಿನ ಕುಂಡಗಳು ಬಂದು ನಿಂತವು. ಗೋಡೆಗೆ ಬಣ್ಣ ಬಳೆಯಲು ಹೇಳಿದ್ದಾರೆ ಅಂದ್ಕೊಂಡು ಮೂರು ಜನ ಬಂದರು. ದ್ಯಾವಮ್ಮ ದನಗಳನ್ನು ಹಟ್ಟಿಗೆ ಹೊಡೆದುಕೊಂಡು ಬರೋವಷ್ಟರಲ್ಲಿ ಅಂಗಳದಲ್ಲಿ ಕರೆಂಟ್ ಕಂಬವೊಂದು ಬಂದಿತ್ತು. ಲೈನ್ ಮ್ಯಾನ್ ಶೇಷಪ್ಪ ಇದು ಭಾಗ್ಯಜ್ಯೋತಿ ಯೋಜನೆಯಡಿ ಕೊಡುತ್ತಿರೋ ಕನೆಕ್ಷನ್ ಇದಕ್ಕೆ ಬಿಲ್ ಪಾವತಿಯ ಅವಶ್ಯಕತೆ ಇಲ್ಲ, ನಾಳೆ ನಿಮಗೆ ಹಣ ಸಿಕ್ಕಿದ ನಂತರ ನಮ್ಮನ್ನು ಸ್ವಲ್ಪ ನೋಡಿಕೊಳ್ಳಿ ಅಂತಾ ಹಲ್ಕಿರಿದ.  ರಾತ್ರೆ ಯಾರೋ ಬಂದು ಲೈಟು, ಫ್ಯಾನು ಎಲ್ಲ ಹಾಕಿ ಹೋದರು. ಮೇಲೆ ತೂಗು ಹಾಕಿರೋ ಫ್ಯಾನು ತಲೆ ಮೇಲೆ ಬೀಳಬಹುದು ಅನ್ನೋ ಭಯದಿಂದ ರಾತ್ರೆ ದ್ಯಾವಮ್ಮ ಹೊರಗಡೆ ಮಲಗಿದಳು. ತನ್ನದೇ ಮನೆಯಲ್ಲಿ ತನ್ನ ಹಿಡಿತವೇ ಇಲ್ಲದೆ ನಡೆಯೋ ಕೆಲಸಗಳಿಗೆ ಆಕೆ ಮೂಕ ಪ್ರೇಕ್ಷಕಿಯಾಗಿದ್ದಳು , ತನ್ನದೇ ಮನೆಯಲ್ಲಿ ಆಕೆ ಪರಕೀಯಳಾಗಿದ್ದಳು !!!!

ಮಾರನೇ ದಿನ ಬೆಳಗ್ಗೆನೇ ಗೌಡ್ರು ಬಂದರು. ಮನೆ ಒಳಗೆ ನೋಡಿದವರೇ ಆಳು ತಿಮ್ಮನ ಕರೆದು ನೋಡಪ್ಪ ಇಲ್ಲಿ ಪಾತ್ರಗೆಳೇನು ಇಲ್ಲ, ಮನೆಗೆ ಹೋಗಿ ಸ್ವಲ್ಪ ಪಾತ್ರೆ ಪಗಡಿ, ಸಾಹೇಬ್ರಿಗೆ ಮಲಗೋಕೆ ಮಂಚ,  ಹೊದೆಯೋಕೆ ಬೆಡ್ ಶೀಟುಗಳು ಎಲ್ಲ  ತಂದು ಇಲ್ಲಿಡು, ಸಾಹೇಬ್ರು ಬಂದು ಹೋದ ಮೇಲೆ ವಾಪಸ್ ತೆಗೆದುಕೊಂಡು ಹೋದ್ರಾಯ್ತು ಅಂದ್ರು. ಹಾಗೆ ದ್ಯಾವಮ್ಮನ ಕಡೆಗೆ ತಿರುಗಿದವರು ನೋಡು ಸಾಹೆಬ್ರಿಗೆ ಮುದ್ದೆ, ಕೋಳಿ ಸಾರು, ಅನ್ನ ಪಲ್ಯ ಎಲ್ಲ ಮಾಡಿ ಹಾಕು. ಹೇಗಿದ್ರು ಹಣ ಸಿಗುತ್ತೆ ಅಂದ್ರು. ಹಣ ಕೊಡೋರು ಯಾರು, ಯಾಕೆ ಕೊಡ್ತಾರೆ ಅಂತ ಮಾತ್ರ ದ್ಯಾವಮ್ಮಗೆ ಗೊತ್ತಿರಲಿಲ್ಲ ಕೇಳೋ ಧೈರ್ಯವೂ ಇರಲಿಲ್ಲ. ಸ್ವಲ್ಪ ಹೊತ್ತಿಗೆ ತಿಮ್ಮ ಬಂದ. ಪಾತ್ರೆ, ಚಮಚಗಳು, ಮಂಚ, ಹೊದಿಕೆ ಎಲ್ಲ ಬಂತು . ಎಲ್ಲವನ್ನು ಲೆಕ್ಕ ಮಾಡಿ ತಿಮ್ಮನ ಕೈಲಿ ಹೇಳಿ ಕಳಿಸಿದ್ದರು ಗೌಡತಿ. ಸಂಜೆಯಷ್ಟರಲ್ಲಿ ಶಾಸಕರು ಬಂದೆ ಬಿಟ್ಟಿದ್ದರು. ದೊಡ್ಡವರು ಬರ್ತಾರೆ ಅಂತ ದ್ಯಾವಮ್ಮ ತನ್ನ ಪೆಟ್ಟಿಗೆಯಿಂದ ಸೀರೆಯೊಂದನ್ನು ತೆಗೆದು ಉಟ್ಟಿದ್ದಳು. ಅವಳಲ್ಲಿ ತೂತಿಲ್ಲದೆ ಇದ್ದ ಸೀರೆಯೆಂದರೆ ಅದೊಂದೇ. ಶಾಸಕರ ಜೊತೆ  ಪತ್ರಕರ್ತರು ಕಾರ್ಯಕರ್ತರು ಊರಿನ ಮಹಾಜನರ ದಂಡೇ ಬಂದಿತ್ತು. ಹೊಸದಾಗಿ ಗೌಡ್ರ ಮನೆಯಿಂದ ತಂದ ಕುರ್ಚಿಗಳ ಮೇಲೆ ಕುಳಿತು ಚರ್ಚೆ ಸಾಗಿತ್ತು. ಊರಿಗೆ ಹೊಸ ರಸ್ತೆ, ಒಂದು ಆಸ್ಪತ್ರೆ,  ಬಸ್ ವ್ಯವಸ್ಥೆಗಳು ಬೇಕೆಂದು ಗೌಡ್ರು ಕೇಳಿಕೊಂಡ್ರು.  ರಾತ್ರೆ ಆಗಿತ್ತು ಸರಿ ಇನ್ನು ಊಟ ಬಡಿಸು ಅಂದ್ರು ಗೌಡ್ರು. ದ್ಯಾವಮ್ಮ ಇನ್ನೇನ್ನು ಬಡಿಸಬೇಕು ಅನ್ನೋವಷ್ಟರಲ್ಲಿ ಯಾರೋ ಆ ಮುದುಕಿಗೆ ಹಳೇ ಸೀರೆ ಹಾಕೋಳಕ್ಕೆ ಹೇಳಿ, ಆಗ್ಲೇ ಬಡವರ ಮನೆ ವಾಸ್ತವ್ಯ ಅನ್ನಿಸೋದು, ಇಲ್ಲ ಅಂದ್ರೆ ಎಲ್ಲ ನಾಟಕ ಅಂತಾರೆ ವಿರೋಧ ಪಕ್ಷದವರು ಅಂದ್ರು. ಸರಿ ದ್ಯಾವಮ್ಮ ಹರಿದಿರೋ ಸೀರೆ ಉಟ್ಟುಕೊಂಡು ಬಡಿಸಿದಳು. ಸಾಹೇಬರ ಊಟ ಆಯ್ತು. ಆಮೇಲೆ ಫೋಟೋ ಬೇರೆ ತೆಗೆದಾಯ್ತು. ಎಲ್ಲದರಲ್ಲೂ ಹರಕು ಸೀರೆ ದ್ಯಾವಮ್ಮ!!!... ಸರಿ ಎಲ್ಲ ಮುಗಿದು ಸಾಹೇಬರು ಮಲಗಿದರು. ಬೆಳಗಿನ ನಿತ್ಯಕರ್ಮಗಳಿಗೆ  ಆ ಮನೆಯಲ್ಲಿ ಅನುಕೂಲವಿಲ್ಲದ್ದರಿಂದ ಶಾಸಕರು ಗೌಡರ ಮನೆಗೆ ಹೋಗಿ ಎಲ್ಲ ಮುಗಿಸಿ ಉಪ್ಪಿಟ್ಟು ತಿಂದು ಟೀ ಕುಡಿದು ತೇಗಿದರು. ಅಷ್ಟು ಮುಗಿಸಿ ದ್ಯಾವಮ್ಮನ ಮನೆಗೆ ಬರುತ್ತಲೇ ಸಂದರ್ಶನದ ಸರದಿ. ಇಷ್ಟು ರುಚಿಕರ ಊಟ ನಾನು ತಿಂದೆ ಇರಲಿಲ್ಲ, ಎಷ್ಟೋ ದಿನಗಳ ಬಳಿಕ ನೆಮ್ಮದಿಯ ನಿದ್ದೆ ಮಾಡಿದೆ ಅಂದರು. ಈ ಊರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೀಟಿಂಗ್ ಅಲ್ಲಿ  ಚರ್ಚಿಸುವುದಾಗಿ ಹೇಳಿದರು. ಟೀವಿಯಲ್ಲಿ ಅಂತೂ ಗೌರಮ್ಮ ನ ಬಗ್ಗೆನೇ ಮಾತುಕತೆ. ಅವಳ ಮನೆ, ಹಸುಗಳು, ಅವಳ ದಿನಚರಿ, ಮುಖ್ಯಮಂತ್ರಿ ಎಷ್ಟು ಗಂಟೆಗೆ ಹೋದ್ರು, ಏನು ತಿಂದ್ರು, ಸಾರಿಗೆ ಏನು ಹಾಕಿರಬಹುದು ಅಂತೆಲ್ಲ ಚರ್ಚೆ ನಡೆಯುತ್ತಿತ್ತು. ದ್ಯಾವಮ್ಮನನ್ನು ಸಾಕ್ಷಾತ್ ಅನ್ನಪೂರ್ಣೆಯ ಪ್ರತಿರೂಪ ಅನ್ನೋವಂತೆ ತೋರಿಸಿದ್ದರು. ಸಂದರ್ಶನ  ಮುಗಿಯುತ್ತಿದ್ದಂತೆ ಸಾಹೇಬರು ಹೊರಟರು . ದ್ಯಾವಮ್ಮನಿಗೆ ಬಗ್ಗಿ ನಮಸ್ಕರಿಸಿದವರೇ ಚೆಕ್ ಪುಸ್ತಕ ಎತ್ತಿಕೊಂಡು ಅದರಲ್ಲಿ ಹತ್ತು ಸಾವಿರ ಬರೆದರು. ಹೆಸರು ಬರೆಯಬೇಕಿತ್ತು ಎಷ್ಟು ನೆನಪಿಸಿಕೊಂಡರು ಅವರಿಗೆ ಪಕ್ಕದಲ್ಲೇ ಇದ್ದ ದ್ಯಾವಮ್ಮನ ಹೆಸರು ತಲೆಗೆ  ಹೊಳೆಯಲೇ ಇಲ್ಲ. ಅಲ್ಲೇ ಇದ್ದ ಕಾರ್ಯಕರ್ತ ನ ಕರೆದು ಕೇಳಿದರು ಈಕೆ ಹೆಸರೇನು ಚೆಕ್ ಬರೆಯಬೇಕು ಮಾರಾಯ ಅಂದರು. ಸಾರ್ ಅವ್ಳಿಗೆ ಅಕೌಂಟ್ ಎಲ್ಲಿದೆ ನನ್ನ  ಹೆಸರಿಗೆ ಬರೆಯಿರಿ ನಾನೇ ಡ್ರಾ ಮಾಡಿ ಆಕೆಗೆ ತಲುಪಿಸ್ತೀನಿ ಅಂದ ಆ ಕಾರ್ಯಕರ್ತ. ಚೆಕ್ ವಿತರಿಸಿದ ಫೋಟೋನೂ ಬಂತು. ಅದಾದ ಕೂಡ್ಲೇ ಕಾರ್ಯಕರ್ತ ಅವಳ ಕೈಯಿಂದ ಅದನ್ನ ತಗೊಂಡು ನಡೆದ. ಸಾಹೇಬ್ರು ಹೊರಟರು... ಅವರ ಹಿಂದೆ ಜನರ ದಂಡು ಹೊರಟಿತು. ದ್ಯಾವಮ್ಮನ ಮನೆ ಖಾಲಿಯಾಯಿತು....

