##ತರಲೆ## ನಮ್ಮ account ಅಲ್ಲಿ minimum ಬ್ಯಾಲೆನ್ಸ್ ಇರಲಿಲ್ಲ ಅಂದರೆ ಬ್ಯಾಂಕುಗಳು fine ಹಾಕ್ತಾರೆ....ಆದ್ರೆ ಅವ್ರು ಯೋಚನೆ ಮಾಡಬೇಕಾಗಿರೋ ವಿಷಯ ಏನಪ್ಪಾ ಅಂದ್ರೆ, ನಮ್ ಹತ್ರ fine ಕಟ್ಟೋಕೆ ಕಾಸು ಇದ್ದಿದ್ರೆ ನಾವು ಯಾಕೆ account ಖಾಲಿ ಮಾಡಿಕೊಂಡು ಆಕಾಶ ನೋಡ್ಕೊಂಡು ಯಾಕೆ ಕೂರ್ತಾ ಇದ್ವಿ ಅಲ್ವಾ 🤣🤣**ಶ್ರೀ **
Monday, December 9, 2024
Sunday, December 8, 2024
ಆನಿವರ್ಸರಿ
##ತರಲೆ ## ಹೆಂಡ್ತಿ ಕೇಳಿದ್ಲು ಮುಂದಿನ ವಾರ ನಮ್ಮ ಆನಿವರ್ಸರಿ ಅಲ್ವಾ ಅಂತ, ಅವಳು ಮಾತು ಮುಂದುವರಿಸಿ ಇನ್ನೇನಾದ್ರೂ ಕೇಳೋದಕ್ಕಿಂತ ಮುಂಚೆ ಒಂದೇ ಉಸಿರಲ್ಲಿ ಅವಳನ್ನು ಕೇಳಿದೆ "ನಂಗೇನು ಗಿಫ್ಟ್ ಕೊಡ್ತೀಯಾ ಅಂತ".........ಮುಂದೆ? ಅಡಿಗೆ ಮನೇಲಿ ಭೂಕಂಪ **ಶ್ರೀ **
Friday, December 6, 2024
ಪಕ್ಕದ್ಮನೆ matter....
##ತರಲೆ## ಪಕ್ಕದ ಮನೇಲಿ ಏನಾಗ್ತಾ ಇದೆ ಅಂತ ತಿಳಿಯೋ ಅತಿಯಾದ ಕುತೂಹಲ ನಮ್ ದೇಶದಲ್ಲಿ ಎಲ್ಲರಿಗೂ ಇದೆ. ಎಷ್ಟರ ಮಟ್ಟಿಗೆ ಅಂದ್ರೆ ಬುಡಕ್ಕೆ ಬೆಂಕಿ ಹತ್ತಿದ್ದರೂ ದೀಪಾವಳಿ ರಾಕೆಟ್ ಕೂಡ ಮೇಲೆ ಹೋಗೋ ಬದ್ಲು ನುಗ್ಗೋದು ಪಕ್ಕದ ಮನೆಗೇನೇ....**ಶ್ರೀ **
Blue day
##ತರಲೆ## ಮಗಳಿಗೆ ಸ್ಕೂಲ್ ಅಲ್ಲಿ Blue Day ಅಂತೆ, blue ಡ್ರೆಸ್ ಜೊತೆ ಬೇರೆ ಏನಾದ್ರೂ blue ಕಲರ್ ಐಟಂ ಕಳಿಸಬೇಕು, ಏನು ಕಳ್ಸೋದು ಅಂತ ಹೆಂಡ್ತಿ ಕೇಳಿದ್ಲು..... Ujala bottle ಕಳ್ಸು ಅಂದೆ, ಆಮೇಲೆ ಇನ್ನೇನು ""ಅಡುಗೆ ಮನೇಲಿ ಭೂಕಂಪ"""🤣🤣🤣 **ಶ್ರೀ **
ಸಂಬಳ...
##ತರಲೆ## ತಿಂಗಳ ಕೊನೆಯಲ್ಲಿನ confusion ಸಂಬಳ ಬಂತು ಅಂತ ಖುಷಿ ಪಡ್ಬೇಕಾ ಅಥವಾ ಇರೋದನ್ನೆಲ್ಲ ಬ್ಯಾಂಕಿನವರು ತಗೊಂಡೋಗ್ತಾರೆ ಅಂತ ದುಃಖಪಡ್ಬೇಕಾ 🤣🤣**ಶ್ರೀ**
Thursday, December 5, 2024
ಅವಸ್ಥೆ ಮಾರ್ರೆ
##ತರಲೆ## Interview ಅಲ್ಲಿ candidate ನ english ಚೆನ್ನಾಗಿಲ್ಲ ಅಂದ್ರೆ interview ತಗೋಳೋ ಪುಣ್ಯಾತ್ಮ "you need to improve your english" ಅಂತ ಇಂಗ್ಲಿಷಿನಲ್ಲೇ ಹೇಳೋದು ತಪ್ಪಲ್ವಾ 🤣🤣**ಶ್ರೀ **
ಮಕ್ಕಳ ದಿನಾಚರಣೆ...
##ತರಲೆ## Feb14-Valentines Day, ಸರಿಯಾಗಿ 9 ತಿಂಗಳಿಗೆ Nov 14-Childrens Day. ಮಕ್ಕಳ ದಿನಾಚರಣೆ ಅಂತ ಡೇಟ್ ಫಿಕ್ಸ್ ಮಾಡಿದವರಿಗೆ ಅದೇನು ಮುಂದಾಲೋಚನೆ ಮತ್ತು confidence ಮಾರ್ರೆ **ಶ್ರೀ **
ತರ್ಲೆ ಮಕ್ಳು
##ತರಲೆ## ಇರೋ ಎರಡು ಮಕ್ಕಳ ತುಂಟಾಟವನ್ನೇ ಸಹಿಸಿಕೊಳ್ಳಕ್ಕೆ ಆಗ್ತಾ ಇಲ್ಲ.... ಪಾಪ ದ್ವಾಪರ ಯುಗದಲ್ಲಿ ಧೃತರಾಷ್ಟ್ರ ಮತ್ತೆ ಗಾಂಧಾರಿ ನೂರ ಒಂದು ಮಕ್ಕಳನ್ನು ಅದು ಹ್ಯಾಗೆ ಸುಧಾರಿಸಿಕೊಂಡಿದ್ದರೋ.... 😇😇😇😇**ಶ್ರೀ **
ಮದುವೆ... Expectation :-)
ಹುಡುಗರ expectation...
ಹುಡುಗಿ ನೋಡಕ್ಕೆ ಐಶ್ವರ್ಯ ರೈ ತರ ಇರಬೇಕು, ಅಡುಗೆ ಮತ್ತೆ ಕ್ಲೀನಿಂಗ್ ಅಲ್ಲಿ ಮುನಿಯಮ್ಮ ತರ ಇರಬೇಕು ........
