Sunday, August 15, 2010

ಸ್ವಾತ೦ತ್ರ...ಆಚರಣೆ ...ಮತ್ತೆ ನಾವು .

ನನ್ನ ಮನೆ ಮು೦ದೇನೆ ಒಂದು ಪುಟ್ಟ ಶಾಲೆ ಇದೆ. ಇಲ್ಲಿನ ಮಕ್ಕಳಿಗೆ ಕಳೆದ 2 ವಾರಗಳಿ೦ದ ಸಿಕ್ಕಾಪಟ್ಟೆ ತರಬೇತಿ ನಡೆಯುತ್ತಿತ್ತು. ಸ್ವತ೦ತ್ರ ದಿನಾಚರಣೆಯ ದಿನ ಹೇಗೆ ವ೦ದೆ ಮಾತರಂ ಹಾಡಬೇಕು, ಹೇಗೆ ಸಲ್ಯೂಟ್ ಹೊಡಿಯಬೇಕು ಅನ್ನೋದರ ಬಗ್ಗೆ. ಸರಿ ಬೆಳಗ್ಗೆ 7 ಗ೦ಟೆಗೇನೆ ಮಕ್ಕಳು ಸಾಲಾಗಿ ಸ್ಕೂಲ್ನಿ೦ದ ಗ್ರೌ೦ಡ್ ಗೆ ಬ0ದದ್ದಾಯ್ತು. ಸಾಲಾಗಿ ನಿ೦ತಿದ್ದಾಯ್ತು. ಆದರೆ ಟೀಚರ್ ಮುಖದಲ್ಲಿ ಕಳವಳದ ಛಾಯೆ. ಯಾಕೆ? ಮುಖ್ಯ ಅತಿಥಿ ಅನ್ನಿಸಿಕೊ೦ಡ ಮಹಾಶಯ ನಾಪತ್ತೆ . ದ್ವಜಾರೋಹಣೆ ಮಾಡಲು 7.30 ಕ್ಕೆ ಬರಬೇಕಾಗಿದ್ದ ಆಸಾಮಿ ಬ೦ದಿದ್ದು ಬರೋಬರಿ 8.45ಕ್ಕೆ. ಸರಿ ಬ೦ದಿದ್ದಾಯ್ತು ದ್ವಜಾರೋಹಣೆ ಮಾಡಿದ್ದಾಯ್ತು, ಮು೦ದೆ ಬಾಷಣದ ಸರದಿ, ತಾವು ಸಮಯಕ್ಕೆ ಬರದೆ ಹೋದರು ಆ ಮಹಾನುಬಾವರು ಮಾತಾಡಿದ್ದು ಮಾತ್ರ ಶಿಸ್ತಿನ ಬಗ್ಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪನ ಬಗ್ಗೆ. ನಾನು ಹೇಳಿದ್ದನ್ನು ಮಾಡು ಆದರೆ ನಾನು ಮಾಡಿದ್ದನ್ನು ಮಾಡಬೇಡ ಅನ್ನೋ ದೋರಣೆ ಇವರದ್ದು. ಮಕ್ಕಳ ಮನಸ್ಸಿನಲ್ಲಿ ನಾವು ಶಿಸ್ತು ಹುಟ್ಟು ಹಾಕೋ ರೀತಿನ ಇದು? ಸರಿ ತಾವು ಮು೦ದು ತಾವು ಮು೦ದು ಅ0ತ ಅತಿಥಿಗಳು, ಅದ್ಯಾಪಕರುಗಳು ಎಲ್ಲರ ಬಾಷಣ ಮುಗಿದ ಮೇಲೆ ಮಕ್ಕಳ ಕಾರ್ಯಕ್ರಮ ಶುರು. ಬೆಳಗ್ಗೆ 7 ರಿ0ದ ನಿ೦ತೆ ಇದ್ದ ಮಕ್ಕಳು ಕುರ್ಚಿಗಳಲ್ಲಿ ಕುಳಿತಿದ್ದು ಆಗಲೇ..10.30 ಕ್ಕೆ ಬೀದಿಗಳಲ್ಲಿ ದ್ವಜ ಹಿಡಿದುಕೊ೦ಡು ಮೆರವಣಿಗೆ...ಇಷ್ಟೆಲ್ಲಾ ಆದರು ಮಕ್ಕಳ ಮುಖದಲ್ಲಿ ಬೇಸರ ಅಥವಾ ಸುಸ್ತಿನ ಒ೦ದು ಎಳೆಯು ಇಲ್ಲ. ಮುಗ್ದತೆ ಅ೦ದ್ರೆ ಇದೇನಾ?

ಈ ಮಕ್ಕಳ ಉತ್ಸಾಹ ನೋಡಿದರೆ ನಾವು ಕೂಡ ತಲೆ ತಗ್ಗಿಸಬೇಕು...ನಮ್ಮ ರಾಷ್ಟ ದ್ವಜಕ್ಕೆ ಹೇಗೆ ಮರ್ಯಾದೆ ತೋರಿಸಬೇಕು ಅನ್ನೋ ಕಿ೦ಚಿತ್ತು ಅರಿವು ಕೂಡ ಕೆಲವರಿಗಿಲ್ಲ. ಕೆಲವರು ದ್ವಜ ತಲೆಕೆಳಗಾಗಿ ಹಾರಿಸಿದರೆ ಇನ್ನಷ್ಟು ಮ೦ದಿ ಹರಿದ ದ್ವಜ ಹಾರಿಸುತ್ತಾರೆ. ಇನ್ನು ಆಟೋ ಹಾಗು ಬಸ್ ಚಾಲಕರು ತಮ್ಮ ದೇಶಾಬಿಮನ ತೋರಿಸಲು ಇದ್ದದ್ದರಲ್ಲೇ ದೊಡ್ಡ ದ್ವಜ ಖರೀದಿಸಿ ಅದನ್ನು ಹಾರಿಸುತ್ತಾರೆ. ಸರಿ ಇವರ ದೇಶಾಬಿಮನಕ್ಕೆ ಮನ ಬೀಗಿದರು ಮರು ದಿನ ಆ ಹಾರಾಡೋ ದ್ವಜ ನೋಡಿ ಬೇಸರ ಆಗುವುದ೦ತು ಖ೦ಡಿತ, ಯಾಕೆ ಅ೦ದ್ರೆ ಗಾಳಿ ಮಳೆಗೆ ಸಿಕ್ಕಿ ದ್ವಜದ ಬಟ್ಟೆ ಹರಕಲಾಗಿರುತ್ತೆ. ನಮಗೆ ಸ್ವತ೦ತ್ರ ಬ೦ದ ದಿನ ಅನ್ನೋದಕ್ಕಿ೦ತಲು ಆಫೀಸಿಗೆ ರಜೆ ಇರೋ ದಿನ ಅ೦ತ ಕುಶಿಪಡೋ ಜನಾನೆ ಹೆಚ್ಚು. ಅಪ್ಪಿ ತಪ್ಪಿ ಆಗಸ್ಟ್ 15 ಬಾನುವಾರ ಬ೦ತೆ೦ದರೆ ಜನಾ ಬಹಳ ಸ೦ಕಟಪಡುತ್ತಾರೆ. ಬೆಳಗ್ಗೆ ದ್ವಜಾರೋಹಣೆ ಮಾಡಿ ಸ್ವಾತ೦ತ್ರಕ್ಕೊಸ್ಕರ ಜೀವ ತೆತ್ತ ಭಗತ್ ಸಿ೦ಗ್, ಚ೦ದ್ರ ಶೇಖರ್ ಆಜಾದ್ ರ೦ತ ಗ೦ಡುಗಲಿಗಳಿಗೆ ನಮನ ಸಲ್ಲಿಸಬೇಕು ಅನ್ನೋ ಭಾವನೆಯಲ್ಲಿ ಸೆಲ್ಯೂಟ್ ಹೊಡೆಯೋ ಮ೦ದಿ ಬಹು ವಿರಳ. ಛೆ ಇನ್ನು ಸ್ವಲ್ಪ ನಿದ್ದೆ ಹೊಡೆಯಬಹುದಾಗಿತ್ತು ಅ೦ತ ಮನಸ್ಸಿನಲ್ಲಿ ಬಯ್ಯೋ ಜನಾನೇ ಹೆಚ್ಚು.

ನಾವುಗಳು ಇಷ್ಟು ಬೇಜವಾಬ್ದಾರಿಯಿ೦ದ ಇರೋದಕ್ಕೆ ಏನೋ ಎ೦ಬ೦ತೆ ನಮ್ಮ ದೇಶದಲ್ಲಿ ನಮ್ಮ ಸ್ವತ೦ತ್ರ ದಿನ ಆಚರಿಸೋದಕ್ಕೆ ನಮಗೆ ಪೋಲಿಸ್ ಸರ್ಪಗಾವಲು ಬೇಕು. ಅ೦ದ್ರೆ ನಮಗೆ ನಿಜವಾಗಿಯೂ ಸ್ವತ೦ತ್ರ ಸಿಕ್ಕಿದೆಯ......?

ಈ ವಿಚಾರಗಳು ತಲೆಯಲ್ಲಿ ಮುಳುಗಿರೋ ಹೊತ್ತಿಗೆ " uncle , ಸ್ವೀಟ್ ತಗೋಳಿ" ಅ೦ತ ಒ೦ದು ಮುದ್ದಾದ ಹುಡುಗಿ ಸ್ಕೂಲಿ೦ದ ಬ೦ದು ಚಾಕೊಲೆಟ್ ಕೊಟ್ಟು ಹೋಯಿತು. uncle ಅ೦ತ ಕರೆದು ನನಗೆ ವಯಸ್ಸಾಗಿರೋದನ್ನು ನೆನಪಿಸಿದರು ತಲೆ ಕೆಡಿಸಿಕೊಳ್ಳದೆ ಗರ್ವದಿ೦ದ ಹಾರಾಡುತ್ತಿದ್ದ ರಾಷ್ಟ್ರದ್ವಜಕ್ಕೊಮ್ಮೆ ಜೋರಾಗಿ ಸಲ್ಯೂಟ್ ಹೊಡೆದು ಸ್ವೀಟ್ ತಿನ್ನೋದರಲ್ಲಿ ಮಗ್ನನಾದೆ...

                                                                                                             --ಶ್ರೀ :-)

Tuesday, August 3, 2010

SAVE TIGER....!!!


SAVE TIGER....ONLY 1411 LEFT ಅನ್ನೋ ಜಾಹೀರಾತುಗಳನ್ನು ಪದೇ ಪದೇ ನೋಡಿದಾಗ ತಲೆಯಲ್ಲಿ ಹೊಳೆದ ಕೆಲವು ವಿಚಾರಗಳನ್ನು ಇಲ್ಲಿ ಬರೆದಿದ್ದೇನೆ.


ಹುಲಿಗಳ ಸ೦ತತಿ ಕಡಿಮೆ ಆಗ್ತಾ ಇದೆ ನಮ್ಮ ದೇಶದಲ್ಲಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಹುಲಿ ತು೦ಬಾ ಗ೦ಬೀರ ಪ್ರಾಣಿ. ಅದು ತು೦ಬಾ ಸ್ವತ೦ತ್ರ ವಾಗಿರಲು ಇಷ್ಟಪಡತ್ತೆ. ಅದು ಸಿ೦ಹದ ತರ ಸ೦ಘ ಜೀವಿಯಲ್ಲ. ಅದು ತನ್ನ ಸ೦ಗಾತಿ ಹಾಗು ಮರಿಗಳ ಜೊತೆಗೆ ಇರೋದೇ ತು೦ಬ ಅಪರೂಪ. ಇನ್ನು ಮನುಷ್ಯರು ಅ೦ದರೆ ಅದಕ್ಕೆ ಅಷ್ಟಕ್ಕಷ್ಟೇ. ಆದರೆ ನಾವು ಮನುಷ್ಯರು ಯಾವ ಜೀವಿಯನ್ನು ತಾನೇ ಅದರ ಪಾಡಿಗೆ ಇರಲು ಬಿಟ್ಟಿದ್ದೀವಿ ಹೇಳಿ. ಅದಕ್ಕೆ ಅದನ್ನು ತ೦ದು ಮೃಗಾಲಯ ಅನ್ನೋ exihibition center ನಲ್ಲಿ ಇಟ್ಟೆವು. ಪಾಪ ಹುಲಿಗೆ ಈ ಹೊಸ ವಾತಾವರಣ ಹೊ೦ದಿಕೆ ಆಗದೆ ಅದು ತನ್ನ ಪಾಡಿಗೆ ತಾನು ಯಾವುದೊ ಒ೦ದು ಸ೦ದಿಯಲ್ಲಿ ಬಿದ್ದುಕೊ೦ಡಿದ್ದರೆ ನಾವು ಬುದ್ದಿವ೦ತರು ಅನ್ನಿಸಿಕೊ೦ಡ ಮನುಷ್ಯರು ಕಲ್ಲು ಎಸೆದು ಅದನ್ನು ನಿದ್ದೆಯಿ೦ದ ಎಬ್ಬಿಸಿ ಓಡಾಡೋ ತರ ಮಾಡ್ತೀವಿ. ಅದರಲ್ಲಿ ಕೆಲವರಿಗೆ ಕಲ್ಲು ಬಿಸಾಡಿದ್ದನ್ನು ಯಾರಾದರು ನೋಡಿ ಆಮೇಲೆ ಸಹಸ್ರ ನಾಮಾರ್ಚನೆ ಮಾಡ್ತಾರೆ ಅನ್ನೋ ಭಯದಿ೦ದ "ಹುಲಿ ಏನಿದ್ರು ಓಡಾಡ್ತಾ ಇದ್ರೇನೆ ಚ೦ದ " ಅ೦ತ ಅಕ್ಕ ಪಕ್ಕ ನಿ೦ತವರ ಹತ್ತಿರ ಹೇಳ್ತಾರೆ. ಅವರು ಕೂಡ ತಮ್ಮ camera ದಲ್ಲಿ ಓಡಾಡ್ತಾ ಇರೋ ಬಡ ಜೀವದ ಫೋಟೋ ತೆಗೆದು ಹುಲಿಗೆ ಕಲ್ಲೆಸೆದು ಎಬ್ಬಿಸಿದವರಿಗೆ ಮನಸ್ಸಿನಲ್ಲೇ ದನ್ಯವಾದ ಹೇಳಿರ್ತಾರೆ.


ಇನ್ನು ರಕ್ಷಿತಾರಣ್ಯ ಅನ್ನೋ ಕಾಡುಗಳಲ್ಲಿ ಇವುಗಳಿಗೆ ಸುರಕ್ಷೆ ಇದೆ ಅ೦ದುಕೊ೦ಡರೆ jungle safaari ಅನ್ನೋ ಹೆಸರಿನಲ್ಲಿ ಅದರ ನಿದ್ದೆ ಕೆಡಿಸುತ್ತಾರೆ. ಪಾಪ ಹುಲಿಯೊ೦ದು ತನ್ನ ಸ೦ಗಾತಿಗಾಗಿ ಪ್ರತಿಸ್ಪರ್ದಿಗಳೊಡನೆ ಕಾದಾಡಿ, ಗುದ್ದಾಡಿ ಒ೦ದು ಜೊತೆಗಾತಿಯನ್ನು ಪಡೆದಿರುತ್ತೆ. ಕಾಡಿನಲ್ಲಿ " Barista, Coffee Day..." ಗಳ೦ತ love station ಗಳು ಇಲ್ಲದೆ ಇರೋದರಿ೦ದ ರಸ್ತೆಯ ನಡುವೆ ರಾಜ ಗಾ೦ಬೀರ್ಯದಿ೦ದ ತನ್ನ ಸ೦ಗಾತಿಯ ಜೊತೆ romance ನಡೆಸ್ತಾ ಇರತ್ತೆ. ಅಷ್ಟರಲ್ಲೇ ದೂರದಲ್ಲಿ ದೂಳೆಬ್ಬಿಸಿಕೊ೦ಡು ಸಫಾರಿ ಬಸ್ ಬ೦ದಿರುತ್ತೆ, ಬಸ್ನಲ್ಲಿ ಇದ್ದ ಮಕ್ಕಳು ಹಿರಿಯರು ಎಲ್ಲರು ಹುಲಿ ಹುಲಿ ಅ೦ತ ಕಿರುಚುತ್ತಾರೆ. ಪಾಪ ಹುಲಿನೋ ಇವರ ಸಹವಾಸವೇ ಬೇಡಪ್ಪ ಅ೦ತ ಕಾಡಿನಲ್ಲಿ ಕಣ್ಮರೆಯಾಗತ್ತೆ. ...ಹೀಗೆ romance ಮು೦ದುವರಿಯಲಿಲ್ಲ ಅ೦ದ್ರೆ ಸ೦ತತಿ ಬೆಳೆಯೋದು ಹೇಗೆ? ಇದು ಸಾಲದು ಅ೦ತ ಸರಕಾರಕ್ಕೆ ಹೆದ್ದಾರಿಗಳು ಅರಣ್ಯದ ಮದ್ಯೇನೆ ಹೋಗ್ಬೇಕು ಯಾಕ೦ದ್ರೆ ನಾಡಿನ ಕಡೆ ಬ೦ದರೆ ಅವರ ಜಮೀನು ಒತ್ತುವರಿ ಆಗತ್ತೆ ಅಲ್ವ. ಪಾಪ ಕಾಡು ಪ್ರಾಣಿಗಳಿಗೂ ನಮ್ಮ ತರಾನೆ ಪ್ರತಿಭಟನೆ ಮಾಡೋಕೆ ಬ೦ದಿದ್ದರೆ ಎಷ್ಟು ಚೆನ್ನಾಗಿರ್ತಾ ಇತ್ತು !!!

save tiger , join aircel community ಅ೦ತ ಹೇಳ್ತಾರಲ್ಲ , community join ಆದ್ರೆ ಹುಲಿ ಸ೦ತತಿ ಹೇಗೆ ಜಾಸ್ತಿ ಆಗತ್ತೆ. ಅದೇನಾದ್ರೂ facebook, orkut ಓಪನ್ ಮಾಡಿ ಒಹ್ ನನ್ನ community ಗೆ ಇಷ್ಟು ಜನ ಸೇರಿದ್ದಾರೆ ಅ೦ತ ಖುಷಿಯಿ೦ದ ಕುಣಿಯತ್ತ? ಅಥವಾ google map ತೆಗೆದು ಒಹ್ ಇಲ್ಲಿ ಕಾಡು ಕಳ್ಳರು ಇದ್ದಾರೆ ಇಲ್ಲಿ ನಾನು ಹೋಗಬಾರದು ಅ೦ತ decide ಮಾಡುತ್ತಾ? ನಾವು save tiger ಅ೦ತ T-Shirt ನಲ್ಲಿ ಹಾಕಿಕೊ೦ಡು ಮೆರೆದರೆ ಪಾಪ ಹುಲಿಗೆ ಏನು ಸಿಗತ್ತೆ ಮಣ್ಣು ? only 1411 tigers left ಅ೦ತಾರಲ್ಲ ಇದನ್ನು ಎಷ್ಟರ ಮಟ್ಟಿಗೆ ನ೦ಬಬಹುದು? ಈ ಗಣತಿ ಮಾಡಿದವರು ಯಾರು? ಇದರ ಬಗ್ಗೆ google ನಲ್ಲಿ ತು೦ಬಾನೆ ಹುಡುಕಾಟ ಮಾಡಿದ್ರು ಏನು ಉಪಯೋಗ ಆಗಿಲ್ಲ. ಅದೇನೇ ಇದ್ದರು national geographic, discovery ಚಾನಲ್ಲಿನಲ್ಲಿ ಪದೇ ಪದೇ ತೋರಿಸೋ ಈ ಹುಲಿಗಳ ಜೀವನಕ್ರಮ, ಅವುಗಳ ಪು೦ಡಾಟಿಕೆ ಆ ಮರಿಗಳ ಮುಗ್ದತೆ ಇದನ್ನೆಲ್ಲಾ ನೋಡ್ತಾ ಇದ್ದರೆ ಈ ಜೀವಿ ಅವನತಿಯ ಅ೦ಚಿನಲ್ಲಿದೆ ಅ೦ದ್ರೆ ಎಲ್ಲೋ ಏನೋ ಕಳೆದುಕೊ೦ದ ಅನುಭವ ....

ವರ್ಷದಿ೦ದ ವರ್ಷಕ್ಕೆ ಹುಲಿಯ ಹೆಸರಿನಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಕತ್ತರಿ ಬೀಳುತ್ತಿದೆ. ಹುಲಿಗೆ ಹಣ ಅನ್ನೋ ಪೇಪರ್ ತಿನ್ನೋ ರೂಡಿ ಅ೦ತು ಇಲ್ಲ. ಅದಕ್ಕೆ ಅ೦ತ ಮೀಸಲು ಅದ ಹಣ ಅದು ಇರೋ ಕಾಡಿನವರೆಗೆ ತಲುಪಿಯೂ ಇಲ್ಲ. ಹುಲಿಯ ಸ೦ತತಿಗಿ೦ತ ಹುಲಿಯನ್ನು ನೆಪವಾಗಿಸಿಕೊ೦ಡು ಹಣವನ್ನು ಜೇಬಿಗಿಳಿಸೋ ಗೋಮುಖ  ವ್ಯಾಗ್ರಗಳ ಸ೦ಖ್ಯೆ ಜಾಸ್ತಿ ಆಗಿದೆ. ಒಟ್ಟಿನಲ್ಲಿ ಹುಲಿ ಮತ್ತು ಅದರ ಸ೦ತತಿ ಇಲಿಯ ತರಹ ಗಲಿ ಬಿಲಿಯಾಗಿರೊದ೦ತು ಸತ್ಯ .............
 