ಅವರು ಹೋಗಿ ಸ್ವಲ್ಪ ಹೊತ್ತಿಗೆ ಗೌಡರ ಮನೆಯಿಂದ ತಿಮ್ಮ ಬಂದವನೇ ಮಂಚ ಬೆಡ್  ಶೀಟುಗಳೆಲ್ಲವನ್ನು ತಂದು ಹೊರಗಿಟ್ಟ. ಪಾತ್ರೆ ಜೋಡಿಸುತ್ತಿದ್ದಂತೆ ಲೆಕ್ಕಕ್ಕಿಂತ  ಒಂದು ಪಾತ್ರೆ  ಕಡಿಮೆ ಇದ್ದಿದ್ದು ಗಮನಕ್ಕೆ ಬಂತು. ಏನು ಮಾಡೋದು ತಿಳಿಯಲಿಲ್ಲ ಅವನಿಗೆ. ಅಲ್ಲೇ ಇದ್ದ ದ್ಯಾವಮ್ಮನ ಪಾತ್ರೆಗಳಲ್ಲಿ ಚೆನ್ನಾಗಿದ್ದ  ಒಂದನ್ನು ಸೇರಿಸಿಕೊಂಡ, ಲೆಕ್ಕ ಸರಿಯಾಯಿಯ್ತು. ಗೌಡತಿಗೆ ಲೆಕ್ಕ ಮಾತ್ರ ಬೇಕು, ಪಾತ್ರೆ ಯಾವುದು ಅನ್ನೋದು ಗೊತ್ತಾಗದು ಅಂದುಕೊಂಡು ಎಲ್ಲವನ್ನು ಹೊತ್ತುಕೊಂಡು ಹೊರಟ. ಆ ಪಾತ್ರಗಳಲ್ಲಿ ಒಂದು ತನ್ನದು ಅಂತ ಗೊತ್ತಿದ್ರು ಹೇಳೋಕೆ ಧೈರ್ಯ ಬರಲಿಲ್ಲ ದ್ಯಾವಮ್ಮನಿಗೆ. ಸ್ವಲ್ಪ ಹೊತ್ತಿಗೆ  ಪೈಂಟರ್ ಗಳು ಬಂದು ಪೇಂಟಿಂಗ್ ಖರ್ಚು ಎರಡುವರೆ  ಸಾವಿರ ಆಗಿದೆ, ನಿಮ್ಮತ್ರ ತಗೋಳೋಕೆ ಹೇಳಿದ್ದಾರೆ ಅಂದ್ರು.ನನ್ನ ಹತ್ರ ದುಡ್ಡಿಲ್ಲ ಯಾರು ನಂಗೆ ದುಡ್ಡು ಕೊಟ್ಟಿಲ್ಲ ಅಂದ್ಲು,  ಆದರೆ ನಂಬೋರ್ಯಾರು? ಚೆಕ್ ತಗೊಂಡ ದ್ಯಾವಮ್ಮನ ಫೋಟೋ ಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಗಿತ್ತು. ಮುದುಕಿ ನಾಟಕ ಅಡ್ತ ಇದಾಳೆ ಕಣೋ, ನಾಳೆ ಇವ್ಳು ಹಣ ಕೊಟ್ಟಿಲ್ಲ ಅಂದ್ರೆ ಕೊಟ್ಟಿಗೆಯಲ್ಲಿರೋ ದನ ತಗೊಂಡು ಹೋಗೋಣ ಅಂತ ಸಿಟ್ಟನಿಂದ ಹೇಳಿ ಹೋದ್ರು. ಮತ್ತೊಬ್ಬ ಬಂದು ಈ ಫ್ಯಾನ್ ನಮ್ ಮನೇದು, ಗೌಡ್ರು ಇಲ್ಲಿ ಹಾಕಕ್ಕೆ ಹೇಳಿದ್ರು, ಈಗ ತಗೊಂಡ್ ಹೋಗ್ತಾ ಇದ್ದೀನಿ ಅಂತ ಹೇಳಿ ಅದರ ಡಬ್ಬ ಸಮೇತ ತಗೊಂಡು ಹೋದ. ಪಾರ್ಟಿ ಆಫೀಸಿಂದ ಬಂದ  ಆ ಫ್ಯಾನ್ ಒಳಗೆ ವಾರಂಟಿ ಕಾರ್ಡ್, ಬಿಲ್ಲು ಹಾಗೆ ಇತ್ತು. ಪೈಂಟರ್ ಗೆ ಹಣ ಹೇಗೆ ಹೊಂದಿಸೋದು ಅಂತ ಯೋಚ್ನೆ ಮಾಡ್ತಾ  ದ್ಯಾವಮ್ಮ ನನ್ನು ದೊಪ್ಪ್ ಅನ್ನೋ ಸದ್ದು ಎಚ್ಚರಿಸಿತ್ತು. ಅಂಗಳಕ್ಕೆ ಬಂದು ನಿಂತಿದ್ದ ದ್ಯಾವಮ್ಮನ ದನವೊಂದು ಮೈ ಮೇಲೆ ಕೂತಿದ್ದ ನೊಣ ಓಡಿಸಲು ತೋರಣ ಕಟ್ಟಿದ್ದ ಬಿದಿರಿಗೆ ಬೆನ್ನು ಉಜ್ಜಿ ಅದನ್ನು ಬೀಳಿಸಿತ್ತು. ಅದು ನೇರವಾಗಿ ಮನೆಗೆ ಕರೆಂಟ್ ಕೊಟ್ಟಿದ್ದ ತಂತಿಯ ಮೇಲೆ ಬಿದ್ದು ತಂತಿಯನ್ನು ತುಂಡರಿಸಿತ್ತು.  ಎರಡು  ದಿನಗಿಳಿಂದ ನಿರಂತರವಾಗಿ ಉರಿಯುತ್ತಿದ್ದ ಭಾಗ್ಯಜ್ಯೋತಿ ಅಲ್ಲಿಗೆ ನಿಂತಿತು!. ಅಷ್ಟರಲ್ಲಿ ಹೊತ್ತು ಕಂತಿತ್ತು. ದೀಪ ಹಚ್ಚಿದ ದ್ಯಾವಮ್ಮನಿಗೆ ಅಡಿಗೆ ಮಾಡಲು ಪಾತ್ರೆನೂ ಇರಲಿಲ್ಲ ಅಕ್ಕಿ ಅಂತೂ ಮೊದಲೇ ಮುಗಿದಿತ್ತು. ಡಬ್ಬದ ತಳದಲ್ಲಿದ್ದ ರಾಗಿ ಹಿಟ್ಟನ್ನು ತೆಗೆದು ಹಿಡಿ ಮುರಿದಿದ್ದ ಬಾಣಲಿ ಅಲ್ಲಿ ಬೇಯಿಸಿ ಕುಡಿದಳು. ಆಕೆಗಿದ್ದ ಒಂದೇ ನೆಮ್ಮದಿ ಅಂದ್ರೆ ಆಕೆ ಮಲಗುತ್ತಿದ್ದ ಜಾಗದ ಮೇಲೆ ಫ್ಯಾನ್ ಇರಲಿಲ್ಲ, ಆದ್ದರಿಂದ ಅದು ಕೆಳಗೆ ಬೀಳೋ ಭಯವು ಇರಲಿಲ್ಲ.

ಮರುದಿನ ಬೆಳಗ್ಗೆದ್ದ ದ್ಯಾವಮ್ಮಕೆಲಸದವರು ಕಿತ್ತು ಬಿಸಾಡಿದ್ದ ಹೂ ಗಿಡಗಳಲ್ಲಿ ಹಸಿರಾಗಿದ್ದ ಕೆಲವನ್ನುಆರಿಸಿ ಮತ್ತೆ ಒಪ್ಪವಾಗಿ ನೆಟ್ಟಳು. ಹಾಲು ಕರೆಯುವಾಗ ಡೈರಿಯಲ್ಲಿ ಮೂರ್ತಿ ಹತ್ತಿರ ಸಾಲ ಕೇಳಿ ನೋಡೋಣ ಅಂದುಕೊಂಡಳು.  ದನಗಳನ್ನು ಬಯಲಿಗಟ್ಟಿ ಹಾಲು ಹಿಡಿದು ಹೊರಟಳು. ಮೂರ್ತಿ ಇವಳ ದಾರಿಯನ್ನೇ ಕಾಯುತ್ತಿದ್ದಂತಿತ್ತು. ದ್ಯಾವಮ್ಮನನ್ನು ಕಂಡವನೇ ಕಿಸೆಯಿಂದ ೩ ಸಾವಿರ ತೆಗೆದು ಕೈಗಿತ್ತು ನಿನ್ನ ಪ್ರೋತ್ಸಾಹ ಧನ ಪಾಸ್ ಆಗಿದೆ, ಅದೂ ಲಂಚ ಕೊಡದೆ. ಎಲ್ಲ ಸಾಹೇಬರ ಗ್ರಾಮ ವಾಸ್ತವ್ಯದ ಮಹಿಮೆ ಅನ್ನುತ್ತ ಹಲ್ಕಿರಿದ. ದ್ಯಾವಮ್ಮನು ನಕ್ಕಳು, ಆದರೆ ಆ ನಗೆಯ ಹಿಂದಿನ ಮರ್ಮ ಆಕೆಗೆ ಮಾತ್ರ ತಿಳಿದಿತ್ತು. ಹಣ ಪಡೆದು ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟಳು,ದಾರಿಯಲ್ಲಿ ಸಿಕ್ಕಿದ ಪೈಂಟರ್ ಗೆ ಎರಡು ಸಾವಿರ ಕೊಟ್ಟಳು. ಮುದುಕಿ ಸುಮ್ನೆ ನಾಟಕ ಮಾಡಿದ್ಲು ನೋಡು ಈಗ ಹೇಗೆ ಬಂತು ಹಣ ಅಂತ ಗೊಣಗಿದ ಅವ್ನು.  ಸಂತೆಯಲ್ಲಿ ಐನೂರು ಕೊಟ್ಟು ಒಂದು ಪಾತ್ರೆ, ದನಗಳಿಗೆ ಹಿಂಡಿ, ಅಕ್ಕಿ  ತಗೊಂಡು ಮನೆ ಕಡೆ ಹೆಜ್ಜೆ ಹಾಕಿದ್ಲು ದ್ಯಾವಮ್ಮ. ಪೇಟೆಯಲ್ಲಿನ ಬಾರ್ ಗಿಜಿಗುಡುತ್ತಿತ್ತು ಹತ್ತು ಸಾವಿರ ಕ್ಯಾಶ್ ಮಾಡಿಸಿದ ಪುಣ್ಯಾತ್ಮನೊಬ್ಬ ಮಿತ್ರರಿಗೆ ಪಾರ್ಟಿ ಕೊಡಿಸುತ್ತಿದ್ದ. ....

---------------------------------------ಶ್ರೀ :-)--------------------------------------

Thursday, November 9, 2017

ತರಲೆ: ನೀರು.......2050

ತರಲೆ: ನೀರು.......2050: ನೀರು.......2050 ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ...

Monday, October 30, 2017

ನೀರು.......2050

ನೀರು.......2050


ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಸುಮಾರು 8 ಗಂಟೆಯ ಆಸು ಪಾಸಿಗೆ ಒಂದು ಬಿಂದಿಗೆ ನೀರು ಕೊಡುತ್ತಾರೆ. ಅದು ಗುರುತಿನ ಚೀಟಿ ತೋರಿಸಿದ್ರೆ ಮಾತ್ರ. ಅಪ್ಪಿ ತಪ್ಪಿ ಅದನ್ನ ಮರೆತಿದ್ದರೆ ಅವತ್ತು ಹನಿ ನೀರು ಕೂಡ ಸಿಗೋದಿಲ್ಲ. ಕಿಟಕಿಯಿಂದ ನೋಡಿದರೆ ಪಕ್ಕದ ಮನೆ  ರಮೇಶ ಒಂದು ಬಿಂದಿಗೆ ನೀರಿನ ಜೊತೆ ಬರುತ್ತಿದ್ದಾನೆ. ನನ್ನನ್ನು ನೋಡಿದವನೇ ಕುಹಕ ನಗೆ ಬೀರಿದ. ಪ್ರತಿದಿನ ಇಬ್ರು ಜೊತೆಗೇನೆ ಹೋಗ್ತಾ ಇದ್ವಿ. ಅವನೇ ಬಂದು ನನ್ನ ಎಬ್ಬಿಸೋನು. ನಿನ್ನೆ ನನ್ನ ಹಿಂದೆ ನಿಂತಿದ್ದ, ನನ್ನ ಕೊಡ ತುಂಬೋವಷ್ಟರಲ್ಲಿ ಬರೋವಷ್ಟರಲ್ಲಿ ನೀರು ನಿಂತು ಹೋಯ್ತು. ಅವ್ನಿಗೆ ನೀರೇ  ಸಿಕ್ಕಿಲ್ಲ ಅದ್ಕೇ ಇವತ್ತು ಒಬ್ನೇ ಹೋಗಿದ್ದಾನೆ ಬಡ್ಡಿ ಮಗ. ಹಾಳಾಗಿ ಹೋಗ್ಲಿ ಇವತ್ತು ಬ್ಲಾಕ್ ಅಲ್ಲಿ ಒಂದು ಬಿಂದಿಗೆ ನೀರು ತಗೋಬೇಕು ಅಷ್ಟೇ . 

ಸರಿ ಹಲ್ಲು ಸ್ಯಾನಿಟೈಸ್ ಮಾಡೋಣ ಅಂತ ಮೌತ್  ಸ್ಯಾನಿಟೈಸರ್ ತೆಗೆದೆ. ನನ್ನ ಅಪ್ಪನ ಕಾಲದಲ್ಲಿ ಪೇಸ್ಟ್  ಅಂತೇನೋ ಬರುತ್ತಿತ್ತಂತೆ. ಜನರು ಬ್ರಷ್  ಅನ್ನೋದರ ಮೇಲೆ ಪೇಸ್ಟ್ ಅನ್ನೋದನ್ನು ಹಾಕಿ ಗಂಟೆಗಟ್ಟಲೆ ಹಲ್ಲನ್ನು ಉಜ್ಜುತ್ತಿದ್ದರಂತೆ. ಸರಿ ಸುಮಾರು 10-15 ನಿಮಿಷ ನೀರನ್ನು ಪೋಲು ಮಾಡುತ್ತಿದ್ದರಂತೆ. ಅದಕ್ಕೆ ಈಗ ನಮಗೆ ಈ ಗತಿ  ಬಂದಿರೋದು. ಈಗಂತೂ ನಾವು ಈ ಹಾಳು ಅಭ್ಯಾಸ ನಿಲ್ಲಿಸಿದ್ದೀವಿ. ಮೌತ್ ಸ್ಯಾನಿಟೈಸರ್ ಹಾಕಿ ಒಮ್ಮೆ ಬಾಯಿ ಮುಕ್ಕಳಿಸಿದರೆ ಮುಗಿದೋಯ್ತು ಒಂದು  ನಿಮಿಷಕ್ಕೆ ಕೆಲಸ ಮುಗೀತು.  ಸಾನಿಟೈಸರ್ ಬೆಲೆ  200 ರೂಪಾಯಿ ಮಾತ್ರ, ಆದ್ರೆ ಒಂದು ಲೀಟರ್ ನೀರಿನ ಬೆಲೆ ಅದರ ಇಪ್ಪತ್ತು ಪಟ್ಟು. ಸ್ನಾನಕ್ಕೆ ಕೂಡ ಅಷ್ಟೇ. ಮುಂಚೆ ಅದೇನೋ Shower  ಅಂತ ಇತ್ತಂತೆ. ಜನರು ಗಂಟೆಗಟ್ಟಲೆ ಅದರ ಕೆಳಗೆ ನಿಂತು ನೀರು ಪೋಲು ಮಾಡ್ತಾ ಇದ್ದರಂತೆ. You Tube ನಲ್ಲಿ ಆ ವೀಡಿಯೋಗಳನ್ನ ನೋಡಿದರೆ, ಆಗ ಒಬ್ಬರು ಸ್ನಾನ ಮಾಡಲು ಬಳಸ್ತಾ ಇದ್ದ ನೀರಿನಲ್ಲಿ ಈಗ 10-15 ಜನ ಸ್ನಾನ ಮಾಡಬಹುದಿತ್ತೇನೋ. ಈಗ ಅಂತೂ ನಾವು ವೇಪರೈಸರ್ ಟೆಕ್ನಾಲಜಿ ನ ಬಳಸ್ತೀವಿ. ಇದು ನೀರಿನ ಅತ್ಯಂತ ಸಣ್ಣ ಕಣಗಳನ್ನ ಮೈ ಮೇಲೆ ಸ್ಪ್ರೇ ಮಾಡುತ್ತೆ. 5 ನಿಮಿಷಕ್ಕಿಂತ ಜಾಸ್ತಿ ಹೊತ್ತು ಬಾತ್ ರೂಮಿನಲ್ಲಿ  ಇದ್ದರೆ ಅಲಾರಾಂ ಆಗುತ್ತೆ . ಅಪ್ಪಿ ತಪ್ಪಿ ವಾರಕ್ಕೆ ಎರಡಕ್ಕಿಂತ ಜಾಸ್ತಿ ಅಲಾರಾಂ  ಅದರೆ ಅದು ಕ್ರಿಮಿನಲ್ ಕೇಸ್. ನೀರಿನ ದುಂದು  ವೆಚ್ಚ ಮತ್ತು ಕೊಲೆ ಯತ್ನ ಎರಡಕ್ಕೂ ಈಗ ಒಂದೇ ತರದ ದಂಡನೆಯನ್ನು ಸರಕಾರ ಕಾಯಿದೆ ರೂಪದಲ್ಲಿ ತಂದಿದೆ. ಮುಂಚೆ ನೀರು ಸರಬರಾಜು ಮಾಡ್ತಾ ಇದ್ದ ಪೈಪ್ ಲೈನ್ ಗಳು ಈಗ ಅಡುಗೆ ಅನಿಲ ಪೂರೈಕೆಗೆ  ಬಳಸಲಾಗುತ್ತಿದೆ. 