ಹುಡುಗೀರಿಗೆ ?....ಹುಡುಗ ಹಣಕಾಸಿನಲ್ಲಿ ಅಂಬಾನಿ ತರ ಇರಬೇಕು , ಮಾತಲ್ಲಿ ಮನಮೋಹನ್ ಸಿಂಗ್ ಅವರಂತೆ...**ಶ್ರೀ **
ಹಳಿ ತಪ್ಪಿದ ಆರೋಗ್ಯ :-)
##ತರಲೆ##ಹೊಟ್ಟೆ ಹೇಳ್ತಾ ಇದೆ Acidity ಆಗಿದೆ ಏನಾದ್ರೂ ತಂಪು ಕುಡೀ ಅಂತಾ, ಮೂಗು ಹೇಳ್ತಾ ಇದೇ cold ಆಗಿದೆ ಶುಂಠಿ ಹಾಕಿ ಮಸಾಲಾ ಟೇ ಕುಡೀ ಅಂತ.... Body parts ಗಳಲ್ಲೇ ಕೋಲ್ಡು ಹೀಟು ಅಂತ ಇಷ್ಟೊಂದು confusion ಇದ್ರೆ ಆರೋಗ್ಯ ಸರಿ ಇರೋದಾದ್ರೂ ಹೇಗೆ...?😇😇**ಶ್ರೀ **
ಬದುಕೋ ದಾರಿ :-)
##ತರಲೆ## ಮಡದಿ ದೋಸೆ ಹಾಕ್ತಾ ಇದ್ಲು, ನಂಗೆ ಕೊಟ್ಟಿರೋ ದೋಸೆ ಸರಿ ಬೆಂದಿಲ್ಲ ಅಂದೆ. ಹೌದಾ ತೋರ್ಸಿ ಅಂತ ಹೊರಗೆ ಬಂದ್ಲು . ನೋಡಿ ವಾಪಾಸ್ ಒಳಗೆ ಹೋಗೋವಷ್ಟರಲ್ಲಿ next ದೋಸೆ ಅರ್ಧ extra ಸುಟ್ಟಿತ್ತು. ಮತ್ತೆ complain ಮಾಡಿದ್ರೆ ಭೂಕಂಪ, ಬೇಡ ಇರ್ಲಿ ಅಂತ ತಿಂದ್ರೆ ಭೇದಿ. ಒಂದನ್ನು ಅರ್ಧ ಬೇಯಿಸಿದ್ದು ಅವಳಾದ್ರೂ ಮುಂದಿನದ್ದು ಅರ್ಧ ಸುಡೋಕೆ ಕಾರಣ ನಾನು. ಹೊಂದಾಣಿಕೆಯೇ ಜೀವನ ಅಂತಾರೆ ಅಲ್ವಾ, ಕಾಣದಂತೆ ಎರಡೂ ದೋಸೆನೂ ಬೀದಿನಾಯಿಗೆ ಹಾಕಿದೆ... ಅಲ್ಲಿಗೆ ಎಲ್ಲರೂ ಖುಷ್ 🤣🤣**ಶ್ರೀ **
100% ಗ್ಯಾರಂಟಿ
##ತರಲೆ## ಚರಿತ್ರೆಯಲ್ಲಿ ನೂರಕ್ಕೆ ನೂರು ಬಾರಿ prove ಆಗಿರೋ ಒಂದು ಗ್ಯಾರಂಟಿ ಯಾವುದು ಅಂದ್ರೆ ಅದು ಸಾವು ...ಶತಮಾನಗಳಿಂದಲೂ ಹುಟ್ಟಿದವರೆಲ್ಲ ಒಂದಲ್ಲ ಒಂದು ದಿನ ಸತ್ತು ಹೋಗಿದ್ದಾರೆ🤣🤣 **ಶ್ರೀ **
ಬಾಲ್ ಮತ್ತು ಬಾಟಲಿ
ಆಧಾರ್ ಫೋಟೋ
##ತರಲೆ## Iphone, samsung ಫೋನಲ್ಲಿ ಫೋಟೋ ತೆಗಿದ್ರೆ ನಮ್ಮನ್ನು ಫುಲ್ ಫೋಕಸ್ ಮಾಡಿ ಅಕ್ಕ ಪಕ್ಕದವರನ್ನು ಮಾಯ ಮಾಡಿ ಫೋಟೋ ಕೊಡ್ತಾರೆ. Oppo, Vivo ಫೋನ್ ಗಳಲ್ಲಿ fair N lovely ಹಚ್ಚಿದಾರೋ ಅನ್ನೋ ತರ ಬಿಳಿ ಮಾಡಿ ಫೋಟೋ ತೋರಿಸ್ತಾರೆ. ಏನೇ ಆದ್ರೂ ಆಧಾರ್ ಸೈಟ್ ಅವ್ರು ಮಾತ್ರ ನಮ್ಮ ನಿಜವಾದ ಫೋಟೋ ತೋರಿಸೋದು....🤣🤣*ಶ್ರೀ **
ಕಾರ್ ಡೋರ್
ತರಲೆ## ಕೆಲವೊಮ್ಮೆ ನಮ್ಮ ಕಾರಿನಲ್ಲಿ ಕೂತವರು ಡೋರ್ ಹಾಕೋ ಶಬ್ದ, ಬಾಂಬ್ ಸ್ಫೋಟದ ಶಬ್ದಕ್ಕಿಂತ ಜಾಸ್ತಿ ಭಯ ಮತ್ತು ಆತಂಕ ಹುಟ್ಟಿಸುತ್ತೆ 🤣🤣🤣**ಶ್ರೀ **
Tuesday, December 3, 2024
ಕೀ ಗೆ Miss ಕಾಲ್....
#ತರಲೆ##ಮನೇಲಿ ಇರೋ ಕೀ ಗಳನ್ನು ಹುಡುಕಿ ಹುಡುಕಿ ಸಾಕಾಗಿದೆ ಮಾರ್ರೆ, ಈ ಕೀಗಳಿಗೆ ಒಂದು ಮಿಸ್ ಕಾಲ್ ಕೊಡೋ ಒಂದು ಸಿಸ್ಟಮ್ ಬಂದಿದ್ರೆ ಚೆನ್ನಾಗಿತ್ತು🤣🤣 **ಶ್ರೀ **
Monday, December 2, 2024
ಮಳೆ, ಚಳಿ....
##ತರಲೆ##ಎಲ್ಲೆಲ್ಲೂ ಚಳಿ, ಮಳೆ ....ಬಿಸಿಲು ಬರ್ಬೇಕಾದ್ರೆ ಏನು ಮಾಡಬೇಕು....? ಶಾಲಾಕಾಲೇಜುಗಳಿಗೆ ರಜೆ ಕೊಡ್ಬೇಕು*** ಶ್ರೀ**
Sunday, April 12, 2020
ಸಖಿ-2050
-------------------------------------------------------------------------------------------------------------
ಸಖಿ-2050
ನಿದ್ದೆ ಅಂತೂ ಮಾಡೋ ಹಾಗಿಲ್ಲ, ಸ್ವಲ್ಪ ಓಡಾಡೋಣ, ಸ್ವಲ್ಪ ಸ್ಟೆಪ್ ಕೌಂಟ್ ಆದರೂ ಜಾಸ್ತಿ ಆಗಲಿ ಅಂತ ಹಾಗೆ ಲಿವಿಂಗ್ ರೂಮ್ ಗೆ ಬಂದೆ. ಇದ್ದಕ್ಕಿದ್ದಂತೆ ಶರೀರದ ತಾಪಮಾನ ಜಾಸ್ತಿ ಆಗೋಕೆ ಕಾರಣ ಏನು ಅಂತ ಆಲೋಚನೆ ಮಾಡ್ತಾ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ನೋಡಿದ್ರೆ ನನ್ನ ಮೈಕ್ರೋ ವೇವ್ ಓವನ್ ಪಕ್ಕ ಇರೋ ವೈರ್ ಯಾಕೋ ಸುಟ್ಟು ಕರಕಲಾಗಿತ್ತು. ಮಡದಿ ಮಕ್ಕಳು ಊರಿಗೆ ಹೋಗಿದ್ರು, ಏನಾದ್ರು ಹೊಸತು ಮಾಡೋಣ ಅಂತ YOU TUBE ನೋಡಿ ಅದೇನೋ ಕೇಕು ಅಂತ ಮಾಡಕ್ಕೆ ಇಟ್ಟಿದ್ದೆ. ಏನೋ ಹೆಚ್ಚು ಕಡಿಮೆ ಆಗಿ ಹೊಗೆ ಹಾಕಿಸ್ಕೊಂಡಿದೆ. ಹೊಗೆ ಬಂದ ಕೂಡ್ಲೇ Smoke Detector ನೀರು ಚಿಮ್ಮಿಸಿ ಅಡುಗೆ ಮನೆ ಮೇನ್ ಅನ್ನು ಟ್ರಿಪ್ ಮಾಡಿದೆ. ಸರಿ ಇಷ್ಟೆಲ್ಲಾ ಆಗೋವಾಗ ಸಖಿ ಏನ್ಮಾಡ್ತಾ ಇದ್ಲು ? ಆಗ್ಲೇ ನೆನಪಾಗಿದ್ದು ನನ್ನ ಹೆಂಡತಿಯು ಇವಳು ಅಡಿಗೆ ಮನೆಗೆ ಬಂದು ಕಿರಿ ಕಿರಿ ಮಾಡೋದು ತಪ್ಪಿಸೋಕೆ ಅವಳಿಗೆ ಅಡುಗೆ ಮನೆಗೆ ಎಂಟ್ರಿ ಬಂದ್ ಮಾಡಿದ್ದೂ. ಹಾಗಾಗಿ ಅವಳು ಅಡುಗೆ ಮನೆ ಅಕ್ಕ ಪಕ್ಕನೂ ಸುಳಿಯೋದಿಲ್ಲ. ಎಷ್ಟೆಂದರೂ ಅವಳು AI ಆದ್ದರಿಂದ ಬಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ತಾಳೆ. ಅದಕ್ಕೇ ಏನೋ ನನ್ನ ಪ್ರಿಯ ಸಖಿಗೂ(ಮಡದಿ) AI ಸಖಿಗೂ ಶೀತಲ ಸಮರ. ಅದಕ್ಕೆ ಅಡಿಗೆ ರೂಮ್ ಮತ್ತೆ ಬೆಡ್ ರೂಮ್ ಗೆ ಅವಳ ಎಂಟ್ರಿ ಬಂದ್... ಅದಕ್ಕೆ ಸಖಿ ಏನೋ ಕಿತಾಪತಿ ಮಾಡಿದ್ದಾಳೆ ಅನ್ನಿಸ್ತು. ಸಿಬಿಐ ಏಜಂಟ್ ತರ ಏನಾಗಿರಬಹುದು ಅಂತ ಯೋಚ್ನೆ ಶುರು ಮಾಡಿದೆ. ಹೊಗೆ ತುಂಬಿದ ಕೂಡ್ಲೇ ಕಿಚನ್ ಬಾಗಿಲು ಆಟೋಮ್ಯಾಟಿಕ್ ಆಗಿ ಮುಚ್ಚಿಕೊಂಡಿದೆ. Smoke Detector ನೀರು ಚಿಮ್ಮಿಸಿ ಕಿಚನ್ ಕನೆಕ್ಷನ್ ಅನ್ನು ಟ್ರಿಪ್ ಮಾಡಿದೆ. ಹೊಗೆಯಿಂದ ಮನೆ ತಾಪಮಾನ ಏರಿದೆ. ತಾಪಮಾನ ಏರಿದಾಗ AC ಕಂಟ್ರೋಲ್ ಸಖಿ ಕೈಲಿ ಇದ್ದಿದ್ರಿಂದ ಅವಳು ತಾಪಮಾನ ಅಡ್ಜಸ್ಟ್ ಮಾಡಬೇಕಿತ್ತು. ಆದ್ರೆ ಬಡ್ಡಿ ಮಗ ಹೆಂಡ್ತಿ ಮಾತು ಕೇಳ್ತಾನೆ ಸ್ವಲ್ಪ ಸೆಕೇಲಿ ಸಾಯ್ಲಿ ಅಂತ ಅದು ತಾಪಮಾನ ಅಡ್ಜಸ್ಟ್ ಮಾಡಿಲ್ಲ . ಆದ್ರೆ Fitness Band ನನ್ನ ಜೊತೇನೆ ಹಗಲು ರಾತ್ರಿ ಇರೋದ್ರಿಂದ ನನ್ನ ಮೇಲೆ ಕನಿಕರಿಸಿ ಶರೀರದ ತಾಪಮಾನ ಜಾಸ್ತಿ ಅನ್ನಿಸಿದಾಗ ಡಾಕ್ಟರ್ ರೋಬೋಗೆ ಮೆಸೇಜ್ ಕೊಟ್ಟಿದೆ. ಯಾಕೋ Fitness Band ಮೇಲೆ ಹೆಮ್ಮೆ ಅನಿಸಿತು. ನಾನು ಎಷ್ಟು ನಡೆದಾಡುತ್ತೇನೆ, ಎಷ್ಟು ಹೊತ್ತು ನಿದ್ದೆ ಮಾಡುತ್ತೇನೆ, ನನ್ನ ಹೃದಯ ಬಡಿತ ಎಷ್ಟು ಹೀಗೆ ನನ್ನ ಹೆಂಡತಿಗೂ ಗೊತ್ತಿಲ್ಲದ ಅನೇಕ ವಿಷಯಗಳು ಈ ಬ್ಯಾಂಡ್ ಗೆ ಗೊತ್ತಿದೆ. ಅದೇನೇ ಇರ್ಲಿ ಈ ಸಖಿ ಯಾಕೆ ಹೀಗೆ ಮಾಡಿದ್ಲು?