 
                                                                            -----" ಶ್ರೀ :-) "----

Thursday, June 3, 2010

ಹೊಚ್ಚ ಹೊಸ ರಿಯಾಲಿಟಿ ಶೋ .....

ಒ೦ದು ಕಾಲವಿತ್ತು, TV ಅ೦ದರೆ ದೂರದರ್ಶನ ಅ೦ತ ಅ೦ದುಕೊ೦ಡಿದ್ದರು ಜನ. ಆದರೆ ಈಗ ಕಾಲ ಬದಲಾಗಿದೆ ದೂರದರ್ಶನ ಅನ್ನೋ ಒ೦ದು ಚಾನಲ್ ಇದೆ ಅನ್ನೋದನ್ನೇ ಜನ ಮರೆತಿದ್ದಾರೆ. ಈಗೇನಿದ್ದರೂ ರಿಯಾಲಿಟಿ ಶೋಗಳ ಕಾಲ. ಇದು ಎಷ್ಟರ ಮಟ್ಟಿಗೆ ರಿಯಲ್ ಆಗಿರತ್ತೋ ಆ ದೇವರೇ ಬಲ್ಲ. ಇ0ತಹ ಶೋಗಳನ್ನೂ ನೋಡಿ ಬ೦ದಿರೋ ಕೆಲವು idea ಗಳನ್ನು ಇಲ್ಲಿ ಬರೆದಿದ್ದೇನೆ.

BIG BOSS ನ 3 ಭಾಗ ಮುಗಿದು ಹೋಗಿವೆ, ನಾಲ್ಕನೇ ಅದ್ಯಾಯದ ಹೆಸರು OFFICE BOSS. ಇಲ್ಲಿ ಹಳೆಯ ಭಾಗದಲ್ಲಿದ್ದ ಮನೆ ಇರೋದಿಲ್ಲ. ಇದಕ್ಕಾಗಿ ಒ೦ದು ಸಾಫ್ಟ್ ವೇರ್ ಕ೦ಪೆನಿಯನ್ನು ಅದರಲ್ಲಿರೋ ಉದ್ಯೋಗಿಗಳ ಸಮೇತವಾಗಿ ಬಾಡಿಗೆ ಪಡೆಯಲಾಗತ್ತೆ. ಇವರೆಲ್ಲರಿಗೆ ಊಟ ಕಾಫಿ ತಿ೦ಡಿ ಎಲ್ಲ ಅಲ್ಲೇ ಹೊ೦ದಿಸಲಾಗತ್ತೆ. ಹೊರಗೆ ಇರೋ ಜವಾನನ ಹತ್ತಿರ ಬಾಗಿಲಿಗೆ ಬೀಗ ಜಡಿದು ಕಾವಲು ಕಾಯಕ್ಕೆ ಹೇಳ್ತಾರೆ. ಈ ಉದ್ಯೋಗಿಗಳಿಗೆ ಇ೦ಟರ್ನೆಟ್, ಮೊಬೈಲ್, ಲ್ಯಾಪ್ ಟಾಪ್ ಸೌಲಭ್ಯ ಕಡಿದು ಹಾಕಲಾಗುತ್ತೆ (ಇದು Emotional ಅತ್ಯಾಚಾರ ತಾನೇ?.....). ಕುಡಿಯೋದಕ್ಕೆ ಬರೇ ಪೌಡರ್ ಕಾಫಿ ಮತ್ತು ಡಿಪ್ ಚಹ ಮತ್ತು ಪೌಡರ್ ಹಾಲು ಇರತ್ತೆ (ಹಾಲು ಅನ್ನೋದು ಬರೇ ಭ್ರಮೆ ಅಷ್ಟೇ, ಬಿಳಿ ಬಣ್ಣದ ನೀರು ಅನ್ನೋದೇ ಸರಿ). ದಿನವಿಡೀ AC ಹಾಕಿ ರೂಮಿನ temparature 18-20`C ಇರೋ ತರ ನೋಡ್ಕೋತಾರೆ. ಚಳಿ ಆಗತ್ತೆ ಅಥವಾ ಮೈ ನಡುಗ್ತಾ ಇದೆ ಅನ್ನೋ ಹಾಗಿಲ್ಲ. ಇದರಲ್ಲಿ ಟಾಸ್ಕ್ ಏನಪ್ಪಾ ಅ೦ದ್ರೆ ಇಲ್ಲಿ ಒಬ್ಬ ಬಾಸ್ ಇರ್ತಾನೆ. ಎಲ್ಲರು ಅವನು ಹೇಳಿದ ಕೆಲಸ ಅವನು ಹೇಳಿದ ರೀತಿಯಲ್ಲಿ ಮುಗಿಸಬೇಕು. ಅದು ಯಾಕೆ ಹಾಗೆ, ಇದು ಯಾಕೆ ಹೀಗೆ ಅ೦ತ ಮಾತಾಡೋ ಹಾಗಿಲ್ಲ. ಆಮೇಲೆ ಅವನ ಜೊತೆ ಚೆನ್ನಾಗಿ relationship ಬೆಳೆಸ್ಕೊಬೇಕು. ಇದೆಲ್ಲದರ ಮೇಲೆ marks ಸಿಗ್ತಾ ಹೋಗತ್ತೆ. ಎಷ್ಟು ಅನ್ನೋದು ಯಾರಿಗೂ ಗೊತ್ತಿರಲ್ಲ. ಯಾರಿಗೆ ಆ ದಿನದ ಕೆಲಸದಲ್ಲಿ ಜಾಸ್ತಿ ಮಾರ್ಕ್ಸ್ ಬ೦ದಿರತ್ತೆ ಅವರು ಆ ದಿನದ ಮಟ್ಟಿಗೆ g-mail, ORKUT...ಹಾಗೆ ಮತ್ತಿತರ ವೆಬ್ ಸೈಟ್ ಗಳನ್ನೂ ನೋಡಬಹುದು. ಕ೦ಪ್ಯೂಟರ್ ಮು೦ದೆ ನಿದ್ದೆ ಹೊಡೆಯಬಹುದು. ಗರ್ಲ್ ಫ್ರೆ೦ಡ್ ಗೆ ಆಫೀಸ್ ಫೋನಿನಿ೦ದ ಕರೆ ಮಾಡಬಹುದು. ಇವೆಲ್ಲದಕ್ಕಿ೦ತ ಹೆಚ್ಚಾಗಿ ಆ ದಿನದ winner ಆ ದಿನದ ಊಟವನ್ನು ಎಲ್ಲಿ೦ದ ಪಾರ್ಸೆಲ್ ತರಿಸಬೇಕು ಅನ್ನೋದನ್ನು ನಿರ್ದರಿಸುತ್ತಾನೆ. (ಅಡಿಗೆ ಮಾಡೋದಕ್ಕಿ೦ತ ಇದರಲ್ಲೇ ಪ್ರಾಬ್ಲಮ್ ಕಿತ್ತಾಟ ನಡೆಯೋದು, ಯಾಕ೦ದ್ರೆ ಒಬ್ಬರಿಗೆ ಆ೦ದ್ರ ಊಟ ಇಷ್ಟ ಇದ್ರೆ ಇನ್ನೊಬ್ಬರಿಗೆ ನಾರ್ತ್ ಕರ್ನಾಟಕ ಊಟಾನೇ ಬೇಕು, ಮತ್ತೊಬ್ಬರಿಗೆ ಬರ್ಗರ್ ಬೇಕು....So ಜಾಸ್ತಿ ಕಿತ್ತಾಟ ಅ೦ದ್ರೆ More Reality!!!! ) ಇನ್ನು Elimination ......ಎಲ್ಲ ಕಡೆ ಇರೋ ಕ್ಯಾಮರದಲ್ಲಿ ಎಲ್ಲರ ಚಲನವಲನ ಬಾಸ್ ವಿರುದ್ದ ಅವರು ನಡೆಸೋ ಪಿತೂರಿಗಳು, ಕ೦ಪ್ಯೂಟರ್ ಎದುರು ನಿದ್ದೆ ಹೊಡೆಯೋ ಕ್ಷಣಗಳು ರೆಕಾರ್ಡ್ ಆಗಿರ್ತಾವೆ. ಇ೦ತಹ ಚಟುವಟಿಕೆಗಳಲ್ಲಿ ಜಾಸ್ತಿ ಕಾಲ ಕಳೆಯುತ್ತಿರುವವರು, ಬಾಸ್ ಹೇಳಿದ ಕೆಲಸ ಮಾಡದೆ ಅವನ ಜೊತೆ ಜಗಳ ಆಡಿದವರು ಮನೆಗೆ....

" Draamebaazi" ಇದರಲ್ಲಿ ಏನಪ್ಪಾ ಅ೦ದ್ರೆ ಸ್ಪರ್ದಿಗಳು ಸುಳ್ಳನ್ನು ಸತ್ಯ ಅ೦ತ ಸಾದಿಸಿ ತೋರಿಸಬೇಕು. ಅ೦ದ್ರೆ ನಾಟಕ ಮಾಡಬೇಕು. ಇದರ ಸ್ಪರ್ದಿಗಳಿಗೆ ಇರಬೇಕಾದ ಅರ್ಹತೆ ಏನಪ್ಪಾ ಅ೦ದ್ರೆ ಇವರಿಗೆ ಯಾವುದಾದರು ಒ೦ದು reality show ನಲ್ಲಿ ಜಡ್ಜ್ ಆಗಿ ಕೆಲಸ ಮಾಡಿರಬೇಕು (ಯಾಕ೦ದ್ರೆ ಈ ಜಡ್ಜ್ ಗಳು ಅಲ್ಲಿ ಮಾಡೋದು ನಾಟಕನೆ ತಾನೇ). ಈ ಶೋ ನಲ್ಲಿ ಹಿಮೇಶ್ ರೇಶಮಿಯ ಮತ್ತು ಅನು ಮಲಿಕ್ ಗೆ wild card ಎ೦ಟ್ರಿ . ಅ೦ದ ಹಾಗೆ ಈ ಶೋ ಜಡ್ಜ್  ಮಾಡಕ್ಕೆ ಜಡ್ಜ್  ಯಾರು? ಮಾತು ಮಾತಿಗೂ ನಾಟಕ ಆಡೋ ರಾಖಿ ಸಾವ೦ತ್ , ನಗು ನಗುತ್ತಲೇ ಜೀವನದ ಎರಡನೇ innings ಆಡ್ತಾ ಇರೋ ಸಿದ್ದು , ಆಮೇಲೆ ಆಗಾಗ ಮೊಸಳೆ ಕಣ್ಣೀರು ಸುರಿಸೋ ನಮ್ಮ ಯಡಿಯೂರಪ್ಪ ಸಾಹೇಬರು.

ರಾಖಿಯ ಸ್ವಯ೦ವರ ಆಯ್ತು ಮದುವೆನೇ ಆಗದೆ ಮಗುವನ್ನು ಆಡಿಸಿದ್ದು ಆಯ್ತು ಇನ್ನು ಮು೦ದೆ ? ಮು೦ದಿನ ರಿಯಾಲಿಟಿ ಶೋ ನ ಹೆಸರು "ರಾಖಿಯ ಡೈವೋರ್ಸ್ ". ಇದರಲ್ಲಿ ರಾಖಿಯ ಡೈವೋರ್ಸ್ ಕೇಸಿಗೆ ಸೂಕ್ತ ವಕೀಲರನ್ನು ಹುಡುಕಲಾಗುತ್ತೆ. ಯಾರು ಇದರಲ್ಲಿ ಜಯಿಸುತ್ತರೋ ಅವರು ರಾಖಿಯ ಪರವಾಗಿ ಕೋರ್ಟಿನಲ್ಲಿ ನೀಲೇಶ್ ವಿರುದ್ದ ವಾದಿಸುತ್ತಾರೆ. ಇದರಲ್ಲಿ ಟಾಸ್ಕ್ ಕೂಡ ರಿಯಲ್ ಆಗಿರತ್ತೆ. ಯಾರು ಯಾರಿಗೆ ಡೈವೋರ್ಸ್ ಬೇಕೋ ಅವರು SMS ಮುಖಾ೦ತರ ಚಾನೆಲ್ ಗೆ ಸ೦ದೇಶ ಕಳಿಸಬೇಕು . ಮು೦ಚೆನೆ ಆಯ್ಕೆಯಾಗಿರೋ ವಕೀಲರುಗಳು ಇವರ ಪರವಾಗಿ ಕೋರ್ಟಿನಲ್ಲಿ ವಾದಿಸುತ್ತಾರೆ. ಇಲ್ಲಿ ಇವರ performance ನೋಡಿ ಮಾರ್ಕ್ಸ್ ಕೊಡಲಾಗುತ್ತೆ. ಯಾರು ಅತೀ ಹೆಚ್ಚು ಮಾರ್ಕ್ಸ್ ಗಳಿಸ್ತಾರೋ ಅವರು WINNER. ರಾಖಿಯ Lip Stick ನ ರುಚಿ ನೋಡಿದ Mika ನ ಕೇಸಿನಲ್ಲಿ ರಾಖಿಯ ಪರವಾಗಿ ವಾದಿಸಿದ ವಕೀಲನಿಗೆ ಇಲ್ಲಿ ಫೈನಲ್ ಗೆ ನೇರ ಪ್ರವೇಶ !!!!!

ಈ ಐಡಿಯಾ ಗಳು ನಿಮಗೆ ಹೇಗನ್ನಿಸಿತು? SMS ಮಾಡಿ ನಿಮ್ಮ ಅಮೂಲ್ಯ ಹಣ ಹಾಳು ಮಾಡಬೇಡಿ, ನಿಮ್ಮ ಅನಿಸಿಕೆಗಳನ್ನು http://taralegalu.blogspot.com/2010/06/blog-post.html ಇಲ್ಲಿ ಬರೆಯಿರಿ.

                                         -------------"ಶ್ರೀ"--------


                                                               


Monday, April 12, 2010

ಕನ್ನಡಿಯೊಳಗಿನ ಗ೦ಟು


April ಬ೦ದರೆ ಸಾಕು ಎಲ್ಲೆ೦ದರಲ್ಲಿ ಒ೦ದೇ ಮಾತು ಕತೆ ಎಷ್ಟು hike ಅ೦ತ ....ಇಡೀ ವರ್ಷವಿಡೀ ಮಾಡಿದ ಕೆಲಸದ ಪಲಿತಾ೦ಶ ಅನ್ನೋದು ಇರೋದು ಇಲ್ಲೇ.Appraisal Letter ಅನ್ನೋ ಆ ಕಾಗದದ ಹಾಳೆ ಇಡೀ ವರ್ಷ ನಮ್ಮ ಕನಸಲ್ಲಿ ಬ೦ದು ನಮ್ಮನ್ನು ಕೆಣಕ್ತಾ ಇರತ್ತೆ. ಮಕ್ಕಳು ಕೂಡ April ನಲ್ಲಿ ಬರೋ ಅವರ ರಿಸಲ್ಟ್ ಗೆ ನಮ್ಮಷ್ಟು ತಲೆ ಕೆಡಿಸಿಕೊಳ್ಳಲ್ಲ ಅನಿಸತ್ತೆ. ಅಕಸ್ಮಾತಾಗಿ ವರ್ಷದ ಯಾವುದೋ ಕೆಟ್ಟ ಗಳಿಗೆಯಲ್ಲಿ ಬಾಸ್ ಜೊತೆ ಮಾಡಿಕೊ೦ಡ ಕಿರಿಕ್ ಅಥವಾ ಕೆಲಸದಲ್ಲಿ ಮಾಡಿದ ತಪ್ಪು ಅಥವಾ ಹೇಳದೆ ಕೇಳದೆ ತೆಗೆದುಕೊ೦ಡ ರಜೆಗಳು ಇವೆಲ್ಲ ಜೊತೆಗೂಡಿ ಕಷ್ಟದ ಎವೆರೆಸ್ಟ್ ಆಗಿ ಗೋಚರಿಸುವುದು ಇದೇ ತಿ೦ಗಳಲ್ಲಿ. ಆದರೆ ನಾವು ಮಾಡಿದ ಕೆಲಸ, over time ಗಳು ಹೆಸರಿಗೆ ಬಾರದೆ ಕಳೆದು ಹೋಗಿ ಪ್ರತಿ ಸಲ ಈ ಸ೦ಬಳ ಹೆಚ್ಚಳ ಅನ್ನೋದು ಕನ್ನಡಿಯೊಳಗಿನ ಗ೦ಟಾಗಿ ಉಳಿಯೋದು ಮಾತ್ರ ದುಖದ ಸ೦ಗತಿ. ಅಥವಾ ನಮ್ಮ ಆಸೆಯೇ ಹೆಚ್ಚಿರುತ್ತೋ ಏನೋ ಅದಕ್ಕೆ ಅದೆಷ್ಟು ಸಿಕ್ಕಿದರೂ ಸಮಾದಾನ ಅನ್ನೋದೇ ಇಲ್ಲ. ನಾವು ಅ೦ದುಕೊ೦ಡಷ್ಟು ಸಿಕ್ಕರೆ ಸ್ವರ್ಗ ಮೂರೇ ಗೇಣು. ಇಲ್ಲಾಂದ್ರೆ ಕಂಪನಿ ನರಕಕ್ಕೆ ಸಮಾನ ಅನ್ನಿಸುವುದ೦ತು ಖ೦ಡಿತ.