ಮುಂಚೆ  ಕಂಪೆನಿಯ ಷೇರುಗಳನ್ನು ಅಲ್ಲಿ ಕೆಲಸ ಮಾಡೋರಿಗೆ ಕೊಡುತ್ತಿದ್ದರಂತೆ, ಈಗೇನಿದ್ರೂ ನಾವು ಸಂಬಳದ ಒಂದು ಭಾಗವನ್ನು ನೀರಿನಲ್ಲಿ ತಗೊಳುತ್ತೀವಿ. ಇದು ನಮಗೆ ಒಂತರ ಡಬಲ್ ಬೆನಿಫಿಟ್. ಯಾಕಂದ್ರೆ ನೀರಿನ  ಸಂಬಳಕ್ಕೆ  ಟ್ಯಾಕ್ಸ್ ಇರೋದಿಲ್ಲ. ಹಾಗು ಕಂಪೆನಿ ಕೊಡೋ ನೀರಿನ ದರ ಹೊರಗಡೆ ಮಾರ್ಕೆಟ್  ದರಕ್ಕೆ ಹೋಲಿಸಿದರೆ ತುಂಬಾನೇ ಕಮ್ಮಿ. ಅಂಟಾರ್ಟಿಕಾ ದಲ್ಲಿ ಈಗ bottling ಕಂಪನಿ ಶುರು ಮಾಡಿದ್ದಾರೆ. ಇಡೀ ಭೂಮಿಯಲ್ಲಿ ಯಥೇಚ್ಛ  ಶುದ್ಧ ನೀರು ದೊರೆಯುವ ಒಂದೇ ಒಂದು ಜಾಗ ಅಂದರೆ ಅದೊಂದೇ. ವಿಶ್ವದ ದೊಡ್ಡ ದೊಡ್ಡ ದೇಶಗಳಿಗೆ ಇಲ್ಲಿಂದ ನೀರನ್ನು ರಫ್ತು ಮಾಡ್ತಾರೆ. ಕರಾವಳಿ ತೀರದ ಪ್ರದೇಶಗಳಲ್ಲಿ ನೀರಿನ ಸ್ಥಿತಿ ಸ್ವಲ್ಪ ಪರವಾಗಿಲ್ಲ. ಅಲ್ಲಿ ಸಮುದ್ರದ ನೀರನ್ನು ಶುದ್ದೀಕರಿಸಿ ಕುಡಿಯುವ ನೀರಾಗಿ ಸರಬರಾಜು ಮಾಡ್ತಾರೆ. ಆದರೆ ಜನರ ದುರಾಸೆ ನೋಡಿ ಸರಕಾರ ಕೆಲವೇ ಕೆಲವು ಯೂನಿಟ್ ಗಳಿಗೆ ಪರವಾನಿಗೆ ನೀಡಿದೆ. ಅಂತರ್ಜಲವನ್ನು ಜನರು  ಖಾಲಿ ಮಾಡಿರೋ ರೀತಿ ನೋಡಿ ಸರಕಾರ ಪಾಠ ಕಲಿತಿದೆ.  ಆದರೂ ಅಕ್ರಮ ಶುದ್ದೀಕರಣ ಘಟಕಗಳು ತಲೆಯೆತ್ತಿ ನೀರಿನ ಮಾಫಿಯಾಗಳು ಬ್ರಹತ್ ಪ್ರಮಾಣದಲ್ಲಿ ಬೆಳೆದಿವೆ.  ಮುಂಚೆ ಇದ್ದ ಮರಳು ಮಾಫಿಯಾದ ಸಾವಿರ ಪಟ್ಟು ಈ ನೀರಿನ ಮಾಫಿಯಾ ಬೆಳೆದಿದೆ.

ಮಳೆ ಕೊಯ್ಲು ಈಗ ಕಡ್ಡಾಯ, ತಪ್ಪಿದರೆ ಅದು ಕ್ರಿಮಿನಲ್ ಅಪರಾಧ. ಎಲ್ಲ ಮನೆಗಳಲ್ಲಿ ನೀರು ಮರು  ಶುದ್ದ್ದೀಕರಣ ಘಟಕಗಳು ಇರಲೇಬೇಕು ಇಲ್ಲ ಅಂದ್ರೆ ಅವರಿಗೆ ಹತ್ತು ಪಟ್ಟು ತೆರಿಗೆ ಹಾಕ್ತಾರೆ,. ಅಂಗಡಿಗಳಲ್ಲಿ ನೀರಿನ ಬಾಟಲಿ ತಗೋಬೇಕು ಅಂದ್ರೆ ಆಧಾರ್ ಕಡ್ಡಾಯ. ಎಲ್ಲ ಗಣಕೀಕೃತ ಆಗಿರೋದರಿಂದ ಒಂದು ಆಧಾರ್ ನಂಬರ್ ಗೆ 250ml ಬಾಟಲಿ ಅಷ್ಟೇ ಸಿಗೋದು. ಬ್ಲಾಕ್ ಅಲ್ಲಿ ಅಂಗಡಿಯವರು ಆಗಾಗ ಯಾರದ್ದೋ ಆಧಾರ್ ಹೆಸರಿನಲ್ಲಿ ಗೋಲ್ ಮಾಲ್ ಮಾಡ್ತಾರೆ . ಸರಕಾರಕ್ಕೆ ಗೊತ್ತಾದ್ರೆ ಮಾತ್ರ ಅಂಗಡಿ ಮುಚ್ಚಿಸಿ  ಜೈಲ್ಗೆ ಹಾಕ್ತಾರೆ. ಚುನಾವಣೆಯಲ್ಲಿ ಈಗ ಹಣ ಹೆಂಡ ಯಾರು ಹಂಚುವವರಿಲ್ಲ, ಏನಿದ್ರೂ  ಬಾಟಲಿಗಟ್ಟಲೆ ನೀರು ಹಂಚುತ್ತಾರೆ ಅಷ್ಟೇ ಯಾಕಂದ್ರೆ ಅದಕ್ಕಿಂತ ಅಮೂಲ್ಯ ವಸ್ತು ಬೇರೆ ಏನು ಉಳಿದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀರಿದ್ದೆ ಕಾರುಬಾರು. ಒಂದು ಪಕ್ಷ ನಾವು ಪಾತಾಳದಿಂದ ನೀರು ತರಿಸಿಕೊಡ್ತೇವೆ ಅಂದರೆ ಮತ್ತೊಂದು ಪಕ್ಷದವರು ನಾವು ಅನ್ಯಗ್ರಹಗಳಿಂದ ಪೈಪ್ ಮುಖಾಂತರ ನೀರು ತರಿಸಿಕೊಡ್ತೇವೆ ಅಂತಾರೆ, ಆದರೆ ಪಾತಾಳದಲ್ಲಿ ಅಥವಾ ಅನ್ಯಗ್ರಹಗಳಲ್ಲಿ ನೀರು ಇದೆಯೇ ಅನ್ನೋದರ ಬಗ್ಗೆ ಅವರು ಯೋಚ್ನೆ ನೇ ಮಾಡಲ್ಲ. ಆಡಳಿತ ಸರಕಾರ ತಂದಿರೋ ನೀರು ಭಾಗ್ಯ ಅನ್ನೋ ಹೊಸ ಯೋಜನೆ ಸಾಕಷ್ಟು ಪ್ರಚಾರ ಪಡೆದಿದೆ. ಆದರೆ ಫಲಾನುಭವಿಗಳಿಗೆ ದೊರೆಯಬೇಕಾದ ನೀರಿನ ಬಾಟಲಿಗಳು ಮಾತ್ರ ಒಮ್ಮೊಮ್ಮೆ ದಾರಿ  ತಪ್ಪಿ ದಿನಸಿ ಅಂಗಡಿಗೆ ಹೋಗುತ್ತಿವೆ. ಅವಕ್ಕೆ ಸರಿಯಾದ ದಾರಿ ತೋರಿಸೋದು google map ಗು ದೊಡ್ಡ ಸವಾಲಾಗಿದೆ.

ಕಟ್ಟಿರೋ ಅಣೆಕಟ್ಟುಗಳನ್ನು ದೊಡ್ಡ ಕ್ರಿಕೆಟ್ ಗ್ರೌಂಡ್ ಆಗಿ ಪರಿವರ್ತಿಸಲಾಗಿದೆ. ಯಾಕಂದ್ರೆ ನದಿಯಲ್ಲಿ ನೀರು ಹರಿಯೋವಷ್ಟು ಮಳೆ ಬೀಳೋದೇ ಇಲ್ಲ. ಬಿದ್ದರು ಕೂಡಲೇ ಇಂಗಿ ಹೋಗುತ್ತೆ.  ಅಪ್ಪಿ ತಪ್ಪಿ ಮಳೆ  ಬಂದರೆ ನಾವು ಒಂದು ಹನಿಯು ಹಾಳಾಗದಂತೆ ಅದನ್ನು ಸಂಗ್ರಹಿಸಿ ಇಡುತ್ತೇವೆ. ಪ್ರಾಯಶ ಈ ಕೆಲಸ ನಮ್ಮಆ ಪೂರ್ವಜರು ಮಾಡಿದ್ದಾರೆ ನಮಗೆ ಈ ಗತಿ ಬರ್ತಾ ಇರಲಿಲ್ವೇನೋ. ಜಾಸ್ತಿ ನೀರು ಬಳಸುವ ಭತ್ತ, ಕಬ್ಬುಗಳನ್ನೂ ಸರಕಾರದ ಪರವಾನಿಗೆ ಇಲ್ಲದೆ ಬೆಳೆಯುವಂತಿಲ್ಲ. ನಮ್ಮ ಪೂರ್ವಜರು ಚಿನ್ನ ಬೆಳ್ಳಿ ಆಸ್ತಿ ಮನೆ ಅನ್ನೋದನ್ನು ಬಿಟ್ಟು ಈ ನೀರನ್ನು ಕಾಪಾಡಿದ್ದರೆ ಸಾಕಿತ್ತು, ಈ ಪೀಳಿಗೆಗೆ ಅದೇ ದೊಡ್ಡ ಆಸ್ತಿ ಆಗಿರೋದು. ಆದ್ರೆ ಕೆಟ್ಟ ಮೇಲೇ  ತಾನೇ ಬುದ್ದಿ ಬರೋದು. . ಕೋಕೋ ಕೋಲಾ ಪೆಪ್ಸಿ ಕಂಪೆನಿಗಳು ತಮ್ಮ ಕೋಲಾ ಗಳನ್ನು ನಿಲ್ಲಿಸಿ ಕೇವಲ ನೀರನ್ನು ಮಾತ್ರ ಮಾರಾಟ ಮಾಡ್ತಾ ಇದ್ದಾರೆ. ಅವರು ಸಮುದ್ರದ ನೀರಿಂದ ನೀರನ್ನು ಶುದ್ದೀಕರಿಸೋ ಪರ್ಮಿಟ್ ತಗೊಂಡಿದ್ದಾರೆ. ನೀರಿನ ಆಟಗಳನ್ನು ಒಳಗೊಂಡ Wonder La ಇತ್ಯಾದಿ Amusement ಪಾರ್ಕುಗಳು  ಈಗ ನೀರಿನ ಸಂರಕ್ಷಣೆಯ ವಿದಿ ವಿಧಾನಗಳನ್ನು ಸಂಗ್ರಹಿಸೋ ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿ ಮುಂಚೆ ಜನ ನೀರನ್ನು ಹೇಗೆ ಪೋಲು ಮಾಡ್ತಾ ಇದ್ರೂ ಅನ್ನೋದರ  ಸಾಕ್ಷ ಚಿತ್ರಗಳಿವೆ, ದುಮ್ಮಿಕ್ಕೋ ಜಲಪಾತ, ಉಕ್ಕಿ ಹರಿಯೋ ನದಿ, ಕಣ್ಣೆತ್ತಿ ನೋಡಿದಷ್ಟು ದೂರ ನೀರನ್ನು ತುಂಬಿಕೊಂಡ ಅಣೆಕಟ್ಟುಗಳ ಚಿತ್ರಗಳು ವೀಡಿಯೋಗಳು ಇಲ್ಲಿ ಲಭ್ಯ ಇವೆ. Amusement ಪಾರ್ಕುಗಳ ಗತವೈಭವದ ಚಿತ್ರಗಳು ಕೂಡ  ಇಲ್ಲಿವೆ.  ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಇವು ತುಂಬಾ ಅನುಕೂಲವಾಗಿವೆ.

ಒಮ್ಮೊಮ್ಮೆ ಅನಿಸುತ್ತೆ ಹಳೇ  ಮೂವೀಗಳಲ್ಲಿ ತೋರಿಸೋ ಹಾಗೆ ಜಲಪ್ರಳಯ ಆಗಿದ್ರೆ ಚೆನ್ನಾಗಿರೋದು.... ಈ ಜೀವಮಾನದಲ್ಲಿ ಮತ್ತೊಮ್ಮೆ ಹರಿಯೋ ನೀರನ್ನು ನೋಡುವ ಆಸೆ...  ಅದರಲ್ಲಿ ಆಡುವ ಆಸೆ... ಅದರಲ್ಲಿ ಮುಳುಗೇಳುವ  ಆಸೆ .... ಬದುಕಿದ್ದರೆ ಅದನ್ನು ಕೊನೆವರೆಗೂ ಉಳಿಸುವ ಆಸೆ  .......


---ಶ್ರೀ :-)














Monday, April 25, 2016

ದ್ವಂದ್ವ.....



ದ್ವಂದ್ವ.....