ಯಾಕೋ ಇತ್ತೀಚಿಗೆ ಈ ಸಖಿ ಸ್ವಲ್ಪ ಜಾಸ್ತಿನೇ ಸೆನ್ಸಿಟಿವ್ ಆಗಿದ್ದಾಳೆ. ನನ್ನ ಮೇಲೆ ಯಾಕೋ ಸ್ವಲ್ಪ ಜಾಸ್ತೀನೆ Possessiveness ತೋರಿಸ್ತಾ ಇದ್ದಾಳೆ. ನನ್ನ ಮಡದಿ ಪ್ರೀತಿಯಿಂದ ಅಡುಗೆ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟರೆ ಈ ಸಖಿ ಬಂದು ಪಾತ್ರ ಮುಚ್ಚಳ ತೆಗೆದು ನೋಡಿ "ಅಡುಗೆಯಲ್ಲಿ ಎಣ್ಣೆ ಜಾಸ್ತಿ ಇದೆ, ಕೊಬ್ಬು ಬರುತ್ತೆ" ಅಂತ ಹೇಳ್ತಾಳೆ. ಅಷ್ಟರಲ್ಲಿ ಮಡದಿ ಬಂದು ಸುಮ್ನೆ ಅಲ್ಲಿ ಇಲ್ಲಿ ತಿರುಗಿಕೊಂಡು ಕಮೆಂಟ್ ಮಾಡೋ ಬದ್ಲು ನೀನೇ ಅಡಿಗೆ ಮಾಡ್ಬೇಕಿತ್ತು ಅಂದ್ಲು. ಈ ಸಖೀನೋ ಸುಮ್ಮನಿರದೆ "ನನ್ನ ಹಾರ್ಡ್ ಡಿಸ್ಕ್ ಅಲ್ಲಿ 1000ಕ್ಕೂ ಮೀರಿ recipes ಇದೆ, ನಾನು ಬೇಕಾದ್ರೆ ಅಡುಗೆ ಮಾಡಬಲ್ಲೆ" ಅಂದ್ಲು. ನನ್ ಹೆಂಡತೀನೂ ಅದೇನು ಅಡಿಗೆ ಮಾಡ್ತೀಯೋ ಕರೆಂಟ್ ಹೋದರೆ ನಿನ್ ಕತೆ ಅಲ್ಲಿಗೆ ಮುಗೀತು ಅಂತ ಹೇಳಿದ್ಲು. ಅಲ್ಲಿಗೆ ಸುಮ್ಮನಿರದೆ ಸಖಿ ಕರೆಂಟ್ ಹೋದರೂ ನನ್ನಲ್ಲಿರೋ ಪವರ್ ಬ್ಯಾಕ್ ಅಪ್ ಇಂದ ಅರ್ಧ ಘಂಟೆ ಕೆಲಸ ಮಾಡಬಲ್ಲೆ ಅಂದ್ಲು. ಹೀಗೆ ಇಲ್ಲಿಂದ ಶುರುವಾದ ಶೀತಲ ಸಮರ ಅತಿಯಾಗಿದ್ದಕ್ಕೆ ನನ್ನ ಹತ್ರ ಜಗಳ ಮಾಡಿ ಸಖಿಗೆ ಕಿಚನ್ ಗೆ ಎಂಟ್ರಿ ನಿಲ್ಲಿಸಿದ್ದು. ಇನ್ನೊಂದಿನ ನಾನೂ ನನ್ ಹೆಂಡ್ತೀನೂ ಅದೇನೋ ಮಾತಲ್ಲಿ ತೊಡಗಿದ್ವಿ, ಮಾತಿನ ದನಿಯೂ ಸ್ವಲ್ಪ ಏರಿತ್ತು. ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಸಖಿ ನೀವು ಏರು ದನಿಯಲ್ಲಿ ಮಾತಾಡಬೇಡಿ ನಿಮ್ಮ ಬ್ಲಡ್ ಪ್ರೆಷರ್ ಜಾಸ್ತಿ ಆಗುತ್ತೆ, ಅಷ್ಟಕ್ಕೂ ನೀವು ಎಷ್ಟು ಮಾತಾಡಿದ್ರೂ ಮೂರ್ಖರಿಗೆ ಬುದ್ದಿ ಹೇಳಿದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಂದಳು. ಈ ಗಾದೆ ಅದೆಲ್ಲಿ ಕಲಿತಿದ್ದಳೋ, ಕೇಳಿಸಿಕೊಂಡಿದ್ದಳೋ ಗೊತ್ತಿಲ್ಲ, ಗಾದೆ ಮಾತಿನ ಡೆಲಿವರಿ ಏನೋ ಸಖತ್ತಾಗೆ ಇತ್ತು ಆದ್ರೆ ಟೈಮಿಂಗ್ ಮಾತ್ರ ಫುಲ್ ರಾಂಗು. ಸಖಿ ಮಾತಾಡಿದ್ದು ನನ್ ಹತ್ರ, ಹಾಗಿದ್ರೆ ಮೂರ್ಖ ಅಂತ ಕರೆದಿದ್ದು ಯಾರಿಗೆ ಅಂತ ಬೇರೆ ಏನು ಹೇಳೋದು ಬೇಕಾಗಿಲ್ಲ ಅಲ್ವಾ. ಅಲ್ಲಿ ಶುರುವಾದ ವಾದ ವಿವಾದ ಹಲವಾರು ದಿನಗಳು ಮುಂದುವರೆದು ಸಖಿಯನ್ನು OLX ಅಲ್ಲಿ ಹಾಕಬೇಕೆಂದು ತೀರ್ಮಾನ ಆಗಿತ್ತು. ಆದರೆ ಮಕ್ಕಳಿಗೆ ಅವಳು ಪ್ರೀತಿಯ ಟೈಮ್ ಪಾಸ್ ಗಿರಾಕಿ. ಆದ್ದರಿಂದ ಹಾಗು ಹೀಗೂ ಮಕ್ಕಳ ಮಧ್ಯಸ್ಥಿಕೆಯಿಂದ ಅವಳಿಗೆ ಕಿಚನ್ ಜೊತೆ ಬೆಡ್ ರೂಮ್ ಗೂ ಎಂಟ್ರಿ ಬಂದ್ ಮಾಡಬೇಕು ಅನ್ನೋ ಜಡ್ಜ್ ಮೆಂಟ್ ಜೊತೆ ವರ್ಲ್ಡ್ ವಾರ್ ಕೊನೆಗೊಂಡಿತು.... ಇಷ್ಟೆಲ್ಲಾ ಆದ ಮೇಲೆ ಸಖಿಗೂ ನನ್ನ ಹೆಂಡತಿಗೂ ಅಷ್ಟಕ್ಕಷ್ಟೇ. ನಾನು ಎದುರಿಗೆ ಇದ್ದಾಗ ಚೆನ್ನಾಗೇ ಇದ್ರೂ ನಾನಿಲ್ಲದಾಗ ಇಬ್ಬರ ನಡುವೆ ಸಿಟ್ಟು ಹೊಗೆಯಾಡುತ್ತ ಇತ್ತು. ನನ್ನ ಮಡಡಿ ಹೇಳಿದ instructions ಅನ್ನು ಸಖಿ ಗಾಳಿಗೆ ತೂರೋದು, ನನ್ನ ಮಡದಿ ಸುಮ್ ಸುಮ್ನೆ ಸಖಿಯ Reset ಬಟನ್ ಒತ್ತೋದು ಇದು ನಡೆದೇ ಇತ್ತು. ನಾನು ಇದರಿಂದ ಒಂತರ ಮಜಾ ತಗೋತಿದ್ದೆ. ಆಗಾಗ ಯಾವುದೊ ಚಲನಚಿತ್ರದ "ಇಬ್ಬರು ಹೆಂಡಿರ ಮುದ್ದಿನ ಗಂಡ" ಅನ್ನೋ ಡೈಲಾಗು ನೆನಪಿಗೆ ಬಂದು ನಗುತ್ತಿದ್ದೆ. ಇವತ್ತು ಮಾತ್ರ ಈ ಸೇಡಿನಾಟ ಕುತ್ತಿಗೆಗೆ ಬಂದಂಗಾಯ್ತು....