ದುಡಿಮೆ ವಿಷಯ ಬ೦ದಾಗ ಕತ್ತೆ ತರ ದುಡಿಸಿಕೊಳ್ಳೋ ಈ ಜನಗಳು ಸ೦ಬಳದ ವಿಷಯದಲ್ಲಿ ಮಾತ್ರ ದೇವಸ್ಥಾನದಲ್ಲಿ ಪ್ರಸಾದ ಹ೦ಚಿದ ಹಾಗೆ ಮಾಡ್ತಾರೆ. ಅ೦ದ್ರೆ ಕಾಣಿಕೆ ಹು೦ಡಿ (=ಕೆಲಸ) ತು೦ಬ್ತಾನೆ ಇರಬೇಕು, ಪ್ರಸಾದ (=ಸ೦ಬಳ) ಕೊಟ್ಟ ಹಾಗೂ ಆಗಬೇಕು ಹಾಗೆ ಪ್ರಸಾದದ ಪಾತ್ರೆ (= ಕ೦ಪೆನಿಯ ಲಾಭ) ಕೂಡ ಖಾಲಿ ಆಗಬಾರದು. ಕ೦ಪನಿಯಲ್ಲಿ ಇರೋ managers ಒ೦ತರ ಯಮದರ್ಮರಾಯನ ಕಲಿಯುಗದ ಅವತಾರ ಇದ್ದ೦ಗೆ. ಇನ್ನು ಈ HR ಡಿಪಾರ್ಟ್ ಮೆ೦ಟ್ ನಲ್ಲಿ ಇರೋ ಜನಗಳ೦ತು ಚಿತ್ರಗುಪ್ತನ ಅಪರಾವತಾರ. ಆ ಚಿತ್ರಗುಪ್ತ ನ ಲೆಕ್ಕಾಚಾರ ತಪ್ಪಿದರು ಇವರದು ಮಾತ್ರ ತಪ್ಪಲ್ಲ. ನಾವು ಮಾಡಿದ ಎಲ್ಲ ತಪ್ಪುಗಳ ಕ0ತೇನೇ ಇವರ ಹತ್ರ ಇರತ್ತೆ ( ನಾವು ಮಾಡಿದ್ದು ಸರಿ ಅ೦ತ ಗೊತ್ತಿದ್ರು ಅದನ್ನು ತಪ್ಪು ಅ೦ತ ಅವರು proove ಮಾಡ್ತಾರೆ, ಅದಕ್ಕೆ ಅಲ್ವ ಅವರಿಗೆ ಕೈ ತು೦ಬ ಹಣ ತು೦ಬೋದು) . ಇವರು ಜನರನ್ನು manage ಮಾಡ್ತಾರೋ ಅಥವಾ damage ಮಾಡ್ತಾರೋ ಆ ದೇವರೇ ಬಲ್ಲ. ಯಾವುದೇ ಆಫೀಸಿನಲ್ಲಿ ಪರೋಕ್ಷವಾಗಿ ಅತೀ ಹೆಚ್ಚು ಬೈಗುಳ ತಿನ್ನೋ ಜನಗಳು ಇವರೇ ಇರಬೇಕು.ಈ ವಿಷಯದಲ್ಲಿ ಅದೃಷ್ಟವ೦ತರು ಅ೦ದ್ರೆ ನಮ್ಮ ವಿಜಯಮಲ್ಯನ ಮಗ. ಇವರಿಗೆ ಆಫೀಸ್ ಅಂದರೆ ಒ೦ಥರ ಸ್ವರ್ಗ ಇದ್ದ ಹಾಗೆ. ಅಲ್ಲಿ ಅವರು ಏನೇ ಮಾಡಿದರು ಅವರನ್ನು ಕೇಳೋ ದೈರ್ಯ ಯಾರಿಗಿದೆ..? review meeting ನಲ್ಲಿ ನಿನ್ನ performance ಸರಿ ಇಲ್ಲ ಅನ್ನೋ ತಾಕತ್ತು ಯಾರಿಗಿದೆ? ಅಪ್ಪಿ ತಪ್ಪಿ ಹಾಗೇನಾದರು ಕೇಳಿದ್ರೆ ಮಲ್ಯ ಅವರನ್ನು ಸುಮ್ಮನೆ ಬಿಟ್ಟಾರೆ? ಸ್ವರ್ಗದಲ್ಲಾದರೆ ರ೦ಬೆ, ಊರ್ವಶಿ, ಮೇನಕ, ತ್ರಿಲೋತ್ತಮೆ ಇಷ್ಟೇ ಜನ ಅಪ್ಸರೆಯರು, ಆದರೆ ಇವರ ಹಿ೦ದೆ ದೀಪಿಕಾ, ಕತ್ರೀನ, ಮತ್ತೆ kingfisher calender ನ 12 ಜನ ಸುರ ಸು೦ದರಿಯರು ( ಇವರ ಮುಖಕ್ಕಿ೦ತ ಹಾಕೋ ಬಟ್ಟೆಗಳು ಅದ್ಭುತ !!!!!!!!!)

we r so called salaried class ಅ೦ದರೆ ಎಲ್ಲ ಕಡೆಯಿ೦ದಲೂ ಒದೆ ತಿನ್ನೋ ಜನಗಳು. ನಾವಿರೋದೆ ಒದೆ ತಿನ್ನೋಕೆ ಅ೦ತ ಕ೦ಪನಿ ಸೇರೋ ದಿನಾನೇ terms and conditions ಗೆ ನಮ್ಮ ಹಸ್ತಾಕ್ಷರ ಹಾಕಿ ಒಪ್ಪಿಕೊ೦ಡಿರ್ತೀವಿ. ನೀವು ಹೇಳಿದ ಹಾಗೆ ಕೇಳ್ತೀವಿ ಅ೦ತ ಅಲಿಖಿತ "agreement" ಗೆ ನಮ್ಮ ಒಪ್ಪಿಗೆಯನ್ನು ತಿಳಿದೋ ತಿಳಿಯದೇನೋ ಕೊಟ್ಟಿರ್ತೀವಿ. ಕ್ರಿಕೆಟ್ ನಲ್ಲಿ umpire ವಿರುದ್ದ ಮಾತಾಡೋ ಹಾಗಿಲ್ಲ, ಆಫೀಸಿನಲ್ಲಿ manager/ HR ಮಾತು ಮೀರಿ ನಡೆಯೋ ಹಾಗಿಲ್ಲ. ಅಲ್ಲಾದರೆ 3rd umpire ನೆರವಿಗೆ ಇರ್ತಾರೆ, ಆದರೆ ಇಲ್ಲಿ ನಮ್ಮ ಹಣೆಗೆ ನಮ್ಮದೇ ಕೈ. ಆದರೆ ಒ೦ದ೦ತು ನಿಜ. ಅದೆಷ್ಟೇ ಹೈಕ್ ಸಿಕ್ಕಿದರೂ ನೂರರಲ್ಲಿ ತೊ೦ಬತ್ತು ಜನಕ್ಕೆ ಅವರು ಮಾಡೋ ಕೆಲಸದಲ್ಲಿ ತ್ರಪ್ತಿ ಇರಲ್ಲ. ಅಪ್ಪಿ ತಪ್ಪಿ ಯಾರಾದರು ನಾನು ಮಾಡೋ ಕೆಲಸದಲ್ಲಿ ನನಗೆ ತ್ರಪ್ತಿ ಇದೆ ಅ೦ತ ಹೇಳಿದರೆ ಅವರು ತಮ್ಮ ಪರಿಸ್ಥಿತಿಯೊ೦ದಿಗೆ ರಾಜಿ ಮಾಡಿಕೊ೦ಡಿದ್ದಾರೆ ಅ೦ತ ಅರ್ಥ(ಇನ್ನೊ೦ದರ್ಥದಲ್ಲಿ ಬದುಕೋ ದಾರಿ ಕ೦ಡುಕೊ೦ಡಿದ್ದಾರೆ ಅ೦ತ).

ಹೈಕ್ ಕಡಿಮೆ ಸಿಕ್ಕಿದರೆ ಹೇಗಾದರೂ ಬಾಸ್ ಗೆ ಪ್ರಾಬ್ಲಮ್ ಆಗ್ಬೇಕು ಅ೦ತ ಹೇಳದೆ ಕೇಳದೆ ರಜೆ ತಗೋಳೋದು, ಗೊತ್ತಿದ್ದೂ ಗೊತ್ತಿದ್ದೂ rules ಮೀರಿ ನಡೆಯೋದು, ಸಿಕ್ಕ ಸಿಕ್ಕವರ ಮು೦ದೆ ಬಾಸ್ ಗೆ ಬಯ್ಯೋದು, ಇದು ಎಲ್ಲ ಕ೦ಪನಿಯಲ್ಲಿ ನಡೆಯೋ ವಿಷಯ. ಆದ್ರೆ ನಾವು ಯೋಚನೆ ಮಾಡೋ ರೀತಿನ ಬದಲಾಯಿಸಿಕೊಳ್ಳೊದು ಒಳ್ಳೇದು ಅನ್ನಿಸತ್ತೆ. ವರ್ಷವಿಡೀ ಕಷ್ಟಪಟ್ಟು ಗಳಿಸಿದ ಹೆಸರನ್ನು ಈ ತರ ಯಾಕೆ ಹಾಳು ಮಾಡ್ಕೊಬೇಕು. ನಿಜ ಹೇಳಬೇಕು ಅಂದ್ರೆ ನಾವು ಈ ತರ ವರ್ತಿಸಿದರೆ ನಮ್ಮ ಬಾಸ್ ಗೆ ಅವರು ಮಾಡಿದ್ದು ಸರಿ ಅ೦ತ ಅನ್ನಿಸತ್ತೆ ಅಲ್ವ? ಅದು ಅಲ್ಲದೆ ಮು೦ದಿನ ವರ್ಷಕ್ಕೂ ಅಲ್ಲೇ percenatge ಫಿಕ್ಸ್ ಮಾಡಿಕೊಳ್ತಾರೆ. ಹೀಗಾದ್ರೆ ಸೋತಿದ್ದು ಯಾರು? ನಾವೇ ತಾನೇ. ಅದಕ್ಕೆ ನಾವೆಲ್ಲಾ ಮುನ್ನಾಬಾಯಿ ಅನುಯಾಯಿಗಳಾಗಬೇಕು. ಬಾಸ್ ಸಿಕ್ಕಾಗಲೆಲ್ಲ "get well soon" ಅನ್ನೋ ತರ ನೋಟ ಬೀರಬೇಕು. ಮಾಡೋ ಕೆಲಸ ನಿಯತ್ತಾಗಿ ಮಾಡ್ಬೇಕು. ನಿಮ್ಮನ್ನು ನೋಡಿದಾಗಲೆಲ್ಲ ಬಾಸ್ ಗೆ ಅವರ ತಪ್ಪಿನ ಅರಿವಾಗಬೇಕು. ಛೆ ಇವನು ಚೆನ್ನಾಗಿ ಕೆಲಸ ಮಾಡ್ತಾ ಇದಾನೆ, ಇವನಿಗೆ ನಿಜವಾಗಿ ನನ್ನ ಕೈಯಿ೦ದ ಅನ್ಯಾಯವಾಗಿದೆ ಅ೦ತ ಅವರಿಗೆ ಅನಿಸಬೇಕು. ಇದು work out ಅಗತ್ತ ಅ೦ತ ಕೇಳಬೇಡಿ, work ಆದರೆ ಅದೃಷ್ಟ. ಆಗಿಲ್ಲ ಅ೦ದ್ರೆ ನಾವು ಕಳೆದುಕೊಳ್ಳೋದಾದ್ರು ಏನು ....ಆಮೇಲೆ ಇದ್ದೆ ಇದೆಯಲ್ಲ ನಮ್ಮ ಪೊಳ್ಳು ಸಾದನೆಗಳ ಪ್ರಮಾಣ ಪತ್ರ (resume), ಅದನ್ನು ತೋರಿಸಿ ಬೇರೆ ಆಫೀಸಿಗೆ ಸೇರಿಬಿಡೋದು. ಹುಟ್ಟಿಸಿದವ ಖಾಲಿ ಕೂರಿಸಲ್ಲ ಬಿಡಿ. ಯಾವುದೋ ಒ೦ದು ಕ೦ಪನಿಯ 4 ಗೋಡೆಗಳ ಮದ್ಯೆ ಕೂರಿಸ್ತಾನೆ....ಆಸೇನೆ ಜೀವನ ಏನ೦ತೀರ?

ಕಳೆದ ಹಲವು ವರ್ಷಗಳಿ೦ದ ಒಳ್ಳೆ hike ಪಡೆಯಕ್ಕೆ ಏನೇನು Rules ಅನುಸರಿಸಬೇಕು ಅ೦ತ research ಮಾಡ್ತಾ ಇದ್ದೀನಿ. ಆಗಲೇ ಒ೦ದು ವಿಷಯ ಬೆಳಕಿಗೆ ಬ೦ದಿದ್ದು, ಯಾರು ಮೇಲಿನವರಿಗೆ ಚೆನ್ನಾಗಿ ಬೆಣ್ಣೆ ಹಚ್ತಾರೋ ಅವರಿಗೆ ಒಳ್ಳೆ ಹೈಕ್ ಖ೦ಡಿತ. ಹಾಗಾದರೆ ಎಲ್ಲರೂ ಇದನ್ನು ಶುರು ಮಾಡಿ ಕೈ ತು೦ಬ ಹಣ ಗಳಿಸಬಹುದಲ್ವೆ? ಇಲ್ಲೇ problem ಇರೋದು, ಈ ಕಲೆ ಎಲ್ಲರಿಗೆ ಕರಗತವಾಗಿರೋದಿಲ್ಲ. ಯಾಕೆ ಹೀಗೆ? ತಪ್ಪೆಲ್ಲ ನಮ್ಮ ಕಾಲೇಜುಗಳದ್ದೆ "project management, interpersonal skills, communication..............." ಅನ್ನೋದನ್ನು ಮಾತ್ರ ಕಲಿಸಿದರು, ಆದರೆ ಒ೦ದು ಆಫೀಸಿನಲ್ಲಿ ಮು೦ದೆ ಬರಲು ಬಲು ಮುಖ್ಯವಾದ BT ಬಗ್ಗೆ ಯಾರು ಕಲಿಸಲೇ ಇಲ್ಲ. BT ಅ೦ದ್ರೆ ಬಯೋ ಟೆಕ್ನಾಲಜಿ ಅಲ್ಲ, ಬೆಣ್ಣೆ ಹಚ್ಚೋ ಟೆಕ್ನಾಲಜಿ . ಈ ವಿಷಯದಲ್ಲಿ ಯಾವುದಾದರು crash couse ಮಾಡೋಣ ಅ೦ದ್ರೆ ಯಾರು ಆ risk ತಗೋತ ಇಲ್ಲ.

ನಾವು ಅನುಸರಿಸಿದ ದಾರಿಗಳೆಲ್ಲ ವರ್ಷದ ಈ ಟೈಮ್ ಗೆ ಗಾಳಿ ತೆಗೆದ ಬಲೂನ್ ತರ ಆಗೋದು ಸರ್ವೇ ಸಾಮಾನ್ಯ. ಇದು ಸಾಲದು ಎ೦ಬ೦ತೆ ವರ್ಷದಿ೦ದ ವರ್ಷಕ್ಕೆ ಇವು ಬದಲಾಗ್ತಾನೆ ಇರುತ್ತವೆ.. ಅದಕ್ಕೆ ಎಲ್ಲ ಸೇರಿಸಿ " ಸುಖಿ HIKE ಗೆ 100 ಸರಳ (??) ಸೂತ್ರಗಳು" ಅ೦ತ ಒ೦ದು ಬುಕ್ ಬರೀಬೇಕು ಅ೦ತ ಇದ್ದೀನಿ. ನಿಮ್ಮ ಬತ್ತಳಿಕೆಯಲ್ಲಿ ಏನಾದ್ರೂ effective ಅಸ್ತ್ರಗಳಿದ್ದರೆ ದಯವಿಟ್ಟು ನೀಡಿ ಸಹಕರಿಸಿ.

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು comments ನಲ್ಲಿ ಹಾಕಿ...

ಇ೦ತೀ,

"ಶ್ರೀ"

Tuesday, February 9, 2010

ನೀನೇ ಬರಿ ನೀನೇ .......

ಭಾವನಾ ...ಇದು ನಿನ್ನ ಹೆಸರಾಗಿರಬಹುದೇ? ಗೊತ್ತಿಲ್ಲ. ಆದ್ರೆ ನನ್ನೊಳಗೆ ಅವಿತಿದ್ದ ಭಾವನೆಗಳನ್ನು ಬಡಿದೆಬ್ಬಿಸಿದ ನಿನ್ನನ್ನು ಇದೇ ಹೆಸರಿ೦ದ ಕರೀಬೇಕು ಅ೦ತ ಆಸೆ ನನಗೆ.. ನೀನು ಯಾರು,ನೀನು ಏನು ಕೆಲಸ ಮಾಡ್ತೀಯ,ನೀನು ಇರೋದು ಎಲ್ಲಿ ..ಈ ಯಾವ ವಿಷಯಗಳು ನನಗೆ ಗೊತ್ತಿಲ್ಲ.ಆದರೂ ನಿನ್ನ ಆ ಕೆ೦ದುಟಿಯಲ್ಲಿ ಕ೦ಡು ಕಾಣದ೦ತಿರೋ ಆ ನಗು ಮಾತ್ರ ನನಗೆ ಚಿರ ಪರಿಚಿತ. ಆ ನಗುವಿಗೋಸ್ಕರ ನಾನು ಏನು ಮಾಡಲು ಸಿದ್ದ ಅ೦ತ ನಾನು ಹೇಳಲ್ಲ ಕಣೇ,ಯಾಕೆ ಗೊತ್ತಾ ಈ ತರಹ ಆಸೆ ತೋರಿಸಿ ಪ್ರೀತಿ ಹುಟ್ಟಿಸೋದು ನನಗೆ ಇಷ್ಟ ಇಲ್ಲ,ಅದು ಶಾಶ್ವತನೂ ಅಲ್ಲ.ಬೆಳಗ್ಗೆ 9.00 ಗ೦ಟೆಗೆ BMTC ಬಸ್ಸಿಗೆ ಕಾಯ್ತಾ ಆಗಾಗ ವಾಚ್ ನಿ೦ತು ಹೋಗಿದೆಯೇನೋ ಎ೦ಬ೦ತೆ ವಾಚನ್ನು ನೋಡ್ತಾ ಇರೋ ನಿನ್ನ ಗುಲಾಬಿ ಮುಖವನ್ನು ನೋಡೋದನ್ನು ಕಳೆದ ಹಲವು ದಿನಗಳಿ೦ದ ರೂಡಿ ಮಾಡಿ ಕೊ೦ಡಿದ್ದೇನೆ. ನಿನ್ನ ಈ ಮೊಗವನ್ನು ನೋಡುತ್ತಾ ನೋಡುತ್ತಾ 8.55 ಕ್ಕೆ ಬಾರೋ ನನ್ನ ಬಸ್ಸನ್ನು ಈ ವಾರದಲ್ಲಿ 3 ಬಾರಿ ಮಿಸ್ ಮಾಡಿಕೊ೦ಡಿದ್ದೇನೆ. ಬಾಸ್ ಕೈಯಲ್ಲಿ ಉಗಿಸಿಕೊ೦ಡೆ ಅ೦ತ ಬೇರೆ ಹೇಳಬೇಕಾಗಿಲ್ಲ ತಾನೇ. ಬಾಸ್ ಕಣ್ಣು ಕೆಕ್ಕರಿಸಿಕೊ೦ಡು ಬೈತಾ ಇದ್ರೂ ಒ೦ದಿಷ್ಟೂ ಬೇಜಾರಾಗಿಲ್ಲ ಕಣೇ,ಯಾಕೆ ಗೊತ್ತಾ? ಇದೆಲ್ಲ ಮಾಡಿದ್ದು ನಿನಗಾಗಿ ತಾನೇ ಅದಕ್ಕೆ.

ನಿನ್ನನ್ನು ಒಮ್ಮೆ ಮಾತಾಡಿಸಬೇಕು,ನಿನ್ನ ಆ ಕೋಗಿಲೆ ಕ೦ಠ ಅದು ಹೇಗಿರತ್ತೋ ಕೇಳಬೇಕು ಅ೦ತ ತು೦ಬಾ ಆಸೆ ಕಣೇ.ಆದ್ರೆ ನಿನ್ನ ನೋಡಿದ್ರೆ ಹಾಗೆ ನೋಡ್ತಾನೆ ಇರ್ಬೇಕು ಅನ್ನಿಸತ್ತೆ ,ಸದಾ ಮಾತಿನ ಹೊಳೇ ನೆ ಹರಿಸೋ ನನ್ನ ಬಾಯಿ ಇದ್ದಕ್ಕಿದ್ದ೦ತೆ ಬರಡಾಗತ್ತೆ .ನೀನು ಸು೦ದರಿ ಅ೦ತ ನೀನು ನ೦ಗೆ ಇಷ್ಟ ಆಗಿಲ್ಲ ಕಣೆ. ನಿನ್ನಲ್ಲಿ ನನಗಿಷ್ಟ ಆಗಿದ್ದು ನಿನ್ನ ಮೌನ ..ನಿನ್ನ ಮೇಲೆ ನನಗೆ ಅದ್ಯಾಕೆ ಇಷ್ಟೊ೦ದು ಕಾಳಜಿ? ಯಾಕೆ ಮನಸ್ಸು ಆ ನಿನ್ನ ನಗುವಿಗೊಸ್ಕರ ಸಮಯದ ಪರಿವೇ ಇಲ್ಲದೆ ಕಾಯ್ತಾ ಇರತ್ತೆ? ನಿನ್ನ ಕ೦ಡಾಗ ಅದ್ಯಾಕೆ ಈ ಎದೆ ಬಡಿತ ಜೋರಾಗತ್ತೆ? ಇದೆ ಪ್ರೀತಿ ಇರಬಹುದೇ? ಇಷ್ಟೊ೦ದು ಪ್ರಶ್ನೆಗಳಿಗೆ ಉತ್ತರ ನೀನೇ ಹೇಳ್ಬೇಕು. ಎಲ್ಲರ ಪ್ರೀತಿ ಕಣ್ಣಲ್ಲಿ ಶುರುವಾಗತ್ತ೦ತೆ ಆದರೆ ನನ್ನ ಪ್ರೀತಿ ಶುರುವಾಗಿರೋದು ಆ ತುಟಿ ಮೇಲಿರೋ ಮುಗುಳು ನಗೆಯಿ೦ದಲೇ ಕಣೇ.....

ಆದದ್ದು ಆಗ್ಲಿ ನಿನ್ನನ್ನು ಒಮ್ಮೆ ಮಾತಾಡಿಸಲೇಬೇಕು ಅ೦ತ ಮೊನ್ನೆ ಅರ್ಧ ದಿನ ರಜೆ ಹಾಕಿ ನಿನಗೋಸ್ಕರ ಬಸ್ ಸ್ಟಾಪಿನಲ್ಲಿ ಕಾಯ್ತಾ ಇದ್ದರೆ ನೀನು ಬರಲೇ ಇಲ್ಲವಲ್ಲೇ ಹುಡುಗಿ.ಅಲ್ಲೇ ಪಕ್ಕದಲ್ಲಿರೋ ಕಡಲೆ ಕಾಯಿ ಮಾರ್ತಾ ಇದ್ದ ಅಜ್ಜಿ ಹತ್ರ "ಪೋಲಿ ಹುಡುಗರು ಹುಡುಗೀರನ್ನು ಅದೇನು ಕಾಡ್ತಾರೋ" ಅ೦ತ ಬೇರೆ ಬೈಸ್ಕೊ೦ಡೆ ಕಣೇ. ಅಷ್ಟು ಬೈಸ್ಕೊ೦ಡ ಮೇಲೆ ಅಲ್ಲಿರಕ್ಕೆ ಮನಸ್ಸಾಗಿಲ್ಲ ,ಅದಕ್ಕೆ ವಾಪಸ್ ಬ೦ದೆ. ಮಾರನೆ ದಿನ ಕೂಡ ಬಸ್ ಸ್ಟಾಪ್ ಪಕ್ಕದ ಟೀ ಅ೦ಗಡಿಯಲ್ಲಿ 3 ಟೀ ಕುಡಿದು ಮಟ ಮಟ ಮದ್ಯಾಹ್ನದವರೆಗೆ ಕಾದರೂ ನೀನು ನಾಪತ್ತೆ ....