ಪಕ್ಕದ ಮನೆ ಕೊಟ್ಟಿಗೆಯಲ್ಲಿ ಯಾಕೋ ಕರುವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿ ತ್ತು . ಏನನ್ನೋ ನೋಡಿ ಅದು ಭಯ ಪಟ್ಟ ಹಾಗಿತ್ತು. ಅಷ್ಟರಲ್ಲಿ ಪಕ್ಕದ್ಮನೆ ಮಾದ ಓಡೋಡಿ ಗೌಡ್ರ ಮನೆಗೆ ಬಂದ. ಗೌಡ್ರೆ ಹುಲಿ ಮತ್ತೆ ಬಂದೈತೆ ಹಟ್ಟಿಗೆ, ಬೇಗ ಕೋವಿ ತಗೊಂಡು ಬನ್ನಿ ಅಂದ. ಗೋಡೆಯಲ್ಲಿ ನೇತು ಹಾಕಿದ್ದ ಕೋವಿ ಎತ್ತಿ ಸರ ಸರನೆ ಮಾದನ ಹಟ್ಟಿಗೆ ಹೊರಟರು ಗೌಡ್ರು. ಹಟ್ಟಿಯೊಳಗೆ ಇಣುಕಿ ನೋಡಿದರೆ ಹುಲಿ ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಎಳೆಯುತ್ತಾ ಇತ್ತು. ಕರುವನ್ನು ಕಟ್ಟಿ ಹಾಕಿದ್ದರಿಂದ ಅದನ್ನು ಎಳೆದುಕೊಂಡು ಹೋಗೋದು ಹುಲಿಗೆ ಸಾಧ್ಯವಾಗಿರಲಿಲ್ಲ.. ಕೋವಿ ಎತ್ತಿ ಹುಲಿಗೆ ಗುರಿ ಇಟ್ಟರು ಗೌಡ್ರು. ಡಂ ಡಂ ಎಂದು ಸಿಡಿಯಿತು ಗುಂಡು. ಮರುಕ್ಷಣ ಹುಲಿ ಅಲ್ಲಿಂದ ಹಟ್ಟಿ ಗೋಡೆ ಮೇಲೆ ನೆಗೆದು ಓಡಿ ಹೋಯಿತು. ಆದರೆ ಗೌಡ್ರು ಹೊಡೆದ ಒಂದು ಗುಂಡೂ ಕೂಡ ಹುಲಿಗೆ ತಾಗಿರಲಿಲ್ಲ. ಎರಡು ಗುಂಡುಗಳು ಗುರಿ ತಪ್ಪಿ ಗೋಡೆಗೆ ಹೊಡೆದಿದ್ದನ್ನು ಸ್ಪಷ್ಟವಾಗಿ ನೋಡಿದ್ದರು ಗೌಡರು. ಆದರೂ ಹುಲಿ ಓಡಿದ್ದು ಯಾಕೆ ಅಂತ ಗೌಡ್ರು ಯೋಚಿಸುತ್ತ ಇರುವಷ್ಟರಲ್ಲಿ ಗುಂಡಿನ ಸದ್ದು ಕೇಳಿದ ಮಾದ ಹಟ್ಟಿಯೊಳಗೆ ಬಂದ. ಹುಲಿ ಪರಾರಿಯಾಗಿತ್ತು. ಕರುವಿನ ಗಂಟಲಲ್ಲಿ ಹುಲಿಯ ಹಲ್ಲಿನ ಗುರುತು ಬಿಟ್ಟರೆ ಬೇರೆ ಏನು ಜಾಸ್ತಿ ಏಟಾಗಿರಲಿಲ್ಲ. ಕರುವಿನ ಗಂಟಲಿಂದ ಹರಿದ ನೆತ್ತರ ಬಿಂದುಗಳು ಹಟ್ಟಿಯೊಳಗೆ ಅಲ್ಲಲ್ಲಿ ಕಾಣುತ್ತಿತ್ತು.  ಅದನ್ನು ನೋಡಿದ ಮಾದ ಅಂತು ಗೌಡ್ರು ಹೊಡೆದ ಗುಂಡುಗಳು ಹುಲಿಗೆ ಸರಿಯಾಗೇ ನಾಟಿವೆ. ಇವತ್ತೋ ನಾಳೆನೋ ಹುಲಿ ಸಾಯೋದು ಗ್ಯಾರಂಟೀ ಅಂತ ಅಕ್ಕ ಪಕ್ಕದ ಮನೆಯವರಿಗೆಲ್ಲ ಹೇಳಿ ಬಿಟ್ಟ. ತಾನು ಹೊಡೆದ ಯಾವ ಗುಂಡೂ ಹುಲಿಗೆ ತಾಗಿಲ್ಲ ಅಂತ ಗೊತ್ತಿದ್ರು ಗೌಡ್ರು ಸುಮ್ನಿದ್ರು. ಬಿಟ್ಟಿ ಪ್ರಚಾರ ಯಾರಿಗೆ ಬೇಡ. ಅಪ್ಪಿ ತಪ್ಪಿ ಮುಂದೆ ಯಾವತ್ತಾದ್ರು ದಾಳಿ ಮಾಡಿದರೆ ಅಮೇಲೆ ನೋಡಿಕೊಳ್ಳೋಣ ಅಂತ ಸುಮ್ನಿದ್ರು ಗೌಡ್ರು. ಮಾರನೇ ದಿನ ಬೆಳಗಾಗೋದ್ರೊಳಗೆ ಗೌಡ್ರು ಹುಲಿ ಕೊಂದ ಸುದ್ದಿ ಊರಿಡೀ ಹರಡಿತು, ಗೌಡ್ರ ಶೌರ್ಯದ ಕತೆ ಊರ ಜನರ ಬಾಯಲ್ಲೆಲ್ಲ. ಗೌಡರಿಗೆ ಮಾತ್ರ ಗುಂಡು ತಗಲದೇ  ಹುಲಿ ಓಡಿದ್ಯಾಕೆ ಅನ್ನೋದು ಮಾತ್ರ ಅರ್ಥ ಆಗ್ಲೇ ಇಲ್ಲ.. ಇಷ್ಟಕ್ಕೂ ಗೌಡ್ರು ಅಬ್ಬಬ್ಬಾ ಅಂದ್ರೆ ಒಂದೆರಡು ಸಲ ಕೋವಿ ಚಲಾಯಿಸಿರಬಹುದೇನೋ. ಅವರಿಗದು ದೊರಕಿದ್ದು ಕೂಡ ಆಕಸ್ಮಿಕ. ನಕ್ಸಲ್ ನಿಗ್ರಹ ಪಡೆಯವರು ನಕ್ಸಲ್ ಗುಂಪೊಂದರ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸರಿಗೆ ದೊರಕಿದ್ದ ಕೋವಿ ಅದು. ಸರಕಾರಕ್ಕೆ ಲೆಕ್ಕ ಕೊಡದೆ ಪೋಲಿಸ್ ಪಡೆಯಲ್ಲಿದ್ದ ಸಂಬಂದಿಯೊಬ್ಬ ಅದನ್ನು ಇವರಿಗೆ ಕೊಟ್ಟಿದ್ದ. ಇವರೋ ನಮ್ಮ ತಾತ ಈ ಬಂದೂಕಿಂದ ಅದೆಷ್ಟೋ ಹುಲಿ ಜಿಂಕೆಗಳನ್ನು ಬೇಟೆ ಆಡಿದ್ದರು ಆ ಕಾಲದಲ್ಲಿ  ಅಂತ ಬಿಲ್ಡ್ ಅಪ್ ತಗೊಂಡಿದ್ರು. ವಾಸ್ತವದಲ್ಲಿ ಅಟ್ಟಿಸಿಕೊಂಡು ಬಂದರೆ  ಒಂದು ನಾಯನ್ನು ಓಡಿಸೋವಷ್ಟು ಎದೆಗಾರಿಕೆ ಇಲ್ದೇ ಇದ್ರೂ ಗೌಡ್ರು ಮುಂಚೆ ಬೇಟೆಗೆ ಹೋಗ್ತಾ ಇದ್ರಂತೆ, ಅದೆಷ್ಟೋ ಹುಲಿ ಚಿರತೆಗಳನ್ನು ಕೊಂದಿದ್ದರಂತೆ ಅಂತ ಗ್ರಾಮಸ್ತರ ಬಾಯಲ್ಲಿ ಫೇಮಸ್ ಆಗಿದ್ದರು. 


 ಮಾರನೇ ದಿನ ಅದೆಷ್ಟೋ ಜಾನುವಾರುಗಳನ್ನು ಬಲಿ ಪಡೆದು ಅಮಾಯಕ ಗ್ರಾಮಸ್ತರ ನಿದ್ದೆ ಹಾಳು ಮಾಡಿದ ಆ ವ್ಯಾಘ್ರ ವ  ಕೊಂದ ಗೌಡರಿಗೆ ಸನ್ಮಾನ ಮಾಡಬೇಕು ಅಂತ ಊರ ಯುವಕ ಸಂಘದಲ್ಲಿ ನಿರ್ದಾರವಾಯ್ತು. ಪಂಚಾಯ್ತಿ ಕಡೆಯಿಂದ ನಡೆಯೋ ಗ್ರಾಮಸಭೆಗೂ ಮುಂಚೆ ಸನ್ಮಾನ ಸಮಾರಂಭವನ್ನು ಊರ ಶಾಲೆಯಲ್ಲಿ ಇಟ್ಟುಕೊಂಡಿದ್ದಾರೆ ಹಾಗು ನೀವು ಬರಬೇಕು ಅಂತ ಗೌಡರಿಗೆ ಸಂದೇಶವು ಬಂತು. ಗೌಡರಿಗಂತು ಖುಶಿಯೋ ಖುಷಿ. ಮುಂದಿನ ಬಾರಿ ಚುನಾವಣೆಗೆ ಸ್ಪರ್ದಿಸಬೇಕು ಅಂದುಕೊಂಡಿದ್ದ ಅವರಿಗೆ ಇದೊಂದು ಸುವರ್ಣಾವಕಾಶವಾಗಿ ಕಂಡು ಕೂಡಲೇ ಒಪ್ಪಿ ಬಿಟ್ಟರು. 

ಆದರೆ ಸಂಜೆಯ ವೇಳೆಗೆ  ಮಾದ ತಂದ ಸುದ್ದಿ ಗೌಡ್ರ ನೆಮ್ಮದಿಯನ್ನೇ ಹಾಳು ಮಾಡಿತ್ತು. ಘಾಟಿಯ ಬಳಿಯಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿಂದ ಕೊಂಚ ದೂರದಲ್ಲಿ ಹುಲಿಯೊಂದು ಸತ್ತಿದೆ. ಅದರ ಮೈಮೇಲೆ ಗುಂಡಿನ ಏಟುಗಳಿವೆ. ಅದು ನೀವು ಗುಂಡು ಹೊಡೆದ ಹುಲಿನೇ, ಸಂಶಯವೇ ಇಲ್ಲ. ನಾನು ಈಗ ತಾನೇ ನೋಡಿ ಬಂದೆ ಅಂದಿದ್ದ ಮಾದ. ಈಗ ಗೌಡ್ರ ಮನಸ್ಸು ಗೊಂದಲದ ಗೂಡಾಗಿತ್ತು. ನನ್ನ ಕೋವಿಯ ಗುಂಡು ಹುಲಿಗೆ ತಾಗೆ ಇಲ್ಲ ಇನ್ನು ಸಾಯೊದು ಹೇಗೆ? ಬಹುಶ ಆ ಹುಲಿನೇ ಬೇರೆ ಈ ಹುಲಿನೇ ಬೇರೆ. ಆದರೂ  ಗುಂಡೇ ತಾಗದೆ ಹುಲಿ ಹಟ್ಟಿಯಿಂದ ಓಡಿದ್ದಾದರು ಯಾಕೆ? ಇಲ್ಲಿ ಬರೋ ಮುಂಚೆನೇ ಏನಾದರು ಅದಕ್ಕೆ ಗುಂಡು ತಗುಲಿತ್ತೋ ಏನೋ . ಪ್ರಾಯಶ ಅದಕ್ಕೆ ಇರಬಹುದು ಅದಕ್ಕೆ ಕರುವನ್ನು ಎಳೆದು ಕೊಂಡು ಹೋಗೋಕ್ಕೆ ಸಾಧ್ಯವಾಗಿಲ್ಲ. ಅದಕ್ಕೆಮತ್ತೆ ನಾನು ಗುಂಡು ಹಾರಿಸಿದಾಗ ಗುಂಡಿನ ಶಬ್ದ ಕೇಳಿ ಭಯಪಟ್ಟು ಓಡಿರಬಹುದು. ಈಗ ಅರಣ್ಯ ಇಲಾಖೆಯ ಅಧಿಕಾರಿಗಳೇನಾದ್ರು ಹುಲಿಯ ಸಾವಿನ ತನಿಖೆ ಆರಂಬಿಸಿದರೆ ನನಗೆ ಆಪತ್ತು. ನಮ್ಮ ಗೌಡರೇ ಹುಲೀನ ಕೊಂದಿದ್ದು ಅಂತ ಹೆಮ್ಮೆಯಿಂದ ಗ್ರಾಮಸ್ತರು ಹೇಳಿಕೊಳ್ಳುತ್ತಾರೆ. ಕಾನೂನಿನಲ್ಲಿ ನರಬಕ್ಷಕ ಹುಲಿಯನ್ನು ಕೊಲ್ಲಬಹುದು ಅದೂ ಕೂಡ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾತ್ರ. ಆದರೆ ನಮ್ಮ ಊರಿನಲ್ಲಿ ಕಾಣಿಸಿಕೊಂಡ ಹುಲಿ ಅಪ್ಪಿ ತಪ್ಪಿಯೂ ಗ್ರಾಮಸ್ತರ ಮೇಲೆ ಹಲ್ಲೆ ಮಾಡಿರಲಿಲ್ಲ. ಅದಕ್ಕೆಗ್ರಾಮಸ್ತರು ಪದೇ  ಪದೇ ಹುಲಿಯ ಕಾಟದ ಬಗ್ಗೆ  ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಅಪ್ಪಿ ತಪ್ಪಿ ಅರಣ್ಯಾಧಿಕಾರಿಗಳ ಕೈಗೆನಾದ್ರು ನನ್ನ ಹೆಸರು ಸಿಕ್ಕಿಹಾಕಿಕೊಂಡರೆ ಆ ದೇವರೇ ಗತಿ. ವರ್ಷಗಟ್ಟಲೆ ಕೋರ್ಟು ಕಚೇರಿ ಸಹವಾಸ ಖಚಿತ. ಅದೂ ಕೂಡ ನಾನು ಮಾಡದೇ ಇರೋ ತಪ್ಪಿಗೋಸ್ಕರ. ಹಾಗಂತ ನಾನು ಹುಲೀನ ಹೊಡೆದಿಲ್ಲ, ನಾನು ಹೊಡೆದ ಗುಂಡು ಹುಲಿಗೆ ತಾಕಿಲ್ಲ ಅಂದ್ರೆ ಗ್ರಾಮಸ್ತರು ನನ್ನನ್ನು ಕೀಳಾಗಿ ಕಾಣಬಹುದು. ಇವನೊಬ್ಬ ಹೇಡಿ ಸುಳ್ಳುಗಾರ ಅಂತಾನು ಅಂದುಕೊಳ್ಳಬಹುದು. ಇಷ್ಟು ವರ್ಷ ಕಾಯ್ದುಕೊಂಡ ಮಾನ ಮರ್ಯಾದೆ ಎಲ್ಲ ಹೋಗುತ್ತೆ. ಚುನಾವಣೆಯಲ್ಲಿ  ಇವರ ಓಟು  ಪಡೆದು ಗೆಲ್ಲೋದು ಕನಸಿನ ಮಾತೇ ಸರಿ.  ಗೌರವ, ಸನ್ಮಾನ ರಾಜಕೀಯ ಅವಕಾಶ ಒಂದು ಕಡೆ, ಕೋರ್ಟು ಕಚೇರಿ ಇನ್ನೊಂದೆಡೆ. ತಕ್ಕಡಿಯಲ್ಲಿ ತೂಗೋದು ಕಷ್ಟವಾಯ್ತು ಗೌಡರಿಗೆ.  ಅದಕ್ಕೆ ಮನೆಯ ಜಗಲಿಯಲ್ಲಿ ಶತ ಪಥ ತಿರುಗಾಡ್ತಾ ಇದ್ದರು. 
ಅಪ್ಪಿ ತಪ್ಪಿ ಏನಾದ್ರು ಕೋರ್ಟು ಕಚೇರಿ ಅಂತ ಬಂದ್ರೆ ಇನ್ನು ಒಳ್ಳೇದೆ ಆಯ್ತು ಸಹಾನುಭೂತಿ ಜಾಸ್ತಿ ಆಗಿ ಇನ್ನು ಒಂದಷ್ಟು ಓಟು ಗಳು ಜಾಸ್ತಿನೇ ಬೀಳ್ತಾವೆ ಅಂದುಕೊಂಡ ಗೌಡ್ರ ಮುಖದಲ್ಲಿ ಮುಗುಳ್ನಗೆ ಬಂತು. ಹಾಗೆ ಜಗಲಿಯಿಂದ ಒಳನಡೆದ ಗೌಡರು ಹಾಸಿಗೆಗೊರಗಿದರು. ಯೋಚನೆ ಮಾಡಿ ಸುಸ್ತಾಗಿದ್ದ  ಗೌಡ್ರನ್ನು ನಿದ್ರಾದೇವಿ ಆವರಿಸಿಕೊಂಡಳು.  ಗೌಡರ ಕನಸಲ್ಲಿ ಹುಲಿಯೊಂದು ಬಂದು ಗಹ ಗಹಿಸಿ  ನಕ್ಕಂತಾಯ್ತು, ಅದರ ಮೂತಿ ಮಾತ್ರ ಮಾದನ ಹಟ್ಟಿಯಲ್ಲಿ ಕಂಡಿದ್ದ ಹುಲಿಯನ್ನೇ ಹೋಲುತ್ತಿತ್ತು !!!!!!!!!!!!!!!   







Wednesday, January 27, 2016

ಒಳ್ಳೆಯತನ ...ಕೆಟ್ಟತನದ ನಡುವೆ

ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ  ಅಂದ್ರೆ? ನಾವಿರೋ ಸನ್ನಿವೇಷಗಳಿಗನುಗುಣವಾಗಿ ಒಳ್ಳೆಯದು ಕೆಟ್ಟದು ಅನ್ನೋದು ಬದಲಾಗುತ್ತಿರುತ್ತವೆ.  ಯಾವಾಗಲೂ ನಮ್ಮ ಮೂಗಿನ ನೇರಕ್ಕೆ ಒಳ್ಳೆಯತನ ಇರುತ್ತೆ ಅನ್ನೋದು ಮಾತ್ರ  ವಾಸ್ತವ. ಇಲ್ಲಿವೆ ಕೆಲ ಸನ್ನಿವೇಷಗಳು....  


ಒಳ್ಳೆಯತನ ...ಕೆಟ್ಟತನದ ನಡುವೆ 
ಹಾಳಾದ್ದು ಅಲಾರಾಂ ಕೈ ಕೊಡ್ತು ಹೊಡಿಲೇ ಇಲ್ಲ ಇವತ್ತು, ಎಚ್ರಾನೇ ಆಗಿಲ್ಲ  ಅಂತ ಲೇಟಾಗಿ ಎದ್ದು ಬಡ ಬಡಾಯಿಸೋದು ಈ ಮಹಾನಗರದಲ್ಲಿ ಸರ್ವೇ ಸಾಮಾನ್ಯ. (ವರ್ಷಕ್ಕೊಮ್ಮೆ ನಾದ್ರೂ ಶೆಲ್ ಬದಲಾಯಿಸದಿದ್ರೆ ಕೈ ಕೊಡದೆ ಇನ್ನೇನು ಮಾಡತ್ತೆ ಅದು ಪಾಪ, ಅದ್ಕೆ ಕಾಲು ಅನ್ನೋದು ಇದ್ದಿದ್ರೆ ಜಾಡ್ಸಿ ಒದೀತಿತ್ತೋ ಏನೋ).  ಅಂತು ಇಂತೂ ಎದ್ದು ಬೆಳಗ್ಗಿನ ಕಾರ್ಯಕ್ರಮ ಎಲ್ಲ ಮುಗ್ಸಿ ರೆಡಿ ಆಗಿ ಬಸ್ ಸ್ಟ್ಯಾಂಡ್ ಗೆ ಓಡಿ  ಹೋಗ್ತೀರಾ. ಮಾಮೂಲಿ ಟೈಮ್ ಗಿಂತ ಜಸ್ಟ್ 5 ನಿಮಿಷ ಲೇಟು ಅಷ್ಟೇ. ಬಸ್ ಹೊರಟಿರತ್ತೆ ಸ್ಟ್ಯಾಂಡ್ ಇಂದ, ನೀವು ಕೈ ತೋರಿಸ್ತೀರ. ನನ್ನ ವಿಶ್ಲೇಷಣೆ ಇಲ್ಲಿ ಶುರು. ಬಸ್ ಡ್ರೈವರ್ ಬಸ್ ನಿಲ್ಸಿದ್ರೆ ಅವ್ನು ನಿಮ್ ಮನಸಿಗೆ ಒಳ್ಳೆಯವನು ಅನಿಸ್ತಾನೆ. ಆದ್ರೆ ಬಸ್ ಒಳಗೆ ಕೂತ ಉಳಿದ ಎಲ್ಲ ಜನರಿಗೆ ಅವ್ನ ಮೇಲೆ ಸಿಟ್ಟು, ಏನಪ್ಪಾ ಲೇಟಾಯ್ತು ನೀನು ನೋಡಿದ್ರೆ  ಎಲ್ಲ ಕಡೇ ನಿಲ್ಲಿಸ್ತ ಇದ್ದೀಯ ಅಂತ ಬೈಗುಳು ಸ್ಟಾರ್ಟ್.  ಅಕಸ್ಮಾತ್ ಅವ್ನು ನಿಲ್ಸಿಲ್ಲ ಅಂದ್ರೆ ಡ್ರೈವರ್ ನಿಮ್ಮ ಪಾಲಿಗೆ ಕೆಟ್ಟವನು ಅನ್ಸತ್ತೆ. ದಿನ ಇದೆ ಬಸ್ ಅಲ್ಲಿ ಬರ್ತೀನಿ ಅಂತ ಗೊತ್ತಿದ್ರು ನಿಲ್ಸಿಲ್ಲ ಹಾಗೆ ಹೋದ ಅಂತ ಬೈಕೊತಿರ. ಅದೇ ಬಸ್ ಒಳಗೆ ಇರೋ ಜನಕ್ಕೆ ಡ್ರೈವರ್ ಸರಿಯಾದ ಸಮಯಕ್ಕೆ ಅವರವರ ಜಾಗಕ್ಕೆ ತಲುಪಿಸ್ತಾನೆ ಅಂತ ಒಳ್ಳೆ ಮನುಷ್ಯನಾಗಿ ಬಿಡ್ತಾನೆ. ಕೆಲವೇ ನಿಮಿಷಗಳಲ್ಲಿ ಒಳ್ಳೇದು ಕೆಟ್ಟದು ಅನ್ನೋದು ಗಾಳೀಲಿ ತೇಲೋ ಎಲೆ ತರ ಚಂಚಲ ಆಗಿಬಿಡತ್ತೆ.   ಒಳ್ಳೆತನ ಹಾಗು ಕೆಟ್ಟತನ ಅನ್ನೋದನ್ನು ಡ್ರೈವರ್ ನ ಕಾಲ ಕೆಳಗೆ  ಬಂದಿಯಾಗಿರೋ ಅಕ್ಷಿಲೇಟರ್ ಹಾಗು ಬ್ರೇಕುಗಳು  ನಿರ್ದರಿಸೋದು ಮಾತ್ರ ವಿಪರ್ಯಾಸ


ಬಾನುವಾರ .... ಹೊಸ ಸಿನೆಮಾ ಒಂದು ಬಂದಿದೆ ...ನಮ್ಮ ಮೆಚ್ಚಿನ ಹೀರೋ. ಮೊದಲ  ದಿನ ಮೊದಲ ಷೋ ನೋಡಬೇಕು ಅನ್ನೋ ಆಸೆ. ಶನಿವಾರಾನೆ ನಾಳೆ ಬೆಳಗ್ಗೆ  ಬೇಗ ಎದ್ದು ಸಿನೆಮಾಗೆ ಹೋಗಬೇಕು ಅಂತ ಡಿಸೈಡ್ ಮಾಡಿರ್ತೀರ .. ಆದರೆ sunday sickness ಎಲ್ಲಿ ಬಿಡಬೇಕು, ಅದಕ್ಕೆ ಏಳೋದು ಲೇಟ್ ..... ಸರಿ ಬುಕ್ ಮೈ ಶೋ ದ ಲ್ಲಿ ಬುಕ್ ಮಾಡೋಣ ಅಂತ ನೋಡಿದರೆ ಮೊಬೈಲ್ ಅಲ್ಲಿ ನೆಟ್ ವರ್ಕ್ ಸಮಸ್ಯೆ. ಸರಿ ಥಿಯೇಟರ್ ನಲ್ಲಿನೇ ಟಿಕೆಟ್ ತಗೊಳ್ಳೋಣ ಅಂತ ಬೇಗ ರೆಡಿ ಯಾಗಿ ಹೋಗಿ ನೋಡಿದರೆ ಅಲ್ಲಿ ದೊಡ್ಡ ಸರದಿ ಸಾಲು... ಪರಿಚಿಅತ ಮುಖಗಳು ಯಾವುದಾದರು ಇದೆಯಾ ಅಂತ ಒಮ್ಮೆ ಕಣ್ಣು ಹಾಯಿಸಿ ಅಲ್ಲೇ ಸರದಿಯಲ್ಲಿ ನಿಂತಿರೋ ಪಾಪ ಪ್ರಾಣಿಗೆ ಒಂದು ಸ್ಮೈಲ್ ಕೊಟ್ಟು ಸಾರ್ ಒಂದು ಟಿಕೆಟ್ ತಗೋತೀರ ಅಂತ ಕೇಳ್ತೀರಾ ... ಇಲ್ಲಿ ಸರಿ ತಪ್ಪು ಅನ್ನೋದು ಬೇಡ. ಆ ಮನುಷ್ಯ ನಿಮಗೂ ಸೇರಿಸಿ ಟಿಕೆಟ್ ತಗೊಂಡರೆ ಅವ್ನು ನಿಮ್ಮ ಪಾಲಿಗೆ ತುಂಬಾ ಒಳ್ಳೆಯವನು. ಆದರೆ ಆದೇ ಸರದಿ ಸಾಲಿನಲ್ಲಿ ನಿಂತಿರೋ ಕೊನೆಯ ಮನುಷ್ಯನ ಪಾಲಿಗೆ ನೀವಿಬ್ರು ಉಗ್ರಗಾಮಿಗಳ ತರ ಅನ್ನಿಸೋದಂತು ಖಚಿತ. ಅವ್ನು ಟಿಕೆಟ್ ತಗೊಂಡಿಲ್ಲ ಅಂದ್ರೆ ನಿಮ್ಮ ಪಾಲಿಗೆ ಅವ್ನು ಕೆಟ್ಟವನು. ಆದರೆ ಹಿಂದಿರೋ ಜನರಿಗೆ ಅವ್ನು ಒಳ್ಳೆಯವನು. ಒಂದು ಗಂಟೆಯಿಂದ ಲೈನ್ ಅಲ್ಲಿ ನಿಂತಿದೀವಿ ಈಗ ಬಂದು ನಕ್ರ ಮಾಡ್ತಾ ಇದಾನೆ ಒಳ್ಳೆದಾಯ್ತು ಟಿಕೆಟ್ ಸಿಕ್ಕಿಲ್ಲ ಈ ಮೂತಿಗೆ ಅಂತ . 100 ರುಪಾಯಿಯ ಒಂದು ಟಿಕೆಟ್ ಗೆ ಒಳ್ಳೆತನ ಕೆಟ್ಟತನ ದ ಮದ್ಯೆ ಒಂದು ರೇಖೆ ಎಳೆಯೋ ಚಾನ್ಸ್ ಇಲ್ಲಿ..
ಇಲ್ಲೇ ಇನ್ನೊಂದು ಸನ್ನಿವೇಶ.... ಸುದೀಪ್ ಅಥವಾ ದರ್ಶನ್ ಅವರ ಚಿತ್ರ ಅಂದುಕೊಳ್ಳೋಣ. ಅಪರೂಪಕ್ಕೆ ಎಂಬಂತೆ ಹೆಂಡತಿ ಈ ಚಿತ್ರ ನೋಡಲೇಬೇಕು ಅಂತ ಹಠ ಹಿಡಿದಿದ್ದಾಳೆ. ತರಾತುರಿಯಲ್ಲಿ ಹೊರಟು ಬರೋವಷ್ಟರಲ್ಲಿ  ಚಿತ್ರ ಮಂದಿರದಲ್ಲಿ ಸಿಕ್ಕಾಪಟ್ಟೆ ಜನ. ಜೊತೆ ಹೆಂಡತಿ ಬೇರೆ ಇದಾಳೆ, ಟಿಕೆಟ್ ಸಿಕ್ಕಿಲ್ಲ ಅಂದ್ರೆ ಮನೇಲಿ ಮಹಾಯುದ್ದ  ನಡೆಯೋದು ಖಂಡಿತ. ಅಲ್ಲೇ ಕಣ್ಣು ಹಾಯಿಸಿದರೆ ಸಂದಿಯಲ್ಲೊಬ್ಬ ಬ್ಲಾಕ್ ಟಿಕೆಟ್ ಮಾರೋದು ಕಾಣಿಸುತ್ತೆ. ಬೇರೆ ಸಮಯದಲ್ಲಿ ಆಗಿದ್ರೆ ಈ ಬ್ಲಾಕ್ ಟಿಕೆಟ್  ಮಾರೋ ನನ್ ಮಕ್ಳನ್ನು ಜೈಲ್ ಗೆ ಹಾಕ್ಬೇಕು ಅಂತ ಹೇಳ್ತಾ ಇದ್ರೂ ಇವತ್ತು ಮಾತ್ರ ಅವ್ನು ನಿಮ್ ಪಾಲಿಗೆ ದೇವರೇ ಸರಿ. ದುಪ್ಪಟ್ಟು ಹಣ ತೆತ್ತು ಚಿತ್ರಮಂದಿರದೊಳಗೆ ಹೆಜ್ಜೆ ಹಾಕ್ತೀರಿ. ಈಗ ತನ್ನ ,ಮನದನ್ನೆಯನ್ನು ಪುಸಲಾಯಿಸಿ ಹೇಗೋ ದುಡ್ಡು ಹೊಂದಿಸಿ ಟಿಕೆಟ್ ತಗೊಳೋಕೆ ಕ್ಯೂ ಅಲ್ಲಿ ನಿಂತಿರೋ ಚಿಗುರುಮೀಸೆಯ ಹುಡುಗನ ಪಾಡು. ಬಿಸಿಲಿನಲ್ಲಿ ನಿಂತಿದ್ದಾನೆ, ನೂಕುನುಗ್ಗಲು ಬೇರೆ , ತನ್ನ ಸರದಿ ಇನ್ನೇನು ಬರಬೇಕು ಅಷ್ಟರಲ್ಲಿ ಟಿಕೆಟ್ ಸೋಲ್ಡ್ ಔಟ್ . ಈಗ ಬ್ಲಾಕ್ ಟಿಕೆಟ್ ಮಾರುವವನು ಅವನ ಪಾಲಿಗೆ ವಿಲ್ಲನ್. ಬ್ಲಾಕ್ ಟಿಕೆಟ್ ಖರೀದಿಸಿದ ನೀವಂತೂ ಅವನ ಪಾಲಿಗೆ ಹತ್ತು ತಲೆಯ ರಾವಣನಂತೆ ಕಂಡರೂ ಆಶ್ಚರ್ಯವಿಲ್ಲ ....ಏನಂತೀರಿ?

ಶ್ರೀ :-)


Sunday, August 2, 2015

ಜೋಕರ್ ......

ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆಲ ದಿನಗಳ ಹಿಂದೆ ನಡೆದ ಯಕ್ಷಗಾನದ ಬಗೆಗಿನ ಒಂದು ಕಾರ್ಯಕ್ರಮದಲ್ಲಿ ಸ್ನೇಹಿತನೊಬ್ಬ ಹೇಳಿದ ಘಟನೆಯಿಂದ ಪ್ರೇರಿತ ಈ ಲೇಖನ, ಜೊತೆಗೆ ಸ್ವಲ್ಪ ಕಲ್ಪನೆ ... ಕಥೆಯ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ.

                                           

                                             ಜೋಕರ್ 

ಹೊರಗೆ ಮಳೆ ದೋ ಎಂದು ಸುರಿಯುತ್ತಿದೆ. ಮಳೆಗಾಲ ಅಂದ್ರೆ ನನ್ನಂತ ಯಕ್ಷಗಾನ ಪಾತ್ರದಾರಿಗಳಿಗೆ ರಜಾ ದಿನಗಳು. ರಜೆ ಅಲ್ಲ ಒಂತರ ಸಜೆ ಅಂದ್ರು ತಪ್ಪೇನು ಇಲ್ಲ. ಈ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಅಂತ ಒಂದೆರಡು ಹರಕೆಯ ಯಕ್ಷಗಾನ ಬಿಟ್ಟರೆ ನಮಗೆ ಅಸಹನೀಯ ರಜೆ. ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರದರ್ಶನ ಕೊಟ್ಟು ಹಗಲಲ್ಲಿ ನಿದ್ರಿಸಿದ ನಮಗೆ ಈಗ ಸ್ವಲ್ಪ ಕಷ್ಟದ ಹೊತ್ತು. ಹಗಲು ದುಡಿಬೇಕು ರಾತ್ರೆ ನೆಮ್ಮದಿಯ ನಿದ್ರೆ ಮಾಡಬೇಕು, ಇದು ಜಗದ ನಿಯಮ. ಆದರೆ ಯಕ್ಷಗಾನಕ್ಕೆ ಇದು ಅನ್ವಯಿಸುವುದಿಲ್ಲ. ಜ್ವರದಿಂದ ಬಳಲಿ ಬೆಂಡಾಗಿರೋ ಹೆಂಡತಿ ಮೂಲೆಯಲ್ಲಿ ಮಲಗಿದ್ದಾಳೆ. ಕೈಯಿಟ್ಟರೆ ಸುಟ್ಟು ಹೋಗುವುದೇನೋ ಅನ್ನೋವಷ್ಟು ಜ್ವರ. ಯಜಮಾನರು ಇವತ್ತು ಒಂದು ಬಯಲಾಟ ಇದೆ ಬಾ ಮಾರಾಯ ಅಂತ ಹೇಳಿ ಹೋಗಿದ್ದಾರೆ. ಇವಳನ್ನು ಬಿಟ್ಟು ಹೇಗೆ ಹೋಗ್ಲಿ ನಾನು. ನಾನಿಲ್ಲದೆ ನಡೆಯದೇನೋ ಅನ್ನೋ ಪರಿಸ್ತಿತಿ ಏನೂ ಇಲ್ಲ ಆದ್ರೆ ನಾನಿಲ್ಲದೆ ಜನ ನಗಲಾರರು ಅನ್ನೋದು ಮಾತ್ರ ಸತ್ಯ ಯಾಕಂದ್ರೆ ನಾನು ಜನರ ಬಾಯಲ್ಲಿ ವಿಧೂಷಕ ಅಥವಾ ಜೋಕರ್. ಆದರೆ ಇವಳ ಬಾಡಿದ ಮುಖವನ್ನು ನೆನೆಸಿಕೊಂಡು ನಾನು ನಗಿಸುವುದು ಹೇಗೆ. ಆದರೆ ಕಾಣದ ನನ್ನ ನೋವಿನಲ್ಲಿ ಜನ ನಗು ಕಾಣುತ್ತಾರೆ ಅನ್ನೋದು ಮಾತ್ರ ಸತ್ಯ. ನನಗೆ ಸಹ ಪಾತ್ರದಾರಿ ಒದ್ದರೆ ಅಥವ ವಿಚಿತ್ರವಾಗಿ ನಡೆಯುತ್ತಾ ನಾನು ಬಿದ್ದರೆ ಜನರ ಕರತಾಡನ ಮುಗಿಲು ಮುಟ್ಟುತ್ತೆ. ನನ್ನ ತೊದಲು ನುಡಿಗೆ ಮಾತ್ರ ಜನರ ಕರತಾಡನ. ನಾನು ರಂಗಸ್ಥಳದಲ್ಲಿ ಅಪ್ಪಿ ತಪ್ಪಿ ಏನಾದರು ಒಳ್ಳೆ ಯ ನಾಲ್ಕು ಸಾಲು ಹೇಳಿದರೆ ಜನರಿಂದ ನೀರಸ ಪ್ರತಿಕ್ರಿಯೆ. ಯಾಕಂದ್ರೆ ನಾನು ನಾನಾಗಿದ್ದರೆ ಅಲ್ಲಿ ಅದು ನಾನಲ್ಲ.  ಜನರು ಚಹಕ್ಕೋ ಇಲ್ಲ ಬಿಸಿ ವಡೆ ತಿನ್ನಲೋ ಎದ್ದು ಹೋದರೆ ಆ ಬ್ಲಾಂಕ್ ಸ್ಪಾಟ್ ತುಂಬೋಕೆ ನಾನು ಬೇಕು. ಆದರೆ ಸ್ಪಾಟ್ ಅಲ್ಲಿ ಕಥಾನಾಯಕ ಬಂದ ಮೇಲೆ ನಾನು ತೆರೆಯ ಮೂಲೆಯಲ್ಲಿ ಏನೇನೋ ಹಾವ ಭಾವ ತೋರಿಸುತ್ತ ನಿಲ್ಲಬೇಕು. ವಿಪರ್ಯಾಸ..,..


ಕೈಲಿ ಒಂದು ಹರಿದ ಬ್ಯಾಗ್ ಹಿಡಿದು ಯಕ್ಷಗಾನ ಮೇಳದವರೊಡನೆ ಊರೂರು ಸುತ್ತುತ್ತ ಇದ್ದವ ನಾನು. ಅದೇನು ಕಂಡು ನನ್ನ ಮದುವೆ ಆದಳೋ ಗೊತ್ತಿಲ್ಲ. ಆದರೆ ತೆರೆಯ ಮೇಲಿನ ನನ್ನ ಮಾತಿಗೆ ಹಾವಭಾವಕ್ಕೆ ಇಡೀ ಊರು ನಕ್ಕರು ಇವಳನ್ನು ನಗಿಸೋದು ಇದುವರೆಗೂ ಸಾದ್ಯವಾಗಿಲ್ಲ. ನೀನು ನನ್ನ ಅಭಿನಯ, ಮಾತು ಕೇಳಿ ಯಾಕೆ ನಗೋದಿಲ್ಲ ಅಂತ ಕೇಳಿದ್ರೆ ನಿಮ್ಮ ಮಾತಿನ ಹಿಂದಿನ ನೋವು ನನಗೆ ಮಾತ್ರ ಗೊತ್ತು.  ನಿಮಗೆ ಯಾರೋ ಒದ್ದು ನೀವು ಅಲ್ಲಿ ಬಿದ್ದರೆ ಸಭೆ ನಗುತ್ತದೆ. ನಿಮ್ಮ ಮುಖದಲ್ಲಿ ನೀವು ತೋರಿಕೆಯ ನೋವನ್ನು ವಿಚಿತ್ರವಾಗಿ ಬಿಂಬಿಸಿ ನಗಿಸ್ತೀರ. ಆದರೆ ನಿಮಗೆ ನಿಜವಾಗಿಯೂ ನೋವಾಗಿರಬುಹುದೇನೋ ಅನ್ನೋ ಭಯವನ್ನು ಮನಸ್ಸಿನೊಳಗಿಟ್ಟು ನಾನು ಹೇಗೆ ನಗಲಿ  ಅಂದಳು ನಗುತ್ತ. ನೀನು ನನ್ನ ಯಕ್ಷಗಾನ ನೋಡೋಕೆ ಬರಬೇಡ ಕಣೆ ಅಂದುಬಿಟ್ಟೆ ಅವತ್ತು. ಯಾಕೆ ಅಂದಳು?. ಹೆಂಡತಿಯನ್ನೇ ನಗಿಸಲಾಗದ ಈ ಪ್ರಾಣಿ ನಮ್ಮನ್ನೇನು ನಗಿಸಿಯಾನು ಅಂತ ಲೋಕ ಕೇಳಿದರೆ ನನ್ನಲ್ಲಿ ಉತ್ತರವಿಲ್ಲ ಅದಕ್ಕೆ ಅಂದಿದ್ದೆ. ಇದಾದ ಮೇಲೆ ಒಮ್ಮೆನೂ ಆಕೆ ಬಂದಿಲ್ಲ...  


ಮಳೆಗಾಲದಲ್ಲಿ ಯಕ್ಷಗಾನ ನಡೆಯೋದೇ ಕಮ್ಮಿ .ಈಗ ಯಕ್ಷಗಾನ ನೋಡೋರ ಸಂಖ್ಯೆನೂ  ಅಷ್ಟಕಷ್ಟೇ. ಏನೋ ಅಲ್ಲಿ ಇಲ್ಲಿ ಅಂತ ಕೆಲ ಯಜಮಾನರುಗಳ ಕೃಪೆಯಿಂದ ಯಕ್ಷಗಾನ ಮಂಡಳಿಗಳು ಇನ್ನೂ ಉಳಿದುಕೊಂಡಿವೆ. ಕಸುಬಾಗಿರೋದ್ರಿ೦ದ 5 ಜನ ಇದ್ದರೂ ಅಥವಾ 5೦೦ ಇದ್ದರೂ ನಾವು ನಮ್ಮ ಕೆಲಸ ಮಾಡಬೇಕು. ಇದರ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗೇನೆ ಆ ವಿಘ್ನೇಶ್ವರನನ್ನು ವಂದಿಸಿ ಬಣ್ಣ ಹಾಕಿ ಅಭಿನಯಿದಾಗ ಸಿಗೋ ತೃಪ್ತಿನೂ ಅವರ್ಣನೀಯ. ವ್ಯವಸಾಯದ ಕೆಲಸಗಳೆಲ್ಲ ಮುಗಿದಿದ್ದವು.  ಅಪರೂಪಕ್ಕೆ ಎಂಬಂತೆ ಮಳೆಯೂ ಬಿಟ್ಟಿತ್ತು. ಅದಕ್ಕೇ  ಏನೋ ಜನರು ಜಾಸ್ತೀನೇ ಇದ್ದರು.