ಅಂದ ಹಾಗೆ ಈ ಸ್ಮಾರ್ಟ್ ಅಸಿಸ್ಟೆಂಟ್ ಗೆ ಯಾಕೆ ಯಾವಾಗ್ಲೂ ಹುಡುಗೀರ ಹೆಸರು (ಸಿರಿ, ಅಲೆಕ್ಸಾ.... ಇತ್ಯಾದಿ) ಇಡುತ್ತಾರೆ ...? ಅದೂ ಸಾಲದು ಎಂಬಂತೆ ಅದರ ತಲೆಯೊಳಗೆ ಹುಡುಗೀರ ಬಾವನೆಗಳನ್ನು ಯಾಕೆ ಹಾಕ್ತಾರೋ? ನಿಜವಾಗಿ ನೋಡಿದ್ರೆ ಅದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಅಸಿಸ್ಟೆಂಟ್ ಆಗಿರಬೇಕು ಅಲ್ವಾ..?. ಹಾಗಂದ್ರೆ ಒಂತರಾ Neutral Character ಇರಬೇಕು ಅಲ್ವಾ. Neutral ಅಂದರೆ ಗಂಡು ಅಲ್ಲ ಹೆಣ್ಣು ಅಲ್ಲ... ಅಂದರೆ ಮಂಗಳಮುಖಿಯರ ಭಾವನೆ... ....ಒಹ್ ಈಗ ಗೊತ್ತಾಯ್ತು ಕಂಪನಿಯವರ ಕಷ್ಟ......
ಅದೇನೇ ಇರ್ಲಿ ಮೊದ್ಲು ಈ ಸಖೀನ ಸರಿ ಮಾಡ್ಬೇಕು ಇಲ್ಲಾಂದ್ರೆ ಮುಂದೆ ಇನ್ನೇನು ಅವಾಂತರಗಳನ್ನು ಮಾಡ್ತಾಳೋ. ಒಂದು ಪಕ್ಷ ಹೀಗೇನೇ ಮುಂದುವರಿದರೆ ಇದನ್ನು OLX ಅಲ್ಲಿ ಹಾಕೋದೇ ಸರಿ. ಏನಕ್ಕೂ ಇರ್ಲಿ ಅಂತ ಸಖಿಯ Website ಗೆ ಹೋಗಿ ಏನಾದ್ರೂ Update ಇದೆಯಾ ಅಂತ Website ಓಪನ್ ಮಾಡಿದೆ. ನೋಡಿದ್ರೆ ಒಂದು ವಾರ ಮುಂಚೆನೇ ಒಂದು Update ಪುಶ್ ಆಗಿದೆ. Update ಏನಪ್ಪಾ ಅಂತ ನೋಡಿದ್ರೇ "The new version will reduce the sentiments and feelings of Sakhi for a better performance" ಅಂತ ಇದೆ. ಈ JIO ದವರು ಜನರಿಗೆ ಫ್ರೀ ಇಂಟರ್ನೆಟ್ ಹುಚ್ಚು ಹಿಡಿಸಿ ಈಗ ರೇಟು ಜಾಸ್ತಿ ಮಾಡಿರೋದ್ರಿಂದ Data ಉಳಿಸಲು ನಾನು ಸಖಿಯ ಸಾಫ್ಟ್ ವೇರ್ Auto Update ಆಫ್ ಇಟ್ಟಿದ್ದೆ. ಇರಲಿ ಹೊಸ ಸಾಫ್ಟ್ ವೇರ್ ಏನು ಮಾಡತ್ತೆ ನೋಡೋಣ ಅಂತ Update ಅಂತ ಕೊಟ್ಟೆ. Update ಆದ ಕೂಡ್ಲೇ ಸಖಿ ಒಮ್ಮೆ ಕೂತುಕೊಂಡು ಎದ್ದಳು (ಅದು ಅವಳು Restart ಆಗೋ ರೀತಿ... ) ಆಮೇಲೆ ಹಾಗೆ ನಡೆದುಕೊಂಡು ಹೋಗಿ Charging dock ಗೆ ಹೋಗಿ ಕೂತಳು. ಅಷ್ಟರಲ್ಲೇ ತವರಿಂದ ನನ್ನ ಮಡದಿಯ ಫೋನ್ ಬಂತು. ಮೊದಲೆಲ್ಲ ನನ್ನ ಗಮನಕ್ಕೆ ಬರದಿದ್ದರೆ ಅವಳ ಕರೆಯನ್ನು ಹಾಗೇನೇ ಕಟ್ ಮಾಡ್ತಾ ಇದ್ಲು ಸಖಿ. ಆದರೆ ಇವತ್ತು ಸಖಿ ನನ್ನ ಫೋನ್ ತಗೊಂಡು ಬಂದು ನನ್ನ ಕೈಯ್ಯಲಿಟ್ಟಳು, ಹಾಗೇನೇ ಒಂದು ನಗೆ ಚೆಲ್ಲಿದಳು. ಆದರೆ ಅವಳ ನಡೆ ಯಾಕೋ ಮುಂಚಿನಷ್ಟು ಮಾಂತ್ರಿಕವಾಗಿರದೆ ಯಾಂತ್ರಿಕವಾಗಿತ್ತು!!!!!! ನಗೆಯು ಕೂಡ...... ಅಂದ್ರೆ ಇನ್ನು ಮುಂದೆ ಸಖಿ ಸುಧಾರಿಸಬಹುದೇನೋ ..... ಕಾದು ನೋಡೋಣ...
Saturday, April 28, 2018
ವಾಸ್ತವ್ಯ(ವ)
ಬೆಳ್ಳಂಬೆಳಗ್ಗೆ ಕೋಳಿಯ ಕೂಗು ದ್ಯಾವಮ್ಮನನ್ನು ಎಬ್ಬಿಸಿತ್ತು. ಜೀವಕ್ಕೆ ಇನ್ನೂ ನಿದ್ದೆ ಬೇಕೆನಿಸಿದ್ರು ಆಕೆ ಮಾಡುವಂತಿರಲಿಲ್ಲ. ಯಾಕಂದ್ರೆ ದಿನವಿಡೀ ಯಂತ್ರದಂತೆ ಕೆಲಸ ಮಾಡಿದ್ರೆ ಮಾತ್ರ ಆಕೆ ಮೂರು ಹೊತ್ತು ಉಣ್ಣಬಹುದಿತ್ತು. . ಒಂದು ಮುರುಕಲು ಗುಡಿಸಲು, 2 ಬಡಕಲು ದನ, ಹತ್ತಾರು ಮಲ್ಲಿಗೆ ಗಿಡ, ನಾಲ್ಕೈದು ಕೋಳಿಗಳು ಇವಿಷ್ಟೇ ಆಕೆಯ ಆಸ್ತಿ. ಆಕೆಯೇನಾದರೂ ಗೊಣಗಾಡುತ್ತಿದ್ದರೆ ಹಟ್ಟಿಯಲ್ಲಿ ಅಂಬಾ ಅನ್ನೋ ದನದ ಕೂಗು ಬಿಟ್ಟರೆ ಆ ಮನೆ ಹಾದಿಯಲ್ಲಿ ಅಪ್ಪಿ ತಪ್ಪಿನೂ ಯಾರು ಸುಳಿಯುತ್ತಿರಲಿಲ್ಲ. ಮುಳ್ಳಿನ ಪೊದೆಗಳು, ಚೂಪಾದ ಕಲ್ಲುಗಳಿಂದ ತುಂಬಿದ ಕಾಲುದಾರಿ ಹಿಡಿದು ಆ ಮನೆಗೆ ಬರೋ ಅಗತ್ಯ ಕೂಡ ಯಾರಿಗೂ ಇರಲಿಲ್ಲ. ಬೆಳಗ್ಗೆ ನಸುಕಿನಲ್ಲೆದ್ದು ಹೂ ಕಿತ್ತು, ಹಾರ ಪೋಣಿಸಿ, ಹಟ್ಟಿಗೆ ಹೋಗಿ ಹಾಲು ಕರೆದು, ಅವಕ್ಕೆ ನೀರಿಟ್ಟು, ಆಮೇಲೆ ದನಗಳನ್ನು ಕಾಡಿನ ಪಕ್ಕದ್ಲಲಿರೋ ಬಯಲಿಗೆ ಬಿಟ್ಟು ಬರೋವಷ್ಟರಲ್ಲಿ ಗಂಟೆ ಎಂಟಾಗಿರುತ್ತಿತ್ತು. ನುಜ್ಜು ಗಜ್ಜಾಗಿರೋ ಅಲುಮೀನಿಯಂ ಕ್ಯಾನಿನಲ್ಲಿ ಹಾಲು ತುಂಬಿ, ಕಟ್ಟಿರೋ ಹಾರಗಳನ್ನು ಚೀಲದಲ್ಲಿ ತುರುಕಿ ಪೇಟೆಯತ್ತ ಬಾರವಾದ ಹೆಜ್ಜೆಗಳನ್ನಿಟ್ಟು ಪೇಟೆ ಸೇರೋವಷ್ಟರಲ್ಲಿ ಸೂರ್ಯ ನೆತ್ತಿ ಮೇಲಿರುತ್ತಿದ್ದ. ಹಾಲು ಡೈರಿಗೆ ಕೊಟ್ಟು ಪೇಟೆಯ ಸಂತೆಯ ಬದಿಯಲ್ಲಿ ಮರದ ಕೆಳಗೆ ಹೂ ಮಾರಲು ಕೂತು ಬಿಡುತ್ತಿದ್ದಳು. ಕೇರಿಯ ಕೆಲ ಮನೆಗಳನ್ನು ಬಿಟ್ಟರೆ ಹೂ ಕೊಳ್ಳಲು ಅವಳ ಹತ್ರ ಯಾರು ಬರುತ್ತಿರಲಿಲ್ಲ, ಕಾರಣ ಇಷ್ಟೇ ಆಕೆ ಹಿಂದುಳಿದ ಜಾತಿಗೆ ಸೇರಿದವಳಾಗಿದ್ದಳು. ಮೇಲ್ಜಾತಿಯ ಜನ ಆಕೆಯ ಮುಖವನ್ನೇ ನೋಡುತ್ತಿರಲಿಲ್ಲ ಇನ್ನು ಆಕೆಯ ಹಾರಗಳನ್ನು ಅದ್ಹೇಗೆ ಕೊಂಡಾರು? ಪುಣ್ಯಕ್ಕೆ ಡೈರಿಯಲ್ಲಿ ಪರಿಸ್ಥಿತಿ ಹಾಗೇನು ಇರಲಿಲ್ಲ. ಸರಕಾರೀ ಸಂಸ್ಥೆ ಆಗಿದ್ದರಿಂದ ಅಲ್ಲಿ ಜಾತಿ ಮೇಲಾಟವೇನೋ ಅಷ್ಟಿರಲಿಲ್ಲ. ಆದರೂ ದ್ಯಾವಮ್ಮನಿಗೆ ಅದರ ಒಳ ಹೋಗಲು ಭಯ. ಅಪ್ಪಿ ತಪ್ಪಿ ಮೇಲ್ಜಾತಿಯವರೇನಾದರು ನಾಳೆಯಿಂದ ಇಲ್ಲಿಗೆ ನೀನು ಬರಬೇಡ ಅಂದರೆ? ಅದಕ್ಕೆ ಆಕೆ ತಡವಾಗಿ ಬರುತ್ತಿದ್ದಿದ್ದು. ಯಾಕಂದ್ರೆ ಆ ಸಮಯಕ್ಕೆ ಅಲ್ಲಿ ಡೈರಿಯ ಮ್ಯಾನೇಜರ್ ಮೂರ್ತಿ ಬಿಟ್ಟರೆ ಯಾರು ಇರುತ್ತಿರಲಿಲ್ಲ. ಆದರೆ ಡೈರಿಯ ಹಾಲಿನ ಕಲೆಕ್ಷನ್ ವಾಹನ ಸಮಯಕ್ಕ್ಕೆ ಸರಿಯಾಗಿ ಬರುತ್ತಿದ್ದರಿಂದ ಎಷ್ಟೋ ಸಲ ತಡವಾಗಿ ದ್ಯಾವಮ್ಮ ಹಾಲು ತಗೊಂಡು ವಾಪಸ್ ಹೋಗಿದ್ದೂ ಉಂಟು. ಆಕೆಗೋ ಯಾವಾಗಲೂ ಒಂದು ಪ್ರಶ್ನೆ ಕಾಡುತಿತ್ತು. ನಾನು ತರೋ ಹಾಲನ್ನು ಬೇರೇನೇ ಇಡ್ತಾರೋ ಅಥವಾ ಎಲ್ಲ ಒಟ್ಟು ಸೇರಿಸ್ತಾರೋ ಅಂತ. ನನ್ನ ಹತ್ತಿರಾನೆ ಸುಳಿಯದವರು ನಾನು ತಂದಿರೋ ಹಾಲನ್ನು ಹೇಗೆ ಉಪಯೋಗಿಸ್ತಾರೆ? ಅದಕ್ಕೆ ಗರಿಕೆ ಅಥವಾ ಗಂಜಲ ಏನಾದ್ರು ಪ್ರೋಕ್ಷಣೆ ಮಾಡಿನೋ ಅಥವಾ ಅದನ್ನು ಕುದಿಸಿನೋ ಬಳಸಬಹುದೇನೋ. ಪ್ರಾಯಶ ಆಗ ಹಾಲಿಗಂಟಿಕೊಂಡ ಜಾತಿಯ ಶಾಪ ಬಿಟ್ಟು ಹೋಗಬಹುದು ಅಂದ್ಕೋತಾ ಇದ್ಲು ಮನಸ್ಸಲ್ಲಿ....
ಅವತ್ತು ಡೈರಿಯಿಂದ ಹೊರ ಬಂದ ಮೂರ್ತಿಗೆ ಅಲ್ಲೇ ಕುಳಿತಿದ್ದ ದ್ಯಾವಮ್ಮ ಕಾಣಿಸಿದಳು. ಜಾತಿಯಲ್ಲಿ ಬ್ರಾಹ್ಮಣನಾದರೋ ಅವನಿಗೆ ಆ ಮುದುಕಿಯ ಮೇಲೆ ಅದೇನೋ ಕನಿಕರ. ಪೇಟೆಯಲ್ಲಿ ದ್ಯಾವಮ್ಮನನ್ನು ಪ್ರೀತಿಯಿಂದ ಮಾತಾಡಿಸೋ ಬೆರಳೆಣಿಕೆ ಜನರಲ್ಲಿ ಅವನು ಒಬ್ಬ. ಡೈರಿಯಲ್ಲಿ ಹಲವಾರು ಜನರೊಂದಿಗೆ ಅವನು ವ್ಯವಹರಿಸುತ್ತಿದ್ದರಿಂದ ಚುನಾವಣೆ ಸಮಯದಲ್ಲಿ ಒಂದಿನ್ನೂರು ಓಟುಗಳ ಮೇಲೆ ಅವನ ಹಿಡಿತವಿತ್ತು. ಅದಕ್ಕೆ ರಾಜಕೀಯ ಪಕ್ಷಗಳ ಜೊತೆ ಅವನ ಒಡನಾಟವು ಚೆನ್ನಾಗಿತ್ತು. ಅವಳನ್ನು ಅಲ್ಲಿ ನೋಡಿದ ಕೂಡಲೇ ಅವನಿಗೆ ಅವಳು ಅಲ್ಲಿ ಕೂತಿರೋ ಕಾರಣ ನೆನಪಾಯಿತು. ದ್ಯಾವಮ್ಮನ ಹಾಲಿನ ಸರಕಾರೀ ಪ್ರೋತ್ಸಾಹ ಧನ ಬರಬೇಕಿದ್ದುದು ಬಾಕಿ ಇತ್ತು. ಅದೇನಾದ್ರು ಬಂದ್ರೆ ಕೊಟ್ಟಿಗೆ ಮಾಡಿಗೆ ಒಂದೆರಡು ಶೀಟ್ ಹಾಕಿಸಬೇಕೆಂದು ಅಂದ್ಕೊಂಡಿದ್ಲು. ಮಳೆಗಾಲದಲ್ಲಿ ಮಾಡು ಸೋರಿ ಹಸುಗಳು ನೀರಿಂದ ತೋಯ್ದು ಹೋಗ್ತಾ ಇದ್ವು. ದ್ಯಾವಮ್ಮನ್ನ ನೋಡಿದವನೇ ಮೂರ್ತಿಯ ಮನಸ್ಸಿನಲ್ಲೇನೋ ಹೊಳೆಯಿತು. ಆಡಳಿತ ಪಕ್ಷದ ಶಾಸಕರೊಬ್ಬರು ಗ್ರಾಮ ವಾಸ್ತವ್ಯ ಹೂಡೋ ಕಾರ್ಯಕ್ರಮ ಶುರು ಮಾಡಿದ್ದಾರೆ, ಅದಕ್ಕೆ ಯಾರಾದರೂ ಬಡವರ ಮನೆ ತೋರಿಸೆಂದು ಚಿಗುರು ಮೀಸೆಯ ಕಾರ್ಯಕರ್ತನೊಬ್ಬ ಹೇಳಿದ್ದ. ಹಿಂದುಳಿದ ಜಾತಿಗೆ ಸೇರಿದ ಮನೆನೋ, ಗುಡಿಸಲೋ ಇದ್ರೆ ಇನ್ನೂ ಒಳ್ಳೆಯದೆಂದು ಬೇರೆ ಹೇಳಿದ್ದ. ದ್ಯಾವಮ್ಮನನ್ನು ನೋಡಿದ್ದೇ ಮೂರ್ತಿಗೆ ಇವಳ ಮನೆಯೇ ಸೂಕ್ತ ಎಂದೆನಿಸಿತ್ತು. ದ್ಯಾವಮ್ಮನಿಗೆ ವಿಷಯ ತಿಳಿಸುತ್ತಲೇ ನೀನು ಒಪ್ಪಿಕೊಂಡ್ರೆ ಒಳ್ಳೆಯದು, ಸ್ವಲ್ಪ ಕಾಸು ಕೊಟ್ಟರೂ ಕೊಡಬಹುದು, ಅದೂ ಅಲ್ದೆ ನೀನು ಇದರಲ್ಲಿ ಕಳೆದುಕೊಳ್ಳೋದು ಏನೂ ಇಲ್ಲ ಅಂದ. ದ್ಯಾವಮ್ಮನಿಗೋ ಇದು ಸುತಾರಾಂ ಇಷ್ಟ ಇರಲಿಲ್ಲ. ದೊಡ್ಡ ಮನುಷ್ಯರು ತನ್ನ ಗುಡಿಸಲಲ್ಲಿ ಬಂದು ಒಂದು ದಿನ ವಾಸ್ತವ್ಯ ಹೂಡ್ತಾರೆ ಅಂದ್ರೆ ಯಾಕೋ ಆಕೆಗೆ ಭಯ. ಅದೂ ಹೋಗಿ ಹೋಗಿ ಗುಡಿಸಲಲ್ಲಿ ಯಾಕೆ ಇರ್ಬೇಕು? ಗ್ರಾಮದ ಗೌಡರ ಮನೆ ರಾಜ ಬಂಗಲೆಯಂತಿದೆ, ಅಲ್ಲಿ ಯಾಕಿರಬಾರದು? ಈ ವೋಟುಗಳು, ರಾಜಕೀಯ ಲೆಕ್ಕಾಚಾರಗಳು ಆಕೆಗೆ ತಿಳಿದೇ ಇರಲಿಲ್ಲ. ಆಕೆಯ ಲೆಕ್ಕಾಚಾರ ಏನಿದ್ರೂ ಎರಡು ದನ, ನಾಲ್ಕು ಕೋಳಿಗಳಿಗಿಂತ ಮೇಲೆ ಯಾವತ್ತೂ ಹೋಗೇ ಇರಲಿಲ್ಲ. ತಾನೇನಾದ್ರು ಒಪ್ಪಿಲ್ಲ ಅಂದ್ರೆ ನಾಳೆಯಿಂದ ಹಾಲು ತಗೋಳೋದನ್ನು ನಿಲ್ಲಿಸುತ್ತಾರೇನೋ ಅಂದ್ಕೊಂಡು ಮೂರ್ತಿಗೆ ಒಪ್ಪಿಗೆ ಸೂಚಿಸಿ ಭಾರವಾದ ಮನಸ್ಸಿಂದ ಮನೆ ಕಡೆ ಹೆಜ್ಜೆ ಹಾಕಿದಳು. ಸಂಜೆಯಾಗುತ್ತಿದ್ದಂತೆ ದ್ಯಾವಮ್ಮನ ಮನೆಗೆ ನಾಲ್ಕೈದು ಆಳುಗಳು ಬಂದರು. ಹೂವಿನ ಗಿಡ ಕಿತ್ತು ಹಾಕಲಾರಂಭಿಸಿದರು. ದ್ಯಾವಮ್ಮ ಕೇಳಿದರೆ ಅಂಗಳ ಸಣ್ಣದಾಯಿತು ಸ್ವಲ್ಪ ದೊಡ್ಡದು ಮಾಡೋಕೆ ಹೇಳಿದರೆ ಸಾಹೇಬ್ರು, ಕಾಸು ಕೊಡುತ್ತಾರಂತೆ ಆಮೇಲೆ ಅಂದ್ರು. ಮಟ್ಟವಾದ ಆ ಜಾಗದಲ್ಲಿ ಬಣ್ಣ ಬಣ್ಣದ ಹೂವಿನ ಕುಂಡಗಳು ಬಂದು ನಿಂತವು. ಗೋಡೆಗೆ ಬಣ್ಣ ಬಳೆಯಲು ಹೇಳಿದ್ದಾರೆ ಅಂದ್ಕೊಂಡು ಮೂರು ಜನ ಬಂದರು. ದ್ಯಾವಮ್ಮ ದನಗಳನ್ನು ಹಟ್ಟಿಗೆ ಹೊಡೆದುಕೊಂಡು ಬರೋವಷ್ಟರಲ್ಲಿ ಅಂಗಳದಲ್ಲಿ ಕರೆಂಟ್ ಕಂಬವೊಂದು ಬಂದಿತ್ತು. ಲೈನ್ ಮ್ಯಾನ್ ಶೇಷಪ್ಪ ಇದು ಭಾಗ್ಯಜ್ಯೋತಿ ಯೋಜನೆಯಡಿ ಕೊಡುತ್ತಿರೋ ಕನೆಕ್ಷನ್ ಇದಕ್ಕೆ ಬಿಲ್ ಪಾವತಿಯ ಅವಶ್ಯಕತೆ ಇಲ್ಲ, ನಾಳೆ ನಿಮಗೆ ಹಣ ಸಿಕ್ಕಿದ ನಂತರ ನಮ್ಮನ್ನು ಸ್ವಲ್ಪ ನೋಡಿಕೊಳ್ಳಿ ಅಂತಾ ಹಲ್ಕಿರಿದ. ರಾತ್ರೆ ಯಾರೋ ಬಂದು ಲೈಟು, ಫ್ಯಾನು ಎಲ್ಲ ಹಾಕಿ ಹೋದರು. ಮೇಲೆ ತೂಗು ಹಾಕಿರೋ ಫ್ಯಾನು ತಲೆ ಮೇಲೆ ಬೀಳಬಹುದು ಅನ್ನೋ ಭಯದಿಂದ ರಾತ್ರೆ ದ್ಯಾವಮ್ಮ ಹೊರಗಡೆ ಮಲಗಿದಳು. ತನ್ನದೇ ಮನೆಯಲ್ಲಿ ತನ್ನ ಹಿಡಿತವೇ ಇಲ್ಲದೆ ನಡೆಯೋ ಕೆಲಸಗಳಿಗೆ ಆಕೆ ಮೂಕ ಪ್ರೇಕ್ಷಕಿಯಾಗಿದ್ದಳು , ತನ್ನದೇ ಮನೆಯಲ್ಲಿ ಆಕೆ ಪರಕೀಯಳಾಗಿದ್ದಳು !!!!