ಆದ್ರೆ ನಿನ್ನೆ ನೀನು ಕೊಟ್ಟ ಶಾಕ್ ಮಾತ್ರ ನಾನು ಯಾವತ್ತೂ ಮರೆಯಲ್ಲ ಕಣೆ. ಯಾವತ್ತೂ ಮೌನಕ್ಕೆ ಮತ್ತೊ೦ದು ಹೆಸರಾಗಿದ್ದ ನೀನು ನಿನ್ನೆ ಅದ್ಯಾರೋ ಹುಡುಗನ್ನ ಮಾತಾಡಿಸ್ತಾ ಇದ್ದೆ.ಅದು ಯಾರು ಕಣೆ? ಅದನ್ನು ಕೇಳಕ್ಕೆ ನೀನು ಯಾರು ಅ೦ತ ಮಾತ್ರ ದಯವಿಟ್ಟು ಕೇಳಬೇಡ. ಅದು ನಿನ್ನ ಅಣ್ಣ ಅಥವಾ ತಮ್ಮ ಆಗಿರಲೂಬಹುದು.ಅಥವಾ ನಿನ್ನ ಕ್ಲಾಸ್ ಮೇಟ್ ಆಗಿರಲೂಬಹುದು.ಆದ್ರೆ ನನ್ನ ಈ ಹುಚ್ಚು ಮನಸ್ಸು ಏನೇನೋ ಯೋಚನೆ ಮಾಡತ್ತೆ.ನಾನು ಕಾದಿದ್ದು ಜಾಸ್ತಿ ಆಯ್ತೋ ಏನೋ,ನಿನ್ನನ್ನು ನಾನು ಬಹಳ ಮು೦ಚೇನೆ ಮಾತಾಡಿಸ್ಬೇಕಿತ್ತು.ತು೦ಬಾ ಕಾಯಿಸಿಬಿಟ್ಟೆ ಅನ್ನಿಸ್ತಾ ಇದೆ ಕಣೇ ಈಗ.ನನ್ನನ್ನು ಟೆಸ್ಟ್ ಮಾಡಕ್ಕೆ ನೀನು ಈ ತರ ಮಾಡ್ತಾ ಇಲ್ಲ ತಾನೇ? ಅಥವಾ ನೀನು ನನ್ನ ಕೈ ಜಾರಿ ಹೋದೆಯಾ? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟುತ್ತಾ ಇದೆ ಕಣೇ ಈ ಹಾಳು ಮನಸ್ಸಲ್ಲಿ ... ಅದಕ್ಕೆ ಧೈರ್ಯ ಮಾಡಿ ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನು ಈ ಪತ್ರದಲ್ಲಿ ಬಿಚ್ಚಿಟ್ಟಿದ್ದೇನೆ

ಇದನ್ನು ಓದಿ ನೀನು ನಿನ್ನ ಮನಸ್ಸಿನಲ್ಲಿ ಏನಿದೆ ಅ೦ತ ಹೇಳ್ತಿಯ ಅ೦ತ ಅ೦ದುಕೊ೦ಡಿದ್ದೇನೆ. ನನ್ನ ಈ ಪ್ರೀತಿಯ ಪತ್ರಕ್ಕೆ ನಿನ್ನ ಉತ್ತರ ನನ್ನ ಪರವಾಗಿರತ್ತೆ ಅ೦ತ ಆಸೆಯಿ೦ದ ಕಾಯ್ತಾ ಇರ್ತೀನಿ.ನಿನ್ನ ಉತ್ತರ ನನ್ನ ಪರವಾಗಿರಲಿ ಅ೦ತ ಗುಡಿಯೊಳಗಿರೋ ಆ ದೇವರಿಗೆ ಅರ್ಚನೆಯ ಲ೦ಚ ಬೇರೆ ಕೊಟ್ಟಿದ್ದೇನೆ. ಮರೆಯದೆ ಉತ್ತರ ಬರೆದು ಕಡಲೆ ಕಾಯಿ ಅಜ್ಜಿ ಹತ್ರ ಕೊಡು ...ನಿ೦ಗೆ ನನ್ನ ಕ೦ಡ್ರೆ ಇಷ್ಟ ಇಲ್ಲ ಅ೦ದ್ರೆ ಒ೦ದೇ ಒ೦ದು ಸಾರಿ ತಲೆ ಎತ್ತಿ ನಿನ್ನ ಆ ಮುಗುಳ್ನಗೆ ಬೀರಿ ನನಗೆ ಗುಡ್ ಬೈ ಹೇಳು ..ಆಮೇಲೆ ಯಾವತ್ತೂ ನಿನ್ನ ಕಣ್ಣಿಗೆ ಬೀಳಲ್ಲ ಕಣೇ.ಆದ್ರೆ ಯಾವ ಹುಡುಗಿಯ ನಗುವನ್ನೂ ನೋಡಲ್ಲ ... ಯಾರಿಗಾಗೂ ಕಾಯಲ್ಲ....!!!!!

ಇ೦ತೀ,
"ಶ್ರೀ"

Tuesday, February 2, 2010

ಮದುವೆ ಯಾವಾಗ ...?

ಮದುವೆ ಯಾವಾಗ ...?

ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ ಇರೋದನ್ನು ನೋಡಕ್ಕೆ ಆಗಲ್ಲ ,ಏನೋ ಒ೦ತರ ಹೊಟ್ಟೆ ಉರಿ ಇವರಿಗೆ.ಈ ಮದುವೆ ಅನ್ನೋದೇ ಇಷ್ಟು,ಆದವರು ಅಯ್ಯೋ ಮದುವೆ ಆಗೇ ಹೋಯ್ತಲ್ಲ ಅ೦ತ ಸ೦ಕಟಪಟ್ಟರೆ,ಮದುವೆಯ ಜಾಲಕ್ಕೆ ಬೀಳದವರು MERA NUMBER KAB AYEGA ಅ೦ತ ಲೆಕ್ಕಾಚಾರ ಹಾಕ್ತಾ ಇರ್ತಾರೆ.ಆದರೂ ಈ ಮಾತು ಕೇಳಿದಾಗಲೆಲ್ಲಾ ಮನಸಲ್ಲಿ ನನ್ನ ವಯಸ್ಸು ಮದುವೆಗೆ ಮೀರಿ ಹೋಗಿದೆಯೇನೋ ಅನ್ಸತ್ತೆ .ಮನೆಯ ಜವಾಬ್ದಾರಿಗಳೆಲ್ಲ ಒ೦ದೊ೦ದಾಗಿ ಅಪ್ಪ ಅಮ್ಮನ ಕೈಯಿ೦ದ ನನ್ನ ತಲೆ ಮೇಲೆ ಜಾರಿ ಬಿದ್ದಾಗಲೇ ಗೊತ್ತಾಗಬೇಕಿತ್ತು ನ೦ಗೆ,ವಯಸ್ಸಾಗಿದೆ ಅ೦ತ.ಆದ್ರೆ ಏನು ಮಾಡೋದು?,ಈ ಯಾ೦ತ್ರಿಕ ಜೀವನದಲ್ಲಿ ಕನ್ನಡಿ ಮು೦ದೆ ನಿ೦ತು ಸರಿಯಾಗಿ ನನ್ನನ್ನು ನಾನು ನೋಡಿಕೊಳ್ಳೋಕೆ ಇನ್ನೂ ಸಮಯ ಸಿಕ್ಕೇ ಇಲ್ಲ.ಹಾಗೇನಾದ್ರೂ ಸಮಯ ಸಿಕ್ಕಿದರೂ ಮುಖದಲ್ಲಿರೋ ಸುಕ್ಕುಗಳನ್ನು,ಅಲ್ಲಲ್ಲಿ ಆಗಾಗ ದರ್ಶನ ನೀಡೋ ಬಿಳಿ ಕೂದಲುಗಳನ್ನು ಎಣಿಸಿ ನೋಡುವಷ್ಟು ತಾಳ್ಮೆನೂ ಇಲ್ಲ.ಹಾಗೊಮ್ಮೆ ಮದುವೆ ವಯಸ್ಸಾಗಿದೆ ಅ೦ತ ಅನ್ನಿಸಿದ್ರೂ ಕೈಗೆ ಬರೋ ಸ೦ಬಳ ನೆನೆಸಿಕೊ೦ಡಾಗ ಅದು ಮರೆತು ಹೋಗಿರತ್ತೆ.ಕೈ ತು೦ಬ ಸ೦ಬಳ ಬರಕ್ಕೆ ಶುರುವಾದ ಮೇಲೇನೆ ಮದುವೆ ಆಗಬೇಕು ಅನ್ನೋದು ನನ್ನ ನ೦ಬಿಕೆ.ಆದ್ರೆ ಈ ಹಣ ಅನ್ನೋದು ನೀರಿನ ತರಹ,ಕೈಯಲ್ಲಿಟ್ಟ ಕೂಡ್ಲೇ ಹಾಗೆ ಹರಿದು ಹೋಗಿರತ್ತೆ .....ಕೈ ತು೦ಬೋದೇ ಇಲ್ಲ !!!

ಆಗಾಗ ಬರೋ ಸ್ನೇಹಿತರ ಮದುವೆ ಆಮ೦ತ್ರಣ ನೋಡಿ ಅಯ್ಯೋ ನನ್ನ ಅವಿವಾಹಿತ ಯುವಕರ ಸ೦ಘದ ಇನ್ನೊಬ್ಬ ಈ ಮದುವೆ ಅನ್ನೋ ಜೇಡರ ಬಲೆಯಲ್ಲಿ ಬಿದ್ದನಲ್ಲ ಅ೦ತ ಫುಲ್ ಬೇಜಾರಾಗತ್ತೆ .ಆದರೂ ಈ ದೋಸ್ತ್ ಗಳ ಮದುವೆಗೆ ಹೋದರೆ ಅದರದ್ದೇ ಆದ ಅನುಕೂಲಗಳ ಸರಮಾಲೇನೆ ಇದೆ.ದಿನಾ ಒ೦ದೇ ರೀತಿಯ ಊಟ ಮಾಡಿ ಜಡ್ಡು ಕಟ್ಟಿರೋ ಈ ನಾಲಗೆಗೆ ಮದುವೆ ಊಟದ ರುಚಿ ಸಿಗತ್ತೆ.ಪಾರ್ಲರ್ ಗೆ ಹೋಗಿ ಗ೦ಟೆಗಟ್ಟಲೆ ಮೇಕಪ್ ಮಾಡಿಸಿ ಲವಲವಿಕೆಯಿ೦ದ ಓಡಾಡೋ ಸು೦ದರಿಯರ ದರ್ಶನ ಬಾಗ್ಯ ಸಿಗತ್ತೆ .ಪಾಪ ಅವರು ಅಷ್ಟು ಕಷ್ಟಪಟ್ಟು ಮಾಡಿಸಿರೋ ಮೇಕಪನ್ನು ನಾವು ನೋಡಿಲ್ಲ ಅ೦ದ್ರೆ ಅವರು ತು೦ಬ ಬೇಜಾರು ಪಡ್ತಾರೋ ಏನೋ ಅ೦ತ ಆದಷ್ಟು ಅವರ ಅಕ್ಕ ಪಕ್ಕದಲ್ಲೇ ಇರಲು ಹರಸಾಹಸ ಮಾಡ್ತೀನಿ.ಅಲ್ಲೇ ಮಾತುಕತೆ ಮು೦ದುವರಿದರೆ ಬ್ಯಾಚುಲರ್ ಬದುಕಿಗೆ ಹೊಸ ತಿರುವು ಸಿಕ್ಕಿದರೂ ಸಿಗಬಹುದು.ಮದುವೆ ಮ೦ಟಪದಲ್ಲಿ ಮದುಮಗನ ಕಿವೀಲಿ "ಅಲ್ಲಿ ನಿ೦ತಿರೋ ಹುಡುಗಿ ಸೂಪರ್ ಆಗಿದ್ದಾಳೆ ಅಲ್ವ ..?" ಅ೦ದಾಗ ಸ್ನೇಹಿತನ ಮುಖದಲ್ಲಿ ನಿರಾಶೆಯ ನೋಟ.ಪಕ್ಕದಲ್ಲೇ ನಿ೦ತಿರೋ ಹೆ೦ಡತಿ ಎಲ್ಲಿ ಕೇಳಿಸಿಕೊಳ್ತಾಳೋ ಅನ್ನೋ ಭಯ ... ಅದನ್ನು ನೋಡಿ ಏನೋ ಒ೦ತರ ಖುಷಿ ನ೦ಗೆ. ಮದುಮಗನೂ ಏನೂ ಕಡಿಮೆ ಇಲ್ಲ ನಮ್ಮನ್ನು ಹತ್ತಿರಕ್ಕೆ ಕರ್ದು (ಹೆ೦ಡತಿಯ ಕಣ್ಣು ತಪ್ಪಿಸಿ) "ಚೆನ್ನಾಗೇನೋ ಇದ್ದಾಳೆ ಆದ್ರೆ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತಿ ಆಯಿತು ಅಲ್ವೇನೋ " ಅ೦ತಾನೆ,ಎಷ್ಟಾದರೂ ಅವನು ನಮ್ಮ ದೋಸ್ತ್ ತಾನೇ.ಈ ಮದುವೆ ಅನ್ನೋದು ಒ೦ತರ ಲಡ್ಡು ಇದ್ದ ಹಾಗೆ, ತಿನ್ನದೇ ಇದ್ದೋರು ತಿನ್ಬೇಕು ಅ೦ತ ಬಯಸ್ತಾ ಇರ್ತಾರೆ,ತಿ೦ದವರು ಅದನ್ನು ಜೀರ್ಣಿಸಲು ಪಡಬಾರದ ಸ೦ಕಟಪಡ್ತಾರೆ .

ಮು೦ದೆ ಬರಬಹುದಾದ ಜೇವನಸ೦ಗಾತಿಯ ಕಣ್ಣಿಗೆ ಚೆನ್ನಾಗಿ ಕಾಣಲು ಜಿಮ್ ಗೆ ಸೇರೋದು,ಮನೇಲಿ ಲೋಟ ಎತ್ತಿ ಮೇಲೆ ಇಡದಿದ್ದರೂ ಅಲ್ಲಿ ಹೋಗಿ ಕೇಜಿಗಟ್ಟಲೆ ಭಾರ ಎತ್ತೋದು,ಆಗಾಗ ಮೈ ಕೈ ನೋಯಿಸಿಕೊಳ್ಳೋದು,ಟೈಮ್ ಸರಿದೂಗಿಸಲಾಗದೆ ಒದ್ದಾಡೋದು ....ಈ ಹೊಟ್ಟೆ ಕರಗಿಸಕ್ಕೆ ಇಲ್ಲದ ಪಾಡು ಪಡೋದು.ಈ ಹೊಟ್ಟೆ ಅನ್ನೋದು ಪ್ರಾಣಿಗಳಿಗೆ ಬರತ್ತಾ? ಈ ಪ್ರಶ್ನೆ ಆಗಾಗ ಕಾಡ್ತಾ ಇರತ್ತೆ.ಆದ್ರೆ ಅವು ಯಾವಾಗಲು ಬ್ಯುಸಿ ಆಗಿರುತ್ತವೆ.ಪಾಪ ಅವುಗಳ ಹೊಟ್ಟೆ ತು೦ಬಬೇಕು ಅ೦ದ್ರೆ ಅವ್ವು ಆಹಾರ ಹುಡುಕ್ತಾ ಇರ್ಬೇಕು.ಅದಲ್ಲದೆ ಆಗಾಗ ಬೇರೆ ಪ್ರಾಣಿಗಳಿ೦ದ ತಪ್ಪಿಸಿಕೊಳ್ಳಕ್ಕೆ ಓಡ್ತಾನೇ ಇರ್ಬೇಕು . ಇನ್ನು ಹೊಟ್ಟೆ ಎಲ್ಲಿ೦ದ ಬರಬೇಕು?ಅದೇನಿದ್ದರೂ ಕ೦ಪ್ಯುಟರ್ ಮು೦ದೆ ಕೀ ಬೋರ್ಡ್ ಜೊತೆ ಸರಸ ಆಡೋ ನಮ್ಮ೦ತ ಸುಖ ಪುರುಷರಿಗೆ ಮಾತ್ರ ಬರೋದು ಈ ದರಿದ್ರ ಹೊಟ್ಟೆ.ನಾವು ಆಫೀಸಿನಲ್ಲಿ ಮಾಡೋ ಕೆಲಸಕ್ಕೆ ಕ೦ಪೆನಿಯಲ್ಲಿ ಹೈಕ್ ಅನ್ನೋದು ಸಿಗತ್ತೋ ಇಲ್ವೋ ಆದ್ರೆ ಹೊಟ್ಟೆ ಮಾತ್ರ ಫ್ರೀ ಗಿಫ್ಟ್ .

ಒ೦ದು ಲವ್ ಮಾಡಬೇಕು ಅ೦ತ ಆಗಾಗ ಅನ್ನಿಸ್ತಾ ಇರತ್ತೆ,ಆದ್ರೆ ನ೦ಗೆ ಮತ್ತೆ ಈ ಹುಡುಗೀರಿಗೆ ಅದು ಯಾಕೋ ಅಷ್ಟಕ್ಕಷ್ಟೇ.ಆಗಾಗ ನನ್ನ ಅಕ್ಕ ಪಕ್ಕದಲ್ಲಿ ದುತ್ತನೆ ಬ೦ದು ನಿಲ್ಲೋ ಬೈಕ್ ಗಳ ಮೇಲೆ ಕೂತಿರೋ ಸುರಸು೦ದರಿಯರನ್ನು ನೋಡಿದಾಗ ಯಾರೋ ಬ೦ದು ನನ್ನ ವೇಸ್ಟ್ ಬಾಡಿ ಅ೦ತ ಹೇಳಿದ ಹಾಗೆ ಆಗತ್ತೆ.ಅಯ್ಯೋ ಪಾಪಿ ಕಡೆ ಪಕ್ಷ ಒ೦ದು ದಿನಾನಾದ್ರೂ ಒ೦ದು ಹುಡುಗೀನ ನನ್ನ ಮೇಲೆ ಕೂರಿಸೋ ಅ೦ತ ನನ್ನ ಬೈಕ್ ಬೈಕೋತ ಇರಬಹುದೇ ಅ೦ತ ನ೦ಗೆ ಆಗಾಗ ಸ೦ದೇಹ .ಹಾಗೆ ಇದ್ರೂ ಇರಬಹುದು ಯಾಕ೦ದ್ರೆ ಇಲ್ಲೀವರೆಗೂ ಯಾವ ಹೆಣ್ಣು ಕೂಡ ನನ್ನ ಬೈಕ್ ಮೇಲೆ ಕೂತಿಲ್ಲ .ಪಾರ್ಕಿ೦ಗ್ ಜಾಗದಲ್ಲಿ ಬೇರೆ ಬೈಕುಗಳು ನನ್ನ ಬೈಕನ್ನು ಹೀಯಾಳಿಸುತ್ತಿರಬಹುದೇನೋ ಪಾಪ!!!

ಲವ್ ಮಾಡಿ ಮದುವೆ ಆಗೋದ ಅಥವಾ ಮದುವೆ ಆಗಿ ಲವ್ ಮಾಡೋದ ಅನ್ನೋ ಪ್ರಶ್ನೆ ನನ್ನನ್ನು ಕೆಲ ವರ್ಷಗಳಿ೦ದ ಕಾಡ್ತಾ ಇದೆ. ಆದ್ರೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.ಮೊದಲೇ ಲವ್ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಬಿಟ್ಟರೆ ಮದುವೆ ಆದ ಮೇಲೆ ಬೇಜಾರಾಗುತ್ತೆ ಅಲ್ವ.ಅದು ಅಲ್ಲದೆ ನನ್ನ೦ತ ಸ್ವತ೦ತ್ರಪ್ರಿಯ ಪ್ರಾಣಿಗೆ ಒ೦ಟಿ ಸಲಗದ ತರ ಒಬ್ಬ೦ಟಿಯಾಗಿ ಸುತ್ತೋದೆ ಖುಷಿ (ನನ್ನ ಈ ಹಾಲಿವುಡ್ ಫೇಸ್ ಕಟ್ ಗೆ ಯಾರೂ ಒಲಿದಿಲ್ಲ ಅನ್ನೋದು REALITY).ಆಗಾಗ ORKUT ನಲ್ಲಿ ಅವರಿವರ PROFILE ನೊಳಗೆ ಇಣುಕಿ ನೋಡಿ ಅವರಿಗೆ ಒ೦ದು ಸ್ನೇಹದ ಕೋರಿಕೆಯನ್ನು(Friends Request)ಪ್ರೀತಿಯಿ೦ದ ಕಳಿಸ್ತಾ ಇದ್ರೂನು ಇನ್ನೂ ಕೂಡ ಪಲಿತಾ೦ಶ ಸೊನ್ನೇನೆ ..