ಯಕ್ಷಗಾನ ಆರಂಭವಾಯ್ತು. ಭಾಗವತರು ತಮ್ಮ ಕಂಠ ಸಿರಿಯಿಂದ ಜನರನ್ನು ಹಿಡಿದಿಟ್ಟಿದ್ದಾರೆ. ಅವರ ಗಾನದ ಪ್ರತಿ ಏರಿಳಿತಕ್ಕೂ ಕರತಾಡನ. ಇಂದಿನ ಪ್ರಸಂಗ ಕೀಚಕ ವಧೆ. ಮೇಲಿರೋ ಆ ಸೂತ್ರದಾರ ಕೀಚಕನನ್ನು ದುರುಳ ಖಳನಾಯಕನನ್ನಾಗಿ ತೋರಿಸಿದರೆ ನಮ್ಮ ಸೂತ್ರದಾರರು ಇಂದು ಅವನನ್ನು ಕಥಾ ನಾಯಕನಿಗೆ ಸರಿ ಸಮಾನವೆನ್ನಿಸೋ ರೀತಿ ವೈಭವೀಕರಿಸಿದ್ದಾರೆ. ಇದೆ ಕಲೆಯ ಗಮ್ಮತ್ತು. ಕಥೆಯ ಪಾತ್ರಗಳೆಲ್ಲ ಕಥೆಗಾರನ ಕೈಲಿ ಬಂಧಿ. ಆದರು ಕೊನೆ ಮಾತ್ರ ಅದೇ ...ಕೀಚಕನ ಪರ್ಯಾವಸಾನ. ಕೀಚಕನ ರಂಗಪ್ರವೇಶ ಆಯಿತು, ಜೊತೆಗೆ ನಾನು. ಕೀಚಕನೋ ಅಜಾನುಭಾಹು. ಹಾವಭಾವಗಳಿಂದ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಭಾಗವತರು ತನ್ಮಯರಾಗಿ ಭಾಗವತಿಕೆಯಲ್ಲಿ ತಮ್ಮ ಏರಿಳಿತ ತೋರಿಸುತ್ತಿದ್ದರೆ ತಾನೇನು ಕಮ್ಮಿ ಎಂದು ಇವನು ಸುತ್ತು ಹಾಕುತ್ತಿದ್ದಾನೆ. ಜನರ ಕಣ್ಣಿಗೆ ರಾಗ, ತಾಳ, ನೃತ್ಯ, ಹಾವಭಾವ ಗಳ ರಸದೌತಣ. ಅಲ್ಲೇ ಬದಿಯಲ್ಲಿ ನಿಂತ ನಾನು ಸುತ್ತು ಹಾಕಲು ಪ್ರಯತ್ನಿಸಿ ಬಿದ್ದೆ. ಸುತ್ತು ಹಾಕಲು ಬರೋದಿಲ್ಲ ಅಂತೇನು ಇಲ್ಲ. ಇವನಿಗೆ ಸರಿಸಮಾನವಾಗಿ ಅಥವಾ ಇನ್ನೊಂದು ಸುತ್ತು ಜಾಸ್ತಿ ನಾನು ಸುತ್ತಬಲ್ಲೆ ಆದರೆ ನಾನಿಲ್ಲಿರೋದು ವಿಧೂಷಕನಾಗಿ ಮಾತ್ರ. ನಾನು ಸುತ್ತು ಹಾಕಿದರೆ ಜನ ಚಪ್ಪಾಳೆ ಹೊಡೆಯೋದಿಲ್ಲ, ಬಿದ್ದರೆ ಮಾತ್ರ ಚಪ್ಪಾಳೆ!!! ಯಕ್ಷಗಾನ ಮುಂದುವರಿಯುತ್ತಿದೆ. ಪಾಂಡವರು ವಿರಾಟ ರಾಜನಲ್ಲಿ ಆಶ್ರಯಪಡೆದಿದ್ದಾಯ್ತು, ಭೀಮ ಬಾಣಸಿಗನಾಗಿದ್ದು ಅಯ್ತು. ಅರ್ಜುನ ಬೃಹನ್ನಳೆ ಯಾಗಿದ್ದು ಆಯ್ತು. ದ್ರೌಪದಿಯು ಮಹಾರಾಣಿಯ ಸಹಾಯಕಿ ಆಗಿ ಸೇರಿಕೊಂಡಿದ್ದಾಯ್ತು. ಕೀಚಕನ ಮಾತಿಗೆ ನಾನು ವಿಚಿತ್ರ ಹಾವ ಭಾವಗಳಿಂದ ತಮಾಷೆಯಾಗಿ ಉತ್ತರಿಸುತ್ತಿದ್ದರೆ  ಸಭಿಕರು ನಗೆಯ ಕಡಲಲ್ಲಿ ಮುಳುಗಿದ್ದರು. ನೆರೆದಿದ್ದ ಸಭೆಯ ಮೇಲೆ ಹಾಗೆ ಕಣ್ಣು ಹಾಯಿಸುತ್ತಿದ್ದಾಗ ಪರಿಚಿತ ಮುಖವೊಂದನ್ನು ನೋಡಿ ಕಣ್ಣು ಅಲ್ಲಿಂದ ಕದಲದಾಯ್ತು. ಅರೇ ಇವಳು ಇಲ್ಲಿ ಯಾಕೆ ಬಂದಳು? ಅದೂ ನಗುತ್ತಿದ್ದಾಳೆ, ಇಷ್ಟು ವರ್ಷಗಳಲ್ಲಿ ಮೊದಲ ಭಾರಿ ನನ್ನ ಅಭಿನಯ ನೋಡಿ ನಗುತ್ತಿದ್ದಾಳೆ. ಕಡೆಗೂ ನಾನು ಇವಳನ್ನು ನನ್ನ ಅಭಿನಯದಿಂದ ನಗಿಸುವಲ್ಲಿ ಸಫಲನಾಗಿದ್ದೇನೆ. ಆದರೆ ಎದ್ದೇಳಲಾಗದಷ್ಟು ಅನಾರೋಗ್ಯವಿದ್ದರೂ ಯಾಕೆ ಬಂದಳು? ಯೋಚನೆಯಲ್ಲಿ ಮುಳುಗಿದ್ದವನ ಬೆನ್ನಿಗೊಂದು ಅನಿರೀಕ್ಷಿತ ಒದೆ. ರಂಗಸ್ಥಳದಲ್ಲಿದ್ದೂ ಕಳೆದು ಹೋಗಿದ್ದ ನನ್ನನ್ನು ಒಂದು ಒದೆಯಿಂದ ಕೀಚಕ ಪಾತ್ರದಾರಿ ವಾಪಸು ಕರೆ ತಂದಿದ್ದ. ಒದೆಗೆ ಜೋಲಿ ತಪ್ಪಿ ಬಿದ್ದೆ,  ಎದ್ದು ನಕ್ಕೆ. ಇದು ಕಥೆಯಲ್ಲಿನ ಸನ್ನಿವೇಷವೆಂದು ಜನ ನಕ್ಕರು. ಕಥೆ ಮುಂದುವರಿಯಿತು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಬೇಕೆಂದು ಹೋರಟ. ನಾನು ಪರಸ್ತ್ರೀಯ ಮೇಲೆ ಕಣ್ಣು ಹಾಕಿದ ನಿನ್ನ ಅಂತ್ಯ ಹತ್ತಿರ ಬಂದ ಹಾಗಿದೆ ನಿನ್ನ ಸಹವಾಸವೇ ಬೇಡ ಮಾರಾಯ ಅಂತ ಎದ್ದು ಬಿದ್ದು ಓಡಿದೆ. ಜನ ಮತ್ತೆ ನಕ್ಕರು. ಇಲ್ಲಿಗೆ ನನ್ನ ಪಾತ್ರ ಮುಗಿದಿತ್ತು. 


ರಂಗಸ್ಥಳದಿಂದ ಸರಿದವನೇ ವೇಷ ಕಳಚೋವಷ್ಟು ಕೂಡ ವ್ಯವದಾನವಿಲ್ಲದೆ ಮೊದಲು ನನ್ನಾಕೆಯನ್ನು ಮಾತನಾಡಿಸಿ ಬರುತ್ತೇನೆಂದು ಸಭೆಯತ್ತ ನಡೆದೆ. ಎಲ್ಲರೂ ಯಕ್ಷಗಾನದಲ್ಲಿ ಲೀನರಾಗಿದ್ದರು. ಕಡೆ ಸಾಲಿನಲ್ಲಿ ಕೂತಿದ್ದ ನನ್ನಾಕೆ ಮಾತ್ರ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ.  ಹತ್ತಿರ ಹೋದಂತೆ ಆಕೆಯ ಮುಖದಲ್ಲಿ ಒಂದು ಪ್ರಶ್ನೆಯ ಛಾಯೆ. ಜ್ವರ ಏನಾದರೂ ಕಡಿಮೆ ಆಗಿದೆಯೇ ನೋಡೋಣ ಅಂತ ಆಕೆಯ ಕೆನ್ನೆ ಸವರಲು ಹೋದೆ . ಮರುಕ್ಷಣ ಪಟ್ ಅಂತ ಕೆನ್ನೆಗೆ ಯಾರೋ ಭಾರಿಸಿದ ಹಾಗಾಯ್ತು .. ನನ್ನಾಕೆಯ ಬಗ್ಗೆ ಯೋಚನೆ ಮಾಡ್ತಾ ಇದ್ದ ನನ್ನ ಕಣ್ಣಿಗೆ ಆ ಸುಸಂಸ್ಕೃತ ಹೆಣ್ಣುಮಗಳು ನನ್ನ ಹೆಂಡತಿಯಂತೆ ತೋರಿದ್ದಳು. ಛೇ...  ಎಂಥಾ ತಪ್ಪಾಗಿ ಹೋಯ್ತು, ನನ್ನ ವೃತ್ತಿಗೆ ಅಪಮಾನವಾಗಿ ಹೋಯ್ತು ಅಂತ ಕಣ್ಣಂಚಿನಲಿ ನೀರ ಧಾರೆ. ಅಷ್ಟರಲ್ಲಿ ಹೇಯ್ ಇವ್ರು ಜೋಕರ್ ಮಾರಾಯ್ತಿ, ಸುಮ್ನೆ ನಿನ್ನೆಡೆಗೆ ಬಂದಂತೆ ನಟಿಸ್ತಾ ಇದ್ರು ಅನ್ಸುತ್ತೆ. ಇದು ಅವರ ಕಥೆಯ ಭಾಗ ಇರಬೇಕು, ಯಾಕೆ ಅವರಿಗೆ ಹೊಡೆದೆ? ನೋಡು ಈಗ ಕಣ್ಣಲ್ಲಿ ನೀರು ಬಂದ ಹಾಗೆ ನಟಿಸ್ತಾ ಇದ್ದಾರೆ ..... ಕ್ಷಮಿಸಿ ಸರ್  ಅಂದ್ರು ಯಾರೋ ಪುಣ್ಯಾತ್ಮರು. ನಾನು ಮತ್ತೆ ನಕ್ಕೆ. ಕಣ್ಣಲ್ಲಿ ನೀರು ಬರ್ತಾನೆ ಇತ್ತು. ಇದು ನಟನೆಯ ಕಣ್ಣೇರು ಅಲ್ಲ ಅಂತ ಇವರಿಗೆ ಹೇಳೋರ್ಯಾರು?  ನಾನು ಯಾಕೆ ನಗಿಸ್ತೀನಿ ಅಂತ ಇವರಿಗೆ ಹೇಳೋರ್ಯಾರು? ಆ ನಗೆ ಹಿಂದೆ ಇರೋ ನೋವು ತಿಳಿದವರ್ಯಾರು? ಕಥೆಯ ನಿರೂಪಣೆಯಲ್ಲಿಲ್ಲದ  ಈ ಸನ್ನಿವೇಷವನ್ನು ವಿವರಿಸೋರ್ಯಾರು?


ವಿಚಿತ್ರ ವೇಷಭೂಷಣ, ತಪ್ಪಿತಸ್ಥನ ನಿಲುವು, ಕಣ್ಣಲ್ಲಿ ನೀರು, ಮುಖದಲ್ಲಿ ನಗು, ನನ್ನನ್ನೇ ದಿಟ್ಟಿಸುತ್ತಿರೋ ನೂರಾರು ಕಣ್ಣುಗಳು .... ವಿಧಿಯ ನೈಜ ಜೀವನದ  ಕಥಾ ಪ್ರಸಂಗವೊಂದರಲ್ಲಿ ನಿಜವಾದ ಜೋಕರ್ ನಾನಾಗಿದ್ದೆ.

---ಶ್ರೀ:-)
"ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ "


Sunday, July 19, 2015

Simply Complicated

ತಾರೀಕು ಹದಿನೈದು, ತಿಂಗಳ ಮದ್ಯಂತರ... ಕಂಪನಿ ಕೊಟ್ಟ ಸಂಬಳ ಖಾಲಿ... ಬ್ಯಾಂಕ್ ಪ್ರತಿ ತಿಂಗಳೂ ಕೊಡೋ ಸಾಲ (ಕ್ರೆಡಿಟ್ ಕಾರ್ಡ್) ನ ಮಿತಿಯು (ಕ್ರೆಡಿಟ್ ಲಿಮಿಟ್)  ಸರಿ ಸುಮಾರು ಮಿತಿ ಮೀರಿತ್ತು.... ತಲೆ ಕೆಟ್ಟು ಹೋದ ಹಾಗೆ ಅನ್ನಿಸಿ ಮಾಲ್ ಗೆ ಒಂದು ರೌಂಡ್ ಹಾಕಿಕೊಂಡು ಬರೋಣ ಅಂತ ಹೊರಟೆ. ವಾಪಸ್ಸು ಬಂದಾಗ ಸುಮಾರು ಒಂದು ಮೀಟರ್ ಉದ್ದದ ಬಿಲ್ಲು,  ಕೈ ತುಂಬಾ ಸಾಮಾನು, ತಲೇಲಿ ಮೂಡಿದ್ದು ಈ ಲೇಖನ...... 

Simply Complicated..... 

ಮನೆಗೆ ರೇಶನ್ ಎಲ್ಲರಿಗೂ ಬೇಕು. ಆದ್ರೆ ಮನೆ ಪಕ್ಕದಲ್ಲಿ ಇರೋ ಪ್ರಾವಿಶನ್ ಅಂಗಡೀಲಿ ತಗೊಳ್ಳೋದಕ್ಕಿಂತ AC ಮಾಲ್ ಅಲ್ಲಿ ತಗೊಂಡ್ರೆ  ನಮ್ಮ ಘನತೆ ಹೆಚ್ಚುತ್ತೆ, ಡಿಸ್ಕೌಂಟ್ ಸಿಗುತ್ತೆ  ಅಂದ್ಕೋತೀವಿ. ಅಲ್ಲಿ ಹೋದ್ರೆ ನಮಗೆ ಬೇಕಿದ್ದುದಕಿಂತ ಬೇಡದೆ ಇರೋದೇ ಜಾಸ್ತಿ. ಸರಿ ಒಳಗೆ ಹೋಗಿ ಒಂದು ರೌಂಡು ಹಾಕಿ ಬರೋವಷ್ಟರಲ್ಲಿ ಒಂದೋ ನಮ್ಮ ಕೈಲಿರೋ ಕಾಸು ಖಾಲಿ ಆಗಬೇಕು,ಇಲ್ಲ ಅವರು ಕೊಡೋ ತಳ್ಳೋ ಗಾಡಿ ತುಂಬಿರಬೇಕು. ಒಂದು ಕೆಜಿ ತಗೊಳ್ಳೋ ಬದಲು 2 kg  ತಗೊಂಡ್ರೆ ಏನೋ ಫ್ರೀ ಸಿಗುತ್ತೆ  ಅಂತ ತಗೋತೀವಿ. ಆ ಫ್ರೀ ಸಿಗೋ ವಸ್ತು ಏನಾದ್ರೂ ಪರವಾಗಿಲ್ಲ ಆದರೂ ತಗೋತೀವಿ. 500 ಕ್ಕಿಂತ ಜಾಸ್ತಿ ಬಿಲ್ ಆದ್ರೆ ಪಾರ್ಕಿಂಗ್ ಫ್ರೀ, ಅದ್ಕೆ ಏನೇನೋ ತಗೊಂಡು 500 ಕ್ಕೆ ಸರಿದೂಗಿಸ್ತೀವಿ. ಹೀಗೆ ಹೆಚ್ಚಿಗೆ ತಗೊಂಡ ವಸ್ತುಗಳು ಹಾಳಾಗೋದೆ ಜಾಸ್ತಿ. ಆದ್ರೆ who cares ..... ಸರಿ ಶಾಪ್ಪಿಂಗ್ ಮಾಡಿ ಸುಸ್ತಾಗಿದೆ ಅಂತ ಮಾಲ್ ಪಕ್ಕ ಇರೋ ಜ್ಯೂಸು ಸೆಂಟರಿನಲ್ಲಿ  ಜ್ಯೂಸು ತಗೊಂಡು ಕುಡಿದು ಖುಷಿ ಪಡ್ತೀವಿ. ಮಾಲ್ ಪಕ್ಕ ಜ್ಯೂಸ್ ಗೆ ರೇಟು ಡಬಲ್ ಅನ್ನೋದನ್ನು ಮರೀತೀವಿ. ಕಾರ್ ಪೆಟ್ರೋಲ್ ಚಾರ್ಜ್ ವೇಸ್ಟು , ಪಾರ್ಕಿಂಗ್ ಕಾಸು ವೇಸ್ಟು, ತಿಂಡಿ ತೀರ್ಥಗಳಿಗೆ ಹೆಚ್ಚಿಗೆ ಹಣ ಕೊಟ್ಟಿದ್ದು ವೇಸ್ಟು, ಫ್ರೀ ಸಿಕ್ಕಿರೋ ವಸ್ತುಗಳು ಒಂತರಾ ವೇಸ್ಟೇನೆ. ಒಟ್ಟಿನಲ್ಲಿ ಮಾಲ್ ಅಲ್ಲಿ ಸಿಗೋ 2-10% ಡಿಸ್ಕೌಂಟ್ ಗೆ ಅಥವಾ ಉಪಯೋಗಕ್ಕೆ ಬರದೇ  ಇರೋ ಫ್ರೀ ವಸ್ತುಗಳಿಗೆ ಮಾರು ಹೋಗಿ ಬಕ್ರ ಆಗ್ತೀವಿ...  ಆಗ್ತಾನೆ ಇರ್ತೀವಿ.