ಮಾರನೇ ದಿನ ಬೆಳಗ್ಗೆನೇ ಗೌಡ್ರು ಬಂದರು. ಮನೆ ಒಳಗೆ ನೋಡಿದವರೇ ಆಳು ತಿಮ್ಮನ ಕರೆದು ನೋಡಪ್ಪ ಇಲ್ಲಿ ಪಾತ್ರಗೆಳೇನು ಇಲ್ಲ, ಮನೆಗೆ ಹೋಗಿ ಸ್ವಲ್ಪ ಪಾತ್ರೆ ಪಗಡಿ, ಸಾಹೇಬ್ರಿಗೆ ಮಲಗೋಕೆ ಮಂಚ, ಹೊದೆಯೋಕೆ ಬೆಡ್ ಶೀಟುಗಳು ಎಲ್ಲ ತಂದು ಇಲ್ಲಿಡು, ಸಾಹೇಬ್ರು ಬಂದು ಹೋದ ಮೇಲೆ ವಾಪಸ್ ತೆಗೆದುಕೊಂಡು ಹೋದ್ರಾಯ್ತು ಅಂದ್ರು. ಹಾಗೆ ದ್ಯಾವಮ್ಮನ ಕಡೆಗೆ ತಿರುಗಿದವರು ನೋಡು ಸಾಹೆಬ್ರಿಗೆ ಮುದ್ದೆ, ಕೋಳಿ ಸಾರು, ಅನ್ನ ಪಲ್ಯ ಎಲ್ಲ ಮಾಡಿ ಹಾಕು. ಹೇಗಿದ್ರು ಹಣ ಸಿಗುತ್ತೆ ಅಂದ್ರು. ಹಣ ಕೊಡೋರು ಯಾರು, ಯಾಕೆ ಕೊಡ್ತಾರೆ ಅಂತ ಮಾತ್ರ ದ್ಯಾವಮ್ಮಗೆ ಗೊತ್ತಿರಲಿಲ್ಲ ಕೇಳೋ ಧೈರ್ಯವೂ ಇರಲಿಲ್ಲ. ಸ್ವಲ್ಪ ಹೊತ್ತಿಗೆ ತಿಮ್ಮ ಬಂದ. ಪಾತ್ರೆ, ಚಮಚಗಳು, ಮಂಚ, ಹೊದಿಕೆ ಎಲ್ಲ ಬಂತು . ಎಲ್ಲವನ್ನು ಲೆಕ್ಕ ಮಾಡಿ ತಿಮ್ಮನ ಕೈಲಿ ಹೇಳಿ ಕಳಿಸಿದ್ದರು ಗೌಡತಿ. ಸಂಜೆಯಷ್ಟರಲ್ಲಿ ಶಾಸಕರು ಬಂದೆ ಬಿಟ್ಟಿದ್ದರು. ದೊಡ್ಡವರು ಬರ್ತಾರೆ ಅಂತ ದ್ಯಾವಮ್ಮ ತನ್ನ ಪೆಟ್ಟಿಗೆಯಿಂದ ಸೀರೆಯೊಂದನ್ನು ತೆಗೆದು ಉಟ್ಟಿದ್ದಳು. ಅವಳಲ್ಲಿ ತೂತಿಲ್ಲದೆ ಇದ್ದ ಸೀರೆಯೆಂದರೆ ಅದೊಂದೇ. ಶಾಸಕರ ಜೊತೆ ಪತ್ರಕರ್ತರು ಕಾರ್ಯಕರ್ತರು ಊರಿನ ಮಹಾಜನರ ದಂಡೇ ಬಂದಿತ್ತು. ಹೊಸದಾಗಿ ಗೌಡ್ರ ಮನೆಯಿಂದ ತಂದ ಕುರ್ಚಿಗಳ ಮೇಲೆ ಕುಳಿತು ಚರ್ಚೆ ಸಾಗಿತ್ತು. ಊರಿಗೆ ಹೊಸ ರಸ್ತೆ, ಒಂದು ಆಸ್ಪತ್ರೆ, ಬಸ್ ವ್ಯವಸ್ಥೆಗಳು ಬೇಕೆಂದು ಗೌಡ್ರು ಕೇಳಿಕೊಂಡ್ರು. ರಾತ್ರೆ ಆಗಿತ್ತು ಸರಿ ಇನ್ನು ಊಟ ಬಡಿಸು ಅಂದ್ರು ಗೌಡ್ರು. ದ್ಯಾವಮ್ಮ ಇನ್ನೇನ್ನು ಬಡಿಸಬೇಕು ಅನ್ನೋವಷ್ಟರಲ್ಲಿ ಯಾರೋ ಆ ಮುದುಕಿಗೆ ಹಳೇ ಸೀರೆ ಹಾಕೋಳಕ್ಕೆ ಹೇಳಿ, ಆಗ್ಲೇ ಬಡವರ ಮನೆ ವಾಸ್ತವ್ಯ ಅನ್ನಿಸೋದು, ಇಲ್ಲ ಅಂದ್ರೆ ಎಲ್ಲ ನಾಟಕ ಅಂತಾರೆ ವಿರೋಧ ಪಕ್ಷದವರು ಅಂದ್ರು. ಸರಿ ದ್ಯಾವಮ್ಮ ಹರಿದಿರೋ ಸೀರೆ ಉಟ್ಟುಕೊಂಡು ಬಡಿಸಿದಳು. ಸಾಹೇಬರ ಊಟ ಆಯ್ತು. ಆಮೇಲೆ ಫೋಟೋ ಬೇರೆ ತೆಗೆದಾಯ್ತು. ಎಲ್ಲದರಲ್ಲೂ ಹರಕು ಸೀರೆ ದ್ಯಾವಮ್ಮ!!!... ಸರಿ ಎಲ್ಲ ಮುಗಿದು ಸಾಹೇಬರು ಮಲಗಿದರು. ಬೆಳಗಿನ ನಿತ್ಯಕರ್ಮಗಳಿಗೆ ಆ ಮನೆಯಲ್ಲಿ ಅನುಕೂಲವಿಲ್ಲದ್ದರಿಂದ ಶಾಸಕರು ಗೌಡರ ಮನೆಗೆ ಹೋಗಿ ಎಲ್ಲ ಮುಗಿಸಿ ಉಪ್ಪಿಟ್ಟು ತಿಂದು ಟೀ ಕುಡಿದು ತೇಗಿದರು. ಅಷ್ಟು ಮುಗಿಸಿ ದ್ಯಾವಮ್ಮನ ಮನೆಗೆ ಬರುತ್ತಲೇ ಸಂದರ್ಶನದ ಸರದಿ. ಇಷ್ಟು ರುಚಿಕರ ಊಟ ನಾನು ತಿಂದೆ ಇರಲಿಲ್ಲ, ಎಷ್ಟೋ ದಿನಗಳ ಬಳಿಕ ನೆಮ್ಮದಿಯ ನಿದ್ದೆ ಮಾಡಿದೆ ಅಂದರು. ಈ ಊರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೀಟಿಂಗ್ ಅಲ್ಲಿ ಚರ್ಚಿಸುವುದಾಗಿ ಹೇಳಿದರು. ಟೀವಿಯಲ್ಲಿ ಅಂತೂ ಗೌರಮ್ಮ ನ ಬಗ್ಗೆನೇ ಮಾತುಕತೆ. ಅವಳ ಮನೆ, ಹಸುಗಳು, ಅವಳ ದಿನಚರಿ, ಮುಖ್ಯಮಂತ್ರಿ ಎಷ್ಟು ಗಂಟೆಗೆ ಹೋದ್ರು, ಏನು ತಿಂದ್ರು, ಸಾರಿಗೆ ಏನು ಹಾಕಿರಬಹುದು ಅಂತೆಲ್ಲ ಚರ್ಚೆ ನಡೆಯುತ್ತಿತ್ತು. ದ್ಯಾವಮ್ಮನನ್ನು ಸಾಕ್ಷಾತ್ ಅನ್ನಪೂರ್ಣೆಯ ಪ್ರತಿರೂಪ ಅನ್ನೋವಂತೆ ತೋರಿಸಿದ್ದರು. ಸಂದರ್ಶನ ಮುಗಿಯುತ್ತಿದ್ದಂತೆ ಸಾಹೇಬರು ಹೊರಟರು . ದ್ಯಾವಮ್ಮನಿಗೆ ಬಗ್ಗಿ ನಮಸ್ಕರಿಸಿದವರೇ ಚೆಕ್ ಪುಸ್ತಕ ಎತ್ತಿಕೊಂಡು ಅದರಲ್ಲಿ ಹತ್ತು ಸಾವಿರ ಬರೆದರು. ಹೆಸರು ಬರೆಯಬೇಕಿತ್ತು ಎಷ್ಟು ನೆನಪಿಸಿಕೊಂಡರು ಅವರಿಗೆ ಪಕ್ಕದಲ್ಲೇ ಇದ್ದ ದ್ಯಾವಮ್ಮನ ಹೆಸರು ತಲೆಗೆ ಹೊಳೆಯಲೇ ಇಲ್ಲ. ಅಲ್ಲೇ ಇದ್ದ ಕಾರ್ಯಕರ್ತ ನ ಕರೆದು ಕೇಳಿದರು ಈಕೆ ಹೆಸರೇನು ಚೆಕ್ ಬರೆಯಬೇಕು ಮಾರಾಯ ಅಂದರು. ಸಾರ್ ಅವ್ಳಿಗೆ ಅಕೌಂಟ್ ಎಲ್ಲಿದೆ ನನ್ನ ಹೆಸರಿಗೆ ಬರೆಯಿರಿ ನಾನೇ ಡ್ರಾ ಮಾಡಿ ಆಕೆಗೆ ತಲುಪಿಸ್ತೀನಿ ಅಂದ ಆ ಕಾರ್ಯಕರ್ತ. ಚೆಕ್ ವಿತರಿಸಿದ ಫೋಟೋನೂ ಬಂತು. ಅದಾದ ಕೂಡ್ಲೇ ಕಾರ್ಯಕರ್ತ ಅವಳ ಕೈಯಿಂದ ಅದನ್ನ ತಗೊಂಡು ನಡೆದ. ಸಾಹೇಬ್ರು ಹೊರಟರು... ಅವರ ಹಿಂದೆ ಜನರ ದಂಡು ಹೊರಟಿತು. ದ್ಯಾವಮ್ಮನ ಮನೆ ಖಾಲಿಯಾಯಿತು....