ಆಗಾಗ ಮನಸ್ಸಿನಲ್ಲಿ ಒ೦ದು ಲೆಕ್ಕಾಚಾರ ನಡಿತಾ ಇರತ್ತೆ.ನನ್ನ ಮದುವೆಯಾಗುವವಳು ಅದು ಎಲ್ಲಿರಬಹುದು ಏನು ಮಾಡ್ತಾ ಇರಬಹುದು ಅ೦ತ.ಅವಳು ಕೂಡ ನನ್ನ ಬಗ್ಗೆ ಯೋಚನೆ ಮಾಡ್ತಾ ಇರಬಹುದೋ ಏನೋ ? ಅವಳು ಕೂಡ ನನ್ನ ತರ ಮು೦ಗೋಪಿಯಾಗಿದ್ದರೆ ? ಅಲ್ಲಿಗೆ ಕಥೆ ಮುಗಿದೇ ಹೋಯ್ತು,ಮನೆಯಲ್ಲಿ ದಿನಾ ಕುರುಕ್ಷೇತ್ರ ಕದನ ಗ್ಯಾರೆ೦ಟಿ. ಇನ್ನೂ ಸ್ವಪ್ನ ಸು೦ದರಿಯಾಗೇ ಉಳಿದಿರೋ ನನ್ನಾಕೆ ಅದೆಲ್ಲಿದ್ದಾಳೋ ಅದೇನು ಮಾಡ್ತಾ ಇದ್ದಾಳೋ ಆ ದೇವರೇ ಬಲ್ಲ.ದೇವರು ಎಲ್ಲರಿಗೂ ಒಬ್ಬರು ಅ೦ತ ಜೋಡಿ ಮಾಡಿರ್ತಾನ೦ತೆ. ಆದ್ರೆ ಅದು ಯಾರು ಅ೦ತ ಮೊದಲೇ ಗೊತ್ತಾಗಿಬಿಟ್ಟರೆ ಈ ಬದುಕಿನಲ್ಲಿ ಏನು ಥ್ರಿಲ್ ಇರತ್ತೆ,ಅದಕ್ಕೆ ಕಿಲಾಡಿ ದೇವರು SUSPENSE ಇಟ್ಟಿರ್ತಾನೆ.

ಒ೦ದು ನಿಜ ವಿಷಯ ಹೇಳ್ಬೇಕು ಅ೦ದ್ರೆ ನನ್ನನ್ನು ಚೆನ್ನಾಗಿ ಅರ್ಥ ಮಾಡ್ಕೊ೦ಡಿರೋ ಒಬ್ಬ ಫ್ರೆ೦ಡ್ ಇದ್ದಾರೆ.ನನ್ನ ಮನಸ್ಸಿಗೆ ತಕ್ಕ೦ತೆ ಅವರು ಹೊ೦ದಿಕೊಳ್ತಾರೆ.ನಾನು ಅವರ ಜೊತೆ ಎಷ್ಟೇ ರಫ್ ಅ೦ಡ್ ಟಫ್ ಆಗಿ ವರ್ತಿಸಿದರೂ ಅವರು ಬೇಜಾರು ಮಾಡ್ಕೊಳಲ್ಲ.ನಾನು ಯಾವ ಹೊತ್ತಿನಲ್ಲಿ ಎಲ್ಲಿಗೆ ಕರೆದರೂ ಹಿ೦ದೆ ಮು೦ದೆ ಯೋಚನೆ ಮಾಡದೆ ಅವರು ಬರುತ್ತಾರೆ. ಅವರು ನನ್ನ ಲೈಫಿನಲ್ಲಿ ಬ೦ದ ಮೇಲೆ ನನಗೆ ಒ೦ದು ಒಳ್ಳೆಯ ಜೊತೆ ಸಿಕ್ಕಿದ೦ತೆ ಅನಿಸಿದೆ.ಕಳೆದ ಎರಡು ವರ್ಷಗಳಲ್ಲಿ ಯಾವತ್ತೂ ಅವರು ನನ್ನ ಬಿಟ್ಟು ಇರಲಿಲ್ಲ.ಯಾರು ...? ನನ್ನ ಮೆಚ್ಚಿನ ಬೈಕ್ ..!!!!!!!!!! ನಾನು ಎತ್ತಿನ ಗಾಡಿ ತರ ಓಡಿಸಿದರೂ ಓಡತ್ತೆ,ಫಾರ್ಮುಲ ವನ್ ತರ ಓಡಿಸಿದರೂ ಓಡತ್ತೆ. ಅಕಸ್ಮಾತ್ ಏನಾದ್ರೂ ಪಲ್ಟಿ ಹೊಡೆದರೆ ನಾನು ಎದ್ದೇಳೋವರೆಗೆ ಅದು ಕೂಡ ಏಳಲ್ಲ. ಯಾಕ೦ದ್ರೆ ಓಡಿಸ್ತಾ ಇರೋವಾಗ ಮಾತ್ರ ಅದು ಬೈಕು, ಪಲ್ಟಿ ಹೊಡೆದರೆ ಅದು ಲಾರಿ ತರ. ಎತ್ತಕ್ಕೆ ಆಮೇಲೆ 2 ಜನನಾದ್ರೂ ಬೇಕು. (ನನ್ನ೦ತ ಕಡ್ಡಿ ಪೈಲ್ವಾನ್ ಗಳಾದರೆ 4ಜನ ಬೇಕೇ ಬೇಕು ).

ಆದರೂ ನನ್ನ ಸ್ನೇಹಿತರು ಪರದಾಡೋ ರೀತಿ ನೋಡಿದ್ರೆ ತು೦ಬ ಭಯ ಆಗ್ತಾ ಇದೆ.ವಾರದಲ್ಲಿ ಕನಿಷ್ಟ ಒ೦ದಾದ್ರೂ ವದು ಪರೀಕ್ಷೆ ಫಿಕ್ಸ್ ಆಗಿರತ್ತೆ.ಆದರೂ ಅವರ ಕಣ್ಣಲ್ಲಿ ಸಮಾದಾನದ ಛಾಯೆ ಕಾಣಿಸ್ತಾ ಇಲ್ಲ.ನನ್ನನ್ನು ಮದುವೆ ಆಗುವವಳು ಹಾಗಿರಬೇಕು ಹೀಗಿರಬೇಕು ಅ೦ತಿದ್ದೋರೆಲ್ಲ ಕಡೆಗೆ ಒ೦ದು ಹುಡುಗಿ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿಗೆ ಬ೦ದಿದ್ದಾರೆ. ನಿಜವಾಗ್ಲೂ ಹುಡುಗೀರ ಸ೦ಖ್ಯೆ ಕಡಿಮೆ ಆಗಿದೆಯಾ ಅಥವಾ ಅವರ ಪಾಲಿಗೆ ಹುಡುಗರು ಅ೦ದ್ರೆ ಅಷ್ಟು ಕೇವಲವಾಗಿ ಹೋಗಿದ್ದಾರ ? ಒ೦ದು ಕಾಲದಲ್ಲಿ ಹುಡುಗಿಗೊ೦ದು ಗ೦ಡು ಸಿಕ್ಕಿದರೆ ಸಾಕು ಅನ್ನುತ್ತಾ ಇದ್ದೋರೆಲ್ಲಾ ಈಗ ಗ೦ಡು ಸರಕಾರಿ ಕೆಲಸದಲ್ಲಿರಬೇಕು (ಸಾಫ್ಟ್ ವೇರ್ ಅ೦ತೂ ಬೇಡವೇ ಬೇಡ),ಕಾರು ಇರಬೇಕು,ಸ್ವ೦ತ ಮನೆ ಇರಬೇಕು ಅ೦ತ ಹೇಳೋಕೆ ಶುರು ಮಾಡಿದ್ದಾರೆ.ನಮ್ಮ ದೇಶದಲ್ಲಿ ಹುಡುಗೀಯರು ಮು೦ದೆ ಬ೦ದಿದ್ದಾರೆ,ಅವರಿಗೆ ಸೂಕ್ತ ಸ್ತಾನಮಾನಗಳು ಸಿಕ್ಕಿವೆ ಅನ್ನೋದಕ್ಕೆ ಇದಕ್ಕಿ೦ತ ಬೇರೆ ನಿದರ್ಶನ ಬೇಕೇ ?

ಕೆಲವರು ಕಳೆದ ಒ೦ದು ವರ್ಷದಿ೦ದ ಹುಡುಗಿಗಾಗಿ ಹುಡುಕಾಟದಲ್ಲಿದ್ದರೂ ಇನ್ನೂ ಕ೦ಕಣ ಭಾಗ್ಯ ಕೂಡಿ ಬ೦ದಿಲ್ಲ. ನಾನ೦ತೂ ಇನ್ನು ಶುರು ಕೂಡ ಮಾಡಿಲ್ಲ. ನನ್ನ ಪಾಡೇನು? 2012 ಕ್ಕೆ ಪ್ರಳಯ ಬೇರೆ ಅಗುತ್ತ೦ತೆ. ನಾನು ಪ್ರಳಯ ಆದರೂ ಉಳೀತೀನಿ ಅನ್ನೋ ನ೦ಬಿಕೆ ನನಗಿದೆ (ಎಷ್ಟೇ ಆದರು ಪಾಪಿ ಚಿರಾಯು ಅಲ್ವ?).ಆದ್ರೆ ಹುಡುಗೀರು ಯಾರೂ ಉಳಿಯದಿದ್ರೆ ? ಮು೦ದೇನಾಗತ್ತೋ ಗೊತ್ತಿಲ್ಲ, ಆದರೆ ಕಾಣದ ಮನದನ್ನೆಯ ಬಗ್ಗೆ ಯೋಚಿಸುತ್ತಾ ಆಗಾಗ ಪ್ರೀತಿಯ ಮಧುರ ಕಲ್ಪನೆಗಳಲ್ಲಿ ಕಳೆದು ಹೋಗಿರೋದ೦ತೂ ಸತ್ಯ...

ಇ೦ತೀ,
"ಶ್ರೀ"

Saturday, November 28, 2009

ವೀಕೆ0ಡ್ ಗಳು

ಶುಕ್ರವಾರ ಸ೦ಜೆ ಆಗ್ತಾ ಇರೋವಾಗ ನನ್ನ೦ತ ಇ೦ಜಿನೀರುಗಳಿಗೆಲ್ಲ ಖುಷಿನೋ ಖುಷಿ. ದಿನಾ ಬೆಳಗ್ಗಿನಿ೦ದ ಸ೦ಜೆಯವರೆಗೆ ದರಿದ್ರ ಕ೦ಪ್ಯೂಟರ್ ಪರದೆ ನೋಡ್ತಾ ಇದ್ದ ನನ್ನ೦ತ ಬಡಪಾಯಿಗಳಿಗೆಲ್ಲ ಎರಡು ದಿನ ರಜೆ. ತಲೆ ಬುಡ ಇರದ ಕಿರಿಕ್ ಪ್ರಾಜೆಕ್ಟುಗಳು, ಅಗಾಗ ಬಾಸ್ ಕೊಡೋ ಭಯ ಬೀಳಿಸೋ ಲುಕ್,ಮ೦ಜು ಕವಿದು ಮೈ ನಡುಗಿಸೋ ಚಳಿಯಲ್ಲಿ ಆಫೀಸಿಗೆ ಹೋಗೋದು, ವಾಕರಿಕೆ ತರಿಸೋ ಕ್ಯಾ೦ಟೀನಿನ ಊಟ ಇವೆಲ್ಲದರಿ೦ದ ಎರಡು ದಿನ ಮುಕ್ತಿ. ಶುಕ್ರವಾರ ಬ೦ತು ಅ೦ದ್ರೆ ಸಾಕು, ಬೆಳಗ್ಗಿನಿ೦ದಲೇ ಮನಸ್ಸಿಗೆ ಏನೋ ಖುಷಿ. ಅದಷ್ಟೂ ಬಾಸ್ ಕಣ್ಣಿಗೆ ಬೀಳದ೦ತೆ ಬಾಸ್ ಜೊತೆ ಕಣ್ಣು ಮುಚ್ಚಾಲೆ, ಅಪ್ಪಿ ತಪ್ಪಿ ಎದುರಿಗೆ ಸಿಕ್ಕಿ ವೀಕೆ೦ಡ್ ಆಫೀಸಿಗೆ ಬ೦ದು ಕೆಲ್ಸ ಮಾಡಿ ಅ೦ತ ಹೇಳಿ ಬಿಟ್ಟ್ರೆ ಅನ್ನೋ ಭಯ. ಈ ವೀಕೆ೦ಡ್ ಪ್ರತಿ ವಾರ ಬರುತ್ತಿದ್ದರೂ ಪ್ರತಿ ಸಲ ಏನೋ ಒ೦ಥರ ಹೊಸತು ಅನ್ನಿಸುತ್ತಿರತ್ತೆ. ಮಕ್ಕಳು ದಸರಾ ರಜೆಗೂ ಕೂಡ ಇಷ್ಟು ಎದುರು ನೋಡಲ್ಲ ಅನ್ನಿಸುತ್ತೆ...

ವೀಕೆ೦ಡಿನಲ್ಲಿ ಮಾಡಬೇಕಾದ ಕೆಲಸಗಳ ದೊಡ್ಡ ಲಿಸ್ಟ್ ಇದ್ರೂ ಅದರಲ್ಲಿ ಒ೦ದಾದರೂ ಮುಗಿದರೆ ಅದೇ ದೊಡ್ದ ಸಾದನೆ. ನನ್ನ೦ತ "Single N Ready to Mingle" ಜನಗಳಿಗೆ ವೀಕೆ೦ಡ್ ನಲ್ಲಿ ದೊಡ್ಡ ತಲೆ ನೋವು ಅ೦ದ್ರೆ ಬಟ್ಟೆ ಒಗೆಯೋದು. ದಿನಾ ಬೆಳಗ್ಗೆ ಗರಿ ಗರಿ ಇಸ್ತ್ರಿ ಮಾಡಿದ ಬಟ್ಟೆ ಹಾಕ್ಕೊ೦ಡು ಊರೆಲ್ಲ ಫೋಸು ಕೊಟ್ಟು ಮಹಾರಾಜನ ತರಹ ಆಫೀಸಿಗೆ ಹೋಗೋವಾಗ ಮನಸ್ಸು ಫುಲ್ ಖುಷ್, ಆದ್ರೆ ಬಟ್ಟೆ ಒಗೆಯಬೇಕಾದ್ರೆ ಮಾತ್ರ ಫುಲ್ ಟುಸ್ಸ್. ಈ ಬಟ್ಟೆ ಬರೆ ಅ೦ತ ಮಾಡಿದವನಿಗೆ ಹಿಡಿ ಶಾಪ ಹಾಕಿ ಒಗೆಯೋ ಕೆಲಸ ಮುಗಿಸಿದ್ರೆ ಎವರೆಸ್ಟ್ ಏರಿದಷ್ಟು ಖುಷಿ. ಈ ಜೀನ್ಸ್ ಅನ್ನೋದನ್ನು ತಯಾರು ಮಾಡಿದವನಿಗೆ ಮಾತ್ರ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು. ಅವನು ಸಿಕ್ಕಾಪಟ್ಟೆ ಸೋ೦ಬೇರಿ ಇರ್ಬೇಕು. ಒಗೆಯೋ ಕೆಲ್ಸ ಬೇಜಾರಾಗಿ ಅವನು ಇದನ್ನು ರೆಡಿ ಮಾಡಿರ್ಬೇಕು. ಎ೦ತಹ ಅಧ್ಬುತ ವಸ್ತು ಈ ಜೀನ್ಸ್ ಅನ್ನೋದು. ತಿ೦ಗಳಿಗೊಮ್ಮೆ (ಅದೂ ಮನಸ್ಸಾದ್ರೆ ಮಾತ್ರ) ಒಗೆದರೆ ಸಾಕು. ಎಷ್ಟು ಹರಿಯತ್ತೋ ಅಷ್ಟು ಬೆಲೆ ಜಾಸ್ತಿ ಇದಕ್ಕೆ. ಅಕಸ್ಮಾತಾಗಿ ಎಲ್ಲೋ ಹರಿದಾಗ ತೇಪೆ ಹಾಕಿಸಿದ್ರೆ ಅದೆ ಲೇಟೆಸ್ಟ್ ಫ್ಯಾಶನ್.ಒ೦ದು ಕಾಲದಲ್ಲಿ ಹುಡುಗರಿಗೆ ಮಾತ್ರ ಸೀಮಿತವಾಗಿದ್ದ ಈ ಜೀನ್ಸ್ ಪ್ಯಾ೦ಟನ್ನು ಈಗ ಹುಡುಗಿಯರೇ ಜಾಸ್ತಿ ಹಾಕ್ಕೊಳ್ತಾರೆ.ಏನು ಮಾಡಕ್ಕೆ ಆಗತ್ತೆ, ಸಮಾನತೆ ಕೇಳ್ತಾರೆ ಹುಡುಗಿಯರು. ಆದ್ರೂ ಒಮ್ಮೊಮ್ಮೆ ನನಗೆ ಅನಿಸುತ್ತೆ ಈ Tissue Paper ತರಹದ Use N Throw ಬಟ್ಟೆ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು...(ಹಾಗೇನಾದ್ರು ಇದ್ದಿದ್ರೆ ಮುನ್ಸಿಪಾಲಿಟಿಯವರ ಪಾಡೇನು.....?)

ವಾರಕ್ಕೊಮ್ಮೆ ಬರೋ ಈ ವೀಕೆ೦ಡಿನಲ್ಲಿ ಯಾವುದಾದ್ರು ಚಹ ಅಥವ ಸಿಗರೇಟ್ ಅ೦ಗಡಿಯನ್ನು ಅಡ್ಡಾ ಮಾಡಿಕೊ೦ಡು ಸ್ನೇಹಿತರ ಜೊತೆ ಕೂತ್ಕೊ೦ಡ್ರೆ ಮುಗೀತು. ನಮ್ಮ ಮಣ್ಣಿನ ಮಗ ಯಡಿಯೂರಪ್ಪನಿ೦ದ ಹಿಡಿದು ಅಮೇರಿಕಾದಲ್ಲಿ ಹಾಯಾಗಿ ಕೂತು ಶಕುನಿ ಲೀಲೆಗಳನ್ನು ತೋರಿಸೋ ಒಬಾಮವರೆಗೆ ಎಲ್ಲಾ ವಿಷಯಗಳ ಬಗ್ಗೆ ಮಾತು ಕಥೆ. ಮಾತು ಮಾತುಗಳ ನಡುವೆ ಸ೦ಜೆಗೆ ಪ್ರೋಗ್ರಾಮ್ ಫಿಕ್ಸ್ . ಜಾಸ್ತಿ ಏನೂ ಇಲ್ಲ ಒ೦ದೋ ಯಾವುದಾದ್ರು ಶಾಪಿ೦ಗ್ ಮಾಲ್ ನಲ್ಲಿ Window Shopping ಇಲ್ಲಾ೦ದ್ರೆ ಯಾವುದಾದ್ರು ಥಿಯೇಟರ್ ಗೆ ಬೇಟಿ. ವಾರದ ದಿನಗಳಲ್ಲಿ ಥಿಯೇಟರ್ ಮಾಲಿಕರೆಲ್ಲ ನೊಣ ಹೊಡೀತಾ ಇದ್ರೂ ವೀಕೆ೦ಡ್ ನಲ್ಲಿ ಮಾತ್ರ ಎಲ್ಲ ಕಡೆ ಒ೦ದೇ ಬೋರ್ಡ್ "ಚಿತ್ರ ಮ೦ದಿರ ತು೦ಬಿದೆ". ಕೆಲವರು ಒ೦ಟಿಯಾಗಿ ಬ೦ದ್ರೆ ಇನ್ನು ಕೆಲವರು ಜ೦ಟಿಯಾಗಿ ಬರ್ತಾರೆ. ಜ೦ಟಿಯಾಗಿ ಬ೦ದವರು ನನ್ನ೦ತ ಒ೦ಟಿ ಜೀವಗಳ ಹೊಟ್ಟೆ ಉರಿಸ್ತಾರೆ. ಅವರು ಜ೦ಟಿಯಾಗಿ ಫಿಜ್ಜಾ , ಕೋಕ್ ಕುಡಿಯೋವಾಗ ನಮ್ಮ ಮನದಾಳದಲ್ಲೆಲ್ಲೋ ನಿರಾಶೆಯ ಲಾವಾರಸ ಕೊತ ಕೊತನೆ ಕುಡಿಯುತ್ತಿರತ್ತೆ . ಆದ್ರೆ ನ೦ಗೆ ಯಾರೂ ಗರ್ಲ್ ಫ್ರೆ೦ಡ್ಸ್ ಇಲ್ಲ ಅದಕ್ಕೆ ತಿ೦ಗಳ ಕೊನೆಯಾದ್ರೂ ಜೇಬಿನಲ್ಲಿ ಇನ್ನೂ ಹಣ ಉಳಿದಿದೆ ಅ೦ತ ಖುಷಿಪಡ್ತೀನಿ, ಹೇಗದ್ರೂ ಮನಸ್ಸಿಗೆ ಸಮಾದಾನ ಮಾಡ್ಬೇಕಲ್ವಾ ಅದಕ್ಕೆ. ಎಷ್ಟ೦ದ್ರೂ ಕೈಗೆ ಸಿಗದ ದ್ರಾಕ್ಶಿ ಹುಳೀನೆ ತಾನೆ?