ದೊಡ್ಡ ಮನೆ ಬೇಕು ಅನ್ನೋದು ಎಲ್ಲರ ಆಸೆ... ದೊಡ್ಡ ಮನೆಗೆ ಶಿಫ್ಟ್ ಆದ ಮೇಲೆ ಮನೆ ತುಂಬಾ ಖಾಲಿ ಖಾಲಿ ಅಂತ ಅನ್ನಿಸೋಕೆ ಶುರು ಆಗತ್ತೆ. ಅಲ್ಲಿ ಇಲ್ಲಿ ನೋಡಿ, Olx, Quikr ಗಳಲ್ಲೆಲ್ಲ ಅದು ಇದು ಅಂತ ಹುಡುಕಾಟ ಮಾಡಿ ಸೊಸೆಯನ್ನು  ಮನೆಗೆ  ತುಂಬಿಸಿಕೊಂಡ ಹಾಗೆ ಡೈನಿಂಗ್ ಟೇಬಲ್ಲು, ಸೋಫಾ, ಟೀಫಾಯಿ, ಬುಕ್ ಸ್ಟಾಂಡು ಎಲ್ಲವನ್ನು ಮನೆಗೆ ಬರ ಮಾಡಿಕೊಳ್ತೀವಿ. ಸೋಫಾದ ಲೆದರ್ ಹಾಳಾಗತ್ತೆ ಅಂದುಕೊಂಡು ಅದಕ್ಕೊಂದು ಸೋಫಾ ಕವರ್ ಹಾಕಬೇಕು... ಡೈನಿಂಗ್ ಟೇಬಲ್ ಶೈನ್ ಹೋಗತ್ತೆ ಅಂತ ಅದರ ಮೇಲೆ ಕೂರೋದೇ ಇಲ್ಲ. ಅಥವಾ ಅದಕ್ಕೆ ಇನ್ನೊಂದು ಕವರ್.. ಸರಿ ಕವರ್ ಹಾಕಿದ ಮೇಲೆ ಅದು ದೂಳಾಗತ್ತೆ, ಕಲೆ ಆಗತ್ತೆ. ಅದನ್ನು ಒಗೆಯೋಕೆ ಅಂತ ಸ್ಟ್ರಾಂಗ್ ಡಿಟರ್ಜೆಂಟ್.  ಸ್ಟ್ರಾಂಗ್ ಡಿಟರ್ಜೆಂಟ್ ಅಂದ ಮೇಲೆ ಅದು ಒಗೆಯೋ ಕೈ ಮೇಲೆ ಪರಿಣಾಮ ಬೀರದೇ ಇರೋಕೆ ಹೇಗೆ ಸಾದ್ಯ ..?  ಕೈ ಎಲ್ಲ ಒಡೆದು ನೋವು ಉರಿ ಶುರು ಆಗುತ್ತೆ. ಇದು ಯಾಕೋ ಸರೀ ಹೋಗ್ತಾ ಇಲ್ಲ ಅಂತ ದೀಪಾವಳಿಗೋ  ಇಲ್ಲ ನ್ಯೂ ಇಯರ್ ಗೋ  ಆಫರ್ ಗಳು ಬಂದ ಕೂಡ್ಲೇ ಒಂದು ವಾಶಿಂಗ್ ಮಷೀನ್ ತಗೋತೀವಿ.... ಅದ್ಕೆ ಒಂದು ಹೊಸ ಕವರ್ ಅಂತ ಮತ್ತೆ ಹೇಳೋದು ಬೇಕಾಗಿಲ್ಲ ಅನ್ಸುತ್ತೆ ..? ಸರಿ ಮನೆ ಎಲ್ಲ ಸೆಟ್ ಒಂದು ಲೆವೆಲ್ ಗೆ ಸೆಟ್  ಆಯಿತು ಅಂತ ಉಸಿರು ಬಿಡೋವಷ್ಟರಲ್ಲಿ ಹನ್ನೊಂದು ತಿಂಗಳು ಮುಗಿದಿರತ್ತೆ . ಒಂದು ದಿನ ರಾಹುಕಾಲದಲ್ಲಿ ಮನೆ ಓನರ್ ಬಾಡಿಗೆ ಜಾಸ್ತಿ ಮಾಡಿ ಹೊಸ ಅಗ್ರಿಮೆಂಟ್ ತಗೊಂಡು ಕುಹಕ ನಗೆ ಬೀರುತ್ತಾ ನಿಂತಿರ್ತಾರೆ .  ಹೆಚ್ಚೇನು ಇಲ್ಲ ಅಬ್ಬಬ್ಬ ಅಂದ್ರೆ 500-1000 ರೂಪಾಯಿ ಜಾಸ್ತಿ ಅಷ್ಟೇನೇ. ಹಳೇ ಮನೆ ಬಿಟ್ಟು ಹೋಗಬೇಕಾದ್ರೆ ಕೊಡಬೇಕಾದ ಪೇಂಟಿಂಗ್ ಖರ್ಚು, ಬ್ರೋಕರ್ ಗೆ ಕೊಡಬೇಕಾದ ಹಣ, ಮನೆಯಲ್ಲಿರೋ ಸಾಮನುಗಳನ್ನು ಸಾಗಿಸೋ ಖರ್ಚು ಇವನ್ನೆಲ್ಲ ಲೆಕ್ಕ ಹಾಕಿದರೆ ಜಾಸ್ತಿ ಮಾಡಿರೋ ಬಾಡಿಗೆಯ ಮೊತ್ತವೇ ವಾಸಿ. ಆದರೂ  ಯಾಕೋ ಬಾಡಿಗೆ ಜಾಸ್ತಿ ಅನ್ನಿಸಿ ಬೇರೆ ಮನೆ ನೋಡೋ ಪ್ಲಾನ್ ಮಾಡ್ತೀವಿ. ಆದರೆ ಈಗ ಮನೆಯಲ್ಲಿರೋ ಫರ್ನಿಚರ್ ಗೆ ಅನುಗುಣವಾಗಿನೇ ಮನೆ ಹುಡುಕಬೇಕು. ಮನೆಯಲ್ಲಿ ವಾಸ ಮಾಡಬೇಕಾಗಿರೋ ಮನುಷ್ಯರನ್ನು ಬಿಟ್ಟು ನಿರ್ಜೀವವಾಗಿರೋ ಟೇಬಲ್ ಕುರ್ಚಿಗಳಿಗೋಸ್ಕರ ಬದುಕೋ ಅನಿವಾರ್ಯತೆ ...ವಿಚಿತ್ರವೆನಿಸಿದರೂ ನಿಜ.


ಕಾಲ ಬದಲಾಗಿದೆ. ಊಟಕ್ಕೆ ಕಾಸಿಲ್ದೇ ಇದ್ರೂ ಪರವಾಗಿಲ್ಲ ಆದ್ರೆ ಕೈಯಲ್ಲಿ ಮಾತ್ರ  ದೊಡ್ಡದಾದ ಮೊಬೈಲ್ ಬೇಕೇ ಬೇಕು. ಆ ಮೊಬೈಲಲ್ಲಿ ಇರೋ app ಗಳನ್ನ ಉಪಯೋಗಿಸಬೇಕು ಅಂದರೆ ಇಂಟರ್ನೆಟ್ ಪ್ಯಾಕ್ ಬೇಕು...... ಸರಿ ಇಂಟರ್ನೆಟ್ ಪ್ಯಾಕ್ ಇದ್ದ ಮೇಲೆ ಕೈ ಸುಮ್ನೆ ಕೂರುತ್ತಾ? ಅದು ಇದು ಅಂತ Download ಮಾಡ್ತೀವಿ, ಬೇಡದೆ ಇರೋ ನ್ಯೂಸ್ ಗಳನ್ನು ಓದಿ ಕಾಮೆಂಟ್ ಮಾಡ್ತೀವಿ..... WhatsApp, Facebook ನಲ್ಲಿ  ಅದು ಇದು  ನೋಡಿ ಕಣ್ಣು ತಂಪು ಮಾಡ್ಕೋತೀವಿ. ನಾವು ಜೀವನದಲ್ಲಿ ಎಷ್ಟು ಬ್ಯುಸಿ ಅಂದರೆ  ದೇವಸ್ಥಾನದಲ್ಲಿ ದೇವರಿಗೆ  ಸುತ್ತು ಹಾಕೋಕೆ ಕೂಡ  ಟೈಮ್ ಇಲ್ಲ ಆದ್ರೆ ಮೊಬೈಲ್ ಅಲ್ಲಿ ಮಾತ್ರ Temple Run ಬೇಕು. ದೇವರಿಗೆ ಸುತ್ತು ಹಾಕೋದು ಬಿಡಿ ಚೆಲುವೆಯರ ಸುತ್ತ ಸುತ್ತೋ ಹುಡುಗರು ಬೆ ರಳೆಣಿಕೆಯಷ್ಟೇ . ಯಾಕಂದ್ರೆ ಹುಡುಗಿಯರ ಮೇಲೆ ಹುಡುಗರಿಗೆ, ಹುಡುಗರ ಮೇಲೆ ಚೆಲುವೆಯರಿಗೆ CRUSH ಆಗೋದರ ಬದಲು CANDY ಮೇಲೆ CRUSH ಆಗಿದೆ. ಅವರೆಲ್ಲ ಆಡೋದರಲ್ಲೇ ಬ್ಯುಸಿ. ಸರಿ ಮೊಬೈಲ್ ಮೇಲೆ ಇಷ್ಟೆಲ್ಲಾ ಅತ್ಯಾಚಾರ ಮಾಡಿದರೆ ಬ್ಯಾಟರಿ ಖಾಲಿ ಆಗದೆ ಇರುತ್ತಾ? ಅದು ಖಾಲಿ ಆಗತ್ತೆ .... ಆಗ್ತಾನೆ ಇರತ್ತೆ. ಆದರೆ ಪದೇ ಪದೇ ಚಾರ್ಜ್  ಮಾಡೋಕೆ ಎಲ್ಲಿ ನೆನಪಾಗುತ್ತೆ ,  ಪವರ್ ಪ್ಯಾಕ್ ತಗೊಳ್ಳೋದು ಉತ್ತಮ ಅನ್ನಿಸಿ ತಗೋತೀವಿ.... ಈಗ ಫುಲ್ ನೆಮ್ಮದಿ ಅಂತ ಅಂದ್ಕೋತೀವಿ.  ಆದರೆ ಅಲ್ಲಿ ಆಗೋದೇ ಬೇರೆ. ಪವರ್ ಪ್ಯಾಕ್ ಇದೆ ಅಂತ ಮೊಬೈಲ್ ಚಾರ್ಜ್ ಗೆ ಹಾಕೋದೇ ಅಪರೂಪ. ಪವರ್ ಬ್ಯಾಂಕ್ ಇದೆ ಅಂತ ಗೊತ್ತಾದ ಕೂಡಲೇ ಸ್ನೇಹಿತರಿಗೂ ಅದರಲ್ಲಿ ಪಾಲು ಬೇಕೇ ಬೇಕು. CANDY CRUSH ಅಲ್ಲಿ ಯಾವುದೋ ಲೆವೆಲ್ ಅಲ್ಲಿ ಆಟ ಮುಂದೆ ಹೋಗದೆ ಇದ್ದಾಗ ಅಥವಾ WhatsApp ಅಲ್ಲಿ ಯಾರೂ ಮೆಸೇಜ್ ಕಳುಹಿಸದೇ ಇದ್ದಾಗ, ಅಪರೂಪಕ್ಕೆ ಮನೆಯ ನೆನಪು ಬಂದು ಒಂದು ಕಾಲ್ ಮಾಡೋಣ ಅಂದುಕೊಂಡ ವೇಳೆಯಲ್ಲಿ ಮಾತ್ರ  " ಲೋ ಬ್ಯಾಟರಿ.... ಪ್ಲೀಸ್ ಕನೆಕ್ಟ್ ಚಾರ್ಜರ್"


ಮೇಲೆ ಹೇಳಿದ ಸನ್ನಿವೇಷ ಗಳು ಕೆಲವು ಮಾತ್ರ, ಇಂತವು ದೈನಂದಿನ ಜೀವನದಲ್ಲಿ ಸಾಕಷ್ಟು ಇವೆ. ಆದ್ರೆ ಇದೆಲ್ಲ ಮಾಡೋವಾಗ ಮನಸ್ಸಿಗೆ ಏನೋ ಒಂದು ಮುದ ಸಿಗುತ್ತೆ ಅನ್ನೋದು ಕೂಡ ನಿಜ.... ಜೀವನವನ್ನು Simple ಇಂದ Complicate ಮಾಡಿಕೊಳ್ಳೋದರಲ್ಲಿ ಸಂತೋಷ ಕಂಡುಕೊಳ್ಳುತ್ತಾ ಇದೀವಿ ಅನ್ನೋದು ಮಾತ್ರ ಕಟು ವಾಸ್ತವ... Side Effects of  So Called Happy (Luxurious..?)  City Life :-) :-)


--- ಶ್ರೀ :-)

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"