ಅವರು ಹೋಗಿ ಸ್ವಲ್ಪ ಹೊತ್ತಿಗೆ ಗೌಡರ ಮನೆಯಿಂದ ತಿಮ್ಮ ಬಂದವನೇ ಮಂಚ ಬೆಡ್ ಶೀಟುಗಳೆಲ್ಲವನ್ನು ತಂದು ಹೊರಗಿಟ್ಟ. ಪಾತ್ರೆ ಜೋಡಿಸುತ್ತಿದ್ದಂತೆ ಲೆಕ್ಕಕ್ಕಿಂತ ಒಂದು ಪಾತ್ರೆ ಕಡಿಮೆ ಇದ್ದಿದ್ದು ಗಮನಕ್ಕೆ ಬಂತು. ಏನು ಮಾಡೋದು ತಿಳಿಯಲಿಲ್ಲ ಅವನಿಗೆ. ಅಲ್ಲೇ ಇದ್ದ ದ್ಯಾವಮ್ಮನ ಪಾತ್ರೆಗಳಲ್ಲಿ ಚೆನ್ನಾಗಿದ್ದ ಒಂದನ್ನು ಸೇರಿಸಿಕೊಂಡ, ಲೆಕ್ಕ ಸರಿಯಾಯಿಯ್ತು. ಗೌಡತಿಗೆ ಲೆಕ್ಕ ಮಾತ್ರ ಬೇಕು, ಪಾತ್ರೆ ಯಾವುದು ಅನ್ನೋದು ಗೊತ್ತಾಗದು ಅಂದುಕೊಂಡು ಎಲ್ಲವನ್ನು ಹೊತ್ತುಕೊಂಡು ಹೊರಟ. ಆ ಪಾತ್ರಗಳಲ್ಲಿ ಒಂದು ತನ್ನದು ಅಂತ ಗೊತ್ತಿದ್ರು ಹೇಳೋಕೆ ಧೈರ್ಯ ಬರಲಿಲ್ಲ ದ್ಯಾವಮ್ಮನಿಗೆ. ಸ್ವಲ್ಪ ಹೊತ್ತಿಗೆ ಪೈಂಟರ್ ಗಳು ಬಂದು ಪೇಂಟಿಂಗ್ ಖರ್ಚು ಎರಡುವರೆ ಸಾವಿರ ಆಗಿದೆ, ನಿಮ್ಮತ್ರ ತಗೋಳೋಕೆ ಹೇಳಿದ್ದಾರೆ ಅಂದ್ರು.ನನ್ನ ಹತ್ರ ದುಡ್ಡಿಲ್ಲ ಯಾರು ನಂಗೆ ದುಡ್ಡು ಕೊಟ್ಟಿಲ್ಲ ಅಂದ್ಲು, ಆದರೆ ನಂಬೋರ್ಯಾರು? ಚೆಕ್ ತಗೊಂಡ ದ್ಯಾವಮ್ಮನ ಫೋಟೋ ಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಗಿತ್ತು. ಮುದುಕಿ ನಾಟಕ ಅಡ್ತ ಇದಾಳೆ ಕಣೋ, ನಾಳೆ ಇವ್ಳು ಹಣ ಕೊಟ್ಟಿಲ್ಲ ಅಂದ್ರೆ ಕೊಟ್ಟಿಗೆಯಲ್ಲಿರೋ ದನ ತಗೊಂಡು ಹೋಗೋಣ ಅಂತ ಸಿಟ್ಟನಿಂದ ಹೇಳಿ ಹೋದ್ರು. ಮತ್ತೊಬ್ಬ ಬಂದು ಈ ಫ್ಯಾನ್ ನಮ್ ಮನೇದು, ಗೌಡ್ರು ಇಲ್ಲಿ ಹಾಕಕ್ಕೆ ಹೇಳಿದ್ರು, ಈಗ ತಗೊಂಡ್ ಹೋಗ್ತಾ ಇದ್ದೀನಿ ಅಂತ ಹೇಳಿ ಅದರ ಡಬ್ಬ ಸಮೇತ ತಗೊಂಡು ಹೋದ. ಪಾರ್ಟಿ ಆಫೀಸಿಂದ ಬಂದ ಆ ಫ್ಯಾನ್ ಒಳಗೆ ವಾರಂಟಿ ಕಾರ್ಡ್, ಬಿಲ್ಲು ಹಾಗೆ ಇತ್ತು. ಪೈಂಟರ್ ಗೆ ಹಣ ಹೇಗೆ ಹೊಂದಿಸೋದು ಅಂತ ಯೋಚ್ನೆ ಮಾಡ್ತಾ ದ್ಯಾವಮ್ಮ ನನ್ನು ದೊಪ್ಪ್ ಅನ್ನೋ ಸದ್ದು ಎಚ್ಚರಿಸಿತ್ತು. ಅಂಗಳಕ್ಕೆ ಬಂದು ನಿಂತಿದ್ದ ದ್ಯಾವಮ್ಮನ ದನವೊಂದು ಮೈ ಮೇಲೆ ಕೂತಿದ್ದ ನೊಣ ಓಡಿಸಲು ತೋರಣ ಕಟ್ಟಿದ್ದ ಬಿದಿರಿಗೆ ಬೆನ್ನು ಉಜ್ಜಿ ಅದನ್ನು ಬೀಳಿಸಿತ್ತು. ಅದು ನೇರವಾಗಿ ಮನೆಗೆ ಕರೆಂಟ್ ಕೊಟ್ಟಿದ್ದ ತಂತಿಯ ಮೇಲೆ ಬಿದ್ದು ತಂತಿಯನ್ನು ತುಂಡರಿಸಿತ್ತು. ಎರಡು ದಿನಗಿಳಿಂದ ನಿರಂತರವಾಗಿ ಉರಿಯುತ್ತಿದ್ದ ಭಾಗ್ಯಜ್ಯೋತಿ ಅಲ್ಲಿಗೆ ನಿಂತಿತು!. ಅಷ್ಟರಲ್ಲಿ ಹೊತ್ತು ಕಂತಿತ್ತು. ದೀಪ ಹಚ್ಚಿದ ದ್ಯಾವಮ್ಮನಿಗೆ ಅಡಿಗೆ ಮಾಡಲು ಪಾತ್ರೆನೂ ಇರಲಿಲ್ಲ ಅಕ್ಕಿ ಅಂತೂ ಮೊದಲೇ ಮುಗಿದಿತ್ತು. ಡಬ್ಬದ ತಳದಲ್ಲಿದ್ದ ರಾಗಿ ಹಿಟ್ಟನ್ನು ತೆಗೆದು ಹಿಡಿ ಮುರಿದಿದ್ದ ಬಾಣಲಿ ಅಲ್ಲಿ ಬೇಯಿಸಿ ಕುಡಿದಳು. ಆಕೆಗಿದ್ದ ಒಂದೇ ನೆಮ್ಮದಿ ಅಂದ್ರೆ ಆಕೆ ಮಲಗುತ್ತಿದ್ದ ಜಾಗದ ಮೇಲೆ ಫ್ಯಾನ್ ಇರಲಿಲ್ಲ, ಆದ್ದರಿಂದ ಅದು ಕೆಳಗೆ ಬೀಳೋ ಭಯವು ಇರಲಿಲ್ಲ.
ಮರುದಿನ ಬೆಳಗ್ಗೆದ್ದ ದ್ಯಾವಮ್ಮಕೆಲಸದವರು ಕಿತ್ತು ಬಿಸಾಡಿದ್ದ ಹೂ ಗಿಡಗಳಲ್ಲಿ ಹಸಿರಾಗಿದ್ದ ಕೆಲವನ್ನುಆರಿಸಿ ಮತ್ತೆ ಒಪ್ಪವಾಗಿ ನೆಟ್ಟಳು. ಹಾಲು ಕರೆಯುವಾಗ ಡೈರಿಯಲ್ಲಿ ಮೂರ್ತಿ ಹತ್ತಿರ ಸಾಲ ಕೇಳಿ ನೋಡೋಣ ಅಂದುಕೊಂಡಳು. ದನಗಳನ್ನು ಬಯಲಿಗಟ್ಟಿ ಹಾಲು ಹಿಡಿದು ಹೊರಟಳು. ಮೂರ್ತಿ ಇವಳ ದಾರಿಯನ್ನೇ ಕಾಯುತ್ತಿದ್ದಂತಿತ್ತು. ದ್ಯಾವಮ್ಮನನ್ನು ಕಂಡವನೇ ಕಿಸೆಯಿಂದ ೩ ಸಾವಿರ ತೆಗೆದು ಕೈಗಿತ್ತು ನಿನ್ನ ಪ್ರೋತ್ಸಾಹ ಧನ ಪಾಸ್ ಆಗಿದೆ, ಅದೂ ಲಂಚ ಕೊಡದೆ. ಎಲ್ಲ ಸಾಹೇಬರ ಗ್ರಾಮ ವಾಸ್ತವ್ಯದ ಮಹಿಮೆ ಅನ್ನುತ್ತ ಹಲ್ಕಿರಿದ. ದ್ಯಾವಮ್ಮನು ನಕ್ಕಳು, ಆದರೆ ಆ ನಗೆಯ ಹಿಂದಿನ ಮರ್ಮ ಆಕೆಗೆ ಮಾತ್ರ ತಿಳಿದಿತ್ತು. ಹಣ ಪಡೆದು ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟಳು,ದಾರಿಯಲ್ಲಿ ಸಿಕ್ಕಿದ ಪೈಂಟರ್ ಗೆ ಎರಡು ಸಾವಿರ ಕೊಟ್ಟಳು. ಮುದುಕಿ ಸುಮ್ನೆ ನಾಟಕ ಮಾಡಿದ್ಲು ನೋಡು ಈಗ ಹೇಗೆ ಬಂತು ಹಣ ಅಂತ ಗೊಣಗಿದ ಅವ್ನು. ಸಂತೆಯಲ್ಲಿ ಐನೂರು ಕೊಟ್ಟು ಒಂದು ಪಾತ್ರೆ, ದನಗಳಿಗೆ ಹಿಂಡಿ, ಅಕ್ಕಿ ತಗೊಂಡು ಮನೆ ಕಡೆ ಹೆಜ್ಜೆ ಹಾಕಿದ್ಲು ದ್ಯಾವಮ್ಮ. ಪೇಟೆಯಲ್ಲಿನ ಬಾರ್ ಗಿಜಿಗುಡುತ್ತಿತ್ತು ಹತ್ತು ಸಾವಿರ ಕ್ಯಾಶ್ ಮಾಡಿಸಿದ ಪುಣ್ಯಾತ್ಮನೊಬ್ಬ ಮಿತ್ರರಿಗೆ ಪಾರ್ಟಿ ಕೊಡಿಸುತ್ತಿದ್ದ. ....
---------------------------------------ಶ್ರೀ :-)--------------------------------------