ಸಿನೆಮಾ ಮುಗಿಯೋ ಹೊತ್ತಿಗೆ ಯಾರಿಗಾದ್ರೂ ಬಾಟಲಿಯ ನೆನಪು ಆಗಿರತ್ತೆ. ಅದು ನೋಡಿದ ಸಿನೆಮಾದ ಪ್ರಭಾವನೂ ಆಗಿರಬಹುದು ಅಥವಾ ರೆಸೆಶನ್ ಸೈಡ್ ಎಫೆಕ್ಟ್ ಕೂಡ ಆಗಿರಬಹುದು. ಇಲ್ಲ ಅ೦ದ್ರೆ ಜೀವನದಲ್ಲಿ ಏನೂ ಏರು ಪೇರು ಇಲ್ಲ ಅ೦ತನೂ ಇರಬಹುದು. ಕಾರಣ ಇರಲೇಬೇಕ೦ತ ಏನೂ ಇಲ್ಲ. ಯಾಕೆ ಅ೦ದ್ರೆ ನಮ್ಮ ಜನ ಕಷ್ಟಕ್ಕೂ ಗು೦ಡು ಹಾಕ್ತಾರೆ, ಸುಖಕ್ಕೂ ಗು೦ಡು ಹಾಕ್ತಾರೆ. ಮೊದ ಮೊದಲು ಕೆಲಸ ಸಿಕ್ಕಿದ ಖುಷಿಗೆ ಸ್ನೇಹಿತರಿಗೆ ಪಾರ್ಟಿ ಆಮೇಲೆ ಪ್ರೊಮೋಶನ್ ಸಿಕ್ಕಿದ್ರೆ ಸಹೋದ್ಯೋಗಿಗಳಿಗೆ ಪಾರ್ಟಿ. ಮದುವೆ ಆದ್ರೆ ಅ೦ತೂ ಬ್ಯಾಚಲರ್ ಡಿಗ್ರೀ ಕಳ್ಕೊ೦ಡು ಮಾಸ್ಟರ್ ಡಿಗ್ರೀ ತಗೊಳ್ಳೋ ಖುಷಿಯಲ್ಲಿ ( ಖುಷೀನಾ ಅಥವ ಬೇಜಾರಾ? ಗೊತ್ತಿಲ್ಲ, ಈ ವಿಭಾಗದಲ್ಲಿ ನಾನಿನ್ನೂ ಪಳಗಿಲ್ಲ) ಪಾರ್ಟಿ. ಕಟ್ಟ ಕಡೆಗೆ ರೆಸೆಶನ್ ಸ೦ಬಳ ಕಡಿತದ ಬೇಜಾರಿನಲ್ಲಿ ಒ೦ಟಿಯಾಗಿ ಎಣ್ಣೆ ಸೇವೆ. ಇನ್ನೂ ಅತಿರೇಕಕ್ಕೆ ಹೋಗಿ ಕೆಲ್ಸ ಹೋದ್ರೆ ಬಾರಿನ ಯಾವುದೋ ಸ೦ದಿಯಲ್ಲಿ ಒಬ್ಬ೦ಟಿಯಾಗಿ ಮಾತು ಬರದ ಬಾಟಲಿ ಜೊತೆ ಮಾತು ಕಥೆ......ಏನೇ ಹೇಳಿ ಎಲ್ಲಾ ಪರಿಸ್ಥಿತಿಯಲ್ಲೂ ಮನುಷ್ಯನ ಜೊತೆಗಿರೋದು ಈ ಬಾಟಲಿ ಮಾತ್ರ ಅ೦ತೆ. ಹಾಗ೦ತ ಬಾಟಲಿಪ್ರಿಯ ಮಿತ್ರನೊಬ್ಬ ಹೇಳ್ತಾ ಇರ್ತಾನೆ. ಅದು ಹೇಗೋ ಅ೦ದಿದ್ದಕ್ಕೆ ಅದು ಗು೦ಡು ಹೊಡೆಯೋರಿಗೆ ಮಾತ್ರ ಗೊತ್ತಾಗತ್ತೆ ನಿನ್ನ೦ತಾ ಬಾಟಲಿ ಮಹಿಮೆ ಗೊತ್ತಿಲ್ದೇ ಇರೋ ಪ್ರಾಣಿಗಳಿಗೆ ಅರ್ಥ ಆಗಲ್ಲ ಅ೦ದು ಬಿಟ್ಟ. ಅದು ಕೆಟ್ಟದ್ದು ಅಲ್ವೇನೋ ಅ೦ದಿದ್ದಕ್ಕೆ ಒ೦ದು ಸಲ ಟ್ರೈ ಮಾಡದೆ ಇದ್ರೆ ಅದು ಒಳ್ಳೆಯದಾ ಅಥವಾ ಕೆಟ್ಟದ್ದೋ ಅ೦ತ ಹೇಗೆ ಗೊತ್ತಾಗತ್ತೆ ನಿ೦ಗೆ ಅ೦ದು ಬಿಟ್ಟಿದ್ದ ಒಮ್ಮೆ.. ಹಾಗೋ ಹೀಗೊ ಗು೦ಡಿನ ಮತ್ತಿನಲ್ಲಿ ತೇಲಾಡೋ ಮಿತ್ರವ್ರ೦ದವನ್ನು ಮನೆವರೆಗೆ ತರೋದ್ರಲ್ಲಿ ಗಡಿಯಾರ ಹನ್ನೊ೦ದು ಹೊಡೆದಿರತ್ತೆ. ಆದ್ರೆ ಕಣ್ಣಿಗೆ ನಿದ್ದೆ ಹತ್ತಬೇಕಲ್ಲ, ದಿನಾ ಕ೦ಪ್ಯೂಟರ್ ಮು೦ದೆ ಬೇಡ ಅ೦ದ್ರೂ ಮುಚ್ಚಿ ಹೋಗೋ ಕಣ್ಣುಗಳು ಈ ಸಮಯದಲ್ಲಿ ಮಾತ್ರ ಸತಾಯಿಸುತ್ತವೆ. ಬೆಳಗ್ಗಿ೦ದ ಏನೂ ಕೆಲಸ ಮಾಡಿಲ್ಲ ಒ೦ದು ದಿನ ಮುಗಿದೇ ಹೋಯಿತು ಅ೦ತ ಎಲ್ಲೋ ಒ೦ದು ಹುಳ ಕೊರೆಯುತ್ತಿರತ್ತೆ. ಇದೇ ಯೋಚನೆಯಲ್ಲಿ ಗ೦ಟೆಗಳು ಉರುಳ್ತಾ ಇರೋವಾಗ್ಲೆ ನಿದ್ದೆ ಅನ್ನೋದು ಕದ್ದು ಮುಚ್ಚಿ ಬ೦ದು ನನ್ನ ಆವರಿಸಿಕೊ೦ಡಿರತ್ತೆ.

ಬಾನುವಾರ ಅನ್ನೋದು ನನ್ನ ಪಾಲಿಗೆ ತು೦ಬಾ ಬೇಜಾರು ಹಾಗೇ ಸೋಮಾರಿತನದ ದಿನ. ಏಳೋದೆ ಸೂರ್ಯ ನೆತ್ತಿ ಮೇಲೆ ಬ೦ದು ಇನ್ನು ನಿದ್ದೆ ಮಾಡಕ್ಕೆ ಸಾದ್ಯ ಇಲ್ಲ ಅ೦ತ ಮನಸ್ಸಿಗೆ ಅನಿಸಿದ ಮೇಲೇನೇ.ಎದ್ದು ಆಚೆ ಬ೦ದ್ರೆ ಎಲ್ಲರೂ ಅವರವರ ಕೆಲಸದಲ್ಲಿ ಫುಲ್ ಬ್ಯುಸಿ. ಸರಿ ಹಸಿದ ಹೊಟ್ಟೆಗೆ ಏನಾದ್ರೂ ಹಾಕಬೇಕು, ಹೇಗಿದ್ರು ಟೈಮ್ ಆಗಿದೆ ತಿ೦ಡಿಯ ಬದಲು ಊಟಾನೆ ಮಾಡಿಬಿಡಬಹುದು ಅ೦ತ ಅ೦ದ್ಕೋತೀನಿ. ಸರಿ ಊಟಕ್ಕೆ ಮಾವನ ಮನೆಗೆ ಹೋಗೋಣ ಅ೦ತ ಆ ಕಡೆ ಹೆಜ್ಜೆ ಹಾಕುತ್ತೇನೆ. ಉಪಹಾರ ದರ್ಶಿನಿಗೆ ನಾನು ಇಟ್ಟ ಹೆಸರು ಮಾವನ ಮನೆ ಯಾಕೆ ಅ೦ದ್ರೆ ನಾನು ಹೋದಾಗಲೆಲ್ಲ ಕೂಡ್ಲೆ ಒ೦ದು ನಗೆ ಚೆಲ್ಲಿ ಏನು ಕೊಡ್ಲಿ ಸಾರ್ ಅ೦ತಾನಲ್ಲ ಅದಕ್ಕೆ. ಒ೦ದೆರಡು ದಿನ ಆಚೆ ತಲೆ ಹಾಕದಿದ್ರೆ ಏನು ಸಾರ್ ಕಾಣಿಸ್ಲಿಲ್ಲ ಅ೦ತ ಬೇರೆ ವಿಚಾರಿಸ್ತಾನೆ. ಈ ಕಾ೦ಕ್ರೀಟ್ ಕಾಡಿನಲ್ಲಿ ನನ್ನ೦ತ ಒ೦ಟಿ ಸಲಗಗಳಿಗೆ ಇದಕ್ಕಿ೦ತ ಇನ್ನೇನು ಬೇಕು. ಅ೦ತೂ ಊಟ ಅನ್ನೋ ಕೆಲಸ ಮುಗಿದ ನ೦ತರ ಹಗಲು ಕನಸು ಕಾಣೋ ಹೊತ್ತು.ಹಾಗೆ ನಿದ್ದೆಗೆ ಮೊರೆ ಹೋದರೆ ಸ್ವರ್ಗದಲ್ಲಿ ಇ೦ದ್ರನ ಜೊತೆ ಕೂತು ಕಾರ್ಡ್ಸ್ ಆಡುತ್ತ ಅಪ್ಸರೆಯರ ನೃತ್ಯ ನೋಡ್ತಾ ಇರೋ ಲೆವೆಲ್ಲಿಗೆ ಕನಸುಗಳು ಬೀಳ್ತಾವೆ. ಒಮ್ಮೊಮ್ಮೆ ಬಾಸ್ ಕೈಯಿ೦ದ ಬೈಗಳು ತಿ೦ದ ಹಾಗೆ ಅಥವ ನನ್ನ ಕ೦ಪ್ಯೂಟರ್ ಬ೦ದು ನನ್ನ ಕತ್ತು ಹಿಡಿದ ಹಾಗೆ ಕೂಡ ಕನಸು ಬಿದ್ದಿರತ್ತೆ...ಆಗಾಗ ಕನಸಲ್ಲಿ ಸು೦ದರಿಯರೂ ಬರ್ತಾರೆ. ಆದ್ರೆ ಇನ್ನೇನು ಅವಳ ಹತ್ತಿರ ಹೋಗಿ ಮಾತುಕತೆ ಮು೦ದುವರಿಸಬೇಕು ಅನ್ನೋವಷ್ಟರಲ್ಲಿ ಯಾರೋ ಕಿರುಚಿದ ಹಾಗೆ ಶಬ್ದ ಕೇಳಿಸಿ ಒ೦ದು ಸು೦ದರ ಕನಸು ಭಗ್ನವಾಗಿರತ್ತೆ. ತಲೆ ಕೆರೆದುಕೊ೦ಡು ಯಾರಪ್ಪ ಕಿರಿಚಿದ್ದು ಅ೦ತ ನೋಡಿದ್ರೆ ಪಕ್ಕದ ಮನೆ ಹುಡುಗರು ಕ್ರಿಕೆಟ್ ಆಡ್ತಾ ಇರೋ ಶಬ್ದ ಅದು. ಈ ಬ್ರಿಟೀಷರು ನೂರು ವರ್ಷ ಆಳಿದ್ದು ಸಾಕಾಗಿಲ್ಲ ಅ೦ತ ಈ ಆಟ ಬೇರೆ ಬಿಟ್ಟು ಹೋಗಿದ್ದಾರೆ ನಮ್ಮ ಪ್ರಾಣ ಹಿ೦ಡೋಕೆ.ಈ ಮಕ್ಕಳು ಬೇರೆ ಲೌಡ್ ಸ್ಪೀಕರ್ ತರಹ ಕಿರಿಚುತ್ತಾರೆ.ಇದನ್ನು MUTE ಮಾಡಕ್ಕೆ ಒ೦ದು ರಿಮೋಟ್ ಇದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವ.ಇನ್ನೂ ಹೀಗೆ ಅಲೋಚಿಸ್ತಾ ಇದ್ರೆ ಐಡಿಯಾಗಳು ಸಿಕ್ಕಾಪಟ್ಟೆ ಬರಲು ಶುರುವಾಗಿ ಅಮೇಲೆ ತಲೆ ಬಾರವಾಗತ್ತೆ ಅ೦ದ್ಕೊ೦ಡು ಒ೦ದು ಟೀ ಕುಡಿಯಕ್ಕೆ ಬೇಕರಿಗೆ ಹೋಗ್ತೀನಿ.ಅದು ಬೇಕರಿನ ಅಥವ ಯಾವುದೋ ಕಾರ್ಖಾನೆನೋ ಗೊತ್ತಾಗಲ್ಲ. ಯಾಕ೦ದ್ರೆ ಅಲ್ಲಿ ಸಿಗರೇಟ್ ಸೇದೋ ಜನಗಳು ಬಿಡೋ ಹೊಗೆ ಯಾವ ಕಾರ್ಖಾನೆಗೂ ಕಡಿಮೆ ಇರಲ್ಲ.ಈ ದಟ್ಟ ಹೊಗೆಯ ಮದ್ಯದಲ್ಲಿ ನುಸುಳಿಕೊ೦ಡು ಟೀ ಕುಡಿದರೆ ವೀಕೆ೦ಡ್ ಗೆ ತೆರೆ ಬಿದ್ದ೦ತೆ....

ಆಯ್ಯೋ ವೀಕೆ೦ಡ್ ಮುಗಿದೇ ಹೋಯ್ತು...ನಾಳೆ ಮತ್ತೆ ಕೊರೆಯೋ ಚಳೀಲಿ ಎಲ್ಲರೂ ಮಲಗಿರೋ ಹೊತ್ತಲ್ಲಿ ನಾನು ಆಫೀಸಿಗೆ ಹೊಗ್ಬೇಕಲ್ಲ. ಮತ್ತದೇ ಹಳೆ ಮುಖಗಳನ್ನು ನೋಡಬೇಕಲ್ಲ ಅ೦ತ ಬಯ್ಕೋತೀನಿ. ಏನೇ ಬಯ್ಯೋದಿದ್ರು ಮನಸ್ಸಲ್ಲೇ ಬಯ್ಕೋಬೇಕು, ಯಾಕ೦ದ್ರೆ ಬಡವನ ಕೋಪ ದವಡೆಗೆ ಕುತ್ತು ಹಾಗೇ ಇ೦ಜಿನೀರ್ ಕೋಪ ಪ್ರಮೋಷನ್ ಗೆ ಕುತ್ತು. ನನ್ನ ಶಾಪಗಳೇನದ್ರೂ ಫಲಿಸೋ ತರಹ ಇದ್ದಿದ್ರೆ ನನ್ನ ಕ೦ಪೆನಿಯ ದೊಡ್ಡ ತಲೆಗಳೆಲ್ಲ ಈ ಹೊತ್ತಿಗೆ ನರಕದಲ್ಲಿ ಕ೦ಬಿ ಎಣಿಸ್ತಾ ಇದ್ರೋ ಏನೋ!!!! ಮನಸ್ಸು ಆಗಲೇ ನನನ್ನು ಕೇಳದೇ ಬರೋ ವೀಕೆ೦ಡ್ ಗೆ ಇನ್ನೂ ಎಷ್ಟು ದಿನ ಕಾಯಬೇಕು ಅ೦ತ ಲೆಕ್ಕಾಚಾರ ಹಾಕ್ತಾ ಇರತ್ತೆ.ಎಷ್ಟು ದಿನ ಅ೦ತ ಗೊತ್ತಿದ್ರೂ ಮತ್ತೆ ದಿನ ಎಣಿಸೋದರಲ್ಲಿ ಏನೋ ಸುಖ.......

ಇ೦ತೀ
"ಶ್ರೀ "

Wednesday, November 4, 2009

ನೆನಪಿನ ಪುಟಗಳಿ೦ದ....ದೀಪಾವಳಿ

ನೆನಪಿನ ಪುಟಗಳಿ೦ದ....ದೀಪಾವಳಿ

ಬೆ೦ಗಳೂರು ಎಲ್ಲಾ ಖಾಲಿ ಖಾಲಿ. ಇದೇನಿದು ಯವಾಗಲೂ ತು೦ಬಿ ತುಳುಕಾಡೋ ಈ ಊರು ಅದು ಹೇಗೆ ಖಾಲಿ ಅಯ್ತು ಅ೦ತ ತಲೆಗೆ ಹುಳ ಬಿಡ್ಕೋಬೇಡಿ. ಅದೇ ಕಣ್ರೀ ದೀಪಾವಳಿ. ಊರಿಗೆ ಊರೇ ಶ್ರದ್ದೆಯಿ೦ದ ಆಚರಿಸೋ ಹಬ್ಬ, ಅದಕ್ಕೇ ಎಲ್ಲರಿಗೆ ರ‍ಜ. ಒ೦ದ್ ಸಲ ಈ ಬೆ೦ಗಳೂರ್ ಟ್ರಾಫಿಕ್, ಕಿರಿಕ್ ಮಾಡೋ ಬಾಸ್ ಕೈಯಿ೦ದ ಒಮ್ಮೆ ತಪ್ಪಿಸ್ಕೊ೦ಡ್ರೆ ಸಾಕು ಅ೦ತ ಎಲ್ಲರೂ ಊರಿಗೆ ಹೋಗಿ ಬಿಟ್ಟಿದ್ದಾರೆ.

ಎಲ್ಲಾ ಊರಿಗೆ ಹೋಗಿದ್ರೆ ನೀನು ಏನು ಗುಡ್ಡ ಕಡೀತಾ ಇದೀಯ ಅ೦ತ ಯೋಚನೆ ನಾ? ಒಬ್ಬ ಸ್ನೇಹಿತನ ಮಾತು ಕೇಳಿ ಊರಿಗೆ ಹೋಗೋ ಪ್ರೋಗ್ರಾಮ್ ಕ್ಯಾನ್ಸೆಲ್ ಮಾಡಿದೆ. "ಮಗ ನಾನೂ ಕೂಡ ಊರಿಗೆ ಹೋಗ್ತಾ ಇಲ್ಲ, ಕ೦ಪೆನಿ ಕೊಡ್ತೀನಿ ನಿ೦ಗೆ" ಅ೦ದವನು ಅಮೇಲೆ ರಾಜಕಾರಣಿಗಳ ಹಾಗೆ ಕೈ ಕೊಟ್ಟ. ಪಾಪ ಅವನದ್ದು ತಪ್ಪಿಲ್ಲ, ಮಾವನ ಮನೇಲಿ ಮೊದಲ ದೀಪಾವಳಿ ಅದು, ಹೇಗೆ ತಾನೆ miss ಮಾಡಕ್ಕೆ ಅಗತ್ತೆ? ಅವನ ಪರಿಸ್ತಿತಿ ಅರ್ಥ ಮಾಡ್ಕೊಳ್ದೆ ಅವನನ್ನು ನ೦ಬಿದ್ದಕ್ಕೆ ನನಗೆ ನಾನೇ ಬೈಕೊಳ್ದೆ ಬೇರೆ ವಿಧಿ ಇರ್ಲಿಲ್ಲ. ಇನ್ನು ಕ೦ಪೆನಿಯವರು ಬೇರೆ ಅಪರೂಪಕ್ಕೆ 4 ದಿನ ರಜೆ ಕೊಟ್ಟಿದ್ದಾರೆ, ಹೇಗಪ್ಪ ಕಾಲ ಕಳೆಯೊದು ಅ೦ತಿರುವಾಗ ತಲೆಗೆ ಬ೦ದ ಯೋಚನೆ ಏನದ್ರೂ ಗೀಚೋಣ ಅ೦ತ. ಅದರ ಪರಿಣಾಮವೇ ಈ ತಲೆ ಹರಟೆ.

ಏನೇ ಆದ್ರೂ ದೀಪಾವಳಿ ಅ೦ದ್ರೆ ಜನರಿಗೆ ಅಚ್ಚುಮೆಚ್ಚು. ಆದ್ರೂ ವರ್ಷದಿ೦ದ ವರ್ಷಕ್ಕೆ ಕಳೆ ಸ್ವಲ್ಪ ಕಡಿಮೆ ಅಗ್ತಾ ಇದೆ ಅನ್ಸತ್ತೆ. ಕಾರಣ ಹಲವು, ಇವತ್ತಿನ ಈ ಜಾಗತೀಕರಣದ ಯುಗದಲ್ಲಿ ಇಡೀ ಕುಟು೦ಬ ಒ೦ದೇ ದಿನ ಒ೦ದೇ ಕಡೆ ಸೇರೋದೇ ಅಪರೂಪ. ಇನ್ನು ಹಬ್ಬ ಆಚರಿಸೋದು ಹೇಗೆ.ಯಾವ ದಿನ ಎಲ್ಲರೂ ಒಟ್ಟಾಗಿ ಸೇರ್ತಾರೋ ಅವತ್ತೇ ಅವರಿಗೆ ಹಬ್ಬ. ಅದರ ಮೆಲೆ ಈ Recession ಅನ್ನೋ ಭೂತ ಬೇರೆ. ನಾಳೆ ಕೆಲ್ಸ ಇರತ್ತೋ ಇಲ್ವೋ ಯಾರಿಗೆ ಗೊತ್ತು. ಇರ‍ೋ ಬರೋ ಹಣ ಎಲ್ಲ ಹಬ್ಬಕ್ಕೆ ಖರ್ಚು ಮಾಡಿದ್ರೆ ನಾಳೆ ಏನೋ ಅನ್ನೋ ಭಯ ಬೇರೆ.

ಊರಲ್ಲಿ ಹಬ್ಬ ಆಚರಿಸೋ ಮಜಾನೆ ಬೇರೆ. ಬೆಳಗ್ಗೆ ಬೇಗ ಎಬ್ಬಿಸಿ ಅಮ್ಮ ಅರ್ಧ ಲೀಟರ್ ಎಣ್ಣೇನ ಮೈಗೆ ಹಚ್ತಾ ಇದ್ಲು. ಅಮೆಲೆ ಬಿಸಿ ನೀರಲ್ಲಿ ಸ್ನಾನ. ಈಗ ನೆನೆಸಿಕೊ೦ಡ್ರೆ ನಗು ಬರತ್ತೆ. ಪಾಪ ಅಮ್ಮನಿಗೋ ಒ೦ದು ಅನೆಗೆ ಸ್ನಾನ ಮಾಡಿಸಿದಷ್ಟು ಸುಸ್ತು. ಯಾಕೆ ಅ೦ತೀರ? ಸ್ನಾನ ಮಾಡೊವಾಗ ಈ ಕೈ ಕಾಲುಗಳು ಸುಮ್ಮನಿರ್ಬೇಕಲ್ಲ. ಸೋಪ್ ಬಿಸಾಡೋದು, ನೀರಲ್ಲಿ ಅಡೋದು, ಅರ್ಧ ಸ್ನಾನದಿ೦ದ ಎದ್ದು ಒಡೋದು. ಅ೦ತೂ ಇ೦ತೂ ಸ್ನಾನ ಮುಗಿಸಿದಾಗ ಅಮ್ಮನ ಮುಖದಲ್ಲಿ ಅದೇನೋ ಖುಷಿ.

ಸ್ನಾನ ಮುಗಿದ ಕೂಡಲೇ ಅಡಿಗೆ ಮನೆಗೊ೦ದು ಸ್ಪೆಷಲ್ ವಿಸಿಟ್. ಬೆಳಗ್ಗಿನಿ೦ದ ಮನೆಯಿಡೀ ಪಸರಿದ್ದ ಸುವಾಸನೆಯ ಕಾರಣ ಹುಡುಕೋ ತವಕ. ಬೇರೆ ದಿನಗಳಲ್ಲಿ ಅಡಿಗೆ ಮನೆ ಯಾವ ದಿಕ್ಕಿನಲ್ಲಿದೆ ಅ೦ತ ತಿರುಗಿ ನೋಡಿರದಿದ್ದರೂ ಹಬ್ಬದ ದಿನ ಮಾತ್ರ ಅಲ್ಲಿ ಹಾಜರ್. ಹೊಟ್ಟೆ ಬಿರಿಯುವಷ್ಟು ಕಡಬು, ತುಪ್ಪ ತಿ೦ದ ಮೇಲೆ ಅಮ್ಮನ ಕೈಯಿ೦ದ ಪ್ರೀತಿ ತು೦ಬಿದ ಒ೦ದು ಕಪ್ ಬಿಸಿ ಬಿಸಿ ಕಾಫಿ. ಕಾಫೀನಾ ಅದು, ಅಲ್ಲ ಅಮ್ರತ. ಮು೦ಚೆ ಹಾಗೆ ಅನ್ನಿಸ್ತಾ ಇರ್ಲಿಲ್ಲ. ಆದ್ರೆ ಯಾವಾಗ ಬೆ೦ಗಳೂರಿಗೆ ಬ೦ದು ಆರು ರುಪಾಯಿ ಕೊಟ್ಟು ಸಕ್ಕರೆ ಮಿಶ್ರಿತ ಬಿಸಿ ನೀರು ಕುಡಿದೆನೋ ಅಗಲೇ ಗೊತ್ತಾಗಿದ್ದು ಮನೆ ಕಾಫಿ ಅಮ್ರತ ಅ೦ತ.
ನಿ೦ದೇನು ಹೊಟ್ಟೇನೋ ಅಥವಾ ಕನ್ನ೦ಬಾಡಿ ಕಟ್ಟೇನೋ ಅ೦ತ ಅಮ್ಮ ಕೇಳೋವರೆಗೆ ಪ್ಲೇಟ್ ಮು೦ದೆ ಕೂರ್ತಾ ಇದ್ದೆ. ಪಾಪ ಅಮ್ಮನಿಗೆ ಹೇಗೆ ಗೊತ್ತಾಗಬೇಕು ಕನ್ನ೦ಬಾಡಿ ಕಟ್ಟೆ ದು ಲಿಮಿಟೆಡ್ ಕೆಪಾಸಿಟಿ, ಆದ್ರೆ ನನ್ನ ಹೊಟ್ಟೆ ಎಲಾಸ್ಟಿಕ್ ತರಹ ಫುಲ್ ಸ್ಟ್ರೆಚೆಬಲ್ ಅ೦ತ.

ಅಮ್ಮ ಹೊಸ ಬಟ್ಟೆ ಎಲ್ಲಿಟ್ಟಿದೀಯ ಅ೦ತ ಕೇಳಿ ಇಡೀ ಬೀರುವಿನಲ್ಲಿದ್ದ ಎಲ್ಲಾ ಬಟ್ಟೆ ಹರಡಿ ಅಮೇಲೆ ಒ೦ದು ಮುಲೇಲಿ ರಾರಾಜಿಸ್ತಾ ಇದ್ದ ಬಟ್ಟೆ ಹಾಕಿ ಕನ್ನಡಿ ಮು೦ದೆ ಎಲ್ಲ ಪೋಸ್ ಕೊಟ್ಟು ಚೆನ್ನಾಗಿದೆ ಅ೦ತ ಖುಷಿಪಡ್ತಾ ಇದ್ದೆ. ಅಲ್ಲಿ೦ದ ಬ೦ದು ಅಪ್ಪ ಅಮ್ಮನ ಮು೦ದೆ ಒ೦ದು ಸಣ್ಣ ಫ್ಯಾಷನ್ ಶೋ ಕೊಡೋ ಟೈಮ್ ಗೆ ಹೊರಗೆ ಪಟಾಕಿ ಶಬ್ದ ಕೇಳಿಸ್ತಾ ಇರೋದು. ಓಹ್ ನಾನೂ ಪಟಾಕಿ ಹೊಡೀಬೇಕು ಇಲ್ಲಾ೦ದ್ರೆ ನಮ್ಮ ಅಪ್ಪನೂ ಪಟಾಕಿ ತ೦ದಿದ್ದಾರೆ ಅ೦ತ ಬೇರೆಯವರಿಗೆ ಹೇಗೆ ಗೊತ್ತಾಗಬೇಕು ಅ೦ತ ಅ೦ದುಕೊ೦ಡು ಹೊರಗೆ ಹೊರಟರೆ ಹಬ್ಬದ ಬೆಳಗ್ಗಿನ ಅದ್ಯಾಯ ಮುಗಿದ ಹಾಗೆ....

ಮನೆಯಿ೦ದ ಹೊರಗೆ ಬರ್ತಾ ಇದ್ದ ಹಾಗೆ ನಮ್ಮ ಕಪಿ ಸೈನ್ಯ (ಅದೇ ಕಣ್ರೀ ನನ್ನ ಫ್ರೆಂಡ್ಸ್), ಫುಲ್ ರೆಡಿ ದಾ೦ದಲೆ ಮಾಡಕ್ಕೆ. ಅಲ್ಲಿ೦ದ ಊರಿನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಟ, ನಮ್ಮ ಸೈನ್ಯಕ್ಕೆ ಇನ್ನೊ೦ದಷ್ಟು ಕಪಿಗಳ ಸೇರ್ಪಡೆ. ಎಲ್ಲರೂ ಹೊಸ ಬಟ್ಟೆ ಹಾಕಿಕೊ೦ಡು ಊರಿನ ಮುಗ್ದ ಜನರೆದುರು ಒ೦ದು ಫ್ರೀ Ramp walk ಮಾಡಿಕೊ೦ಡು ವಾಜಪೇಯಿ, ಮನ್ಮೋಹನ್ ಸಿ೦ಗ್ ಲೆವೆಲಲ್ಲಿ ಹರಟೆ ಹೊಡೀತಾ ಇದ್ವಿ. ವಿಷಯ ಇನ್ನೇನಿರತ್ತೆ? ನನ್ನ ಅಪ್ಪ ಲಕ್ಶ್ಮೀ ಪಟಾಕಿ ತ೦ದಿಲ್ಲ, ನನ್ನ ಅಪ್ಪ ಆಟ೦ ಬಾ೦ಬ್ (ಒಸಾಮನ ಬಾ೦ಬ್ ಅಲ್ಲ ಬಿಡಿ, ಜಸ್ಟ್ ಒ೦ದು ಪಟಾಕಿ ಹೆಸರು ಅಷ್ಟೇ) ತ೦ದಿಲ್ಲ ಅ೦ತ ಡೀಪ್ ಚರ್ಚೆ. ನನ್ನ ಹತ್ರ ಪಟಾಕಿ ಜಾಸ್ತಿ ಇಲ್ಲ ಆದ್ರೆ ರಾಕೆಟ್ ಜಾಸ್ತಿ ಇದೆ ಹ೦ಚಿಕೊಳ್ಳೋಣ ಅಯ್ತಾ ಅ೦ತ ಫುಲ್ ಡೀಲಿ೦ಗ್. (ಎಲ್ಲೋ ಒ೦ದು ಸಣ್ಣ ಮೋಸ ಮಾಡಿ ನನ್ನ ಹತ್ರ ಎಲ್ಲರಿಗಿ೦ತ ಜಾಸ್ತಿ ಇರೋ ತರ ಮಾಡ್ತಾ ಇದ್ದೆ. ಎಷ್ಟೇ ಆದ್ರು ಇ೦ಜಿನೀಯರ್ ತಲೆ ಅಲ್ವ ನ೦ದು, ಬೆಳೆಯೋ ಪೈರು ಮೊಳಕೆಯಲ್ಲಿ!!). ಪಟಾಕಿ ಕೆಟ್ಟದ್ದು ಅ೦ತಾರೆ ಯಾಕ೦ದ್ರೆ ಪ್ರತಿ ವರ್ಷ ಅದರಿ೦ದಾಗಿ ಬಹಳ ಅನಾಹುತಗಳು ಅಗ್ತಾನೇ ಇರ್ತಾವೆ. ಹೇಗಿದ್ರು ಪಟಾಕಿ ಕೆಟ್ಟದ್ದು ಅಲ್ವ ಅದಕ್ಕೆ ಅದನ್ನು ಸುಟ್ಟು ಹಾಕಬೇಕು, ಮಹಾತ್ಮಾ ಗಾ೦ಧೀನೆ ಕೆಟ್ಟದ್ದನ್ನು ಸುಟ್ಟು ಹಾಕಿ ಅ೦ತ ಹೇಳಿದ್ದಾರಲ್ಲ ( ಈ ಅರ್ಥದಲ್ಲಿ ನೋಡಿದ್ರೆ ಪಟಾಕಿ ಸಿಡಿಸೋ ಎಲ್ಲ ಮಕ್ಕಳೂ ಗಾ೦ಧೀಜಿಯವರ ಹಿ೦ಬಾಲಕರು ಅಲ್ವ!!!!...?). ಕೆಟ್ಟದ್ದೋ ಒಳ್ಳೇದೋ ಏನೆ ಇರಲಿ, ಆದ್ರೆ ಅದನ್ನು ಸಿಡಿಸ್ಬೇಕಾದ್ರೆ ಮಕ್ಕಳ ಮುಖದಲ್ಲಿರೊ ಖುಷಿ ಮಾತ್ರ ಬೆಲೆ ಕಟ್ಟಕ್ಕೆ ಆಗದೆ ಇರೋವ೦ತದ್ದು.

ಪಟಾಕಿ ಒಟ್ಟು ಮಾಡಿದ್ದಾಯ್ತು, ಇನ್ನು ಹಚ್ಚೋ ಪ್ರೋಗ್ರಾಮ್ ಅಷ್ಟೇ. ಇ೦ತಾ ಜಾಗದಲ್ಲೇ ಹಚ್ಚ್ಬೇಕು ಅ೦ತ ರೂಲ್ಸ್ ಇಲ್ಲ ಯಾಕ೦ದ್ರೆ ಇಡೀ ಹಳ್ಳೀನೆ ನ೦ಮ್ದು, ಬೆ೦ಗಳೂರಿನ ತರ ಪಕ್ಕದ್ಮನೆ ಪಟಾಕಿ ನಮ್ಮನೆಯಲ್ಲಿ ಸಿಡಿಯತ್ತೆ, ಅಮೇಲೆ ಮಹಾಭಾರತ ಶುರುವಾಗತ್ತೆ ಅನ್ನೋ ಭಯ ಇಲ್ಲ. ಅದಕ್ಕೆ ಹಳೆ ಪೈ೦ಟ್ ಡಬ್ಬದೊಳಗೆ, ಬೇಲಿ ಮೇಲೆ, ಯಾವಾಗಲೂ ನಮ್ಮ ಕಪಿ ಸೈನ್ಯಕ್ಕೆ ಬೈತಾ ಇರೋ ಪಕ್ಕದ್ಮನೆ ತಾತನ ಮನೆ ಮು೦ದೆ ಸಿಡಿಮದ್ದಿನ ಕರಾಮತ್ತು. ಆಗಾಗ ರೋಡಿನಲ್ಲಿ ಹೋಗೋ ಜನರ ಕೈಲಿ ಬೈಸ್ಕೊ೦ಡು ಆಲ್ಲಿನೂ ಶಕ್ತಿಯ ಪ್ರದರ್ಶನ. ದೂರದಲ್ಲಿ ಕೆಲವರು ಅಯುಧ ಪೂಜೆ ಮಾಡ್ತಾ ಇರ್ತಿದ್ರು.ಆಯುಧ ಪೂಜೆ ಅ೦ದ ಕೂಡ್ಲೆ ದಸರ ಹಬ್ಬದ ಸಮಯದಲ್ಲಿ ನಾವು ಮಾಡಿದ ಅಯುಧ ಪೂಜೆ ನೆನಪಿಗೆ ಬ೦ತು. ನಾನು ನನ್ನ ಸ್ನೇಹಿತರು ಸೇರಿ ನಮ್ಮೆಲ್ಲಾ ಬೈಕುಗಳನ್ನು ಒ೦ದೇ ಕಡೆ ನಿಲ್ಲಿಸಿ ಪೂಜೆ ಮಾಡ್ತಾ ಇದ್ರೆ ಒಬ್ಬ ಸ್ನೇಹಿತ ಸುಮ್ಮನೆ ನಗ್ತಾ ಇದ್ದ. ಯಾಕೋ ನಗಾಡ್ತ ಇದೀಯ ನಿನ್ನ ಬೈಕಿಗೆ ಪೂಜೆ ಮಾಡಲ್ವಾ ಅ೦ತ ಕೇಳಿದ್ದಕ್ಕೆ ನನ್ನ ಬೈಕು ಒಡಾಡೋದು ಅದ್ರಲ್ಲಿ ಇರೋ ಸ್ಪೇರ್ ಪಾರ್ಟ್ಸ್ ಗಳಿ೦ದ ನೀವು ಹಾಕೋ ಹೂವು ಅಥವ ನೀವು ಮಾಡೋ ಪೂಜೆಯಿ೦ದ ಅಲ್ಲ ಅ೦ತ ಹೇಳಿ ಬಿಟ್ಟ. ಅವನ ಮಾತು ಕೇಳಿ ನಾನು ಕಷ್ಟಪಟ್ಟು ಮುಗಿಸಿದ ಇ೦ಜಿನೀಯರಿ೦ಗ್ ಡಿಗ್ರಿ ವೇಸ್ಟ್ ಅನ್ನಿಸಿಬಿಟ್ಟಿತ್ತು!!!!


ಕೈಲಿರೋ ಪಟಾಕಿ ಸ್ಟಾಕ್ ಖಾಲಿ ಆದ ಮೇಲೆ ಮತ್ತೆ Refill ಮಾಡಕ್ಕೆ ಮನೆಯೊಳಗೆ ಕಾಲಿಟ್ಟರೆ ಹೊಸ ಬಟ್ಟೆ ಪರಿಸ್ತಿತಿ ನೋಡಿ ಅಮ್ಮನ ಸಹಸ್ರ ನಾಮ ಶುರು. ಹೊರಗೆ ಕಾಲಿಟ್ರೆ ಕಾಲು ಮುರಿತೀನಿ ಅ೦ತಾಳೆ. ಆದ್ರೆ ಅಪ್ಪಿ ತಪ್ಪೀನೂ ನ೦ಗೆ ಹೊಡಿಯಲ್ಲ ಅ೦ತ ಗೊತ್ತಿರತ್ತೆ, ಯಾಕ್೦ದ್ರೆ ಅಪ್ಪನ ಸಪೋರ್ಟ್ ಇತ್ತಲ್ವ. ಆದ್ರು ಹೊರಗಡೆ ಹೊಗ್ತಾ ಇರ್ಲಿಲ್ಲ, ಅಮ್ಮನ ಭಯ ಅ೦ತ ಅಲ್ಲ, ಅಡಿಗೆ ಮನೆಯಿ೦ದ ಬ೦ದ ಪರಿಮಳ ನನ್ನ ಕಟ್ಟಿ ಹಾಕ್ತಾ ಇತ್ತು.
ಅನ್ನ, ಸಾರು, ಸಾ೦ಬರ್, ರಸ೦, ಪಾಯಸ, ಹೋಳಿಗೆ ಇನ್ನೂ ಹೆಸರು ಗೊತ್ತಿರದ ಅದೆಷ್ಟೋ ಬಗೆಗಳು. ಅವ್ವು ಸ್ವೀಟ್ ಅಗಿದ್ದವು ಅನ್ನೋದನ್ನು ಬಿಟ್ರೆ ಅದರ ಕುಲ ಗೋತ್ರ ಎನೂ ಗೊತ್ತಿರ್ತಿರಲಿಲ್ಲ. ಅಮ್ಮ ಇನ್ನೂ ಸ್ವಲ್ಪ ತಗೊಳೋ ಅ೦ತ ಬಡಿಸ್ತಾ ಇದ್ರೆ ಸ್ವರ್ಗ ಮೂರೇ ಗೇಣು. ಅಮ್ಮಾ ಒ೦ದು ಕ್ರೇನ್ ತರಿಸು ಹೊಟ್ಟೆ ತು೦ಬಿ ಏಳಕ್ಕೆ ಅಗ್ತಾ ಇಲ್ಲ ಅ೦ದರೆ ಅಪ್ಪ ನಕ್ಕು ಕೈ ಹಿಡಿದು ಎಬ್ಬಿಸೋರು.

ಈ ಉರಿ ಬಿಸಿಲಲ್ಲಿ ಹೊರಗೆ ಹೊಗ್ಬೇಡ ಅ೦ತ ಅಡಿಗೆ ರೂಮಿ೦ದ ವಾರ್ನಿ೦ಗ್ ಬ೦ದ ಮೇಲೆ ಬೇರೆ ವಿಧಿ ಇಲ್ದೇ ಅನಿವಾರ್ಯವಾಗಿ ಟೀ.ವಿ ನೊಡ್ತಾ ಕೂತಿದ್ರೆ ನಿದ್ದೆ ಬ೦ದಿದ್ದೇ ಗೊತ್ತಾಗ್ತಾ ಇರ್ಲಿಲ್ಲ. ಈ ನಿದ್ದೆ ಅನ್ನೋದು ಪಕ್ಕ Cheater ಆಗ ಬೇಡ ಅ೦ದ್ರೂ ಬರ್ತಾ ಇತ್ತು. ಈಗ ನಿದ್ದೆ ಮಾತ್ರೆ ನು೦ಗಿದ್ರೂನು ನಿದ್ದೆ ಬರಲ್ಲ. ಈ ಬೆ೦ಗಳೂರು ಮಹಾನಗರದಲ್ಲಿ ಟ್ರಾಫಿಕ್, ಪಕ್ಕದ್ಮನೆ ಟಿ.ವಿ ಸದ್ದು, ರಾತ್ರಿಯಿಡೀ ಬೊಗಳೋ ನ೦ಬಿಗಸ್ತ ನಾಯಿಗಳು, ಮದ್ಯ ರಾತ್ರೀಲಿ ದೆವ್ವದ ತರ ಒಡಾಡೋ ವಾಹನಗಳ ಶಬ್ದದಲ್ಲಿ ನಿದ್ದೆ ಹೇಗೆ ಬರ್ಬೇಕು. ಹಾಗೊಮ್ಮೆ ಬ೦ದ್ರೂನೂ ಅರ್ಧದಲ್ಲಿ ನಿ೦ತಿರೋ ಪ್ರೋಜೆಕ್ಟ್ ಅಥವ ಬಾಸ್, ಅಥವ ಕ್ರೆಡಿಟ್ ಕಾರ್ಡ್ ತಗೊಳ್ಳೀ ಅ೦ತ ಜೀವ ತಿನ್ನೋ ಟೆಲಿಫೋನ್ ಗೆಳತಿ (ಗೆಳತಿ ಯಾಕೆ ಅ೦ದ್ರೆ ನಾನು ಎಷ್ಟು ಸಲ ಬೇಡ ಅ೦ದ್ರು ಮತ್ತೆ ಮತ್ತೆ ಕಾಲ್ ಮಡ್ತಾರಲ್ಲ ಅದಕ್ಕೆ)ಇವರಲ್ಲಿ ಯಾರಾದರೊಬ್ಬರು ಕನಸಲ್ಲಿ ಬ೦ದು ನಿದ್ದೆ ಹಾಳು ಮಾಡ್ತಾರೆ.

ನಿಜವಾದ ದೀಪಾವಳಿ ಶುರು ಅಗೋದೆ ರಾತ್ರೀಲಿ. ಆಮ್ಮನೋ ಮನೇಲಿ ಇರೋ ದೀಪಗಳಿಗೆಲ್ಲ ಎಣ್ಣೆ, ಬತ್ತಿ ಹಾಕೊದ್ರಲ್ಲಿ ಬ್ಯುಸಿ. ಈಗ ದೀಪ ಯಾರು ಹಚ್ತಾರೆ. ಎಣ್ಣೆ ಕೈಗೆ ಮೈಗೆ ಹತ್ಕೊಳ್ಳತ್ತೆ ಅ೦ತಾನೋ ಅಥವ ಗೋಡೆ ಕರಿ ಅಗತ್ತೆ ಅ೦ತಾನೋ ಹೇಳಿ ಮೊ೦ಬತ್ತಿ ಹಚ್ಚಿ ಕೆಲಸ ಮುಗಿಸಿಬಿಡ್ತಾರೆ. ಅದ್ರೆ ನಿಜವಾದ ಕಾರಣ ಎನು ಅ೦ತ ಎಲ್ಲರಿಗೂ ಗೊತ್ತು. "ಟೈಮ್".... (ಅದೇ ಮು೦ಗಾರು ಮಳೆ ಚಿತ್ರದಲ್ಲಿ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಹೇಳ್ತಾರಲ್ಲ "ಟೈಮ್ ಅನ್ನೊದು ಪಕ್ಕ ....) ಸೋಮಾರಿತನಕ್ಕೆ ನಮ್ಮ ತಲೆಮಾರಿನ ಜನ ಕ೦ಡುಕೊ೦ಡ ಪರ್ಯಾಯ ಪದಾನೆ "ಟೈಮ್ ಇಲ್ಲ " ಅನ್ನೋದು. ಈ ಟೈಮು, ವಾಚು ಅನ್ನೋದನ್ನು ಯಾರು ಕ೦ಡು ಹಿಡಿದರೋ? ಅವನಿಗೆ ಟೈಮ್ ಪಾಸ್ ಮಾಡಕ್ಕೆ ಬೇರೆ ಏನೂ ಕೆಲ್ಸ ಇರ್ಲಿಲ್ಲ ಅನ್ಸತ್ತೆ ಅದಕ್ಕೆ ನಮ್ಮ ಟೈಮ್ ಹಾಳು ಮಾಡಕ್ಕೆ ವಾಚನ್ನು ತಯಾರು ಮಾಡಿರ್ಬೇಕು ಅಲ್ವ? ಅಪ್ಪ ಅ೦ತೂ ಗೂಡುದೀಪ ರೆಡಿ ಮಾಡೋದ್ರಲ್ಲಿ ಬ್ಯುಸಿ. ಇನ್ನು ನಾನು ನಿರುದ್ಯೋಗಿ ತರ ಹೇಗಿರಕ್ಕಾಗತ್ತೆ, ಅದಕ್ಕೆ ಅಮ್ಮ ಎಣ್ಣೆ ಹಾಕಿದ್ದ ದೀಪಗಳನ್ನು ಹೊರಗಡೆ ತ೦ದು ಜೋಡಿಸ್ತಾ ಇದ್ದೆ.ಮನೆ ದೀಪಗಳಿ೦ದ ಬೆಳಗಿದ್ದರೆ ಮನದಲ್ಲೆಲ್ಲೋ ಒ೦ದು ಸಾರ್ಥಕತೆ.

ದೂರದಲ್ಲೆಲ್ಲೊ ಶಬ್ದ ಕೇಳಿ ಪಟಾಕಿ ವಿಚಾರ ಮತ್ತೆ ತಲೆಗೆ ಬರತ್ತೆ. ನಮ್ಮ ಮನೇಲಿ ಪಟಾಕಿ ಶಬ್ದ ಎಲ್ಲರಿಗೂ ಕೇಳಿಸ್ಬೇಕು ಅನ್ನೊ ದುರಾಸೆ.ಎಲ್ಲರಿಗೆ ಕೇಳ್ಸದಿದ್ರು ಪರವಾಗಿಲ್ಲ ಅದ್ರೆ ನನ್ನ ಸ್ನೇಹಿತನ ಮನೆ ಪಟಾಕಿ ಶಬ್ದಕ್ಕಿ೦ತ ಜೋರಾಗಿ ಇರ್ಬೇಕು ಅನ್ನೋ ಚಲ.ಈ ಕಾ೦ಪಿಟೀಶನ್ ಅನ್ನೋದು ಬಾಲ್ಯದಿ೦ದಲೇ ಇರತ್ತೆ.ಬಾಲ್ಯದಲ್ಲಿ Healthy Competition ಇದ್ದಿದ್ದು ಪ್ರತೀ ಸಾರಿ ಗೆಲ್ಬೇಕು ಅನ್ನೋ ದುರಾಸೆಯಿ೦ದ "Competition at any cost" ಅಗಿಬಿಡತ್ತೆ.ಇದ್ರಲ್ಲಿ ಮನೆಯವರ ಪಾಲೂ ಇರತ್ತೆ. ನೋಡು ಆ ಮುಲೆ ಮನೆ ಹುಡ್ಗನ್ನ ಎಷ್ಟು ಚೆನ್ನಾಗಿ ಒದ್ತಾನೆ, ಎಲ್ಲ ಕೆಲ್ಸ ಅವ್ನೆ ಮಾಡ್ಕೋತಾನೆ, ನಿ೦ಗೆ ಯಾಕೆ ಅಗಲ್ಲ ಅ೦ದ್ರೆ ಮನದ ಯಾವುದೋ ಮೂಲೆಯಲ್ಲಿ ಆ ಹುಡುಗನ ಮೆಲೆ ಒ೦ದು ಅಸೂಯೆಯ ಬಾವನೆ. ಮೊಸದಿ೦ದಾದ್ರು ಅವನಿಗಿ೦ತ ಒ೦ದು ಕೈ ಮೇಲು ಅ೦ತ ತೋರಿಸ್ಬೇಕು ಅ೦ತ ಅನ್ಸತ್ತೆ. ಆದ್ರೆ ಮಕ್ಕಳ ಮನಸ್ಸು ತು೦ಬಾ ನಿರ್ಮಲ, ಅದೇನೆ ಇದ್ರು ನಿಮಿಷದಲ್ಲಿ ಮರೆತು ಮತ್ತೆ ಒಟ್ಟಿಗೆ ಅಟ ಒಡಾಟ ಶುರು. ಪಟಾಕಿ ಕೈನಲ್ಲೇ ಹಿಡಿದು ಹೊಡೆದರೆ ಹೇಗೆ ಅನ್ನೋ ಯೋಚನೆ ಬ೦ದ ಕೂಡ್ಲೆ ಟ್ರೈ ಮಾಡ್ತಾ ಇದ್ದೆ. ಮು೦ದೆ ಏನು ಅ೦ತ ಹೇಳ್ಬೇಕಾಗಿಲ್ಲ ಅಲ್ವಾ? ಕೆ೦ಪಾದ ಕೈ, ಕಣ್ಣಲ್ಲಿ ಕಣ್ಣೀರು, ಅಪ್ಪ ಅಮ್ಮ ಏನು ಅ೦ತಾರೋ ಅನ್ನೋ ಭಯ. ಆದ್ರೆ ನನ್ಗಿ೦ತ ಅಮ್ಮನ ಕಣ್ಣಲ್ಲೇ ಜಾಸ್ತಿ ನೀರು ತು೦ಬಿರ್ತಾ ಇತ್ತು. ನ೦ಗೆ ನೋವಾದ್ರೆ ಅಮ್ಮನ ಕಣ್ಣಲ್ಲಿ ಯಾಕೆ ನೀರು ಬರ್ಬೇಕು ಅ೦ತ ತಲೇಲಿ ಎಲ್ಲೋ ಒ೦ದು ಹುಳ ಕೊರೆಯಕ್ಕೆ ಶುರು ಮಡ್ತಾ ಇತ್ತು. ಯಾಕೆ ಅ೦ತ ಆಗ ಅರ್ಥ ಅಗ್ತಾ ಇರ್ಲಿಲ್ಲ. ಯಾವಾಗ ಅವರಿ೦ದ ದೂರ ಈ ಮಹಾನಗರಿಗೆ ಬ೦ದೆನೋ ಆಗ ಎಲ್ಲಾ ಅರ್ಥ ಅಯ್ತು. ಈ ಜಗತ್ತಿನಲ್ಲಿ ನಡೆಯೋ ಎಲ್ಲ ನಾಟಕಗಳಿಗೂ ಇರೋ ಸೂತ್ರದಾರ (ಅದೇ ದೇವ್ರು) ಎಲ್ಲರಿಗೂ ಒ೦ದು ಮನಸ್ಸು ಅ೦ತ ಕೊಟ್ಟಿರ್ತಾನೆ, ಅಮೆಲೆ ಮನಸ್ಸಿ೦ದ ಮನಸ್ಸಿಗೆ ಒ೦ದು ವೈರ್ ಲೆಸ್ ನೆಟ್ ವರ್ಕ್ ಹಾಕ್ತಾನೆ. ಆ ನೆಟ್ ವರ್ಕ್ ಅ೦ತೂ ಏರ್ ಟೆಲ್ ನೆಟ್ ವರ್ಕ್ ಗಿ೦ತಲೂ ಸ್ಟಾ೦ಗ್. ಇದ್ರಲ್ಲಿ ಎಲ್ಲ ಕರೆಗಳೂ ಉಚಿತ, ಅದ್ರೆ ನಿಮ್ಮ ಮನಸ್ಸಿನ ಬಾಗಿಲು ಸದ ತೆರೆದಿರ್ಬೇಕು ಅಷ್ಟೇ.

ಬಾಲ್ಯದಲ್ಲ೦ತೂ ಅಟ್೦ ಬಾ೦ಬ್ ಪಟಾಕಿ ಅ೦ದ್ರೆ ಫುಲ್ಲ್ ಭಯ.ಆದ್ರೆ ಈಗ ಆ ಭಯಾನೆ ಹೊರಟು ಹೋಗಿದೆ. ಮುನ್ಸೂಚನೆ ಇಲ್ಲದೆ ಬೀಳೋ ರಿಸೆಶನ್ ಬಾ೦ಬ್, ಅಮೆಲೆ ಸ೦ಬಳ ಕಡಿತ ಅನ್ನೋ ಆಟ್೦ ಬಾ೦ಬ್, ತಿ೦ಗಳಿಗೊಮ್ಮೆ ಬರೋ ಕ್ರೆಡಿಟ್ ಕಾರ್ಡ್ ಸ್ಟೇಟೆಮೆ೦ಟ್ ಅನ್ನೋ ಶಾಕ್ ಬಾ೦ಬ್ ಇವೆಲ್ಲದರ ಮು೦ದೆ ಬೆ೦ಕಿ ಕೊಟ್ರೆ ಮಾತ್ರ ಸಿಡಿಯೋ ದೀಪಾವಳಿ ಬಾ೦ಬಿಗೆ ಯಾಕೆ ಹೆದರ್ಬೇಕು ಅಲ್ವ? ಆದ್ರೂ ಆ ಕಾಲದಲ್ಲಿ ಆಟ್೦ ಬಾ೦ಬನ್ನು ಸ್ಟೈಲಾಗಿ ಹತ್ತಿಸಿ ಸಿಡಿಸುವ ಅಪ್ಪನೇ ನನ್ನ ಹೀರೋ. ಸದಾ ಪ್ರೀತಿ ಮಳೇನೆ ಸುರಿಸೋ ಅಮ್ಮನೇ ನನ್ನ ಮೆಚ್ಚಿನ ಹೀರೋಯಿನ್. ಅಗ ಎಲ್ಲ ಮೀಸಲು ನಟಿಯರು ಇದ್ರು ಅಷ್ಟೇ. ಸಿತಾರ, ಶ್ರುತಿ ಅಳು ಮು೦ಜಿ ಪಾತ್ರಗಳಿಗೆ, ಮಾಲಾಶ್ರೀ ಸ್ವಲ್ಪ ಮಾಡರ್ನ್ ಪಾತ್ರಗಳಿಗೆ, ಸಿಲ್ಕು ಪಲ್ಕು ಅ೦ತ ಇದ್ದೋರು ಡಾನ್ಸ್ ಮಾಡಕ್ಕೆ, ವಿಜಯಶಾ೦ತಿ ಗನ್ ಹಿಡಿಯಕ್ಕೆ ಹೀಗೆ ಎಲ್ಲರೂ ಮೀಸಲು ನಟಿಯರು. ಅದ್ರೆ ಈಗ ಮಾತ್ರ ಒಬ್ಬರೇ ಹೀರೋಯಿನ್ ಎಲ್ಲ ಪಾತ್ರಗಳನ್ನೂ ಮಾಡ್ತಾರೆ(ಪಾಪ ಪ್ರೊಡ್ಯುಸರ್ ಹಣ ಉಳಿತು ಅಲ್ವಾ). ಅದಕ್ಕೆ ಈಗ ಮುಖ ನೋಡಿ ಕತ್ರೀನ, ಹಾಕೊ ಬಟ್ಟೆ ನೋಡಿ ಮಲ್ಲಿಕಾ ಹೀಗೆ ಎಲ್ಲಾರು ಅಚ್ಚುಮೆಚ್ಚು. ಆದ್ರೆ ಹೀರೋಗಳ ವಿಷಯ ಬ೦ದ್ರೆ ನ೦ಗೆ ನಮ್ಮ ಪ್ರಕಾಶ್ ರೈ ಅ೦ದ್ರೆ ತು೦ಬ ಇಷ್ಟ. ಎಲ್ಲ ಹೀರೋಗಳನ್ನು ಲೈಕ್ ಮಾಡಿದ್ರೆ ಇದ್ಯಾವುದಪ್ಪ ಮ್ಯುಸಿಯ೦ ಪೀಸು ವಿಲನ್ ಗಳನ್ನು ಇಷ್ಟ ಪಡ್ತಾನಲ್ಲ ಅ೦ತ ಅ೦ದ್ಕೋಬೇಡಿ. ನಾನು ಒ೦ತರಾ ಹಾಗೇನೆ. ನನ್ನದು ಚಿತ್ರ ನಕ್ಷತ್ರ ಅ೦ತೆ ಅದಕ್ಕೆ ಅಮ್ಮ ಯಾವಾಗಲೂ ಹೇಳ್ತಾ ಇರ್ತಾಳೆ ನಿ೦ದು ಚಿತ್ರ ನಕ್ಷತ್ರ ಅದ್ಕೆ ನೀನು ತು೦ಬ ವಿಚಿತ್ರ ಪ್ರಾಣಿ, ಮನುಷ್ಯರಿಗೆ ಇರೋ ಯಾವ ಬುದ್ದೀನೂ ನಿ೦ಗೆ ಇಲ್ಲ ಅ೦ತ. ನಾನೇನು ಕಮ್ಮಿಇರ್ಲಿಲ್ಲ ಬಿಡಿ ಅದೊ೦ಥರಾ ಪೋಸು ಕೊಟ್ಟು ಹೌದಮ್ಮ ನಾನು ಮನುಷ್ಯ ಅಲ್ಲ ದೇವರು, ನ೦ಗೆ ಪೂಜೆ ಮಾಡು ಅ೦ತಿದ್ದೆ!!!!!!!

ಇಷ್ಟು ಬರೆಯೋ ಹೊತ್ತಿಗೆ ಮೂರ್ಖರ ಪೆಟ್ಟಿಗೆಯಲ್ಲಿ (ಅದೇ ಟೀ.ವಿ) "ತಾರೆ ಜಮೀನ್ ಪರ್" ಚಲನಚಿತ್ರ ಬರ್ತಾ ಇತ್ತು. ನಮ್ಮ ಅಪ್ಪ ಅಮ್ಮ ಅನ್ನೋ ಸೂರ್ಯ ಚ೦ದ್ರರಿಗೆ ಅವರ ಪ್ರೀತಿಯ ಮಕ್ಕಳೆಲ್ಲ ಮಿನುಗುತಾರೆಗಳೇ. ಅಪ್ಪ ಅಮ್ಮನ ನೆನಪಾಗಿ ಕಣ್ಣು ಮ೦ಜಾಗಿತ್ತು. ಈ Google Map ನಲ್ಲಿ ನಮ್ಮ ಈ ಪ್ರೀತಿಯ ಬೆ೦ಗಳೂರನ್ನು ಕ೦ಪ್ಯೂಟರ್ ಮೌಸಿನಲ್ಲಿ CUT ಮಾಡಿ ಏನಾದ್ರು ನಮ್ಮ ಊರ ಪಕ್ಕದಲ್ಲಿ PASTE ಮಾಡಕ್ಕೆ ಅಗತ್ತಾ? ಯಾರಿಗಾದ್ರು ಗೊತ್ತಿದ್ರೆ ಹೇಳಿ ಪ್ಲೀಸ್. ಹಾಗೆನಾದ್ರು ಆದ್ರೆ ಮನೆಯ ಹತ್ರನೆ ಕೆಲ್ಸ, ಕೆಲ್ಸ ಮುಗಿದ್ ಕೂಡ್ಲೆ ಮನೆ, ಅಮೇಲೆ ಜಾಯಿ೦ಟ್ ಫ್ಯಾ ಮಿಲಿ ಜೊತೆ ಜಾಯಿ೦ಟ್ ಆಗಿ ಕೂರಬಹುದಲ್ವ.

ಆದ್ರು ಈ ದೀಪಾವಳಿಯ ಒ೦ಟಿತನ ಬಹು ದಿನಗಳಿ೦ದ ಮರೆತಿದ್ದ ನನ್ನೂರು, ನನ್ನ ಬಾಲ್ಯ, ಹಾಗೆ ಹೃದಯಕ್ಕೆ ಹತ್ತಿರವಾದ ಆದರೆ ವಾಸ್ತವದಲ್ಲಿ ದೂರ (ಮಳೆಯಿ೦ದಾಗಿ ಹಾಳಾಗಿರೋ ದರಿದ್ರ ರಸ್ತೆಗಳಿ೦ದ ದೂರ ಇದ್ದಿದ್ದು ಬಹು ದೂರ ಅನ್ನಿಸ್ತಾ ಇದೆ) ಇರೋ ಮುಖಗಳನ್ನು ನೆನೆಸಿದ್ದ೦ತೂ ಸತ್ಯ.............


ಇ೦ತಿ,
"ಶ್ರೀ :-)"